ಗೃಹಮಂತ್ರಿ- ಉಪ ಮುಖ್ಯಮಂತ್ರಿ ಹೇಳಿಕೆಗಳ ಗೊಂದಲದಿಂದ ಅನುಮಾನಗಳು ದಟ್ಟ- ಕೆ. ಎಸ್. ಈಶ್ವರಪ್ಪ

ಗೃಹಮಂತ್ರಿ- ಉಪ ಮುಖ್ಯಮಂತ್ರಿ ಹೇಳಿಕೆಗಳ ಗೊಂದಲದಿಂದ ಅನುಮಾನಗಳು ದಟ್ಟ- ಕೆ. ಎಸ್. ಈಶ್ವರಪ್ಪ

ಶಿವಮೊಗ್ಗ : ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧಿತಳಾಗಿರುವನಟಿ ರನ್ಯಾರಾವ್ ಜತೆಗಿನ ಸಂಪರ್ಕದ ವಿಚಾರದಲ್ಲಿ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗಳು ಗೊಂದಲದ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಈ ಇಬ್ಬರು ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ವಾಸ್ತವ ಏನು ಎನ್ನುವುದನ್ನು ರಾಜ್ಯದ ಜನತೆಗೆ ಸ್ಪಷ್ಟ ಪಡಿಸಲಿ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದ್ದಾರೆ.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ನಡೆಗಳು ಒಂದು ರೀತಿ ಗೃಹ ಇಲಾಖೆಯನ್ನೇ ತಪ್ಪಿತಸ್ಥ ಸ್ಥಾನದಲ್ಲಿಡುವಂತೆ ಮಾಡಿದೆ. ಇದು ನನಗೆ ತುಂಬಾ ನೋವು ತಂದಿದೆ. ಡಾ.ಜಿ. ಪರಮೇಶ್ವರ್ ಅವರು ಸಜ್ಜನರು. ಅವರ ಮೇಲೆ ಅಪಾದನೆ ಮಾಡುವುದಿಲ್ಲ, ಆದರೆ ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧಿತಳಾಗಿರುವ ಆ ನಟಿಗೆ ಪರಮೇಶ್ವರ್ ಅವರು ಸುಮಾರು ೪೦ ಲಕ್ಷ ಊಡುಗೊರೆ ಕೊಟ್ಟಿರಬಹುದು ಎಂದಿದ್ದಾರೆ. ಇದಕ್ಕೆ ಪರಮೇಶ್ವರ್ ಅವರು ಪ್ರತಿಕ್ರಿಯಿಸಿ, ಅವರನ್ನೇ ಕೇಳಿ ಎಂದಿದ್ದಾರೆ. ಈ ಇಬ್ಬರು ನಾಯಕರ ಹೇಳಿಕೆಗಳು ಗೊಂದಲ ಜತೆಗೆ ಅನುಮಾನ ಹುಟ್ಟಿಸುತ್ತವೆ ಎಂದರು.

ಪಮೇಶ್ವರ್ ಅವರು ನಟಿ ರನ್ಯಾ ರಾವ್ ಅವರಿಗೆ ಉಡುಗೊರೆ ಕೊಟ್ಟರೋ, ಇನೇನೋ ಕೊಟ್ಟರೋ ಗೊತ್ತಿಲ್ಲ, ಆದರೆ ಇದು ಆ ಇಬ್ಬರು ಕಾಂಗ್ರೆಸ್ ನಾಯಕರ ವೈಯಕ್ತಿಕ ವಿಚಾರ ಅಲ್ಲ, ಕೋಟ್ಯಾಂತರ ರೂ. ಮೌಲ್ಯದ ಚಿನ್ನ ಕಳ್ಳ ಸಾಗಾಣಿಕೆಯಲ್ಲಿ ಆ ನಟಿ ಬಂದಿತಳಾಗಿದ್ದಾಳೆ. ಆ ನಟಿಯ ಜತೆಗಿನ ಸ್ಮಗ್ಲಿಂಗ್ ಪ್ರಕರಣದಲ್ಲಿ ಏನೆಲ್ಲ ಬೆಳವಣಿಗೆ ಆಗುತ್ತಿದೆ ಎಂದು ಇಡೀ ರಾಜ್ಯವೇ ನೋಡುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಈ ಇಬ್ಬರು ನಾಯಕರು ತಮ್ಮ ಸ್ಥಾನದ ಜವಾಬ್ದಾರಿ ಅರಿಯದೆ ಹುಡುಗಾಟಿಕೆ ಹೇಳಿಕೆ ನೀಡುವುದಲ್ಲ, ವಾಸ್ತವ ಏನು ಎಂಬುದನ್ನು ಇಬ್ಬರು ಒಟ್ಟಾಗಿಯೇ ಸುದ್ದಿಗೋಷ್ಠಿ ಕರೆದು ಬಹಿರಂಗ ಪಡಿಸಬೇಕೆಂದು ಎಂದು ಈಶ್ವರಪ್ಪ ಆಗ್ರಹಿಸಿದರು.

ಇದೇ ವೇಳೆ, ರಾಜ್ಯದಲ್ಲಿನ ಸುಮಾರು ೧೮೦ ಜನೌಷಧಿ ಕೇಂದ್ರಗಳನ್ನು ಮುಚ್ಚಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಬಡವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಔಷಧಿಗಳು ಸಿಗಲಿ ಎನ್ನುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಈ ಜನೌಷಧಿ ಕೇಂದ್ರ ಗಳನ್ನು ಆರಂಭಿಸಿದೆ. ಇಂತಹ ಸಂದರ್ಭದಲ್ಲಿ ಇವುಗಳನ್ನು ಮುಚ್ಚುವ ಕ್ರಮ ಸರಿಯಾದದ್ದು ಅಲ್ಲ, ಹಾಗೇನಾದರೂ ಮಾಡಿದರೆ ಜನಾಂದೋಲನ ನಡೆಸಲಾಗುವುದು ಎಂದರು.