ಬಜೆಟ್ ನೀಡಲಿರುವ ಮುಖ್ಯಮಂತ್ರಿಗಳಲ್ಲಿ ಎನ್.ಕೆ.ಶ್ಯಾಮಸುಂದರ್ ಮನವಿಯೇನು? ರಾಜ್ಯ ಬಜೆಟ್ಟಲ್ಲಿ ಎಪಿಎಲ್ ಕಾರ್ಡ್ ದಾರರಿಗೂ ಉಚಿತ ಆರೋಗ್ಯ ನೀಡಿ ಮಧ್ಯಮ ವರ್ಗದವರ ಕಷ್ಟಕ್ಕೆ ಸ್ಪಂದಿಸುವ ಬಜೆಟ್ ನೀಡಿ
ಬಜೆಟ್ ನೀಡಲಿರುವ ಮುಖ್ಯಮಂತ್ರಿಗಳಲ್ಲಿ ಎನ್.ಕೆ.ಶ್ಯಾಮಸುಂದರ್ ಮನವಿಯೇನು?
ರಾಜ್ಯ ಬಜೆಟ್ಟಲ್ಲಿ ಎಪಿಎಲ್ ಕಾರ್ಡ್ ದಾರರಿಗೂ ಉಚಿತ ಆರೋಗ್ಯ ನೀಡಿ
ಮಧ್ಯಮ ವರ್ಗದವರ ಕಷ್ಟಕ್ಕೆ ಸ್ಪಂದಿಸುವ ಬಜೆಟ್ ನೀಡಿ
ಬಜೆಟ್ ನಲ್ಲಿ ಮಧ್ಯಮ ವರ್ಗದ ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ ಆರೋಗ್ಯ ಯೋಜನೆ ಜಾರಿ ಮಾಡಬೇಕೆಂದು ಮಾಜಿ ನಗರಸಭಾ ಸದಸ್ಯರೂ ಕಾಂಗ್ರೆಸ್ ಮುಖಂಡರೂ ಆದ ಎನ್.ಕೆ.ಶ್ಯಾಮಸುಂದರ್ ಮುಖ್ಯಮಂತ್ರಿ ಸಿದ್ದರಾಮಯ್ಯರಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಮಧ್ಯಮ ವರ್ಗದ ಬಡ ಜನರು ಹಾಗೂ ಹಿಂದೆ ಅನುಕೂಲದಲ್ಲಿದ್ದು ಇಂದು ತೊಂದರೆಯಲ್ಲಿ ಇರುವಂತಹ ಜನರು ಜೀವನ ನಿರ್ವಹಣೆಯಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಇವರು ಸರ್ಕಾರದ ಯೋಜನೆಗಳಿಂದ ಸಾಕಷ್ಟು ಅನ್ಯಾಯಕ್ಕೆ ಒಳಗಾಗಿದ್ದಾರೆ. ಈ ಬಡ ವರ್ಗದ ಜನರು ತನ್ನ ಮಕ್ಕಳಿಗೆ ದ್ವಿಚಕ್ರ ವಾಹನ ಕೊಡಿಸಲು ಹೋದರೆ, ಮನೆ ರಿಪೇರಿ ಮಾಡಲು ಜೀವನ ನಿರ್ವಹಣೆಗೆ ಆಟೋರಿಕ್ಷಾ ಲಗೇಜ್ ಗಾಡಿ ಯಾವುದಕ್ಕೂ ಸಾಲ ಪಡೆಯಲು ಬ್ಯಾಂಕ್ ಗಳಲ್ಲಿ ಐಟಿ ರಿಟರ್ನ್ಸ್ ಕೇಳುತ್ತಾರೆ. ಬ್ಯಾಂಕ್ ಗಳಲ್ಲಿ ಸಾಲ ಪಡೆದವರಿಗೆ ಐಟಿ ಘೋಷಣೆ ಅಡಿ ಕಾರ್ಡುಗಳು ರದ್ದಾಗಿದೆ ಎಂದು ವಿವರಿಸಿದ್ದಾರೆ.
ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ. ಎಪಿಎಲ್ ಕಾರ್ಡ್ ದಾರರಿಗೆ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಇಲ್ಲ. ಹೊಸ ಪಡಿತರ ಕಾರ್ಡುಗಳ ವಿತರಣೆ ಇಲ್ಲ. ಇವರುಗಳಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಏನು ಸಿಗುವುದಿಲ್ಲ. ಇಂತಹ ಶೋಚನೀಯ ಸ್ಥಿತಿಯಲ್ಲಿ ಹಲವಾರು ಕುಟುಂಬಗಳು ಕಡು ಕಷ್ಟದಲ್ಲಿ ಜೀವನ ನಿರ್ವಹಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯು ಬಿಜೆಪಿಯ ಕಾರ್ಯಕರ್ತರ ಕುಟುಂಬಗಳಿಗೆ ಮಾತ್ರ ಸೀಮಿತವಾಗಿದೆ. ಇನ್ನೂ ರಾಜ್ಯ ಸರ್ಕಾರದ ಸಹಕಾರ ಇಲಾಖೆಗಳಲ್ಲಿ ಯಶಸ್ವಿನಿ ಕಾರ್ಡ್ ನೀಡಲಾಗುತ್ತಿದೆ. ಆದರೆ, ಇದರಿಂದ ಮಧ್ಯಮ ವರ್ಗದ ಏಪಿಎಲ್ ಕಾರ್ಡ್ ದಾರರಿಗೆ ಹೆಚ್ಚಿನ ಆರೋಗ್ಯ ಸವಲತ್ತು ಸಿಗುತ್ತಿಲ್ಲ. ಎಷ್ಟೋ ಜನರು ಮದುವೆಯಾಗದೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಪಡಿತರ ಕಾರ್ಡ್ ನೀಡಲಾಗುತ್ತಿಲ್ಲ. ಸರ್ಕಾರದ ಸೌಲತ್ತು ಪಡೆಯಲು ಆಗುತ್ತಿಲ್ಲ. ಅಂಥವರ ಪರಿಸ್ಥಿತಿ ಏನು? ಗಾರೆ ಕೆಲಸದವರು ಪೇಂಟರ್ ಗಳು ಕಾರ್ಪೆಂಟರ್ ಗಳು ಇನ್ನಿತರೆ ವೃತ್ತಿ ಕೆಲಸದವರು ದಿನನಿತ್ಯ ಕೆಲಸ ಮಾಡಿದರೆ ಸಾವಿರ ರೂಪಾಯಿಯಂತೆ ಕೂಲಿ ಪಡೆಯುತ್ತಾರೆ. ತಿಂಗಳ ವರಮಾನ ಎಷ್ಟಾಗುತ್ತೆ? ವಾರ್ಷಿಕ ವರಮಾನ ಎಷ್ಟಾಗುತ್ತೆ? ಎಂದು ವಿವರಿಸಿದ್ದಾರೆ.
ಆದರೆ, ಬಿಪಿಎಲ್ ಕಾರ್ಡಿಗೆ ಮಾನದಂಡ ವಾರ್ಷಿಕ ವರಮಾನ 1,20,000 ರೂಗಳು ಇದೆ. ಇದನ್ನು ಪರಿಷ್ಕರಿಸಬೇಕು.ಮಧ್ಯಮ ವರ್ಗದ ಬಡ ಜನರು ಮತ ಹಾಕುವುದಿಲ್ಲವೇ? ಇವರುಗಳಿಗೆ ಸರ್ಕಾರಗಳಿಂದ ತಾತ್ಸಾರವೇಕೆ? ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಪ್ರತ್ಯೇಕ ಆರೋಗ್ಯ ಯೋಜನೆ ಮಾಡದೆ ಅವಶ್ಯಕತೆ ಇರುವ ಎಪಿಎಲ್ ಕಾರ್ಡುದಾರರಿಗೆ ಉಚಿತ ಆರೋಗ್ಯ ಚಿಕಿತ್ಸೆ ನೀಡಬೇಕು ಹಾಗೂ ಪ್ರತ್ಯೇಕ ಆರೋಗ್ಯ ಕಾರ್ಡ್ ನೀಡಲು ಬಜೆಟ್ ನಲ್ಲಿ ರಾಜ್ಯ ಸರ್ಕಾರ ಚಿಂತಿಸಿ ಯೋಜನೆ ಜಾರಿ ಮಾಡಬೇಕು. ಮಂತ್ರಿಗಳಿಗೆ ಎಂಎಲ್ಎ. ಎಂಎಲ್ಸಿ ಗಳಿಗೆ ಮಾಜಿ ಎಮ್ಮೆಲ್ಲೆ ಎಂಎಲ್ಸಿ ಗಳಿಗೆ ಸರ್ಕಾರದ ಹಣದಿಂದ ಉಚಿತ ಚಿಕಿತ್ಸೆ ಪಡೆಯುತ್ತಾರೆ. ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಗಳು ಉಚಿತ ಚಿಕಿತ್ಸೆ ಪಡೆಯುತ್ತಾರೆ. ಎಪಿಎಲ್ ಕಾರ್ಡ್ ಬಡ ಜನರು ಏನು ಪಾಪ ಮಾಡಿದ್ದಾರೆ? ಎಂದು ಶ್ಯಾಮಸುಂದರ್ ಪ್ರಶ್ನಿಸಿದ್ದಾರೆ.
ಎಲ್ಲಾ ಆಸ್ಪತ್ರೆಗಳು ಮಂತ್ರಿ ಎಮ್ಮೆಲ್ಲೆ ಹಾಗೂ ರಾಜಕಾರಣಿಗಳ ಒಡೆತನದಲ್ಲಿ ಇರುವುದರಿಂದ ಅವರಿಗೆ ಅನುಕೂಲ ಮಾಡಲು ಇದನ್ನು ಮಾಡುತ್ತಿಲ್ಲ ಎಂಬ ಅನುಮಾನಗಳಿವೆ.ಇವುಗಳನ್ನೆಲ್ಲ ಪರಿಗಣಿಸದೆ ಮಾನವೀಯ ನೆಲೆಯಲ್ಲಿ ರಾಜ್ಯ ಸರ್ಕಾರ ಈ ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಪೂರ್ವಕವಾಗಿ ಶ್ಯಾಮಸುಂದರ್ ವಿನಂತಿಸಿದ್ದಾರೆ.


