ಪಾಶುಪತಾಸ್ತ್ರ ನೋಡಿ ಖುಷಿಯಾದರು ಗೀತಕ್ಕ

ಪಾಶುಪತಾಸ್ತ್ರ ನೋಡಿ
ಖುಷಿಯಾದರು ಗೀತಕ್ಕ
ಮೊನ್ನೆ ಶನಿವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಫೋನು ಮಾಡಿದ್ದಾರೆ.ಹಾಗೆಯೇ  ಕರ್ನಾಟಕದ ಬಿಜೆಪಿ ಪಾಳಯದಲ್ಲಿ ಶುರುವಾದ ಬಂಡಾಯಕ್ಕೆ ಬ್ರೇಕ್ ಹಾಕುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಅಂದ ಹಾಗೆ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸುವ ಇಪ್ಪತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ವರಿಷ್ಟರು ಪ್ರಕಟಿಸಿದರಲ್ಲ?ಹಾಗೆ ಪ್ರಕಟಿಸಿದ ಬೆನ್ನಲ್ಲೇ ಹಲವು ಕಡೆ ಬಂಡಾಯ ಶುರುವಾಗಿದೆ.
ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದರೆ,ಬೀದರ್,ರಾಯಚೂರು,ಚಿಕ್ಕೋಡಿ,ಹಾವೇರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಿನ್ನರ ಪಡೆ ಗೆರಿಲ್ಲಾ ವಾರ್ ಗೆ ತಯಾರಾಗತೊಡಗಿದೆ
ಯಾವಾಗ ಪಟ್ಟಿ ಪ್ರಕಟಿಸಿದ ಎರಡೇ ದಿನಗಳಲ್ಲಿ ಈ ಕುರಿತ ವಿವರ ದಿಲ್ಲಿಗೆ ತಲುಪಿತೋ?ಇದಾದ ನಂತರ ಬಿಜೆಪಿ ವರಿಷ್ಟರು ಎಚ್ಚೆತ್ತುಕೊಂಡಿದ್ದಾರೆ.ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಮೊನ್ನೆ ಶನಿವಾರ ಯಡಿಯೂರಪ್ಪ ಅವರನ್ನು ಸಂಪರ್ಕಿಸಿದ್ದಕ್ಕೆ ಇದೇ‌ ಮುಖ್ಯ ಕಾರಣ.
ಹೀಗೆ ಸಂಪರ್ಕಿಸಿದ ಅವರು:ಯಡೂರಪ್ಪಾಜೀ,ಕರ್ನಾಟಕದಲ್ಲಿ ಈಶ್ವರಪ್ಪ ಅವರು ಸೇರಿದಂತೆ ಕೆಲವರು ಸಿಟ್ಟಾಗಿದ್ದಾರೆ.ಅವರು ಬಯಸಿದಂತೆ ಆಗಿಲ್ಲ ಎಂಬುದು ಇದಕ್ಕೆ‌ ಕಾರಣ,ಅವರು ಸಿಟ್ಟಾಗುವುದರಲ್ಲಿ ತಪ್ಪೇನಿಲ್ಲ.ಅದು ಸಹಜ.ಆದರೆ ಅದು ಮುಂದುವರಿಯಬಾರದು.ಹಾಗಂತಲೇ ಅಮಿತ್ ಷಾಜೀ ಅವರು ಇದನ್ನು ನಿಮ್ಮ ಗಮನಕ್ಕೆ ತರಲು ಹೇಳಿದ್ದಾರೆ.ನೀವು ತಕ್ಷಣವೇ ಇಂತಹ ಅಸಮಾಧಾನಿತರ ಜತೆ ಮಾತನಾಡಿ ಸರಿ ಮಾಡಿಬಿಡಿ ಎಂದಿದ್ದಾರೆ.
ಯಾವಾಗ ಜಗತ್ ಪ್ರಕಾಶ್ ನಡ್ಡಾ ಈ ಮಾತು ಹೇಳಿದರೋ?ಆಗ ಯಡಿಯೂರಪ್ಪ ಉರಿದು ಬಿದ್ದಿದ್ದಾರೆ.ಹಾಗಂತಲೇ,ಅಲ್ಲಾ ಸಾರ್,ಕರ್ನಾಟಕದಿಂದ ಯಾರಿಗೆ ಟಿಕೆಟ್ ಕೊಡಬೇಕು ಅಂತ ನಾನು ಹೇಳಿದರೆ ನೀವು ವರಿಷ್ಟರು ನಿಮಗಿದ್ದ ರಿಪೋರ್ಟಿನಂತೆ ಟಿಕೆಟ್ ಕೊಡುತ್ತೇವೆ ಅಂತ ತೀರ್ಮಾನಿಸಿದಿರಿ.ಈಗ ಎಲ್ಲರನ್ನೂ ಸಮಾಧಾನಿಸಿ ಅಂದರೆ ನಾನೇನು ಮಾಡಲಿ?ಅಂತ ಕೇಳಿದ್ದಾರೆ.
ಯಡಿಯೂರಪ್ಪ ಅವರ ಮಾತು ಕೇಳಿದ ನಡ್ಡಾ ಅವರು,ಯಡೂರಪ್ಪಾಜೀ ನೀವು ರಾಜ್ಯ ಬಿಜೆಪಿಯ ಪವರ್ ಫುಲ್ ಲೀಡರು.ಬಂಡಾಯಕ್ಕೆ ಸಜ್ಜಾದವರು ನೀವು ಹೇಳಿದರೆ‌ ಕೂಲ್ ಆಗುತ್ತಾರೆ ಅಂದಿದ್ದಾರೆ.
ಅದರೆ ಅದನ್ನೊಪ್ಪದ ಯಡಿಯೂರಪ್ಪ ಅವರು,ಸಾರ್,ದಿಲ್ಲಿಗೆ ಬಂದಾಗ ನಾನೇನು ಹೇಳಿದೆ?ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅಕಾಮಡೇಟ್ ಮಾಡಿಕೊಡಿ.ಇದುವರೆಗೆ ಅವರು ಪ್ರತಿನಿಧಿಸುತ್ತಿದ್ದ ಧಾರವಾಡ ಕ್ಷೇತ್ರದಲ್ಲಿ ಮಾಜಿ‌ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಅವಕಾಶ ಮಾಡಿಕೊಡಿ.ಹಾಗೆಯೇ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ಕೊಡಿ ಅಂತ  ಹೇಳಿದ್ದೆ.
ಆದರೆ ಅಮಿತ್ ಷಾ ಅವರು,ಹಾವೇರಿಯಿಂದ ನಮ್ಮ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಡೋಣ ಅಂತ ನನ್ನ ಬಳಿ ಹೇಳಿದರು.ಅವರೇ ಪರ್ಸನಲಿ ಇಂಟರೆಸ್ಟ್  ತೆಗೆದುಕೊಂಡಾಗ ನಾನೇನು ಹೇಳಲು ಸಾಧ್ಯ?ಹಾಗಂತಲೇ ಆಗಲಿ ಅಂತ ಸುಮ್ಮನಾದೆ.
ಆದರೆ ಇವತ್ತು ಏನಾಗಿದೆ ಎಂದರೆ ಹಾವೇರಿಯಲ್ಲಿ ಕಾಂತೇಶ್ ಅವರಿಗೆ ಟಿಕೆಟ್ ತಪ್ಪಿಸಿದ್ದು ನಾನು ಅಂತ ಈಶ್ವರಪ್ಪ ಸಿಟ್ಟಾಗಿದ್ದಾರೆ.ಅಷ್ಟೇ ಅಲ್ಲ,ನನ್ನ ಮಗ ರಾಘವೇಂದ್ರ ಸ್ಪರ್ಧಿಸುತ್ತಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಅಂತ ಘೋಷಿಸಿದ್ದಾರೆ.
ಇದೇ ಕಾರಣಕ್ಕಾಗಿ ದಿಲ್ಲಿಯಲ್ಲಿ ನಡೆದಿದ್ದೇನು?ಅಂತ ಅವರಿಗೆ ಕನ್ವಿನ್ಸ್ ಮಾಡಲು ಟ್ರೈ ಮಾಡಿದರೆ,ಫೋನು ಮಾಡಿದ ನಮ್ಮವರಿಗೆ ಈಶ್ವರಪ್ಪ ಉಚಾಯಿಸಿ ಮಾತನಾಡಿದ್ದಾರೆ.ನನ್ನ ಮಗನಿಗೆ ಯಡಿಯೂರಪ್ಪ ಟಿಕೆಟ್ ತಪ್ಪಿಸಿದ್ದಾರೆ.ನಾನು ಶಿವಮೊಗ್ಗದಲ್ಲಿ ಅವರ ಮಗನನ್ನು ಸೋಲಿಸಿ ತೋರಿಸುತ್ತೇನೆ ಅಂದಿದ್ದಾರೆ.
ಇಷ್ಟು ಸಿಟ್ಟಲ್ಲಿರುವ ಈಶ್ವರಪ್ಪ ಅವರನ್ನು ನಾನು ಹೇಗೆ ಸಮಾಧಾನಿಸಲಿ ನೀವೇ ಹೇಳಿ?
ಇನ್ನು ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ತೊರೆದು ಬರುವಾಗಲೇ:ನಂಗೆ ಧಾರವಾಡ ಇಲ್ಲವೇ ಹಾವೇರಿ ಟಿಕೆಟ್ ಕೊಡಿ ಅಂತ ಹೇಳಿದ್ದರು.ಆದರೆ ಅವರಿಗೀಗ ಬೆಳಗಾವಿಯ ದಿಕ್ಕು ತೋರಿಸಲು ಹೊರಟಿದ್ದೀರಿ.ಅಲ್ಲಿಂದ ಸ್ಪರ್ಧಿಸುವುದು ಅವರಿಗೆ ಎಷ್ಟು ಧರ್ಮಸಂಕಟದ ಮಾತು ಅಂತ ನನಗೆ ಗೊತ್ತು.
ಇದೇ ರೀತಿ ಬೀದರ್ ನಲ್ಲಿ ಭಗವಂತ ಖೂಬಾ ಅವರ ಬದಲು ಶಾಸಕ ಶರಣು ಸಲಗಾರ್ ಅವರಿಗೆ ಟಿಕೆಟ್ ಕೊಡಿ.ಆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಶಾಸಕರು ಹೇಳುತ್ತಿದ್ದಾರೆ ಎಂದೆ.ಅದನ್ನು ನೀವು ಒಪ್ಪಲಿಲ್ಲ.ಹಾಗೆಯೇ ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆಯವರ ಬದಲು ಉಮೇಶ್ ಕತ್ತಿಯವರ ತಮ್ಮ ರಮೇಶ್ ಕತ್ತಿ ಅವರಿಗೆ ಟಿಕೆಟ್ ಕೊಡಿ ಎಂದೆ.ಆದರೆ ನೀವು ಕೇಳಲಿಲ್ಲ.
ಈಗ ಅಲ್ಲೆಲ್ಲ ಭಿನ್ನಮತ ಶುರುವಾಗಿದೆ.ನೀವು ಸಮಾಧಾನಿಸಿ ಅಂತ ಹೇಳಿದರೆ ನಾನೇನು ಮಾಡಲಿ?ಆದ್ದರಿಂದ ನೀವೇ ಅವರನ್ನೆಲ್ಲ ಕರೆಸಿ ಪರ್ಸನಲ್ಲಾಗಿ ಅಟೆಂಡ್ ಮಾಡಿ ಸಾರ್ ಅಂತ ಯಡಿಯೂರಪ್ಪ ನೇರಾ ನೇರವಾಗಿ ನಡ್ಡಾ ಅವರಿಗೆ ವಿವರಿಸಿದ್ದಾರೆ.
ಹೀಗೆ ಯಡಿಯೂರಪ್ಪ ಅವರಾಡಿದ ಮಾತುಗಳನ್ನು ಕೇಳಿದ ನಡ್ಡಾ ಹೆಚ್ಚು ಮಾತನಾಡಲಿಲ್ಲವಂತೆ.ಮೂಲಗಳ ಪ್ರಕಾರ:ಟಿಕೆಟ್ ಹಂಚಿಕೆಯ ಬೆಳವಣಿಗೆ ಯಡಿಯೂರಪ್ಪ ಅವರ ಮನಸ್ಸಿಗೆ ತುಂಬ ಕಿರಿಕಿರಿ ಮಾಡಿದೆ.ಹಲವು ಕ್ಷೇತ್ರಗಳಲ್ಲಿ ತಾವು ಹೇಳಿದ ಹೆಸರುಗಳನ್ನು ಕನ್ಸಿಡರ್ ಮಾಡಿದ್ದರೂ ಕೆಲ ನಿರ್ಣಾಯಕ ಕ್ಷೇತ್ರಗಳ ವಿಷಯದಲ್ಲಿ ತಮ್ಮ ಮಾತಿಗೆ ಬೆಲೆ ಸಿಕ್ಕಿಲ್ಲ.ಈಗ ನೋಡಿದರೆ ಎಲ್ಲ ಸಮಸ್ಯೆಗಳಿಗೆ ನಾನೇ ಮೂಲ ಎಂಬಂತೆ ಟೀಕಿಸುವ ಕೆಲಸವಾಗುತ್ತಿದೆ.ಹೀಗಾಗಿ ಒಂದು ಸಲ ಪಾರ್ಲಿಮೆಂಟ್ ಚುನಾವಣೆ ಮುಗಿದರೆ  ಸಾಕು,ನಂತರ ಶಿವಮೊಗ್ಗಕ್ಕೆ ಹೋಗಿ ಸೆಟ್ಲಾಗಿ ಬಿಡುತ್ತೇನೆ ಅಂತ ಯಡಿಯೂರಪ್ಪ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ.
ಕೈಗೆ ಪಾಶುಪತಾಸ್ತ್ರದ ಬಲ?
———————————-
ಈ ಮಧ್ಯೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಪಾಶುಪತಾಸ್ತ್ರದ ನೆರವು ಸಿಕ್ಕಿದೆ.
ಅರ್ಥಾತ್,ಹಾವೇರಿಯಲ್ಲಿ ಮಗ ಕಾಂತೇಶ್ ಗೆ ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕಾಗಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಬಂಡಾಯವೆದ್ದಿದ್ದಾರೆ.
ಹೀಗೆ ಬಂಡಾಯ ಅಭ್ಯರ್ಥಿಯಾಗಿ ಅವರು ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಅದರಿಂದ ತೊಂದರೆ ಅನುಭವಿಸುವುದು ಯಡಿಯೂರಪ್ಪ ಅವರ ಪುತ್ರ,ಬಿಜೆಪಿ ಕ್ಯಾಂಡಿಡೇಟ್ ಬಿ.ವೈ.ರಾಘವೇಂದ್ರ.ಈ ಅಂಶವೇ ಗೀತಾ ಶಿವರಾಜ್ ಕುಮಾರ್ ಅವರ ಪಾಲಿಗೆ ಪ್ಲಸ್ ಆಗಿ ಕಾಣುತ್ತಿರುವುದು ನಿಜ.
ಕುತೂಹಲದ ಸಂಗತಿ ಎಂದರೆ ಗೀತಾ ಶಿವರಾಜ್ ಕುಮಾರ್  ಕಾಂಗ್ರೆಸ್ ಅಭ್ಯರ್ಥಿಅಗುವುದು ಖಚಿತವಾಗುತ್ತಿದ್ದಂತೆಯೇ,ಓ ಇನ್ನೇನು?ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ನಿರಾಯಾಸವಾಗಿ ಗೆಲ್ಲುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.ಆದರೆ ರಾಘವೇಂದ್ರ ಅವರ ಪರಿಸ್ಥಿತಿ ಅಂದುಕೊಂಡಷ್ಟು ಸರಳವಾಗಿಲ್ಲ.ಕಾರಣ?ಈ ಬಾರಿ ಗೀತಾ ಶಿವರಾಜ್ ಕುಮಾರ್ ಪರವಾಗಿ ಹೋರಾಡಲಿರುವ ಕಾಂಗ್ರೆಸ್ ಸೈನ್ಯ ಮೂರು ಪ್ರಬಲ ಅಸ್ತ್ರಗಳನ್ನು ರಾಘವೇಂದ್ರ ಅವರ ವಿರುದ್ಧ ಪ್ರಯೋಗಿಸಲಿದೆ.
ಈ ಪೈಕಿ ಮೊದಲ ಅಸ್ತ್ರ ಬಂಗಾರಪ್ಪ.ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪ ಅವರು ಪ್ರಬಲ ಈಡಿಗ ಸಮುದಾಯದ ಸ್ವಾಭಿಮಾನದ ಸಂಕೇತವಾಗಿದ್ದವರು.ಅಂತಹ ಬಂಗಾರಪ್ಪ ಅವರ ರಾಜಕೀಯ ಬದುಕು ಕುಸಿಯುವಂತೆ ಮಾಡಿದವರು ಯಡಿಯೂರಪ್ಪ.ಹೀಗಾಗಿ ಅವತ್ತು ಬಂಗಾರಪ್ಪ ಅವರಿಗಾದ ಅವಮಾನದ ಸೇಡನ್ನು ಈ ಬಾರಿ ತೀರಿಸಿಕೊಳ್ಳಬೇಕು.ಅದಕ್ಕಾಗಿ ಅವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರ ಬೆಂಬಲಕ್ಕೆ ನಿಲ್ಲಬೇಕು ಎಂಬ ಭಾವನೆಯನ್ನು ಈಡಿಗರಲ್ಲಿ ಬಿತ್ತುವುದು ಕಾಂಗ್ರೆಸ್ ಲೆಕ್ಕಾಚಾರ.
ಈ ಲೆಕ್ಕಾಚಾರ ವರ್ಕ್ ಔಟ್ ಆದರೆ ಎರಡೂವರೆ ಲಕ್ಷದಷ್ಟಿರುವ ಈಡಿಗ ಮತ ಬ್ಯಾಂಕಿನ ಶಕ್ತಿ,ಗೀತಾ ಸಿವರಾಜ್ ಕುಮಾರ್ ಅವರ ಕೈಗೆ ಬಲ ತುಂಬಲಿದೆ.
ಇನ್ನು ಕ್ಷೇತ್ರದಲ್ಲಿ ಮೂರು ಲಕ್ಷದಷ್ಟಿರುವ ದಲಿತ ಮತಗಳನ್ನು ಮಲ್ಲಿಕಾರ್ಜುನ ಖರ್ಗೆ ಎಂಬ ಅಸ್ತ್ರ ಬಳಸಿ ಎಳೆಯುವುದು ಕಾಂಗ್ರೆಸ್ ಲೆಕ್ಕಾಚಾರ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯವಾಗಿ ಇಂಡಿಯ ಒಕ್ಕೂಟದ ಪ್ರಧಾನಿ ಕ್ಯಾಂಡಿಡೇಟ್ ಅಂತ ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಫೀಲ್ಡಿಗೆ ಇಳಿಸಿದರೆ,ದಲಿತ ಮತ ಬ್ಯಾಂಕ್ ಸಾಲಿಡ್ಡಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತದೆ ಎಂಬುದು ಅದರ ಯೋಚನೆ.
ಇನ್ನು ಎರಡೂವರೆ ಲಕ್ಷದಷ್ಟಿರುವ ಮುಸ್ಲಿಂ,ಒಂದು ಲಕ್ಷದಷ್ಟಿರುವ ಕುರುಬ. ಮತಗಳು ಮತ್ತು ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ತಮ್ಮನ್ನು ಬೆಂಬಲಿಸುತ್ತಾರೆ ಎಂಬುದು ಕಾಂಗ್ರೆಸ್ ನಂಬಿಕೆ.
ಇದು ಒಂದು ಭಾಗವಾದರೆ ಮತ್ತೊಂದು ಕಡೆ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರ ಎಫೆಕ್ಟ್ ರಾಘವೇಂದ್ರ ಅವರನ್ನು ದುರ್ಬಲಗೊಳಿಸಲಿದೆ ಎಂಬುದು ಕೈ ಪಾಳಯದ ನಂಬಿಕೆ.
ಅದರ ಲೆಕ್ಕಾಚಾರದ ಪ್ರಕಾರ,ಜಿಲ್ಲೆಯಲ್ಲಿರುವ ಒಂದು ಲಕ್ಷ ಬ್ರಾಹ್ಮಣ ಮತಗಳಲ್ಲಿ ಮೇಜರ್ ಷೇರು ಈಶ್ವರಪ್ಪ ಅವರಿಗೆ ಸಿಗಲಿದೆ.
ಇದೇ ರೀತಿ ಬಿಜೆಪಿ ಜತೆ ಸಾಂಪ್ರದಾಯಿಕವಾಗಿ ನಿಲ್ಲುತ್ತಾ ಬಂದ ಕೆಲ ಹಿಂದುಳಿದ ಸಮುದಾಯಗಳು ಮತ್ತು ಈಶ್ವರಪ್ಪ ಕಣ್ಣಳತೆಯ ಮಹಿಳಾ ಸ್ವಸಹಾಯ ಸಂಘದ ಪವರ್ರು ಅವರ ಕೈ ಹಿಡಿಯಲಿವೆ.
ಈ ಮಧ್ಯೆ ಹಿಂದುತ್ವದ ಮತಗಳೇನಿವೆ?ಅವುಗಳಲ್ಲಿ ಗಣನೀಯ ಪ್ರಮಾಣದ ಮತಗಳನ್ನು ಈಶ್ವರಪ್ಪ ಪಡೆಯಲಿದ್ದಾರೆ.ಕಾರಣ?ಕರ್ನಾಟಕದ ನೆಲೆಯಲ್ಲಿ ಹಿಂದುತ್ವದ ಬಾವುಟವನ್ನು ಈಶ್ವರಪ್ಪ ಅವರಷ್ಟು ಪರಿಣಾಮಕಾರಿಯಾಗಿ ಎತ್ತಿ ಹಿಡಿದವರು ವಿರಳ.
ಎಲ್ಲಕ್ಕಿಂತ ಮುಖ್ಯವಾಗಿ,ನಾನು ಈಗಲೂ ನರೇಂದ್ರಮೋದಿ ಅವರ ಪರವಾಗಿದ್ದೇನೆ.ಗೆದ್ದರೆ ಪುನ: ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಅಂತ ಈಶ್ವರಪ್ಪ ಆಡುತ್ತಿರುವ ಮಾತು ಹಿಂದುತ್ವವಾದಿಗಳ ಪಾಲಿಗೆ ಅಪ್ಯಾಯಮಾನವಾಗಿ ಕೇಳಿಸುತ್ತಿದೆ.
ಪರಿಣಾಮ?ನಿರಾಯಾಸವಾಗಿ ಗೆಲುವು ಸಾಧಿಸುವ  ರಾಘವೇಂದ್ರ ಅವರ ಕನಸೇನಿದೆ?ಅದಕ್ಕೆ ಹೊಡೆತ ಬೀಳಲಿದೆ ಎಂಬುದು ಕಾಂಗ್ರೆಸ್ ಯೋಚನೆ.
ಕಾಂಗ್ರೆಸ್ ಪಾಳಯದ ಈ ಯೋಚನೆಯೇ ಗೀತಾ ಶಿವರಾಜ್ ಕುಮಾರ್ ಅವರ ಮುಖದಲ್ಲಿ ಗೆಲುವಿನ‌ ವಿಶ್ವಾಸ ತುಂಬಿರುವುದು ನಿಜ.
ಬೆಂಗಳೂರು ಸೆಂಟ್ರಲ್
ಪಿಸಿಎಂ ಪವಾಡ
——————————
ಇನ್ನು ಕೈ ತಪ್ಪಲಿದ್ದ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಟಿಕೆಟ್ಟನ್ನು ಹಾಲಿ ಸಂಸದ ಪಿ.ಸಿ.ಮೋಹನ್ ಗಬಕ್ಕನೆ ಕಿತ್ತುಕೊಂಡಿದ್ದಾರೆ.ಈ ಸಲ ಟಿಕೆಟ್ಟಿಗಾಗಿ ಕಸರತ್ತು ಆರಂಭವಾದಾಗ ಬಿಜೆಪಿಯ ಒಂದು ಬಣ,ಪಿ.ಸಿ.ಮೋಹನ್ ಅವರಿಗೆ ಟಿಕೆಟ್ ಕೊಡಬಾರದು ಅಂತ ವರಾತ ಶುರು ಮಾಡಿತ್ತು.
ಈ ಬಣ ದಿನ ಬೆಳಗಾದರೆ ಒಂದೊಂದು ಮೂಲೆಯಿಂದ ವಿರೋಧದ ಕಾವು ಎಬ್ಬಿಸುತ್ತಾ,ರಾಜ್ಯದಲ್ಲಿ ಪಕ್ಷದ ಚುನಾವಣಾ ಉಸ್ತುವಾರಿ ಹೊತ್ತ ರಾಧಾಮೋಹನ ದಾಸ್ ಅಗರ್ವಾಲ್ ಅವರಿಗೂ ಕಂಪ್ಲೇಂಟು ಕೊಟ್ಟಿತ್ತು.
ಹೀಗಾಗಿ ದಿಲ್ಲಿಯಲ್ಲಿ ಟಿಕೆಟ್‌ ಕಸರತ್ತು ನಡೆದು ನಿರ್ಣಾಯಕ ಟೈಮು ಬಂದಾಗ ಪಿ.ಸಿ.ಮೋಹನ್ ಅವರಿಗೆ ಬೆಂಗಳೂರು ಸೆಂಟ್ರಲ್ಲು ಬೇಡ.ಚಿಕ್ಕಬಳ್ಳಾಪುರ ಕೊಡೋಣ ಎಂಬ‌ ಮಾತು ಬಂದಿದೆ.ಇದನ್ನೇ  ಪಿ.ಸಿ.ಮೊಹನ್ ಅವರಿಗೆ ಹೇಳಿದ ಯಡಿಯೂರಪ್ಪ,ನಾನೆಷ್ಟು ಹೇಳಿದರೂ ನಿಮಗೆ ಚಿಕ್ಕಬಳ್ಳಾಪುರ ಕೊಡೋಣ ಅಂತಿದಾರೆ.ಹೋಗ್ಲಿ ರೆಡಿಯಾಗಿ ಬಿಡಿ ಎಂದಿದ್ದಾರೆ.
ಅಗೆಲ್ಲ,ಯೋಚಿಸಲು ನಂಗೊಂದು ದಿನ ಟೈಮು ಕೊಡಿ ಸಾರ್ ಎಂದ ಪಿ.ಸಿ.ಮೋಹನ್,ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಸಂಪರ್ಕಿಸಿ ವಿಷಯ ಹೇಳಿದ್ದಾರೆ.ಅಗ ತಕ್ಷಣವೇ ಅಮಿತ್ ಷಾ ಅಪಾಯಿಂಟ್ ಮೆಂಟ್ ತೆಗೆದುಕೊಂಡ ವೆಂಕಯ್ಯ ನಾಯ್ಡು ಅವರು ಪಿ.ಸಿ.ಮೋಹನ್ ಕೇಸನ್ನು ಸೆಟ್ಲ್ ಮಾಡಿದ್ದಾರೆ.
ಮರುದಿನದ ಹೊತ್ತಿಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಟಿಕೆಟ್ಟು ಮೋಹನ್ ಅವರಿಗೆ ಪಕ್ಕಾ ಆಗಿದ್ದನ್ನು ಕೇಳಿ ಅವರ ವಿರೋಧಿಗಳು ಮಾತ್ರವಲ್ಲ,ಸ್ವತ: ಯಡಿಯೂರಪ್ಪ ಕೂಡಾ ಅಚ್ಚರಿಪಟ್ಟರಂತೆ.
ಆರ್.ಟಿ.ವಿಠ್ಠಲಮೂರ್ತಿ
(Facebook ಕೃಪೆ)