*ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಪತ್ರಿಕಾಗೋಷ್ಠಿ* *ಏಪ್ರಿಲ್/ ಮೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ* *ಪಂಚ ಗ್ಯಾರಂಟಿಗಳಿಂದ ಗೆಲುವು ಗ್ಯಾರಂಟಿ* *ಸುಳ್ಳು ಹೇಳುತ್ತಾ ಬಂದ ಮೋದಿ ಸರ್ಕಾರ ಈಗ ಗಾಂಧಿ ಹೆಸರು ಅಳಿಸುವ ಪ್ರಯತ್ನದಲ್ಲಿ* *ರಾಜ್ಯ ಸರ್ಕಾರಕ್ಕೆ ಸಾವಿರ ದಿನಗಳು- ಹಿನ್ನೆಲೆಯಲ್ಲಿ ಫೆ.12 ರಂದು ಹಾವೇರಿಯಲ್ಲಿ ಬೃಹತ್ ಸಮಾವೇಶ*
*ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಪತ್ರಿಕಾಗೋಷ್ಠಿ*
*ಏಪ್ರಿಲ್/ ಮೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ*
*ಪಂಚ ಗ್ಯಾರಂಟಿಗಳಿಂದ ಗೆಲುವು ಗ್ಯಾರಂಟಿ*
*ಸುಳ್ಳು ಹೇಳುತ್ತಾ ಬಂದ ಮೋದಿ ಸರ್ಕಾರ ಈಗ ಗಾಂಧಿ ಹೆಸರು ಅಳಿಸುವ ಪ್ರಯತ್ನದಲ್ಲಿ*
*ರಾಜ್ಯ ಸರ್ಕಾರಕ್ಕೆ ಸಾವಿರ ದಿನಗಳು- ಹಿನ್ನೆಲೆಯಲ್ಲಿ ಫೆ.12 ರಂದು ಹಾವೇರಿಯಲ್ಲಿ ಬೃಹತ್ ಸಮಾವೇಶ*
ಶಿವಮೊಗ್ಗ : ಬರುವ ಏಪ್ರಿಲ್ ಅಥವಾ ಮೇನಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಗಳು
ನಡೆಯಲಿದ್ದು, ಎಲ್ಲಾ ಚುನಾವಣೆಗಳನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ ಎಂದು
ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮ್ಮದ್ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣೆ
ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಇದರಿಂದಾಗಿ
ಮಹಿಳೆಯರು, ಬಡವರ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ. ನಿರುದ್ಯೋಗಿ ಯುವಕರಿಗೂ ನೆರವು
ನೀಡಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಗೆಲುವು ಸಾಧ್ಯವಾಗಲಿದೆ ಎಂಬ ವಿಶ್ವಾಸ
ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 12 ವರ್ಷಗಳಿಂದಲೂ ಸುಳ್ಳು
ಹೇಳುತ್ತಲೇ ಬಂದಿದೆ. ರಾಜ್ಯಕ್ಕೆ ನೀಡಬೇಕಾದ ಅನುದಾನಗಳನ್ನು ಸರಿಯಾಗಿ ಕೊಡುತ್ತಿಲ್ಲ.
ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಲೋಪವಿದೆ ಎಂಬುದನ್ನು ಪತ್ತೆ ಮಾಡಲು
12 ವರ್ಷ ತೆಗೆದುಕೊಂಡು ಈಗ ಗಾಂಧಿ ಹೆಸರನ್ನೇ ತೆಗೆದು ಯೋಜನೆ ಬದಲಾಯಿಸಲಾಗಿದೆ ಎಂದು
ದೂರಿದರು.
ಮನರೇಗಾ ಯೋಜನೆಯನ್ನು ಉಳಿಸಿಕೊಳ್ಳಬೇಕು. ಹೊಸ ಕಾಯಿದೆಯನ್ನು ವಾಪಸ್ ಪಡೆಯುವಂತೆ
ಒತ್ತಾಯಿಸಿ ಫೆ.10 ರಿಂದ ಇಡೀ ದೇಶದಾದ್ಯಂತ ಕಾಂಗ್ರೆಸ್ ಹೋರಾಟ ನಡೆಸಲಿದೆ. ಗ್ರಾಮ
ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡಲಿದೆ. ರಾಜ್ಯ ಸರ್ಕಾರಕ್ಕೆ
ಸಾವಿರ ದಿನಗಳಾಗುತ್ತಿರುವ ಹಿನ್ನೆಲೆಯಲ್ಲಿ ಫೆ.12 ರಂದು ಹಾವೇರಿಯಲ್ಲಿ ಬೃಹತ್
ಸಮಾವೇಶ ನಡೆಸಲಾಗುತ್ತದೆ. ಇದರಲ್ಲಿ ರಾಜ್ಯ ಸರ್ಕಾರದ ಸಾಧನೆಯನ್ನು ಜನರ ಮುಂದೆ
ಇಡಲಾಗುತ್ತದೆ ಎಂದರು.
ರಾಜ್ಯದ ಐದು ಜನ ಸಚಿವರು ಕೇಂದ್ರ ಸಚಿವ ಸಂಪುಟದಲ್ಲಿದ್ದರೂ ರಾಜ್ಯಕ್ಕೆ ಯಾವುದೇ
ಉಪಯೋಗವಾಗುತ್ತಿಲ್ಲ. ರಾಜ್ಯದ ಪಾಲಿನ ಅನುದಾನ ತರುವಲ್ಲಿ ಪಾರ್ಲಿಮೆಂಟ್ನಲ್ಲಿ
ಮಾತನಾಡುತ್ತಿಲ್ಲ. ಮಹಾದಾಯಿ, ಮೇಕೆ ದಾಟು ಯೋಜನೆಗಳಿಗೆ ಹಸಿರು ನಿಶಾನೆ
ಕೊಡಿಸುವಲ್ಲಿಯೂ ವಿಫಲರಾಗಿದ್ದಾರೆ ಎಂದರು.
ಸರ್ಕಾರದ ಸಿದ್ಧಪಡಿಸಿ ಭಾಷಣವನ್ನು ರಾಜ್ಯಪಾಲರು ಜಂಟಿ ಅಧಿವೇಶನದಲ್ಲಿ ಓದಿಲ್ಲ.
ಇದು ಸಂವಿಧಾನ ಬಾಹಿರ ನಡೆಯಾಗಿರುವುದರಿಂದ ಕಾನೂನು ಹೋರಾಟ ನಡೆಸುವ ಸಂಬಂಧ ತಜ್ಞರ
ಅಭಿಪ್ರಾಯ ಪಡೆಯಲಾಗುತ್ತಿದೆ. ಅಗತ್ಯವಿದ್ದರೆ ಕಾನೂನು ಹೋರಾಟ ನಡೆಸಲಾಗುತ್ತದೆ
ಎಂದರು.
ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಮುಸ್ಲಿಂ
ಅಭ್ಯರ್ಥಿಯನ್ನು ಪರಿಗಣಿಸುವಂತೆ ಹೇಳಿಲ್ಲ. ಆದರೆ, ಅಪ್ಪಟ ಕಾಂಗ್ರೆಸ್ ಅಭ್ಯರ್ಥಿಯನ್ನು
ನಿಲ್ಲಿಸಿ ಗೆಲ್ಲಿಸಿಕೊಳ್ಳಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್,
ಎಂಎಲ್ಸಿ ಬಲ್ಕೀಶ್ ಬಾನು, ಪ್ರಮುಖರಾದ ಹೆಚ್.ಸಿ.ಯೋಗೇಶ್, ಎನ್. ರಮೇಶ್, ಇಸ್ಮಾಯಿಲ್ ಖಾನ್, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಆಸಿಫ್, ನಯಾಝ್,ಅಡ್ಡು, ಯು.ಶಿವಾನಂದ, ಎಸ್.ಟಿ. ಹಾಲಪ್ಪ ಸೇರಿದಂತೆ ಹಲವರು ಇದ್ದರು.


