ಮರ್ಯಾದಾ ಹತ್ಯೆಗೆ ಕ್ರೂರ ಕಾನೂನು ತನ್ನಿ; ಎನ್.ರವಿಕುಮಾರ್ (ಟೆಲೆಕ್ಸ್) ಮತ್ತು ದೇಶಾದ್ರಿ ಹೊಸ್ಮನೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹ
ಮರ್ಯಾದಾ ಹತ್ಯೆಗೆ ಕ್ರೂರ ಕಾನೂನು ತನ್ನಿ;
ಎನ್.ರವಿಕುಮಾರ್ (ಟೆಲೆಕ್ಸ್) ಮತ್ತು ದೇಶಾದ್ರಿ ಹೊಸ್ಮನೆ ಪತ್ರಿಕಾಗೋಷ್ಠಿಯಲ್ಲಿ ಆಗ್ರಹ
ಶಿವಮೊಗ್ಗ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಹೆಚ್ಚಾಗುತ್ತಿದ್ದು ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ ಇದನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಸರ್ಕಾರ ಉಗ್ರಶಿಕ್ಷೆಯ ಕಾಯ್ದೆಯನ್ನು ರೂಪಿಸಬೇಕಾಗಿದೆ ಎಂದು ಸಮಾನ ಮನಸ್ಕರ ವೇದಿಕೆ ಆಗ್ರಹಿಸಿದೆ.
ವೇದಿಕೆಯ ಪ್ರಮುಖರು ಹಾಗೂ ಪತ್ರಕರ್ತರಾದ ಎನ್.ರವಿಕುಮಾರ್ (ಟೆಲೆಕ್ಸ್) ಮತ್ತು ದೇಶಾದ್ರಿ ಹೊಸ್ಮನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹುಬ್ಬಳ್ಳಿಯ ಇನಾಂ ವೀರಾಪುರದಲ್ಲಿ ದಲಿತ ಸಮುದಾಯದ ಹುಡುಗನನ್ನು ಮದುವೆಯಾಗಿ ತುಂಬು ಗರ್ಭಿಣಿಯಾಗಿದ್ದ ಸ್ವಂತ ಮಗಳನ್ನೆ ತಂದೆಯೊಬ್ಬ ಜಾತಿ ದ್ವೇಷದಿಂದ ಕೊಂದು ಹಾಕಿರುವುದು, ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಸಮಸಮಾಜದ ಕ್ರಾಂತಿಪುರುಷ ಬಸವಣ್ಣನವರ ಈ ನಾಡಿಗೆ ದೊಡ್ಡ ಕಳಂಕವಾಗಿದೆ ಎಂದು ಆರೋಪಿಸಿದರು.
ಇದೊಂದು ಮರ್ಯಾದೆ ಹತ್ಯೆಯ ಮುಂದುವರಿದ ಭಾಗವಾಗಿದೆ. ಜಾತಿ ದ್ವೇಷವೇ ಇಲ್ಲಿ ವಿಜೃಂಭಿಸಿದೆ. ಜಾತಿಯ ವಿಷದ ಕ್ರೂರತೆಯನ್ನು ಇದು ಪ್ರತಿಬಿಂಬಿಸುತ್ತದೆ. ಮಗಳು ಮಾಡಿದ ತಪ್ಪಿಗೆ ತಂದೆಯೇ ಮಗಳನ್ನು ಕೊಲೆ ಮಾಡುವಂತಹ ಪರಿಸ್ಥಿತಿ ಸಾಮಾಜಿಕ ಕಾರಣಕ್ಕಾಗಿಯೇ ಹುಟ್ಟಿಕೊಂಡಿದೆ. ನನ್ನ ಮಗಳು ದಲಿತ ಹುಡುಗನೊಬ್ಬನನ್ನು ಮದುವೆಯಾದರೆ ನನಗೆ ಸಮಾಜದಲ್ಲಿ ಬೆಲೆ ಇಲ್ಲ ಎಂಬ ಕಾರಣಕ್ಕೆ ಆತ ಈ ಕ್ರೌರ್ಯ ಎಸಗಿಸಿದ್ದಾನೆ. ಇಂತಹ ಜಾತಿಯೇ ಕ್ರೌರ್ಯಗಳು ರಾಜ್ಯಾದ್ಯಂತ ಪದೇ ಪದೇ ನಡೆಯುತ್ತಲೆ ಇವೆ ಎಂದರು.
ಇವುಗಳನ್ನು ನಿಗ್ರಹಿಸಲು ಕಠಿಣ ಕಾನೂನು ರೂಪಿಸಬೇಕಾಗಿದೆ ಎಂಬ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಸಮಾನ ಮನಸ್ಕರುಗಳೆಲ್ಲಾ ಸೇರಿ ಹತ್ಯೆಗೆ ಒಳಗಾದ ಮಾನ್ಯಳ ಪ್ರಕರಣವನ್ನೇ ಇಟ್ಟುಕೊಂಡು ಮರ್ಯಾದಾಗೇಡು ಹತ್ಯೆ ಹೆಸರಿನ “ಜಾತಿ ಭಯೋತ್ಪಾದನೆಗೆ” ಬಲಿಯಾದ “ಮಾನ್ಯಾ”ಳ ಹೆಸರಲ್ಲಿ ಉಗ್ರಶಿಕ್ಷೆಯ ಕಾಯ್ದೆಯನ್ನು ರೂಪಿಸಬೇಕಾಗಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಆಂದೋಲನವನ್ನೇ ಆರಂಭಿಸಿದ್ದೇವೆ. ನಮ್ಮ ಈ ಆಂದೋಲನಕ್ಕೆ ನೂರಾರು ಸಮಾನ ಮನಸ್ಕರು ಕೈಜೋಡಿಸಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಒಪ್ಪಿಗೆಯನ್ನು ಸೂಚಿಸಿ, ಸಹಿಕೂಡ ಹಾಕಿದ್ದಾರೆ. ಇದೆಲ್ಲವನ್ನು ಸಂಗ್ರಹಿಸಿ ಇಂತಹ ಘೋರ ಅಪರಾಧಕ್ಕೆ ಕಠಿಣಶಿಕ್ಷೆ ವಿಧಿಸುವಂತಹ ಕಾನೂನನ್ನು ಜಾರಿಗೊಳಿಸಲು ನೇರವಾಗಿ ಶೀಘ್ರದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.
ಜಾತಿ ವಿನಾಶಕ್ಕೆ ಅಥವಾ ಜಾತಿ ಆಧಾರಿತ ತಾರತಮ್ಯ, ಹಿಂಸೆಗಳಿಗೆ ಅಂತರ್ಜಾತಿ ವಿವಾಹಗಳು ಪರಿಹಾರ ಎಂಬುದನ್ನು ಮಹಾಮಾನವತಾವಾದಿಗಳಾದ ಬಸವಣ್ಣ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಕರಾರುವಕ್ಕಾಗಿ ಪ್ರತಿಪಾದಿಸಿದ್ದರು ಮತ್ತೂ ಅದನ್ನು ಅನುಷ್ಠಾನ ಗೊಳಿಸುವಲ್ಲಿ ತಮ್ಮ ಬದುಕನ್ನು ಸಮರ್ಪಿಸಿಕೊಂಡವರು. ವಿಪರ್ಯಾಸವೆಂದರೆ, ಅಂತರ್ಜಾತಿ ವಿವಾಹಗಳನ್ನು ಒಪ್ಪಲಾರದ ಜಾತೀಯತೆಯ ರೋಗಪೀಡಿತ ಮನೋಸ್ಥಿತಿ ವಿಜ್ಞಾನ ಯುಗದಲ್ಲೂ ಮುಂದುವರೆದಿದೆ ಮತ್ತು ಹೆಚ್ಚಾಗುತ್ತಲೇ ಇದೆ. ಇದು ಸಮಸಮಾಜ ನಿರ್ಮಾಣದ ಎಲ್ಲಾ ಬಗೆಯ ಮಾನವೀಯ ಪ್ರಯತ್ನಗಳನ್ನು ಹತ್ತಿಕ್ಕಿಬಿಡುತ್ತವೆ ಎಂದು ವಿಷಾದಿಸಿದರು.
ಇಂತಹ ಮನೋಸ್ಥಿತಿ ಎಷ್ಟೊಂದು ಕ್ರೌರ್ಯವನ್ನು ಮೆರೆಯುತ್ತಿದೆ ಎಂದರೆ ಅಂತರ್ಜಾತಿ ವಿವಾಹಗಳಾದ ಮಕ್ಕಳನ್ನು, ಪರಸ್ಪರ ಪ್ರೀತಿಸಿದವರನ್ನು ತಮ್ಮ ಪೋಷಕರೇ ಕಾನೂನಿನ ಭಯವಿಲ್ಲದೆ ಮರ್ಯಾದೆಯ ಹೆಸರಲ್ಲಿ ನಿರ್ದಯವಾಗಿ ಹತ್ಯೆ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ “ಮರ್ಯಾದಾಗೇಡು ಹತ್ಯೆ” ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಾತಿವಾದಿಗಳು ಇಂತಹ ಕ್ರೌರ್ಯವನ್ನೇ ಸಾಮಾಜಿಕ ಘನತೆ-ಮೌಲ್ಯ ಎಂಬಂತೆ ಪ್ರತಿಷ್ಠಾಪಿಸುವ ಅಪಾಯವೂ ಇದೆ ಎಂದರು.
ಈ ಪಿಡುಗನ್ನು ಬುಡಸಮೇತ ಕಿತ್ತುಹಾಕಲು ಸರ್ಕಾರ ಇಚ್ಛಾಶಕ್ತಿ ತೋರಬೇಕು. ಜಾತಿ ದ್ವೇಷದಿಂದ ಪ್ರೇಮಿಗಳ ಅಥವಾ ದಂಪತಿಗಳ ಮೇಲೆ, ಅವರ ಕುಟುಂಬದ ಮೇಲೆ ನಡೆಯುವ ಹಲ್ಲೆ, ಹತ್ಯೆಯಂತಹ ಅಮಾನವೀಯ ಅಪರಾಧಗಳನ್ನು “ಘೋರ ಅಪರಾಧ” ಎಂದು ಪರಿಗಣಿಸಬೇಕು.
ಸರ್ಕಾರ ಇಂತಹ ಘೋರ ಅಪರಾಧಗಳನ್ನು ನಿಗ್ರಹಿಸುವ ಬಗ್ಗೆ ಸರ್ಕಾರಗಳು ಕೈಗೊಳ್ಳಬಹುದಾದ ಕ್ರಮವೇನು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ನಾಗರೀಕರ ಅಭಿಪ್ರಾಯ ಸಂಗ್ರಹಣೆಗೆ ಮುಂದಾದಾಗ ಅದೊಂದು ಅಭಿಯಾನ ರೂಪದಲ್ಲಿ ಈ ನಾಡಿನ ಸಾಮಾನ್ಯರೂ ಸೇರಿದಂತೆ ಪತ್ರಕರ್ತರು, ಲೇಖಕರು, ಸಾಹಿತಿಗಳು, ಕಲಾವಿದರು, ಸಾಮಾಜಿಕ ಹೋರಾಟಗಾರರು, ಪ್ರಗತಿಪರ ಚಿಂತಕರು ಮತ್ತು ವಿವಿಧ ಕ್ಷೇತ್ರಗಳ ಸಾವಿರಾರು ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಈಗಾಗಲೆ ಅಪರಾಧ ಕೃತ್ಯಗಳನ್ನು ತಡೆಯಲು ಕಾನೂನುಗಳಿದ್ದಾಗ್ಯೂ ಜಾತಿ ಆಧಾರಿತ ಕ್ರೌರ್ಯಗಳು ನಡೆಯುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದರು.
ಈ ಹಿನ್ನಲೆಯಲ್ಲಿ ಸರ್ಕಾರ “ಮರ್ಯಾದಾಗೇಡು” ಹೆಸರಿನಲ್ಲಿ ನಡೆಯುವ ಜಾತಿಯ ಕ್ರೌರ್ಯಗಳನ್ನು ಹತ್ತಿಕ್ಕಲು ಪ್ರತ್ಯೇಕವಾಗಿ ಕಠಿಣ ಕಾಯ್ದೆ ರೂಪಿಸಲು ತಾವು ಮುಂದಾಗಬೇಕು. ಈ ಮೂಲಕ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಲಿ.
ಈ ಉಗ್ರ ಶಿಕ್ಷೆಯ ಕಾಯ್ದೆಗೆ “ಮಾನ್ಯಾ ಕಾಯ್ದೆ” ಎಂದು ಹೆಸರಿಡುವ ಮೂಲಕ ಇದುವರೆಗೂ ಈ ರಾಜ್ಯದಲ್ಲಿ ಮರ್ಯಾದಾಗೇಡು ಹತ್ಯೆಗೆ ಬಲಿಯಾದ ಜೀವಗಳನ್ನು ಪ್ರತಿನಿಧಿಸುವಂತಾಗಲಿ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ದಿಟ್ಟಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದರು.
ಡಿ.೨೯-೩೦ರಂದು ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಮನವಿ ಪತ್ರ ನೀಡಲಾಗುವುದು ಎಂದರು.


