ಗಣಪತಿ ಹಬ್ಬದಂದೇ ವೆಜ್ ಬರ್ಗರ್ ಬದಲಿಗೆ ನಾನ್ ವೆಜ್ ಬರ್ಗರ್ ವಿತರಿಸಿದ್ದ ಜೊಮ್ಯಾಟೋ ಮತ್ತು ಶಿವಮೊಗ್ಗದ ಫೈವ್ ಸ್ಟಾರ್ ಹೋಟೆಲ್ ದಂಡ ವಿಧಿಸಿ ಆದೇಶಿಸಿದ ಗ್ರಾಹಕರ ನ್ಯಾಯಾಲಯ
ಗಣಪತಿ ಹಬ್ಬದಂದೇ ವೆಜ್ ಬರ್ಗರ್ ಬದಲಿಗೆ ನಾನ್ ವೆಜ್ ಬರ್ಗರ್ ವಿತರಿಸಿದ್ದ ಜೊಮ್ಯಾಟೋ ಮತ್ತು ಶಿವಮೊಗ್ಗದ ಫೈವ್ ಸ್ಟಾರ್ ಹೋಟೆಲ್
ದಂಡ ವಿಧಿಸಿ ಆದೇಶಿಸಿದ ಗ್ರಾಹಕರ ನ್ಯಾಯಾಲಯ
ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಸಸ್ಯಾಹಾರಿ (ವೆಜ್) ಬರ್ಗರ್ ಬದಲಿಗೆ ಮಾಂಸಾಹಾರಿ (ನಾನ್ವೆಜ್) ಬರ್ಗರ್ ತಲುಪಿಸಿ ಸೇವಾ ನ್ಯೂನತೆ ಎಸಗಿದ ಆನ್ಲೈನ್ ಆಹಾರ ವಿತರಣಾ ಸಂಸ್ಥೆ ಜೊಮ್ಯಾಟೊ (Zomato) ಮತ್ತು ಹೋಟೆಲ್ ಮಾಲೀಕರಿಗೆ ದಂಡ ವಿಧಿಸಿದೆ.
ಈ ಪ್ರಕರಣದಲ್ಲಿ ದೂರುದಾರರ ಪರವಾಗಿ ಪ್ರಮುಖ ವಕೀಲರಾದ ಚಾಂದ್ ಎಸ್. ಅವರು ವಾದ ಮಂಡಿಸಿದ್ದರು.ಘಟನೆಯ ಹಿನ್ನೆಲೆಶಿವಮೊಗ್ಗ ನಗರದ ಜೆ.ಪಿ.ಎನ್ ರಸ್ತೆ ನಿವಾಸಿಯಾದ ನಂದೀಶ್ ಎಂಬುವವರು 2025ರ ಆಗಸ್ಟ್ 27ರಂದು ಗಣೇಶ ಚತುರ್ಥಿ ಹಬ್ಬದ ದಿನದಂದು ಜೊಮ್ಯಾಟೊ ಆ್ಯಪ್ ಮೂಲಕ ₹313.15 ಪಾವತಿಸಿ ಸಸ್ಯಾಹಾರಿ ಬರ್ಗರ್ ಆರ್ಡರ್ ಮಾಡಿದ್ದರು.
ಆದರೆ, ಅವರಿಗೆ ಸಸ್ಯಾಹಾರದ ಬದಲಾಗಿ ಮಾಂಸಾಹಾರಿ ಬರ್ಗರ್ ವಿತರಿಸಲಾಗಿತ್ತು.ಗ್ರಾಹಕರು ಈ ಬಗ್ಗೆ ಸಂಸ್ಥೆಗೆ ದೂರು ನೀಡಿದಾಗ, ಜೊಮ್ಯಾಟೊ ಕೇವಲ ಬರ್ಗರ್ನ ಹಣವನ್ನು ಮರುಪಾವತಿಸಿ ಕೈತೊಳೆದುಕೊಂಡಿತ್ತು.
ಆದರೆ, ಪವಿತ್ರವಾದ ಗಣೇಶ ಹಬ್ಬದ ದಿನದಂದೇ ಮನೆಯೊಳಗೆ ಮಾಂಸಾಹಾರಿ ಆಹಾರ ತಲುಪಿಸುವ ಮೂಲಕ ತಮ್ಮ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತರಲಾಗಿದೆ ಎಂದು ನಂದೀಶ್ ಅವರು ವಕೀಲರಾದ ಚಾಂದ್ . ಎಸ್. ಅವರ ಮೂಲಕ ಶಿವಮೊಗ್ಗ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದರು.
ಕಂಪನಿಯ ವಾದವಿಚಾರಣೆ ವೇಳೆ ಜೊಮ್ಯಾಟೊ ಸಂಸ್ಥೆಯು, “ತಮ್ಮದು ಕೇವಲ ಆರ್ಡರ್ ತೆಗೆದುಕೊಳ್ಳುವ ಆನ್ಲೈನ್ ವೇದಿಕೆಯಾಗಿದ್ದು (ಪ್ಲಾಟ್ಫಾರ್ಮ್), ಗ್ರಾಹಕರು ನೇರವಾಗಿ ಹೋಟೆಲ್ಗೆ ಆರ್ಡರ್ ಮಾಡಿರುತ್ತಾರೆ. ಇದರಲ್ಲಿ ನಮ್ಮ ಯಾವುದೇ ಲೋಪ ಅಥವಾ ಸೇವಾನ್ಯೂನತೆ ಇರುವುದಿಲ್ಲ” ಎಂದು ವಾದಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿತು.
ಆಯೋಗದ ಮಹತ್ವದ ತೀರ್ಪುದೂರುದಾರರ ಪರ ವಕೀಲರಾದ ಚಾಂದ್ ಎಸ್. ಅವರು ಮಂಡಿಸಿದ ವಾದ-ಪ್ರತಿವಾದಗಳು, ಪ್ರಮಾಣಪತ್ರ ಹಾಗೂ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಜಿಲ್ಲಾ ಗ್ರಾಹಕ ಆಯೋಗವು ಸಂಸ್ಥೆಯ ಸೇವಾನ್ಯೂನತೆಯನ್ನು ಎತ್ತಿಹಿಡಿಯಿತು.
ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ. ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಈ ಕೆಳಗಿನಂತೆ ಆದೇಶಿಸಿದೆ:ಪರಿಹಾರ: ಎದುರುದಾರರಾದ ಜೊಮ್ಯಾಟೊ ಸಿಇಒ (ಗುರುಗ್ರಾಮ, ಹರಿಯಾಣ), ಜೋನಲ್ ಹೆಡ್ (ಬೆಂಗಳೂರು) ಮತ್ತು ಶಿವಮೊಗ್ಗದ ಫೈವ್ ಸ್ಟಾರ್ ಹೋಟೆಲ್ ಮಾಲೀಕರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ದೂರುದಾರರಿಗೆ ₹10,000 ಮಾನಸಿಕ ಅಸಮಾಧಾನ ಹಾಗೂ ತೊಂದರೆಗಾಗಿ ಪರಿಹಾರ ನೀಡಬೇಕು.ಪ್ರಕರಣದ ವೆಚ್ಚ: ಕಾನೂನು ಹೋರಾಟದ ವೆಚ್ಚವಾಗಿ ಹೆಚ್ಚುವರಿಯಾಗಿ ₹10,000 ಗಳನ್ನು ಪಾವತಿಸಬೇಕು.
ಗಡುವು: ಈ ಒಟ್ಟು ಮೊತ್ತವನ್ನು ಆದೇಶ ಹೊರಬಿದ್ದ 45 ದಿನಗಳ ಒಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ, ಈ ಮೊತ್ತಕ್ಕೆ ವಾರ್ಷಿಕ ಶೇ. 12ರಷ್ಟು ಬಡ್ಡಿ ಸೇರಿಸಿ ಪಾವತಿಸಬೇಕಾಗುತ್ತದೆ ಎಂದು ಆಯೋಗವು ಕಡಕ್ ಆದೇಶ ನೀಡಿದೆ.


