ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಕರ್ತರ ಪ್ರ‍ಚಾರ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಬಂಗಾರಪ್ಪ ಅವರ ಸೇವಾ ಗುಣ ಗೀತಾಕ್ಕಗೆ ಇದೆ

ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಕರ್ತರ ಪ್ರ‍ಚಾರ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ

ಬಂಗಾರಪ್ಪ ಅವರ ಸೇವಾ ಗುಣ ಗೀತಾಕ್ಕಗೆ ಇದೆ

ಶಿವಮೊಗ್ಗ: ‘ಗೀತಕ್ಕ ಜಿಲ್ಲೆಯ ಮನೆ ಮಗಳು. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಸೇವಾ ಗುಣ ಇವರಿಗೂ ಇದೆ. ಆದ್ದರಿಂದ, ಜನರು ಗೀತಕ್ಕೆ ಮತ ನೀಡುವ ಮೂಲಕ ಆಶೀರ್ವದಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಹೇಳಿದರು.

ಸಾಗರ ತಾಲ್ಲೂಕಿನ ಸಿರಿವಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ರಿಪುರಾಂತಕೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಕರ್ತರ ಪ್ರ‍ಚಾರ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ 2009 ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಸೋಲು, ಕಪ್ಪು ಚುಕ್ಕೆಯಾಗಿ ಉಳಿದಿದೆ. ಅದನ್ನು ಹೋಗಲಾಡಿಸಲು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಮತ ನೀಡಬೇಕು. ಜಿಲ್ಲೆಯ ಸ್ಥಳೀಯ ಸಮಸ್ಯೆಗಳ ಬಗ್ಗೆ ಗೀತಕ್ಕ, ದೆಹಲಿಯಲ್ಲಿ ರೈತರ ಪರ ಧ್ವನಿ ಎತ್ತಲು ಶಕ್ತಿ ತುಂಬಬೇಕಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, ‘ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಮತ್ತು ಯುವನಿಧಿ ಸೇರಿ ಪಂಚ ಗ್ಯಾರಂಟಿ ಯೋಜನೆಗಳು ಅಶಕ್ತ ಕುಟುಂಬಗಳಿಗೆ ವರದಾನವಾಗಿವೆ ಎಂದರು.

ರಾಜ್ಯ ಸರ್ಕಾರವು ಜಾರಿ ಮಾಡಿದ ಅನ್ನಭಾಗ್ಯ ಯೋಜನೆಯಿಂದ ಕಡು ಬಡವರು, ಕೃಷಿ ಕೂಲಿಕಾರ್ಮಿಕರಿಗೆ ಸಾಕಷ್ಟು ಅನುಕೂಲವಾಗಿದೆ. ಅಲ್ಲದೆ ಗೃಹಲಕ್ಷ್ಮಿ ಯೋಜನೆಯಿಂದಾಗಿ ಮಹಿಳೆಯರಿಗೆ ಪ್ರತಿ ತಿಂಗಳು ₹2 ಸಾವಿರ ಸಿಗುತ್ತಿದೆ. ಜೊತೆಗೆ ಗೃಹಜ್ಯೋತಿ ಯೋಜನೆ ಮತ್ತು ಯುವನಿಧಿ ಯೋಜನೆಯಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ (ತಂದೆ) ಅವರ ಸೇವಾ ಮನೋಭಾವ ನನ್ನಲ್ಲಿಯೂ ಅಡಕವಾಗಿದೆ. ಇದಕ್ಕೆ ಸಾಕ್ಷಿಯಾಗಿ ಶಕ್ತಿಧಾನ ಎನ್ನುವ ಸಂಸ್ಥೆ ಸ್ಥಾಪಿಸಿ ೨೦೦ ಜನ ಹೆಣ್ಣು ಮಕ್ಕಳಿಗೆ ಬದುಕು ಕಟ್ಟಿಕೊಡಲಾಗಿದೆ. ಅದೇ ರೀತಿಯ ಅನಾತಾಶ್ರಮವನ್ನು ಜಿಲ್ಲೆಯಲ್ಲಿಯೂ ತೆರೆಯುವ ಚಿಂತನೆ ಇದೆ ಎಂದರು.

ರಾಜ್ಯ ಸರ್ಕಾರದಿಂದ ಮಹಿಳೆಯ ಕಲ್ಯಾಣಕ್ಕಾಗಿ ತಲಾ ₹1 ಲಕ್ಷ ನೀಡುವ ಬಗ್ಗೆ ಚಿಂತನೆ ನಡೆದಿದೆ. ಇದು ಬರುವ 2025 ರಿಂದ ಜಾರಿ ಆಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶೋಷಿತರ ಕಣ್ಣೀರು ಒರೆಸಲು ಬದ್ದರಾಗಿ ನಿಂತಿದ್ದಾರೆ ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಬಡವರ ಮುಖದಲ್ಲಿ ಮಂದಹಾಸ ಮೂಡಿಸುವುದೇ ಕಾಂಗ್ರೆಸ್ ಸರ್ಕಾರದ ಆದ್ಯ ಕರ್ತವ್ಯ. ಇದು ಗ್ಯಾರಂಟಿ ಯೋಜನೆಗಳಿಂದ ಸಾಧ್ಯವಾಗಿದೆ ಎಂದ ಅವರು, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಆಸ್ತಿ ಮಾಡಿರಲಿಲ್ಲ. ಜನರೇ ಅವರ ಆಸ್ತಿ ಆಗಿದ್ದರು. ಅದೇ ಗುಣ ಗೀತಾ ಅವರಿಗೆ ಇದೆ. ಆದ್ದರಿಂದ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ನಟ ಶಿವರಾಜಕುಮಾರ್ ಮಾತನಾಡಿ, ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಅಭಿಮಾನಿ ನಾನು. ಜಿಲ್ಲೆಗೆ ನಟನಾಗಿ ಬಂದಿಲ್ಲ. ಗೀತಾ ಅವರ ಗಂಡನಾಗಿ ಬಂದಿದ್ದೇನೆ. ಗೀತಾ ಮದುವೆ ಆಗುವ ಮುನ್ನ ಈ ಮಣ್ಣಿನಲ್ಲಿ ಜನಿಸಿದವರು. ಇಲ್ಲಿ ಓಡಾಡಿದವರು. ಬಂಗಾರಪ್ಪ ಅವರ ಸೇವಾ ಗುಣ ಅವರಲ್ಲಿಯೂ ಇದೆ. ಗೀತಾ ಅವರು ಗೆದ್ದು ದೆಹಲಿಗೆ ಹೋಗುತ್ತಿದ್ದಾರೆ ಎಂದರೆ, ಅದು ನಿಮಗೆ ಹೆಮ್ಮೆ. ಆದ್ದರಿಂದ ಅವರಿಗೆ ಮತ ನೀಡಿ ಹರಸಬೇಕು ಎಂದರು.

ಪತ್ನಿ ಗೀತಾ ಅವರ ಮಾತುಗಳು ಮೃದು ಆಗಿರಬಹುದು. ಆದರೆ, ಸಿಂಹದ ರೀತಿಯಲ್ಲಿ ಅವರು ಕಾರ್ಯ ವೈಖರಿ ಇರಲಿದೆ. ನಂಬಿದ ಜನರಿಗೆ ಖಂಡಿತ ನ್ಯಾಯ ಒದಗಿಸಲಿದ್ದಾರೆ. ಇದೇ ಉದ್ದೇಶಕ್ಕೆ ಚುನಾವಣೆಯಲ್ಲಿ ಮತ ನೀಡಿ ಬೆಂಬಲಿಸಬೇಕು ಎಂದು ಕೋರಿದರು.

ಅದೇ ರೀತಿ ತಾಲ್ಲೂಕಿನ ಪಡವಗೋಡು, ಬೀಮನೇರಿ,- ಕೆಳದಿ, ಮರತ್ತೂರು, ಕಾನಲೆ, ಸೈದೂರು, ಹೀರೆ ನಲ್ಲೂರು ಸೇರಿ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ಪ್ರಚಾರ ಸಭೆ ನಡೆಸಲಾಯಿತು.

ಪ್ರತಿ ಗ್ರಾಮದಲ್ಲಿಯು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಅವರಿಗೆ ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು. ಸೆಲ್ಪಿ ಕ್ಲಿಕ್ಕಿಸಿಕೊಂಡು ಅಭಿಮಾನ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆ ವಕ್ತಾರ ಅನಿಲ್ ಕುಮಾರ್ ತಡಕಲ್, ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ, ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಕಾಂಗ್ರೆಸ್ ಜಿಲ್ಲಾ ಘಟಕ ಮಹಿಳಾ ಅಧ್ಯಕ್ಷೆ ಅನಿತಾ ಕುಮಾರಿ, ಗ್ರಾಮಾಂತರ ವ್ಯಾಪ್ತಿಯ ಸ್ಥಳೀಯ ಮುಖಂಡರಾದ ಅಣ್ಣಪ್ಪ, ಅಶೋಕ್ ಬರದವಳ್ಳಿ, ಅನಿಲ್ ಗೌಡ್ರು, ಮನೋಜ್ ಗುರ್ಲುಗುಂಡಿ, ರಮೇಶ್ ಬರದವಳ್ಳಿ, ಹುಚ್ಚಪ್ಪ, ಈಶ್ವರ್ ನಾಯಕ್, ಸೂರ್ಯ ನಾರಾಯಣ, ಅಶೋಕ್ ಮರಗಿ, ಚಂದ್ರು, ಶಾಂತಕುಮಾರ್,
ಪುಷ್ಪಾವತಿ, ಧರ್ಮಪ್ಪ ಕೆಲುವೆ, ರಾಮಪ್ಪ ಗಡೆಮನೆ, ಅಣ್ಣಪ್ಪ ಕಾನಲೆ ಇದ್ದರು.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಋಣ ತೀರಿಸಬೇಕಿದೆ. ಇಲ್ಲಿ ಪ್ರೀತಿ- ವಿಶ್ವಾಸ ಮುಖ್ಯ. ಬಿಜೆಪಿಯ ಸಂಸದ ಬಿ.ವೈ.ರಾಘವೇಂದ್ರ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿದ್ದೇವೆ ಎನ್ನುತ್ತಾರೆ. ಅದೇ ಕೆಲಸ ಇಲ್ಲಿ ಮಾಡಬೇಕಿತ್ತು. ಬಂಗಾರಪ್ಪ ಅವರ ಕಾಲದಲ್ಲಿ ಇಂತಹ ಅನೇಕ ಮಠ- ಮಂದಿರಗಳು ಜೀವ ಕಳೆ ಪಡೆದುಕೊಂಡಿವೆ. ಧರ್ಮಗಳನ್ನು ಒಡೆದು ಆಳುವ ರಾಜಕಾರಣ ಬಿಜೆಪಿ ಮಾಡುತ್ತಿದೆ. ಆದ್ದರಿಂದ, ಗೀತಾ ಅವರಿಗೆ ಒಂದು ಅವಕಾಶ ಮಾಡಿ ಕೊಡಬೇಕಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಇದರಿಂದ ಬಿಜೆಪಿಯಲ್ಲಿ ಒಳ ಸಂಘರ್ಷಗಳಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.- ಬೇಳೂರು ಗೋಪಾಲಕೃಷ್ಣ, ಶಾಸಕರು, ಸಾಗರ