ದೇವಸ್ಥಾನಗಳಲ್ಲಿ ಕನ್ನ ಹಾಕುತ್ತಿದ್ದ ಕಳ್ಳನ ಬಂಧಿಸಿದ ಸೊರಬ ಪೊಲೀಸರು* *ಯಾರು ಈ ಕಳ್ಳ?*
*ದೇವಸ್ಥಾನಗಳಲ್ಲಿ ಕನ್ನ ಹಾಕುತ್ತಿದ್ದ ಕಳ್ಳನ ಬಂಧಿಸಿದ ಸೊರಬ ಪೊಲೀಸರು*
*ಯಾರು ಈ ಕಳ್ಳ?*

ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಸೊರಬ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಟ್ಟಣದ ಪುರಸಭೆ ಮುಂಭಾಗದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಗಸ್ತಿನಲ್ಲಿದ್ದ ಸಿಬ್ಬಂದಿಯನ್ನು ಕಂಡು ವ್ಯಕ್ತಿಯೋರ್ವ ಓಡಲು ಯತ್ನಿಸಿದ್ದಾನೆ. ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ದೇವಸ್ಥಾನಗಳ ಕಳುವು ಪ್ರಕರಣಗಳು ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ಕೆ. ಸಂದೀಪ ಕರಿಬಸಪ್ಪ ಬಂಧಿತ ಆರೋಪಿ.
ಇತ್ತೀಚೆಗೆ ಕಡಸೂರು ಗ್ರಾಮದ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಕಳ್ಳತನವಾದ ಬಗ್ಗೆ ದೂರು ದಾಖಲಾಗಿತ್ತು. ಬಂಧಿತ ಆರೋಪಿಯಿಂದ ಸುಮಾರು ನಾಲ್ಕು ಲಕ್ಷ ರೂ., ಮೌಲ್ಯದ 36 ಗ್ರಾಂ ಬಂಗಾರದ ಒಡವೆಗಳನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಾಗರ ತಾಲೂಕಿನ ಯಲಕುಂದ್ಲಿ ಗ್ರಾಮದ ಶ್ರೀ ರಾಚಮ್ಮ ದೇವಸ್ಥಾನ, ದಿಗಟೆಕೊಪ್ಪ ಗ್ರಾಮದ ಚೌಡಮ್ಮ ದೇವಸ್ಥಾನ, ಶಿರೂರು-ಆಲಳ್ಳಿ ಗ್ರಾಮದ ಯಕ್ಷಾಂಬ ದೇವಸ್ಥಾನ, ಬಲೆಗಾರು ಗ್ರಾಮದ ಶ್ರೀ ರೇಣುಕಾಂಬ ದೇವಸ್ಥಾನ, ಮರತ್ತೂರು ಗ್ರಾಮದ ದುರ್ಗಮ್ಮ ದೇವಸ್ಥಾನ ಹಾಗೂ ಕಾರ್ಗಲ್ ಠಾಣಾ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದ ಕೋಟೇಶ್ವರ ದೇವಸ್ಥಾನಗಳಲ್ಲಿ ಕಳವು ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿರುತ್ತದೆ.
ಎಸ್ಪಿ ಜಿ.ಕೆ. ಮಿಥುನ್ ಕುಮಾರ್, ಎಎಸ್ಪಿಗಳಾದ ಬಿ. ರಮೇಶ್ ಹಾಗೂ ಕಾರಿಯಪ್ಪ, ಶಿಕಾರಿಪುರ ಡಿವೈಎಸ್ಪಿ ಕೆ.ಇ. ಕೇಶವ, ಸಿಪಿಐ ಮಹಾಂತೇಶ ಕೆ. ಲಂಬಿ ಮಾರ್ಗದರ್ಶನದಲ್ಲಿ ಪಿಎಸ್ಐ ಎಂ.ಎಚ್. ನವೀನ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ನಾಗೇಶ್, ರಾಜುನಾಯ್ಕ್, ಆರ್. ಗಿರೀಶ್, ರಾಘವೇಂದ್ರ, ಲೋಕೇಶ್, ವಿನಯ, ಗಿರೀಶ್, ಹನುಮಂತ, ಮಲ್ಲೇಶ್, ಕೆ.ಎನ್. ಶಶಿಧರ, ಸಂದೀಪ, ಸೋಮಶೇಖರ, ಉಮೇಶ್, ಕಿರಣ್, ಮೋಹನ್, ರವೀಂದ್ರ, ಹೇಮಲತಾ, ರೂಪಾಲಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


