ಕಲ್ಮನೆ ಗ್ರಾಮದಲ್ಲಿ ಕೃಷಿ ವಿಜ್ಞಾನಿಗಳ ತೋಟ ಪರಿಶೀಲನೆ – ರೈತರಿಗೆ ತಾಂತ್ರಿಕ ಮಾರ್ಗದರ್ಶನ

ಕಲ್ಮನೆ ಗ್ರಾಮದಲ್ಲಿ ಕೃಷಿ ವಿಜ್ಞಾನಿಗಳ ತೋಟ ಪರಿಶೀಲನೆ – ರೈತರಿಗೆ ತಾಂತ್ರಿಕ ಮಾರ್ಗದರ್ಶನ

ಶಿಕಾರಿಪುರ ತಾಲ್ಲೂಕಿನ ಕಲ್ಮನೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ ಶಿವಮೊಗ್ಗದ ಸಸ್ಯರೋಗ ಶಾಸ್ತ್ರಜ್ಞರಾದ ಡಾ. ನರಸಿಂಹಮೂರ್ತಿ ಮತ್ತು ವಿಸ್ತರಣಾ ಶಿಕ್ಷಣ ವಿಭಾಗದ ಡಾ. ಸಹನಾ ರೈತರ ಅಡಿಕೆ ತೋಟ ಮತ್ತು ಭತ್ತದ ಹೊಲಗಳಿಗೆ ಭೇಟಿ ನೀಡಿ, ಬೆಳೆಯ ಸ್ಥಿತಿ ಹಾಗೂ ಕೀಟ-ರೋಗಗಳ ಕುರಿತು ಪರಿಶೀಲನೆ ನಡೆಸಿದರು.

ವಿಜ್ಞಾನಿಗಳು ಭೀಮನಗೌಡ ಮತ್ತು ಹತ್ತಿರದ ರೈತರ ತೋಟಗಳಲ್ಲಿ ಕಂಡುಬಂದ ಬೆಳೆಯ ಸಮಸ್ಯೆಗಳನ್ನು ನೇರವಾಗಿ ವಿಶ್ಲೇಷಿಸಿದರು.

ಅಡಿಕೆ ತೋಟಗಳಲ್ಲಿ ಪ್ರಮುಖವಾಗಿ ಹಿಡಿಮುಂಡಿಗೆ , ಕೊಳೆರೋಗ, ಅಂಡೋಡಕ, ಹಿಂಗಾರು ಒಣಗುವಿಕೆ , ಕಾಂಡ ಬಿರುಕು, ಎಲೆಚುಕ್ಕೆರೋಗ ಇತ್ಯಾದಿ ಸಮಸ್ಯೆಗಳು ಕಂಡುಬಂದಿದ್ದು, ವಿಜ್ಞಾನಿಗಳು ರೋಗ ಗುರುತು ಮತ್ತು ಹರಡುವಿಕೆಯ ಬಗ್ಗೆ ವಿವರಿಸಿ, ಸೂಕ್ತ ನಿರ್ವಹಣಾ ಕ್ರಮಗಳಾದ ರಾಸಾಯನಿಕ ಸಿಂಪಡಣೆ, ಸರಿಯಾದ ನೀರಿನ ಹಾಯ್ ನಿಯಂತ್ರಣ, ಸಮತೋಲಿತ ಪೋಷಕಾಂಶ ನಿರ್ವಹಣೆ ಮುಂತಾದ ಸಲಹೆಗಳನ್ನು ನೀಡಿದರು.

ಅದೇ ರೀತಿ ಭತ್ತದ ಹೊಲಗಳಲ್ಲಿ ತೆನೆ ತಿಗಣೆ, ಎಲೆ ಮಡಚುವ ಹುಳು ,ತೆನೆ ಕವಚ ಕೊಳೆ ರೋಗ ಮತ್ತು ಮುಂತಾದ ಕೀಟ ಆಕ್ರಮಣಗಳು ಗುರುತಿಸಲ್ಪಟ್ಟಿದ್ದು, ವಿಜ್ಞಾನಿಗಳು ಅವುಗಳ ನಿರ್ವಹಣೆಗೆ ಕೀಟನಾಶಕದ ಸರಿಯಾದ ಪ್ರಮಾಣ, ನೀರಿನ ಮಟ್ಟದ ನಿಯಂತ್ರಣ, ಕಳೆ ಮತ್ತು ನೀರಾವರಿ ನಿರ್ವಹಣೆ ಕುರಿತಾಗಿ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ರೈತರು ಭೀಮನಗೌಡ, ಕುಮಾರಸ್ವಾಮಿ, ರುದ್ರಮುನಿ, ಮಂಜಪ್ಪ, ಶಿವಮೂರ್ತಪ್ಪ, ಶಾಂತಮ್ಮ, ಮಂಜುನಾಥ, ರಾಕೇಶ್, ರವಿಕುಮಾರ, ಗೌಡ್ರು ಸಂದೀಪ್ ಹಾಗೂ ಬಸವನಗೌಡ ಮತ್ತು ಇತರರು ಉಪಸ್ಥಿತರಿದ್ದರು.

ರೈತರು ತಮ್ಮ ತೋಟಗಳಲ್ಲಿ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ವಿಜ್ಞಾನಿಗಳಿಗೆ ನೇರವಾಗಿ ಪ್ರಶ್ನೆಗಳನ್ನು ಕೇಳಿ, ತಕ್ಷಣದ ತಾಂತ್ರಿಕ ಸಲಹೆ ಹಾಗೂ ಸಮಸ್ಯೆ ಪರಿಹಾರ ಕ್ರಮಗಳನ್ನು ತಿಳಿದುಕೊಂಡರು.

ವಿಜ್ಞಾನಿಗಳ ಈ ಸ್ಥಳೀಯ ಭೇಟಿ ಮತ್ತು ಸಂವಾದದಿಂದ ರೈತರಿಗೆ ರೋಗ-ಕೀಟ ನಿರ್ವಹಣೆ, ಪೋಷಕಾಂಶ ಪೂರೈಕೆ ಹಾಗೂ ಬೆಳೆ ಉತ್ಪಾದಕತೆ ವೃದ್ಧಿ ಕುರಿತು ಹೊಸ ಅರಿವು ಮತ್ತು ಆತ್ಮವಿಶ್ವಾಸ ಮೂಡಿದೆ. ರೈತರು ಈ ಭೇಟಿಯನ್ನು ಅತ್ಯಂತ ಉಪಯುಕ್ತವೆಂದು ಶ್ಲಾಘಿಸಿದರು.