ಎಚ್.ಎಸ್.ವೆಂಕಟೇಶ ಮೂರ್ತಿ ಮತ್ತು ಆ ಅಮೇರಿಕಾದ ಭಯೋತ್ಪಾದಕ ದಾಳಿ!*
*ಎಚ್.ಎಸ್.ವೆಂಕಟೇಶ ಮೂರ್ತಿ ಮತ್ತು ಆ ಅಮೇರಿಕಾದ ಭಯೋತ್ಪಾದಕ ದಾಳಿ!*
ಅವತ್ತು ಜಗತ್ತಿನ ಪಾಲಿಕೆಗೆ ದುರಂತದ ದಿನವಾಗಿದ್ದರೆ, ನನ್ನ ಪಾಲಿಗೆ ವಿಶೇಷವಾದ ದಿನ!
9 ನವೆಂಬರ್ 2001(9/11)ರಂದು ಅಮೇರಿಕಾದ ಟ್ವಿನ್ ಟವರ್ಸ್ ಮತ್ತು ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ 19 ಜನ ಭಯೋತ್ಪಾದಕರು 4 ಕಮರ್ಷಿಯಲ್ ವಿಮಾನಗಳನ್ನು ಹೈಜಾಕ್ ಮಾಡಿ ದಾಳಿ ಮಾಡಿ ಧೂಳೆಬ್ಬಿಸಿದ್ದರು.
ಆ ಭೀಕರ ದಾಳಿಯ ಮಾತಾಡುತ್ತಾ ಶಿವಮೊಗ್ಗದಿಂದ ಭದ್ರಾವತಿಯ ಕಡೆ ಸಾಗಿದ್ದೆವು ಈಗ ನಿಧನರಾದ ಸಾಹಿತಿ ಹೆಚ್.ಎಸ್.ವೆಂಕಟೇಶ ಮೂರ್ತಿ ಮತ್ತು ಬಿ.ಆರ್.ಲಕ್ಷ್ಮಣರಾವ್ ಮತ್ತು ನಾನು(ಗಿರೀಶ್ ಕೋಟೆಯೂ ಇದ್ದ ನೆನಪು).
ಆ ದಿನ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿಳಿದಿದ್ದ ಈ ಇಬ್ಬರು ಹಿರಿಯ ಸಾಹಿತಿಗಳನ್ನು ಭದ್ರಾವತಿಯ ಆಕಾಶವಾಣಿಗೆ ಕರೆದೊಯ್ದು ಅಲ್ಲಿ ವಿಶೇಷ ಸಂದರ್ಶನವನ್ನು ಬಾನುಲಿಯ ಕಿವಿಗಳಿಗೆ ಕಳಿಸುವ ಜವಾಬ್ದಾರಿ ನನ್ನ ಮೇಲಿತ್ತು.
ಕಾರೊಂದರಲ್ಲಿ ಈ ಇಬ್ಬರು ಕನ್ನಡ ಸಾಹಿತ್ಯದ ಗಜಗಳನ್ನು ಕುಳ್ಳಿರಿಸಿಕೊಂಡು ಸವಾರಿ ಸಾಗಿತ್ತು. ಅರ್ಧ ಗಂಟೆಯ ದಾರಿಯಲ್ಲಿ ಯಾವಾಗಲೂ ತಮಾಷೆ ಮಾಡುತ್ತಿದ್ದ ಈ ಜೋಡಿ ಅಮೇರಿಕಾದ ಮೇಲಿನ ದಾಳಿಯ ಕಾರಣದಿಂದ ಗಂಭೀರವಾಗಿತ್ತು.
ಮೂರನೇ ಮಹಾಯುದ್ಧಕ್ಕೆ ಈ ದಾಳಿ ಮುನ್ನುಡಿ ಬರೆಯಬಹುದೆಂಬ ಆತಂಕದಲ್ಲಿ ಮಾತಾಡುತ್ತಿದ್ದರು ಹೆಚ್.ಎಸ್.ವೆಂಕಟೇಶ ಮೂರ್ತಿ ಮತ್ತು ಬಿ.ಆರ್.ಲಕ್ಷ್ಮಣರಾವ್.
ಸಾಹಿತಿಗಳು ತನ್ನೊಳಗೇ ಅಮಲೇರಿಸಿಕೊಂಡು, ಜಗತ್ತಿನ ಆಗು ಹೋಗುಗಳಿಗೂ ತಮಗೂ ಸಂಬಂಧವಿಲ್ಲ ಎಂಬಂತೆ ಜೀವಿಸುವವರೇ ಹೆಚ್ಚು. ಅಂಥವರ ಮಧ್ಯೆ ಈ ಇಬ್ಬರ ಮಾತುಕತೆ ನನ್ನೊಳಗೆ ಕುತೂಹಲ ಮೂಡಿಸುತ್ತಿತ್ತು.
ಈ ಯುದ್ಧಗಳೆಲ್ಲ ಹುಟ್ಟಿದ್ದೇ ಸ್ವಾರ್ಥಗಳಿಂದ. ಸ್ವಾರ್ಥದ ಅಸ್ತಿತ್ವಕ್ಕಾಗಿ ನಡೆಯುವ ಈ ಯುದ್ಧಗಳು ಕಸಿದುಕೊಳ್ಳುವ ಮನುಷ್ಯತ್ವವನ್ನು ಯಾವತ್ತಿಗೂ ಯಾರೂ ಲೆಕ್ಕ ಹಾಕಿಡುವುದಿಲ್ಲ ಎಂದು ವೆಂಕಟೇಶ ಮೂರ್ತಿಗಳು ಸಾಗುವ ದಾರಿಯತ್ತ ನೋಡುತ್ತಾ ಕಾರಿನ ಕಿಟಕಿ ಬಳಿ ಕುಳಿತು ಹೇಳಿದ್ದು ಮರೆಯಲಾಗಿಲ್ಲ. ಲಕ್ಷ್ಮಣರಾವ್ ರವರೂ ಕೂಡ ವಿಶೇಷವಾಗಿಯೇ ವೆಂಕಟೇಶ ಮೂರ್ತಿಗಳ ಮಾತಿಗೆ ಕಿವಿಯಾಗಿದ್ದರು. ಅಮೇರಿಕಾದ ಮೇಲಿನ ದಾಳಿಯ ಪರಿಣಾಮ, ವೆಂಕಟೇಶಮೂರ್ತಿಗಳ ಮೇಲೂ ನೋವಿನ ಪರಿಣಾಮ ಬೀರಿತ್ತು…
ಅಂತೂ ಭದ್ರಾವತಿ ಆಕಾಶವಾಣಿ ತಲುಪಿದ್ದಾಯ್ತು. ಅಲ್ಲಿ ಒಳ್ಳೆಯ ಸ್ವಾಗತ ಈ ಇಬ್ಬರು ಮಹಾ ಮಹಿಮರಿಗೆ.
ಯಾರು ಈ ಇಬ್ಬರನ್ನು ಸಂದರ್ಶಿಸುವವರು?- ಕೇಳಿದೆ ನಿಲಯದ ನಿರ್ದೇಶಕರಿಗೆ. ಆ ಸಂದರ್ಶಕರು ಕೈ ಕೊಟ್ಟಿದ್ದಾರೆ ಎಂದರು. ಮುಂದೇನೋ ಬದಲಾವಣೆ ಮಾಡಿಕೊಂಡಿರ್ತಾರೆ ಅಂತ ನಾನು ಭಾವಿಸಿದ್ದು ತಪ್ಪಾಗಿತ್ತು. ಆ ಭಾರವನ್ನು ಆಕಾಶವಾಣಿಯವರು ನನ್ನ ತಲೆಗೇ ಕಟ್ಟಿಬಿಟ್ಟರು! ಹಿಂದಿಲ್ಲ- ಮುಂದಿಲ್ಲದ, ಸಿದ್ಧತೆಯೇ ಇಲ್ಲದ ನಾನಂತೂ ನಡುಗಿ ಹೋಗಿದ್ದೆ!
ಇದನ್ನರಿತ ಹೆಚ್.ಎಸ್. ವೆಂಕಟೇಶ ಮೂರ್ತಿ ಮತ್ತು ಬಿ.ಆರ್.ಲಕ್ಷ್ಮಣರಾವ್ ಅಮೇರಿಕಾ ದಾಳಿಯ ಸಂತ್ರಸ್ತ ನಾನೇ ಎಂಬಂತೆ ಸಂತೈಸಿ ಧೈರ್ಯ ತುಂಬ ತೊಡಗಿದರು. ಇಲ್ಲವೆನ್ನಲಾಗದೇ ಹರಟೆಯ ರೂಪದಲ್ಲಿ ಸಂದರ್ಶಿಸುವುದಾಗಿ ಹೇಳಿ ಅವರನ್ನೆಲ್ಲ ಒಪ್ಪಿಸಿ ನಾನೂ ಆ ರೆಕಾರ್ಡಿಂಗ್ ರೂಮಿನ ಗಾಜಿನ ಮನೆಯಲ್ಲೋಗಿ ಕುಳಿತು ಕೊಂಡೆ.
*ಸರ್, ನೀವಿಬ್ಬರೂ ಸಾಹಿತಿಗಳು…ಇವತ್ತು ಅಮೇರಿಕಾ ಮೇಲೆ ಭಯೋತ್ಪಾದಕ ದಾಳಿ ಆಗಿದೆ. ಸಾಹಿತ್ಯದ ಮನಸುಗಳು ಈ ಸಂದರ್ಭದಲ್ಲಿ ಹೇಗೆ ಸ್ಪಂದಿಸಬೇಕು?*
– ಬರುವ ದಾರಿಯಲ್ಲಿ ನಡೆಯುತ್ತಿದ್ದ ಮಾತುಕತೆಯನ್ನೇ ಆಧಾರ ಮಾಡಿಕೊಂಡು ಇಬ್ಬರ ಮುಂದೆಯೂ ಪ್ರಶ್ನೆ ಇಟ್ಟೆ.
ಗಂಭೀರ ಧ್ವನಿಯಲ್ಲಿ ಹೆಚ್.ಎಸ್.ವೆಂಕಟೇಶ ಮೂರ್ತಿಗಳು ಉತ್ತರಿಸಿದ್ದರು;
*ಸಾವು ನೋವು ಸಂಭ್ರಮಿಸುವಂಥದ್ದಲ್ಲ. ಅಂಥವನು ಮನುಷ್ಯನೇ ಆಗಿರುವುದಿಲ್ಲ. ಕಟ್ಟಡಗಳನ್ನು ಹೊಡೆದುರುಳಿಸಿದರೆ ಅದನ್ನು ನಿರ್ಮಿಸಬಹುದು. ಮನುಷ್ಯತ್ವವನ್ನೇ ಹೊಡೆದುರುಳಿಸಿದರೆ ಹೇಗೆ ನಿರ್ಮಿಸುವುದು?*
ಪ್ರಶ್ನೋತ್ತರ ಮುಂದುವರೆದೇ ಇತ್ತು. ಅವತ್ತು ಹೆಚ್ಚು ಭಾವುಕವಾಗಿ, ಆಳದ ಮಾನವೀಯತೆಯಿಂದ ಮಾತಾಡುತ್ತಲೇ ಆ ಆಕಾಶವಾಣಿಯ ಜೋಡಿ ಸಂದರ್ಶನವನ್ನು ನೆನಪಾರ್ಹ ಸಂದರ್ಶನ ಮಾಡಿದರು ವೆಂಕಟೇಶ ಮೂರ್ತಿ ಮತ್ತು ಬಿ.ಆರ್.ಲಕ್ಷ್ಮಣರಾವ್…
ಅದೊಂದು ಮರೆಯಲು ಸಾಧ್ಯವೇ ಇಲ್ಲದ ಕ್ಷಣಗಳು ನನ್ನ ಪಾಲಿಗೆ. ಇವತ್ತು ಭೌತಿಕವಾಗಿ ಹೆಚ್.ಎಸ್.ವೆಂಕಟೇಶ ಮೂರ್ತಿಗಳಿಲ್ಲ. ಆದರೆ, ಅವರು ಮೂಡಿಸಿದ ಅಕ್ಷರಗಳಿವೆ. ಹಾಡು, ಪದ್ಯಗಳಿವೆ…ಅವೆಲ್ಲ ಸದಾಕಾಲ ವೆಂಕಟೇಶ ಮೂರ್ತಿಯವರನ್ನು ನೆನಪಿಡುತ್ತಾ ಸಾಗಲು ಸಾಕು…
– *ಶಿ.ಜು.ಪಾಶ*
8050112067