*ಕೇಂದ್ರ ಸರ್ಕಾರದ ತ್ರಿ ಭಾಷಾ ಹೇರಿಕೆ ನೀತಿ ಅಡಿ ಹಿಂದಿ ಹೇರುವ ಕ್ರಮ ಖಂಡನೀಯ* . – ಎಸ್, ಮಧು ಬಂಗಾರಪ್ಪ
*ಕೇಂದ್ರ ಸರ್ಕಾರದ ತ್ರಿ ಭಾಷಾ ಹೇರಿಕೆ ನೀತಿ ಅಡಿ ಹಿಂದಿ ಹೇರುವ ಕ್ರಮ ಖಂಡನೀಯ* .
– ಎಸ್, ಮಧು ಬಂಗಾರಪ್ಪ
ಕೇಂದ್ರ ಸರ್ಕಾರವು ಹಿಂದಿಯನ್ನು ಹೇರುವ ಉದ್ದೇಶದಿಂದ ʻಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿʼ (ಸಿಬಿಎಸ್ಇ)ಯನ್ನು ಬಳಸಿಕೊಂಡು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಗೊಂದಲ ಮೂಡಿಸುತ್ತಿದೆ. ತೃತೀಯ ಭಾಷೆಗೆ ಸಂಬಂಧಿಸಿದಂತೆ ಸಾಮಾನ್ಯ ಜ್ಞಾನವನ್ನು ಬಳಸದೆ ಸುತ್ತೋಲೆಯನ್ನು ಹೊರಡಿಸಲಾಗುತ್ತಿದ್ದು, ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದೆ. ತ್ರಿಭಾಷಾ ನೀತಿಯನ್ನು ಜಾರಿಗೆ ತರುವ ಸಲುವಾಗಿ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸದೇ, ಹಿಂದಿಯನ್ನು ಹೇರುವ ನಿರ್ಧಾರಗಳನ್ನು ಪ್ರಕಟಿಸುತ್ತಿರುವ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ, ಸಿಬಿಎಸ್ಇ ಪಠ್ಯಕ್ರಮ ಅನುಸರಿಸುವ ಶಾಲೆಗಳು ಭಾಷಾ ಬೋಧನೆಯ ವಿಷಯದಲ್ಲಿ ಸದಾ ಗೊಂದಲದಲ್ಲಿಯೇ ಇರುವಂತೆ ಮಾಡುತ್ತಿದೆ.
9 ನೇ ತರಗತಿಯಲ್ಲಿ ತೃತೀಯ ಭಾಷೆಯನ್ನು ಕಲಿಸಲು ಹೊರಟರೆ, ಅದನ್ನು ಕಡ್ಡಾಯಗೊಳಿಸಿದರೆ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತವಾದ ಒತ್ತಡ ಬೀಳುತ್ತದೆ ಎಂಬುದನ್ನೂ ಅರ್ಥಮಾಡಿಕೊಳ್ಳಲಾಗದ ಸ್ಥಿತಿಯಲ್ಲಿ ಸಿಬಿಎಸ್ಇ ಮಂಡಳಿ ಇದೆ ಎಂದರೆ ನಾವೆಲ್ಲರೂ ಕೇಂದ್ರ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಾಚಿಕೆ ಪಡಬೇಕಾಗುತ್ತದೆ. ಇದಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಶೈಕ್ಷಣಿಕ ನೀತಿಯೇ ಕಾರಣ.
ಇತ್ತೀಚೆಗೆ ಎನ್ಸಿಇಆರ್ಟಿಯು ಈ ಶೈಕ್ಷಣಿಕ ಸಾಲಿನಿಂದಲೇ 6ನೇ ತರಗತಿಯಲ್ಲಿ ತೃತೀಯ ಭಾಷೆಯನ್ನಾಗಿ (ಆರ್3) ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂದು ಸೂಚಿಸಿತ್ತು. ಕನ್ನಡ ಭಾಷಾ ಕಲಿಕೆ ಕಾಯ್ದೆ- 2015ರಲ್ಲಿ ಕೇಂದ್ರ ಪಠ್ಯಕ್ರಮ ಸೇರಿ ಇತರೆ ಪಠ್ಯಕ್ರಮಗಳ ಶಾಲೆಗಳಲ್ಲಿನ ಕನ್ನಡೇತರ ಮಕ್ಕಳಿಗೂ ಕನ್ನಡ ಕಲಿಸುವುದನ್ನುಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಸಿಬಿಎಸ್ಇ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕು. ಹೀಗಿದ್ದರೂ, ತೃತೀಯ ಭಾಷೆಯಾಗಿ ಕನ್ನಡ ಕಲಿಸಿ ಎಂದು ಸೂಚನೆ ನೀಡಿದರೆ ಕೇಂದ್ರದ ಭಾಷಾ ತಾರತಮ್ಯ ನೀತಿಯನ್ನು ಹೆಸರಿಸುತ್ತಿದೆ ಎಂದು ಅರ್ಥೈಸಬೇಕಾಗುತ್ತದೆ, ಕೇಂದ್ರದ ಬಿಜೆಪಿ ಸರ್ಕಾರ ತನ್ನ ಹಿಡನ್ ಅಜೆಂಡಾವನ್ನು ಜಾರಿಗೊಳಿಸಲು ಹೋಗಿ ದೇಶದ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಬಗೆಡುತ್ತಿರುವುದು ಶೋಚನೀಯ ಸಂಗತಿ.


