ಡಾ.ಪ್ರೀತಂರ ಡಯಾಬಿಟಿಸ್ ರಿವರ್ಸಲ್- ಸತ್ಯ ಮತ್ತು ಮಿಥ್ಯ ಪುಸ್ತಕ ಬಿಡುಗಡೆ* *ಸರಳ ಸತ್ಯ ಅರ್ಥ ಮಾಡಿಕೊಂಡರೆ ಸಕ್ಕರೆ ರೋಗ ಗೆಲ್ಲಬಹುದು; ಡಾ.ಎಚ್.ಎಸ್.ಶಿವಪ್ರಕಾಶ್*

ಡಾ.ಪ್ರೀತಂರ ಡಯಾಬಿಟಿಸ್ ರಿವರ್ಸಲ್- ಸತ್ಯ ಮತ್ತು ಮಿಥ್ಯ ಪುಸ್ತಕ ಬಿಡುಗಡೆ*

*ಸರಳ ಸತ್ಯ ಅರ್ಥ ಮಾಡಿಕೊಂಡರೆ ಸಕ್ಕರೆ ರೋಗ ಗೆಲ್ಲಬಹುದು; ಡಾ.ಎಚ್.ಎಸ್.ಶಿವಪ್ರಕಾಶ್*

ಇಡೀ ಜಗತ್ತಲ್ಲಿ ಸಕ್ಕರೆ ಖಾಯಿಲೆಯ ಎರಡನೇ ರಾಜಧಾನಿ ಭಾರತ. ಮೊದಲ ಸ್ಥಾನದಲ್ಲಿ ಚೈನಾ ಮತ್ತು ಮೂರನೇ ಸ್ಥಾನದಲ್ಲಿ ಪಾಕಿಸ್ತಾನವಿದೆ. ಈ ಸಕ್ಕರೆ ಖಾಯಿಲೆ ಯಥೇಚ್ಛವಾಗಲು ನಮ್ಮ ಆಹಾರದಲ್ಲಿರುವ ಕಾರ್ಬೋಹೈಡ್ರೇಡ್ ಕಾರಣ. ನಮ್ಮ ದಿನನಿತ್ಯದ ಅನ್ನದಲ್ಲಿರುವ ಈ ಕಾರ್ಬೋಹೈಡ್ರೇಡ್ ಕಡಿಮೆ ಮಾಡಿಕೊಂಡರೆ ಸಕ್ಕರೆ ಖಾಯಿಲೆ ಇನ್ನಿಲ್ಲವಾಗಿಸಬಹುದೆಂಬ ಸರಳ ಸತ್ಯ ಈ ಪುಸ್ತಕದಲ್ಲಿದೆ ಎಂದು ಖ್ಯಾತ ಸಾಹಿತಿ ಎಚ್.ಎಸ್.ಶಿವಪ್ರಕಾಶ್ ಹೇಳಿದರು.

ಇಲ್ಲಿವ ಶುಭಂ ಹೋಟೆಲ್ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಹಮ್ಮಿಕೊಂಡಿದ್ದ ಡಾ.ಪ್ರೀತಮ್ ರವರ ‘ಡಯಾಬಿಟಿಸ್ ರಿವರ್ಸಲ್- ಸತ್ಯ ಮತ್ತು ಮಿಥ್ಯ’ ಪುಟ್ಟ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಹಿರಿಹಿಗ್ಗಿನಿಂದ ಈ ಪುಸ್ತಕ ಬಿಡುಗಡೆ ಮಾಡುತ್ತಿದ್ದೇನೆ. ಸಣ್ಣದರಲ್ಲೇ ದೊಡ್ಡ ಮಹತ್ವ ಅಡಗಿದೆ. ಸಕ್ಕರೆ ರೋಗ ಅತ್ಯಂತ ಕಡಿಮೆ ಇರುವ ಜಪಾನ್ ನಲ್ಲಿನ ಆಹಾರ ಪದ್ಧತಿ ತೀರಾ ಭಿನ್ನವಾಗಿದೆ. ಆ ಥರದ ಪದ್ಧತಿ ನಮ್ಮ ದೇಶದಲ್ಲಿಲ್ಲ. ಈ ಪುಸ್ತಕದೊಳಗಿನ ಸತ್ಯ ಅರ್ಥ ಮಾಡಿಕೊಂಡರೆ ಸರಳವಾಗಿಯೇ ಸಕ್ಕರೆ ರೋಗ ಗೆಲ್ಲಬಹುದು. ಈ ಪುಸ್ತಕ ಜಗತ್ತಿನ ಎಲ್ಲ ಭಾಷೆಗಳಿಗೂ ತರ್ಜುಮೆಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಾನೂ ಕೂಡ ಸಕ್ಕರೆ ರೋಗದ ಶಿಕಾರಿ.ನನ್ನ ಕುಟುಂಬದಲ್ಲಿ ಇಪ್ಪತ್ತನೇ ವಯಸ್ಸಿಗೇ ಖಾಯಿಲೆ ಬರಿಸಿಕೊಂಡವರಿದ್ದಾರೆ.ದುಶ್ಚಟಗಳು ಮತ್ತು ನಿರ್ಲಕ್ಷ್ಯ ಕೂಡ ಸಕ್ಕರೆ ರೋಗಕ್ಕೆ ಬರಮಾಡಿಕೊಳ್ಳಲು ಕಾರಣವಾಗುತ್ತದೆ. ಇದೆಲ್ಲ ಮೀರಿ ಆಹಾರದಲ್ಲಿ ಕಾರ್ಬೋಹೈಡ್ರೇಡ್ ಕಡಿಮೆ ಮಾಡಿಕೊಂಡರೆ ಸಕ್ಕರೆ ರೋಗ ಹಿಮ್ಮೆಟ್ಟಿಸಬಹುದು. ಅದನ್ನೇ ಈ ಪುಸ್ತಕದಲ್ಲಿ ಸರಳವಾಗಿ ಹೇಳಲಾಗಿದೆ ಎಂದರು.

ನಾನೇ ಡಾ.ಪ್ರೀತಂ ಹೇಳಿದಂತೆ ನಡೆದುಕೊಂಡು ಲಾಭ ಪಡೆದುಕೊಂಡಿದ್ದೇನೆ. ಸಾಹಿತ್ಯ ಮನಸ್ಸಿಗೆ ಚಿಕಿತ್ಸೆ ನೀಡಿದರೆ ವೈದ್ಯ ಪದ್ಧತಿ ದೈಹಿಕ ಚಿಕಿತ್ಸೆ ನೀಡುತ್ತದೆ. ಎರಡೂ ಕೂಡ ಮುಖ್ಯ ಎಂದು ಹೇಳಿದರು.

ಬುದ್ಧ ಹೇಳಿದಂತೆ ಎಲ್ಲರ ಹಿತಕ್ಕೋಸ್ಕರ ಕೆಲಸಗಳಾಗಬೇಕು. ಬಹುತೇಕ ವೈದ್ಯ ಸಂಸ್ಥೆಗಳು ಹಣದ ಹಿಂದೆ ಬಿದ್ದಿವೆ.ಅನೇಕ ಜನರ ಪ್ರಾಣ ಅಪಾಯದಲ್ಲಿದೆ. ಅದನ್ನು ತಡೆಯುವ ಒಳ್ಳೆಯ ಕೆಲಸವನ್ನು ಡಾ.ಪ್ರೀತಂ ಮಾಡುತ್ತಿದ್ದಾರೆ. ಅವರ ತಂದೆಯವರ ಸೇವೆ ಕೂಡ ಶ್ಲಾಘನೀಯವಾಗಿತ್ತು ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವೈದ್ಯ ಸಾಹಿತಿ ಡಾ. ವಿನಯಾ ಶ್ರೀನಿವಾಸ್ ಮಾತನಾಡಿ, ಸಕ್ಕರೆ ರೋಗ ಎಂದ ಕೂಡಲೇ ಅದನ್ನು ಗುಣಪಡಿಸಲು ಸಾಧ್ಯವೇ ಇಲ್ಲ ಎಂಬ ತಪ್ಪು ಕಲ್ಪನೆಗಳಿವೆ. ಡಾ ಪ್ರೀತಂ ಸಕ್ಕರೆ ರೋಗದ ಪರಿಕಲ್ಪನೆ ಬದಲಾಗಿರೋದನ್ನು ಸಂಶೋಧಿಸುತ್ತಲೇ ಈ ಪುಸ್ತಕವನ್ನು ಬರೆದಿದ್ದಾರೆ. ರೋಗಿಗಳಿಗೆ ಕೊಡುವ ಸಲಹೆಗಳನ್ನೇ ಬರೆಯಿರಿ ಎಂದಿದ್ದೆ. ಅದನ್ನೇ ಬರೆದು ಈಗ ಪುಸ್ತಕವಾಗಿಸಿದ್ದಾರೆ.ವಿಜ್ಞಾನ ನಿಂತ ನೀರಲ್ಲ. ಸಕ್ಕರೆ ಕಾಯಿಲೆ ಇಲ್ಲವಾಗಿಸಬಹುದೆಂಬ ಸತ್ಯವನ್ನು ಡಾ.ಪ್ರೀತಂ ಸರಳವಾಗಿ ಪುಸ್ತಕದಲ್ಲಿ ವಿವರಿಸಿದ್ದಾರೆ. ಈ ರೋಗವನ್ನು ನಿರ್ಲಕ್ಷ್ಯಿಸಲೂಬಾರದು. ದೇಹದ ಅಂಗಾಂಗಗಳ ಮೇಲೆ ಈ ರೋಗ ಕೆಟ್ಟ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು ಎಂದು ವಿವರಿಸಿದರು.

ಈ ಪುಸ್ತಕ ಬರೆಯಲು ಪ್ರೇರೇಪಣೆಯಾಗಿದ್ದು ಡಾ.ವಿನಯಾ ಶ್ರೀನಿವಾಸ್ ರವರಿಂದಲೇ. ಈಗ ಈ ಪುಸ್ತಕ ಬಂದಿದೆ. ಇದು ಅನುಭವದ ಹಾಗೂ ಸಂಶೋಧಿಸಿದ ಅಂಶಗಳ ಆಧಾರದ ಮೇಲೆ ಬರೆಯಲಾದ ಪುಸ್ತಕ ಎಂದು ಪುಸ್ತಕದ ಲೇಖಕರಾದ ಡಾ.ಪ್ರೀತಂ ಅನುಭವದ ಮಾತು ಬಿಚ್ಚಿಟ್ಟರು.

ಇದೇ ಸಂದರ್ಭದಲ್ಲಿ ಡಾ.ಎಚ್.ಎಸ್.ಶಿವಪ್ರಕಾಶ್, ಪ್ರೊ.ಸಿರಾಜ್ ಅಹಮದ್, ಡಾ.ವಿನಯಾ ಶ್ರೀನಿವಾಸ್, ಆರ್.ಎಸ್.ಹಾಲಸ್ವಾಮಿಯವರನ್ನು ಅಭಿನಂದಿಸಲಾಯಿತು.