ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಗುಣವಾಗಿ ರಾಜ್ಯದ ಪದವಿ ಪಠ್ಯಕ್ರಮಗಳನ್ನು ಪರಿಸ್ಕರಣೆ ಮಾಡುವಂತೆ ಪರಿಷತ್ ನಲ್ಲಿ ಡಾ.ಧನಂಜಯ ಸರ್ಜಿ ಒತ್ತಾಯ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಗುಣವಾಗಿ ರಾಜ್ಯದ ಪದವಿ ಪಠ್ಯಕ್ರಮಗಳನ್ನು ಪರಿಸ್ಕರಣೆ ಮಾಡುವಂತೆ ಪರಿಷತ್ ನಲ್ಲಿ ಡಾ.ಧನಂಜಯ ಸರ್ಜಿ ಒತ್ತಾಯ.
ಬೆಂಗಳೂರು : ರಾಜ್ಯದ ಪದವಿ ಪಠ್ಯಕ್ರಮಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಸಮರ್ಪಕವಾದ ವಿಷಯಗಳು ಒಳಗೊಂಡಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾದರು ಆಯ್ಕೆಯಾಗುವ ಅಭ್ಯರ್ಥಿಗಳು ಅತಿವಿರಳ ಹಾಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಗುಣವಾಗಿ ರಾಜ್ಯದ ಪದವಿ ಪಠ್ಯಕ್ರಮಗಳನ್ನು ಪರಿಸ್ಕರಣೆ ಮಾಡುವಂತೆ ಸದನದಲ್ಲಿ ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಉನ್ನತ ಶಿಕ್ಷಣ ಸಚಿವರಾದ ಎಂ.ಸಿ ಸುಧಾಕರ್ ಅವರಿಗೆ ಮನವಿ ಮಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ತೆಗೆದು ಸರ್ಕಾರಿ ಕೆಲಸಗಳನ್ನು ತೆಗೆದುಕೊಳ್ಳಬೇಕೆಂದು ಲಕ್ಷಾಂತರ ಅಭ್ತರ್ಥಿಗಳು ಕನಸು ಕಂಡಿರುತ್ತಾರೆ, ಆ ಕನಸನ್ನು ನನಸು ಮಾಡಿಕೊಳ್ಳಲು ಸುಮಾರು ಹಣವನ್ನು ಖರ್ಚು ಮಾಡಿ ಬೆಂಗಳೂರು, ವಿಜಯಪುರ, ಧಾರವಾಡದಂತಹ ದೊಡ್ಡ ದೊಡ್ಡ ನಗರಗಳಲ್ಲಿ ಕೋಚಿಂಗ್ ಸೇರಿಕೊಂಡು ಹಗಲು ರಾತ್ರಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬಿ ಎ, ಬಿ ಎಸ್ ಸಿ, ಬಿ ಕಾಂ ಪದವೀಧರ ಪಠ್ಯ ಕ್ರಮ ಮತ್ತು ಯುಪಿಎಸ್ ಸಿ ಮತ್ತು ಎಸ್ ಎಸ್ ಸಿ ಮತ್ತು ಬ್ಯಾಂಕಿಂಗ್, ರೈಲ್ವೇಸ್ , ಕೆಪಿಎಸ್ ಸಿ, ಕೆಇಎ, ಮುಂತಾದ ರಾಜ್ಯ ಹಾಗೂ ಕೇಂದ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಪಠ್ಯಕ್ರಮದ ನಡುವೆ ಸ್ಪಷ್ಟವಾದ ವ್ಯತ್ಯಾಸವಿದೆ. ನಮ್ಮ ಪದವಿಪೂರ್ವ ಪಠ್ಯಕ್ರಮವು ಮುಖ್ಯವಾಗಿ ಶೈಕ್ಷಣಿಕ ಮತ್ತು ಸಿದ್ದಾಂತಧಾರಿತವಾಗಿದ್ದು ಸ್ಪರ್ಧಾತ್ಮಕ ಪರೀಕ್ಷೆಗಳು ಮಾನಸಿಕ ಸಾಮರ್ಥ್ಯ, ತಾರ್ಕಿಕತೆ ಪ್ರಚಲಿತ ಘಟನೆಗಳು ಇಂಗ್ಲೀಷ್ ವ್ಯಾಕರಣ ಹಾಗೂ ಕಂಪ್ಯೂಟರ್ ಜ್ಞಾನವನ್ನು ಕೇಳುತ್ತೇವೆ- ಇವುಗಳಲ್ಲಿ ಯಾವುದೂ ನಮ್ಮ ಪ್ರಸ್ತುತ ಪದವಿ ಪಠ್ಯಕ್ರಮದಲ್ಲಿ ಸಮರ್ಪಕವಾಗಿ ಒಳಗೊಂಡಿಲ್ಲ ಎಂದು ಹೇಳಿದರು.
ಈ ವ್ಯತ್ಯಾಸದಿಂದ ಕರ್ನಾಟಕದ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಬ್ಯಾಂಕಿಂಗ್ ಎಸ್ ಎಸ್ ಸಿ ಹಾಗೂ ಕೇಂದ್ರ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಸೇರುವ ಪ್ರಮಾಣ ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಿಗಿಂತ ತುಂಬಾ ಕಡಿಮೆ ಇರಲು ಪ್ರಮುಖ ಕಾರಣವಾಗಿದೆ.
2024ರಲ್ಲಿ ನಡೆದ ಎಸ್ ಎಸ್ ಸಿ ಪರೀಕ್ಷೆಯಲ್ಲಿ ದೆಹಲಿಯ 589, ಹರಿಯಾಣದ 292, ತಮಿಳುನಾಡಿನ 119, ಬಿಹಾರದ 80 ಅಭ್ಯರ್ಥಿಗಳು ಆಯ್ಕೆಯಾಗಿರುತ್ತಾರೆ. ಆದರೆ ಕರ್ನಾಟಕದಿಂದ ಕೇವಲ 40 ಅಭ್ತರ್ಥಿಗಳು ಮಾತ್ರ ಆಯ್ಕೆಯಾಗಿರುತ್ತಾರೆ.
ಗ್ರೂಪ್-ಬಿ ಹುದ್ದೆಗಳಲ್ಲಿ 180 ಅಭ್ಯರ್ಥಿಗಳು ಗ್ರೂಪ-ಸಿ ಯಲ್ಲಿ 410 ಅಭ್ಯರ್ಥಿಗಳು ಒಟ್ಟು 590 ಅಭ್ಯರ್ಥಿಗಳು ಕರ್ನಾಟಕದಿಂದ ಆಯ್ಕೆಯಾದರೆ ಉತ್ತರಪ್ರದೇಶದಲ್ಲಿ ಗ್ರೂಪ್-ಬಿಯಲ್ಲಿ 890ಮತ್ತು ಗ್ರೂಪ್-ಸಿಯಲ್ಲಿ 1580 ಒಟ್ಟು 2,470 ಅಭ್ಯರ್ಥಿಗಳು, ಬಿಹಾರದಲ್ಲಿ ಗ್ರೂಪ್-ಬಿಯಲ್ಲಿ 720 ಮತ್ತು ಗ್ರೂಪ್-ಸಿಯಲ್ಲಿ 1320 ಒಟ್ಟು 2,040ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಿಂದ ಅತಿ ಕಡಿಮೆ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಅಂಕಿಅಂಶಗಳ ಪ್ರಕಾರ ಕರ್ನಾಟಕ ಸುಮಾರು 6570 ಹುದ್ದೆಗಳನ್ನು ಕಳೆದುಕೊಂಡಿದೆ. ಯುಪಿಎಸ್ ಸಿ ಪರೀಕ್ಷೆಯಲ್ಲು ಸಹ ಕರ್ನಾಟಕದಿಂದ 20ಜನ ಮಾತ್ರ ಆಯ್ಕೆಯಾಗಿದ್ದಾರೆ.
ಒಂದು ಅಂಕಿ ಅಂಶ ಹೇಳಬೇಕಾದರೆ ಕೇಂದ್ರದ ಗ್ರೂಪ್ ಬಿ ಮತ್ತು ಸಿ ನೇಮಕಾತಿಗಳಲ್ಲಿ
2022ರಲ್ಲಿ 20,000 ಹುದ್ದೆ
2023ರಲ್ಲಿ 7,500 ಹುದ್ದೆ
2024ರಲ್ಲಿ 17,727 ಹುದ್ದೆ,
2025ರಲ್ಲಿ14,582 ಹುದ್ದೆ ಸೃಷ್ಟಿಯಾಗಿವೆ.
ಇದರ ಪ್ರಕಾರ ಕರ್ನಾಟಕದಲ್ಲಿ ವರ್ಷಕ್ಕೆ ಸೃಷ್ಟಿಯಾಗುವ ಹುದ್ದೆಗಳ ಸಂಖ್ಯೆ 2000 ಆಗಿದ್ದು, ಕೇಂದ್ರದಲ್ಲಿ ಅತೀ ಹೆಚ್ಚು ಹುದ್ದೆಗಳು ಸೃಷ್ಟಿಯಾಗುತ್ತಿರುವುದರಿಂದ ರಾಜ್ಯದ ಅಭ್ಯರ್ಥಿ ಗಳಿಗೆ ಸ್ಪರ್ಧೆ ಮಾಡಲಾಗದೆ ಇಲ್ಲಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ನಮ್ಮ ಪದವಿ ಪಠ್ಯ ಕ್ರಮ ಮತ್ತು ಪರೀಕ್ಷಾ ಕ್ರಮ ವ್ಯತ್ಯಾಸವಿರುವುದು ಸ್ಪಷ್ಟವಾಗಿ ಕಾಣುತ್ತದೆ. ಲಕ್ಷಾಂತರ ಅಭ್ಯರ್ಥಿಗಳು ಸರ್ಕಾರಿ ಕೆಲಸಕ್ಕೆ ಸೇರಬೇಕು ಎಂಬ ಮಹಾದಾಸೆಯಿಂದ ಹಗಲಿರುಳೆನ್ನೆದೆ ವ್ಯಾಸಂಗ ಮಾಡುತ್ತಿರುತ್ತಾರೆ, ಆದರೆ ಕೆಪಿಎಸ್ ಸಿ ಹಲವು ಬಾರಿ 2 ರಿಂದ 4 ವರ್ಷಗಳವರೆಗೆ ವಿಳಂಬವಾಗುತ್ತವೆ, ಇದರಿಂದ ಅನೇಕ ಅರ್ಹ ಅಭ್ಯರ್ಥಿಗಳು ವಯೋಮಿತಿಯನ್ನು ದಾಟಿ ನ್ಯಾಯ ಸಮ್ಮತ ಅವಕಾಶವನ್ನೆ ಕಳೆದುಕೊಳ್ಳುತ್ತಾರೆ. ಇದಕ್ಕೆ ವಿರುದ್ದವಾಗಿ ಸ್ಟಾಪ್ ಸೆಲಕ್ಷನ್ ಕಮಿಷನ್ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು 8 ರಿಂದ 12 ತಿಂಗಳೊಳಗೆ ಪೂರ್ಣಗೊಳಿಸಿ ಸಮಯಕ್ಕೆ ತಕ್ಕಂತೆ ಉದ್ಯೋಗವಕಾಶಗಳನ್ನು ಒದಗಿಸುತ್ತಿದೆ. ಆದ್ದರಿಂದ ವಿಳಂಬ ಅವಕಾಶ ನೀಡದೆ ಅಭ್ಯರ್ಥಿಗಳಿಗೆ ಉಪಯೋಗವಾಗುವಂತೆ ಕ್ರಮ ವಹಿಸಬೇಕು ಎಂದು ಉನ್ನತ ಶಿಕ್ಷಣ ಸಚಿವರ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಸದನದ ಇತರೆ ಸದಸ್ಯರು ಕೂಡ ಧ್ವನಿಗೂಡಿಸಿ ಇದಕ್ಕೆ ಶಿಕ್ಷಣ ತಜ್ಞರ ಸಮಿತಿ ರಚನೆ ಮಾಡಬೇಕು ಎಂದು ಹೇಳಿದರು
ಪಠ್ಯ ಕ್ರಮ ಬದಲಾಯಿಸಲು ಸಲಹೆ ನೀಡಿದ ಡಾ.ಸರ್ಜಿ
ಈ ನಿಟ್ಟಿನಲ್ಲಿ ಪಠ್ಯಕ್ರಮವನ್ನು ತಿದ್ದುಪಡಿ ಮಾಡಿ ಪದವಿ ಹಂತದಲ್ಲೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಿದ್ದತೆ ನಡೆಸಲು ಸಹಾಯವಾಗುವಂತೆ ರಾಜ್ಯ ಪದವಿ ಪಠ್ಯಕ್ರಮಗಳಲ್ಲಿ ಮಾನಸಿಕ ಸಾಮರ್ಥ್ಯ ತಾರ್ಕಿಕ ಸಾಮಾರ್ಥ್ಯ ಇಂಗ್ಲೇಷ್ ವ್ಯಾಕರಣ ಪ್ರಚಲಿತ ಘಟನೆಗಳು ಸಾಮಾನ್ಯ ಜ್ಞಾನ ಮತ್ತು ಕಂಪ್ಯೂಟರ ಜ್ಞಾನ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷಾ ಸಿದ್ದತಾ ಘಟಕಗಳನ್ನು ಸೇರಿಸುವುದು ಎಲ್ಲಾ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶನ ಕೇಂದ್ರಗಳನ್ನು ಸ್ಥಾಪಿಸುವುದು. ನೇಮಕಾತಿ ವೇಳಾಪಟ್ಟಿಯನ್ನು ಸುಗಮಗೊಳಿಸಲು, ನೇಮಕಾತಿ ವಿಳಂಬದಿಂದ ಹಾನಿಗೊಳಗಾದ ಅಭ್ಯರ್ಥಿಗಳಿಗೆ ವಯೋ ಮಿತಿಯಲ್ಲಿನ ಸಡಿಲಿಕೆ ನೀಡಲು ಮತ್ತು ಸಂಪೂರ್ಣ ಪಾರದರ್ಶಕತೆಯನ್ನು ಖಾತ್ರಿ ಪಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು, ಇದು ಕೇವಲ ಶಿಕ್ಷಣದ ವಿಷಯವಲ್ಲ ಉದ್ಯೋಗ ಅವಕಾಶ ಮತ್ತು ಕರ್ನಾಟಕದ ಯುವಕರ ಭವಿಷ್ಯದ ಪ್ರಶ್ನೆಯಾಗಿದೆ, ಆದ್ದರಿಂದ ಸರ್ಕಾರ ತಕ್ಷಣ ನಿರ್ಧರಾತ್ಮಕ ಕ್ರಮ ಕೈಗೊಳ್ಳಬೇಕೆಂದು ಸದನದಲ್ಲಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಯಿಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್
ರಾಜ್ಯದ ಸಾರ್ವಜನಿಕ ವಿಶ್ವವಿದ್ಯಾಲಯಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ, 2000ರ ಪ್ರಕರಣ 33ರಲ್ಲಿ ವಿಶ್ವವಿದ್ಯಾಲಯಗಳಿಗೆ ಪ್ರದತ್ತವಾದ ಅಧಿಕಾರದನ್ವಯ ಆಯಾ ವಿಶ್ವವಿದ್ಯಾಲಯಗಳು ನಡೆಸುವ ಸ್ನಾತಕ/ಸ್ನಾತಕೋತ್ತರ ಕೋರ್ಸ್ಗಳಿಗೆ Board of Studies (ಅಧ್ಯಯನ ಮಂಡಲಿ) ಪಠ್ಯಕ್ರಮವನ್ನು ಸಿದ್ಧಪಡಿಸಲು ಅವಕಾಶ ಕಲ್ಪಿಸಲಾಗಿದೆ. ಅಧ್ಯಯನ ಮಂಡಳಿಯಲ್ಲಿ ಉದ್ಯಮ ಮತ್ತು ಪರಿಣಿತ ವಲಯದ ಸಂಪನ್ಮೂಲ ವ್ಯಕ್ತಿಗಳನ್ನು ಒಳಗೊಂಡಂತೆ ವಿಷಯ ತಜ್ಞರು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟಕ್ಕನುಗುಣವಾಗಿ ಪಠ್ಯಕ್ರಮಗಳನ್ನು ರೂಪಿಸಿಕೊಳ್ಳುತ್ತಿವೆ.
ಯುಜಿಸಿಯು ರಾಜ್ಯದ ವಿಶ್ವವಿದ್ಯಾಲಯಗಳಿಗೆ ಪಠ್ಯಕ್ರಮ ರಚನೆಗೆ ಮಾರ್ಗಸೂಚಿಗಳನ್ನು ಒದಗಿಸಿದ್ದು, ಇದರಲ್ಲಿ, lectures, tutorials, laboratory work, field work, project work, and other components ಗಳನ್ನೂ ವಿವರಿಸಿದ್ದು, ಈ ಪಠ್ಯಕ್ರಮಗಳ ರಚನೆಯು ಸಮಗ್ರ ಶಿಕ್ಷಣ, ಪರಿಕಲ್ಪನಾತ್ಮಕ ತಿಳುವಳಿಕ, ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆ, ನೀತಿಶಾಸ್ತ್ರ ಮತ್ತು ಮಾನವ ಮತ್ತು ಸಾಂವಿಧಾನಿಕ ಮೌಲ್ಯಗಳು, ಜೀವನ ಕೌಶಲ್ಯಗಳು, ವೈವಿಧ್ಯತೆ ಮತ್ತು ಭೌಗೋಳಿಕ ರಚನೆ ಆಧಾರದಲ್ಲಿ ಕಲಿಕೆಯ ಉದ್ದೇಶಗಳನ್ನು ಒಳಗೊಂಡಿರುತ್ತದೆ.
ರಾಜ್ಯ ಶಿಕ್ಷಣ ನೀತಿ ಆಯೋಗವು ಸರ್ಕಾರಕ್ಕೆ ನೀಡಿದ ಮಧ್ಯಂತರ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಸರ್ಕಾರದ ಆದೇಶ ಸಂಖ್ಯೆ: ಇಡಿ 166 ಯುಎನ್ಇ 2023, ದಿನಾಂಕ: 08.05.2024ರಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ ಪಠ್ಯ ಕ್ರಮದಲ್ಲಿ ಈಗಾಗಲೇ ಕೆಲವು ಬದಲಾವಣೆಗಳನ್ನು ತರಲಾಗಿದ್ದು, ಪಠ್ಯಕ್ರಮ ರಚನೆಯಲ್ಲಿನ ಬದಲಾವಣೆಯ ಮೂಲಕ ಆಳವಾದ ಜ್ಞಾನ, ಔದ್ಯಮಿಕ ಆಧಾರಿತ ಕೋರ್ಸ್ಗಳನ್ನು ಮತ್ತು ಪ್ರಾದೇಶಿಕ ನಿರ್ದಿಷ್ಟ ವಿಷಯಗಳನ್ನು ವಿಶ್ವವಿದ್ಯಾಲಯಗಳ ಅಧ್ಯಯನ ಮಂಡಳಿಗೆ (Board of Studies) ಸ್ಥಾಯತ್ತತೆಯನ್ನು ನೀಡುವುದನ್ನು ಕೇಂದ್ರೀಕರಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗುವಂತಹ ರಾಜ್ಯ ಶಿಕ್ಷಣ ನೀತಿಯಲ್ಲಿ Compulsory Skilled Course ಗಳನ್ನೂ ಮತ್ತು Elective Paper ಗಳನ್ನು ಪರಿಚಯಿಸಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ Main Subjects ಒಟ್ಟಿಗೆ Environmental Science, Constitutions Values, Skilled base Courses ( ಕಲಿಕೆ ಮತ್ತು ಕೌಶಲ್ಯ ) Apprenticeship-embedded degree courses ಗಳನ್ನು ಸಹ ಪಠ್ಯಕ್ರಮದ ಭಾಗವಾಗಿ ಪರಿಗಣಿಸಲಾಗಿದೆ. Elective Subjects ಗಳಿಂದ ವಿದ್ಯಾರ್ಥಿಗಳು ಒಂದು ವಿಷಯದಿಂದ ಮತ್ತೊಂದು ವಿಷಯ ಕಲಿಕೆಗೆ ಅವಕಾಶವನ್ನು ಕಲ್ಪಿಸಿರುವುದರಿಂದ, ಇದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಸಹಕಾರಿಯಾಗಿರುತ್ತದೆ ಎಂದು ಹೇಳಿದರು.