ಜೆಡಿಎಸ್ ವಕ್ತಾರ ನರಸಿಂಹ ಗಂಧದಮನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಬಡವರ ನೋವಿನ ಕಥೆ* *ಬಡವರಿಗೆ ಇ- ಖಾತಾ ಶಾಪ…* *ನೂರೆಂಟು ಸಮಸ್ಯೆಗಳಲ್ಲಿ ಹಕ್ಕುಪತ್ರ ಹೊಂದಿದ ಬಡ ನಿವೇಶನ ಮಾಲೀಕರು…* *ವಿಐಎಸ್ ಎಲ್ ಉದ್ಧಾರಕ್ಕೆ ಶ್ರಮಿಸಿದ್ದ  ಮಾಜಿ ಶಾಸಕ  ಎಂ.ಜೆ.ಅಪ್ಪಾಜಿ ಶ್ರಮಕ್ಕೆ ಈಗ ಸಾರ್ಥಕತೆ…*

*ಜೆಡಿಎಸ್ ವಕ್ತಾರ ನರಸಿಂಹ ಗಂಧದಮನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಬಡವರ ನೋವಿನ ಕಥೆ*

*ಬಡವರಿಗೆ ಇ- ಖಾತಾ ಶಾಪ…*

*ನೂರೆಂಟು ಸಮಸ್ಯೆಗಳಲ್ಲಿ ಹಕ್ಕುಪತ್ರ ಹೊಂದಿದ ಬಡ ನಿವೇಶನ ಮಾಲೀಕರು…*

*ವಿಐಎಸ್ ಎಲ್ ಉದ್ಧಾರಕ್ಕೆ ಶ್ರಮಿಸಿದ್ದ  ಮಾಜಿ ಶಾಸಕ  ಎಂ.ಜೆ.ಅಪ್ಪಾಜಿ ಶ್ರಮಕ್ಕೆ ಈಗ ಸಾರ್ಥಕತೆ…*

ಶಿವಮೊಗ್ಗ: ಆಶ್ರಯ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಸುಪ್ರೀಂ ಕೋರ್ಟ್ ಆದೇಶ ಮುಂದಿಟ್ಟುಕೊಂಡು ವಿದ್ಯುತ್ ನಿಗಮ ನಿರಾಕರಿಸುತ್ತಿದ್ದು, ಶಾಶ್ವತ ವಿದ್ಯುತ್ ಸೌಲಭ್ಯದಿಂದ ಆಶ್ರಯ ಫಲಾನುಭವಿಗಳು ವಂಚಿತರಾಗಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಗಂಧದಮನೆ ನರಸಿಂಹ ಆರೋಪಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯಿಂದ ಆಶ್ರಯ ಯೋಜನೆಯಡಿ ಪೂರ್ಣಗೊಂಡ ಮನೆಗಳಿಗೆ ಫಲಾನುಭವಿಗಳು ವಾಸವಾಗಿದ್ದರೂ ಸಹ ಪಾಲಿಕೆ ವತಿಯಿಂದ ಸ್ವಾಧೀನಾನುಭವ ಪತ್ರ ನೀಡದೇ ಇರುವುದರಿಂದ ಸುಪ್ರೀಂ ಕೋರ್ಟ್ ಆದೇಶ ಮುಂದಿಟ್ಟುಕೊಂಡು ಮೆಸ್ಕಾಂ ಅಧಿಕಾರಿಗಳು ಶಾಶ್ವತ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಅವರೆಲ್ಲರೂ ತಾತ್ಕಾಲಿಕ ವಿದ್ಯುತ್ ಸಂಪರ್ಕದಲ್ಲಿದ್ದಾರೆ ಎಂದರು.
ಪಾಲಿಕೆ ಅಧಿಕಾರಿಗಳಿಗೆ ಕೇಳಿದರೆ ಎಲ್ಲಾ ಮನೆ ಪೂರ್ಣಗೊಳ್ಳದೇ ನಮಗೆ ಸ್ವಾಧೀನಾನುಭವ ಪತ್ರ ನೀಡಲು ಇನ್ನೂ ಆದೇಶ ಬಂದಿಲ್ಲ ಎನ್ನುತ್ತಾರೆ. ಜನಸಾಮಾನ್ಯರು ಗೃಹ ಪ್ರವೇಶ ಮಾಡಿದರೂ ಕೂಡ ಪಾಲಿಕೆ ಮತ್ತು ಮೆಸ್ಕಾಂ ನೀತಿಯಿಂದ ಹೈರಾಣಾಗಿದ್ದಾರೆ. ರಾಜ್ಯ ಸರ್ಕಾರದ ಕೆಲವೊಂದು ಆದೇಶಗಳು ಜನಸಾಮಾನ್ಯರಲ್ಲಿ ಗೊಂದಲ ಮೂಡಿಸಿದ್ದು, ೨೦*೩೦ರಲ್ಲಿ ಮನೆ ಕಟ್ಟಿದರೆ ಸೆಟ್ ಬ್ಯಾಕ್ ಬಿಟ್ಟಿಲ್ಲ ಎಂಬ ಕಾರಣಕ್ಕೆ ಯೋಜನಾ ಪ್ರಾಧಿಕಾರದಿಂದ ಅದು ಸಿಂಧು ಎಂದು ಪತ್ರ ನೀಡುವುದಿಲ್ಲ. ನಿಗದಿತ ಪ್ರಾಧಿಕಾರದ ಅನುಮತಿ ಇಲ್ಲದೇ, ಇವರಿಗೆ ಯಾವುದೇ ಸಾಲವಾಗಲಿ, ಇನ್ನಿತರ ಸೌಲಭ್ಯಗಳು ಸಿಗುವುದಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮನೆ ಕಟ್ಟಿದವರಿಗೆ ಪಂಚಾಯಿತಿಯಲ್ಲಿ ಇಂಜಿನಿಯರ್ ವಿಭಾಗ ಇಲ್ಲದ್ದರಿಂದ ಪಿಡಿಒ ದೃಢೀಕರಣ ಪತ್ರ ನೀಡುವುದಿಲ್ಲ. ಅವರಿಗೂ ಕೂಡ ವಿದ್ಯುತ್ ಸಂಪರ್ಕ ಮತ್ತು ಇನ್ನಿತರ ಸರ್ಕಾರಿ ಸೌಲಭ್ಯ ಪಡೆಯಲು ಕಷ್ಟವಾಗಿದೆ. ಸರ್ಕಾರದ ಆದೇಶಗಳು ಸಣ್ಣ ಸಣ್ಣ ಮನೆಯಲ್ಲಿರುವ ಜನರಿಗೆ ತೊಂದರೆಯಾಗಿ ಪರಿಣಮಿಸಿವೆ.
ನಕ್ಷೆ ಮಂಜೂರಾತಿಗೆ ಗ್ರಾಮೀಣ ಪ್ರದೇಶದಲ್ಲಿ ಇಂಜಿನಿಯರಿಂಗ್ ವಿಭಾಗವಿಲ್ಲ. ಪಾಲಿಕೆಯಲ್ಲಿ ಹಕ್ಕುಪತ್ರದ ಮೇಲೆ ಖಾತೆ ಏರಿಸಿಕೊಂಡವರಿಗೆ ಇ-ಖಾತೆ ಆಗುತ್ತಿಲ್ಲ. ಕುಟುಂಬ ವಿಂಗಡಣೆ ಕೂಡ ಇ-ಖಾತೆ ಇಲ್ಲದೇ ವಿಭಾಗ ಮಾಡಲ್ಲ. ಇ-ಖಾತೆ ನೀಡದಿದ್ದರೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗುತ್ತಿಲ್ಲ. ಎರಡು ಇಲಾಖೆಗಳ ನಡುವಿನ ಗೊಂದಲದಿಂದಾಗಿ ಜನ ಸಾಮಾನ್ಯರಿಗೆ ಕುಟುಂಬ ಆಸ್ತಿ ವಿಭಾಗವಾಗುತ್ತಿಲ್ಲ. ಇ-ಖಾತೆ ಆಗುತ್ತಿಲ್ಲ. ತುರ್ತಾಗಿ ಮಕ್ಕಳ ಮದುವೆ, ಆರೋಗ್ಯ ಸಮಸ್ಯೆಗಳಿಗೆ ಆಸ್ತಿ ಮಾರಾಟ ಮಾಡುವವರಿಗೆ ದೊಡ್ಡ ಸಮಸ್ಯೆಯಾಗಿದ್ದು, ಪಾಲಿಕೆಯಲ್ಲಿ ನೂರಾರು ಪ್ರಕರಣಗಳು ಇತ್ಯರ್ಥವಾಗದೇ ಹಾಗೆಯೇ ಉಳಿದಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕೂಡಲೇ ಸೂಕ್ತ ಗಮನಹರಿಸಿ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಭದ್ರಾವತಿ ವಿಐಎಸ್‌ಎಲ್ ಪುನರುಜ್ಜೀವನಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಯತ್ನಕ್ಕೆ ಹಾಗೂ ಮಾಜಿ ಜೆಡಿಎಸ್ ಶಾಸಕ ಎಂ.ಜೆ.ಅಪ್ಪಾಜಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪ್ರಮುಖರಾದ ದಯಾನಂದ್, ಚಾಮುಂಡಿ, ಲೋಹಿತ್ ಕುಮಾರ್, ಗೋಪಿ ಮತ್ತಿತರರು ಇದ್ದರು.