ಶಿವಮೊಗ್ಗ ಜಿಲ್ಲೆಗೂ ಕಾಲಿಟ್ಟ ಏಲಕ್ಕಿ ಗಿಡ ಹಗರಣ!

ಈಗ ಶಿವಮೊಗ್ಗ ಜಿಲ್ಲೆಗೂ ಏಲಕ್ಕಿ ಗಿಡ ಹಗರಣ ಕಾಲಿಟ್ಟಿದೆ. ರೈತರನ್ನು ನಂಬಿಸಿ ವ್ಯವಸ್ಥಿತವಾಗಿ ಅವರನ್ನು ಲೂಟಿ ಮಾಡಲಾಗುತ್ತಿದ್ದು, ಈ ಬಗ್ಗೆ ರೈತರನೇಕರು ಸಾಗರ ತಾಲ್ಲೂಕಿನ ಕಾರ್ಗಲ್ ಪೊಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿದ್ದಾರೆ.
ಬಹಳಷ್ಟು ಜಿಲ್ಲೆಗಳಲ್ಲಿ ಈ ರೀತಿಯ ಏಲಕ್ಕಿ ಗಿಡ ಹಗರಣ ನಡೆದಿರುವುದು ಗಮನಕ್ಕೆ ಬರುತ್ತಿದೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು, ಸುಳ್ಳು ಬಿಲ್ಲನ್ನು ಸಿದ್ಧಪಡಿಸಿಕೊಂಡು, ಅದರಲ್ಲಿ ಯಾರದ್ದೋ ಜಿಎಸ್‌ಟಿ ಸಂಖ್ಯೆ ದಾಖಲಿಸಿ ಏಲಕ್ಕಿ ಗಿಡ ಕೊಳ್ಳುವ ರೈತರಿಗೆ ಹಣ ಪಡೆದ ರಶೀದಿಗಳನ್ನು ನೀಡಲಾಗುತ್ತಿರುವುದು ಹಾಡಹಗಲಿನ ದರೋಡೆಯಂತಿದೆ.
ಶ್ರೀನಿವಾಸ ನಾಯ್ಕ ಎಂಬ ವ್ಯಕ್ತಿ ಏಲಕ್ಕಿ ಗಿಡಗಳನ್ನು ರೈತರ ತೋಟಗಳಲ್ಲಿ ನೆಟ್ಟು, ಗೊಬ್ಬರ ಪೂರೈಸಿ, ಜಾಲರಿ ಅಳವಡಿಸಿ, ಅವುಗಳ ಆರೈಕೆ ಯನ್ನು ತಾವೇ ನೋಡಿಕೊಳ್ಳುವುದಾಗಿ ತಿಳಿಸಿ ೧೦ ರೂ. ಬೆಲೆ ಬಾಳುವ  ಒಂದು ಗಿಡಕ್ಕೆ ೬೦ ರೂ. ಗಳ ಬೆಲೆ ಯಂತೆ ರೈತರಿಗೆ ನೀಡಿದ್ದಾನೆ. ಇವನ ಮಾತು ನಂಬಿ ಮುಗ್ಧ ರೈತರು ಕನಿಷ್ಟ ೫೦೦ ಗಿಡಗಳನ್ನು ಖರೀದಿಸಿದ್ದಾರೆ.
ಸುತ್ತಮುತ್ತಲಿನ ತೋಟಗಳಲ್ಲೂ ಇದೇ ರೀತಿಯಲ್ಲಿ ನಕಲಿ ಬಿಲ್‌ಗಳನ್ನು ತೋರಿಸಿ ಏಲಕ್ಕಿ ಗಿಡಗಳನ್ನು ನಂಬಿಸಿ ಮೋಸದ ಮೂಲಕ ವಿತರಿಸಲಾಗುತ್ತಿದೆ. ಕಾರ್ಗಲ್ ಠಾಣೆಯಲ್ಲಿ ಪ್ರಕರಣ ಕುರಿತು ದೂರು ನೀಡಿದ ಕೂಡಲೇ ಶ್ರೀನಿವಾಸ ನಾಯ್ಕ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬುದು ರೈತರ ಅಳಲು.
ಶ್ರೀನಿವಾಸ ನಾಯ್ಕ ತಾನು ವಿತರಿಸುವ ಏಲಕ್ಕಿ ಗಿಡಗಳಿಗೆ ಹಣ ಪಡೆದು ನೀಡು ತ್ತಿರುವ ಬಿಲ್‌ನಲ್ಲಿ ಶಿವಮೊಗ್ಗ ನಗರದ ವೆಂಕಟೇಶನಗರ ಬಡಾವಣೆಯ ಅನ್ನಪೂರ್ಣೇಶ್ವರಿ ನರ್ಸರಿ ಎಂಬ ಹೆಸರಿದೆ. ಆದರೆ, ಇಡೀ ವೆಂಕಟೇಶನಗರದಲ್ಲಿ ಈ ಹೆಸರಿನ ನರ್ಸರಿಯೇ ಇಲ್ಲ. ಇದು ಜಿಎಸ್‌ಟಿ ಬಿಲ್ ಆಗಿದ್ದು, ರೈತರು ಬಿಲ್‌ನಲ್ಲಿ ಇರುವ ವಿಳಾಸ ಹಿಡಿದು ನರ್ಸರಿ ಹುಡುಕಿ ದ್ದಾರೆ. ಆದರೆ, ಅಲ್ಲೆಲ್ಲೂ ಈ ನರ್ಸರಿ ಕಂಡುಬಂದಿಲ್ಲ. ಜಿಎಸ್‌ಟಿ ನಂಬರ್ ಕೂಡ ಯಾರದ್ದೋ ಹಾಕಲಾಗಿದೆ. ಇದು ಮೋಸ ಮಾಡುವ ಉದ್ದೇಶದಿಂದಲೇ ಕೇವಲ 10 ರೂ. ಬೆಲೆಬಾಳುವ ಏಲಕ್ಕಿ ಗಿಡವೊಂದನ್ನು 60ರೂ.ಗಳಿಗೆ ಮಾರಲಾಗಿದೆ. ಆ ಗಿಡವನ್ನು ನೆಡುವುದರಿಂದ ಹಿಡಿದು, ಬೆಳೆಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕೊಡುವವರೆಗೂ ತಮ್ಮದೇ ಜವಾಬ್ದಾರಿ ಆಗಿರುತ್ತೆ ಎಂದು ರೈತರನ್ನು ನಂಬಿಸಿ 60 ರೂ.ಗಳಿಗೆ ಒಂದು ಏಲಕ್ಕಿ ಗಿಡವನ್ನು ನೂರಾರು, ಸಾವಿರಾರು ಸಂಖ್ಯೆಯಲ್ಲಿ ಮಾರಾಟ ಮಾಡಲಾಗಿದೆ.
ಆರೋಪಿ ಶ್ರೀನಿವಾಸ ನಾಯ್ಕನ ಮೊಬೈಲ್‌ಗೆ ಎಷ್ಟೇ ದೂರವಾಣಿ ಕರೆ ಮಾಡಿದರೂ ಅದು ಸ್ವೀಕೃತವಾಗುತ್ತಿಲ್ಲ. ರೈತರು ವಂಚನೆಗೆ ಒಳಗಾಗಿದ್ದಾರೆ ಎಂದು ದೃಢಪಟ್ಟ ನಂತರ ಕಾರ್ಗಲ್ ಠಾಣೆಗೂ ಇದೀಗ ದೂರು ನೀಡಿ ಬಂದಿದ್ದಾರೆ.
ಸಾಗರ ತಾಲ್ಲೂಕಿನ ಇಡುವಾಣಿ, ಕೆಪ್ಪಗೆ, ಕಾರ್ಗಲ್, ಮರಳಕೋರೆ, ನಿಟ್ಟೂರು ಸೇರಿದಂತೆ ಹಲವು ಕಡೆ ಈ ಏಕ್ಕಿ ಗಿಡ ಹಗರಣ ನಡೆದಿದೆ. ಟೆಂಪೋದಲ್ಲಿ ತಂದು ಒಬ್ಬೊಬ್ಬ ರೈತರನ್ನೇ ಹುಡುಕಿ, ಅವರಿಗೆ ಲಾಸೆ ತೋರಿಸಿ, ಗಿಡ ಕೊಟ್ಟು ಹಣ ಪಡೆದ ಕೂಡಲೇ ಶ್ರೀನಿವಾಸ್ ಗ್ಯಾಂಗ್ ನಾಪತ್ತೆಯಾಗುತ್ತದೆ. ಕೂಡಲೇ ಎಸ್‌ಪಿ ಮಿಥುನ್‌ಕುಮಾರ್‌ರವರು ಈ ಗ್ಯಾಂಗ್‌ನ ವಂಚನೆಯ ವಿರುದ್ಧ ಕ್ರಮ ಕೈಗೊಳ್ಳಬೇಕು.
ಮೋಸ ಹೋದ ರೈತರ ಪರವಾಗಿ ಶಿವಮೊಗ್ಗದ ವಕೀಲ ಬಿ.ವಿನೋದ್ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸಹಾಯ ಮಾಡಿದ್ದಲ್ಲದೇ ಹೋರಾಟ ಕೂಡ ನಡೆಸುತ್ತಿದ್ದಾರೆ.

ಈ ಏಲಕ್ಕಿ ಗಿಡ ಹಗರಣದಲ್ಲಿ ಕಾಣದ ಅನೇಕ ರಾಜಕೀಯ ಕೈಗಳು ಕೂಡ ಭಾಗಿಯಾಗಿರುವ ಸಾಧ್ಯತೆ ಇದೆ. ಹಗರಣಕ್ಕೆ ಸಂಬಂಧಿಸಿದ ದೂರು ಕಾರ್ಗಲ್ ಸಬ್ ಇನ್ಸ್‌ಪೆಕ್ಟರ್ ಹೊಳೆಬಸಪ್ಪ ಹೋಳಿ ಕೈಯ ಲ್ಲಿದೆ. ರೈತರೊಂದಿಗೆ ಶ್ರೀನಿವಾಸ್ ನಾಯ್ಕ ಗ್ಯಾಂಗ್ ಆಡಿರುವ ಮಾತುಗಳ ಆಡಿಯೋ ಸಂಗ್ರಹವನ್ನು ತನಿಖಾಧಿಕಾರಿ ಪರಿಶೀಲಿಸಿ, ಪ್ರಕರಣವನ್ನು ಭೇದಿಸಿ ರೈತರಿಗೆ ನ್ಯಾಯ ಕೊಡಿಸುತ್ತಾ ಪೊಲೀಸ್ ಇಲಾಖೆ?