ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ *ದೇಶದ ಪ್ರಗತಿಯಾಗಬೇಕಾದರೆ ಮಹಿಳೆಯರ ಪ್ರಗತಿಯಾಗಬೇಕು: ಶಾಸಕಿ ಶ್ರೀಮತಿ ಬಲ್ಕೀಶ್ ಬಾನು*

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

*ದೇಶದ ಪ್ರಗತಿಯಾಗಬೇಕಾದರೆ ಮಹಿಳೆಯರ ಪ್ರಗತಿಯಾಗಬೇಕು: ಶಾಸಕಿ ಶ್ರೀಮತಿ ಬಲ್ಕೀಶ್ ಬಾನು*

ಶಿವಮೊಗ್ಗ; ದೇಶದ ಪ್ರಗತಿಯಾಗಬೇಕಾದರೆ ಮಹಿಳೆಯರ ಪ್ರಗತಿಯಾಗಬೇಕು‌. ಮಹಿಳೆ ಪ್ರಗತಿ ಹೊಂದಲು ಶಿಕ್ಷಣ ಮತ್ತು ಕುಟುಂಬದ ಬೆಂಬಲ ಅತಿ ಅವಶ್ಯ ಎಂದು‌ ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾನುವಾರ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯಡಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ – 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

೧೯೦೮ ರಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡಿದ ಮಹಿಳಾ ಕಾರ್ಮಿಕರಿಗೆ ನಮನಗಳು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಘೋಷಣೆಯಾಗಲು ಈ ಹೋರಾಟವೂ‌ ಕಾರಣವಾಗಿದೆ.
ಮನೆಯಿಂದ ಸಮಾಜ ಶುರುವಾಗುತ್ತದೆ.‌ಅಲ್ಲಿಂದಲೇ ಅವಕಾಶ ಸಿಕ್ಕರೆ ಪ್ರಗತಿ ಸಾಧಿಸಲು ಸಾಧ್ಯವಾಗಿದ್ದು ಶಿಕ್ಷಣ ಪಡೆಯುವುದು ಬಹಳ‌ ಮುಖ್ಯವಾಗಿದೆ.
ಭೂಮಿಯಿಂದ ಆಕಾಶದವರೆಗೆ ಇಂದು ಎಲ್ಲ ಕ್ಷೇತ್ರದಲ್ಲಿ ಹೆಣ್ಣು ಮುಂದೆ ಬರುತ್ತದ್ದಾಳೆ. ಇದಕ್ಕೆ ಮುಖ್ಯ ಕಾರಣ ಶಿಕ್ಷಣ. ಹಿಂದೆ ಹೆಣ್ಣುಮಕ್ಕಳಿಗೆ ಹೆಚ್ಚಿನದಾಗಿ ಮೌಲ್ಯಾಧಾರಿತ ಉಪಚಾರ ಹೇಳಲಾಗುತ್ತಿತ್ತು. ಆಕೆಯ ಪ್ರಗತಿ‌ಗೆ ಅವಕಾಶ ಇರಲಿಲ್ಲ.
ತ್ಯಾಗ, ಸಹನೆ ಜನ್ಮತಃ ಹೊಂದಿರುವ ಹೆಣ್ಣು ಮನೆಯಲ್ಲಿ ಹೋಂ‌ಮಿನಿಸ್ಟರ್ ಆದಿಯಾಗಿ ಎಲ್ಲ ಜವಾಬ್ದಾರಿ ನಿರ್ವಹಣೆ ಮಾಡುತ್ತಾಳೆ.‌ ಕೃಷಿ, ಕೈಗಾರಿಕೆಯಿಂದ ಹಿಡಿದು ದೊಡ್ಡ ದೊಡ್ಡ ಹುದ್ದೆಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.‌
ಮಹಿಳಾ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಮಹಿಳೆಯರ ಯುಗ ರಾಜ್ಯದಲ್ಲಿದೆ. ಗ್ಯಾರಂಟಿ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ.
ರಾಜಕೀಯ ವಲಯದಲ್ಲಿ‌ ಅವಕಾಶಗಳು ಇನ್ನೂ ಹೆಚ್ಚಬೇಕು.ಈ ವಲಯದಲ್ಲಿ ಹೆಣ್ಣು ಮಕ್ಕಳು‌ ಹೆಚ್ಚೆಚ್ಚು ಪಾಲ್ಗೊಳ್ಳಬೇಕು. ಕೈಗಾರಿಕಾ ಕ್ಷೇತ್ರದ
ಅವಕಾಶಗಳನ್ನು ಬಳಸಿಕೊಳ್ಳಬೇಕೆಂದರು.

ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಮಾತನಾಡಿ, ಹೆಣ್ಣು ಸಬಲಳು. ನೋವನ್ನು ಸಹಿಸಿ ಆಕೆ ನಗುತ್ತಾಳೆ. ದೇವರು ಆಕೆಗೆ ವಿಶೇಷ ಶಕ್ತಿ ನೀಡಿದ್ದಾರೆ. ಸಹನೆ, ಪ್ರೀತಿಯನ್ನು ಹೆಚ್ಚಿಸುವ ಶಕ್ತಿಯನ್ನು ಸೃಷ್ಟಿ ಆಕೆಗೆ ನೀಡಿದೆ. ಮನೆಯ ಎಲ್ಲ ಕೆಲಸ ನಿರ್ವಹಣೆ ಮಾಡಿ, ಮನೆಯ ಮಂದಿಯನ್ನು, ಮಕ್ಕಳನ್ನು ಗುರುವಾಗಿ, ಮನೆಯ ವೈದ್ಯೆಯಾಗಿ, ವಕೀಲಳಾಗಿ, ಹೀಗೆ ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಾಳೆ. ಅದಕ್ಕೆ ನಮ್ಮ ಸಂಸ್ಕೃತಿಯಲ್ಲಿ ಮಹಿಳೆಗೆ ಮಾತೆಯ ಮೌಲ್ಯವಿದೆ.
೨೦ ನಿಮಿಷ ನಿಮಗೆ ಇಷ್ಟವಾದ ಕೆಲಸಕ್ಕಾಗಿ, ಹವ್ಯಾಸಕ್ಕಾಗಿ ಮೀಸಲಿಡಿರಿ. ನಿಮಗಾಗಿ ಸಮಯ ಮಾಡಿಕೊಂಡು ನಿಮ್ಮ‌ ಹವ್ಯಾಸಗಳಿಗೆ ಒತ್ತು ನೀಡಿದರೆ ನಿಮ್ಮಲ್ಲಿ ಉತ್ತಮ ಬದಲಾವಣೆ ಸಾಧ್ಯವಾಗುತ್ತದೆ. ಕೊಡುವಂತಹ ಮನೋಭಾವವನ್ನು ಮಕ್ಕಳಿಗೆ ಕಲಿಸಿಕೊಡಬೇಕು ಎಂದ ಅವರು ಮಕ್ಕಳನ್ನು ಆಸ್ತಿ ಮಾಡುವ ಶಕ್ತಿ ತಾಯಿಗಿದೆ ಎಂದರು.
ಕರ್ನಾಟಕ ರಾಜ್ಯ ಎಸ್ ಸಿ /ಎಸ್ ಟಿ ಅಲೆಮಾರಿಗಳ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ ಮಾತನಾಡಿ , ಕುಟುಂಬ, ಸಮಾಜದಲ್ಲಿ ಎದುರಾಗುವ ಸವಾಲುಗಳು ಮಹಿಳೆಗೆ ಮಾತ್ರ ತಿಳಿದಿದೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಹೋಗಿದ್ದರೂ ಕಟ್ಟುಪಾಡುಗಳು ಅಷ್ಟೇ ಇವೆ. ನಮ್ಮ ಹಕ್ಕುಗಳಿಗಾಗಿ ೯೮ ವರ್ಷಗಳ ಹಿಂದೆ ನಡೆದ ಕಾರ್ಮಿಕ ಹೋರಾಟವು ಮಹಿಳಾ ದಿನಾಚರಣೆಗೆ ಕಾರಣವಾಗಿದೆ. ೧೨ ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದಲ್ಲಿ ಹೆಣ್ಣಿಗೆ ಸಮಾನ ಅವಕಾಶ ನೀಡಿ ಸಾಮಾಜಿಕ ನ್ಯಾಯ ಮೆರೆದರು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮಹಿಳೆಗೆ ಸಾಂವಿಧಾನಿಕ ಹಕ್ಕುಗಳನ್ನು ನೀಡಿದ್ದು ಇವರನ್ನೆಲ್ಲ ಸ್ಮರಿಸಲೇಬೇಕು. ದೇಶದ ಹೆಣ್ಣುಮಕ್ಕಳು ಸುಶಿಕ್ಷಿತರಾಗಿ ಎಲ್ಲ ರಂಗಗಳಲ್ಲಿ ಮುಂದೆ ಬರಬೇಕೆಂದು ಕ್ರಾಂತಿ ಮಾಡಿ, ಶಿಕ್ಷಣ ನೀಡಿದ ಮಹಿಳೆ ಸಾವಿತ್ರಿಬಾಯಿ ಫುಲೆಯಂತಹವರನ್ನು ಮರೆಯಬಾರದು. ಹೆಣ್ಣಿಗೆ ಜಾತಿ, ಧರ್ಮ ಇಲ್ಲ. ಅವಳೊಂದು ಶಕ್ತಿ. ಅವಕಾಶಗಳನ್ನು ಬಳಸಿಕೊಂಡು, ಪ್ರಗತಿ ಹೊಂದಿ, ಉತ್ತಮ‌ ಕೊಡುಗೆ ನೀಡಬೇಕಿದೆ. ನಮ್ಮೊಂದಿಗೆ ಇತರೆ ಮಹಿಳೆಯರನ್ನು ಬೆಳೆಸಬೇಕು. ಹಾಗೂ ಆರೋಗ್ಯದ ಬಗ್ಗೆ ಗಮನ ಹರಿಸಬೇಕು ಎಂದರು.
ಸೂಡಾ ಅಧ್ಯಕ್ಷರಾದ ಹೆಚ್ ಎಸ್. ಸುಂದರೇಶ್ ಮಾತನಾಡಿ, ೧೯೦೮ ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟಗಳು ಅಂತರಾಷ್ಟ್ರೀಯ ಮಹಿಳಾ ದಿನ ಘೋಷಣೆಗೆ ಕಾರಣವಾಯಿತು.
ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಉತ್ತಮವಾಗಿ ಸಾಧನೆ ಮಾಡಿದ್ದಾರೆ. ಉತ್ತಮ ಆಡಳಿತಗಾರರೂ ಆಗಿದ್ದಾರೆ. ತುಳಿತಕ್ಕೊಳಗಾಗಿ ಅಡುಗೆ ಮನೆಗೆ ಸೀಮಿತವಾಗಿದ್ದ ಹೆಣ್ಣು ಇಂದು ಎಲ್ಲ ರಂಗಗಳಲ್ಲಿ ಮುಂದೆ ಬರುತ್ತಿದ್ದಾರೆ.
ಮಹಿಳಾ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ,ಶಕ್ತಿ ಯಂತಹ ಯೋಜನೆಗಳನ್ನು ನೀಡಿದೆ ಎಂದರು.
ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಟಾನದ ಅಧ್ಯಕ್ಷರು ಹಾಗೂ ಕಮಲಾ ನೆಹರು ಮಹಿಳಾ ಕಾಲೇಜಿನ ನಿ.ಉಪನ್ಯಾಸಕರಾದ ಪ್ರೊ.ಕಿರಣ್ ಆರ್ ದೇಸಾಯಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕೊಡು ಮತ್ತು ಪಡೆ ಎಂಬುದು ಈ ವರ್ಷದ ಮಹಿಳಾ ದಿನಾಚರಣೆ ಘೋಷವಾಕ್ಯವಾಗಿದ್ದು ಏನಾದರೂ ಪಡೆಯಲಿಕ್ಕಾಗಿ ಕೆಲವನ್ನು ತ್ಯಾಗ ಮಾಡಬೇಕು. ಮಹಿಳೆ ನಿರಂತರವಾಗಿ ಇದನ್ನೇ ಮಾಡುತ್ತಾ ಬಂದಿದ್ದಾಳೆ.
ಮಹಿಳಾ ದಿನ ನಮ್ಮನ್ನು ನಾವೇ ಸಂಭ್ರಮಿಸುವ ದಿನ. ಮಹಾ ಇಳೆ ಮಹಿಳೆ. ಇದೊಂದು ಶಕ್ತಿಶಾಲಿ ಪದ. ಆಕೆಗೆ ದೈಹಿಕ ಶಕ್ತಿ , ಭಾವನಾತ್ಮಕ ಶಕ್ತಿ, ಬೌಧ್ದಿಕ ಶಕ್ತಿ, ಮಾನಸಿಕ ಶಕ್ತಿ, ಆತ್ಮಿಕ ಶಕ್ತಿ ಅಗಾಧವಾಗಿದೆ. ಇತಿಹಾಸದುದ್ದಕ್ಕೂ ಹೆಣ್ಣಿನ ಶಕ್ತಿಯನ್ನು‌ ಸಾಕ್ಷೀಕರಿಸುತ್ತಾ ಬಂದಿದ್ದೇವೆ. ಅಸಂಖ್ಯಾತ ಮಹಿಳಾ ಸಾಧಕಿಯರು ಮಾದರಿಯಾಗಿದ್ದಾರೆ. ಆತ್ಮವಿಶ್ವಾಸ, ದೃಢತೆ ಬಹಳ ಮುಖ್ಯವಾಗಿದ್ದು ನಡೆ ನುಡಿ, ಉಡುಗೆ ತೊಡುಗೆ ಬಗ್ಗೆ ಗಮನ ಹರಿಸಬೇಕು ಎಂದ ಅವರು ಮಕ್ಕಳಿಗೆ ಮಾನವೀಯತೆ ಕಲಿಸುವುದು ಬಹಳ‌ ಮುಖ್ಯ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ಮಾತನಾಡಿದರು.
ಕಾರ್ಯಕ್ರಮದಲ್ಲಿ‌ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಅಂಗನವಾಡಿ‌ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ಆರ್ ಬಣಕಾರ್, ಜಿಲ್ಲಾ ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅ್ಇಕಾರಿ ಶಶಿರೇಖಾ, ತಾಜುದ್ದೀನ್ ಖಾನ್, ರೇಖಾ, ಸ್ ಒಕ್ಕೂಟದ ಅಧ್ಯಕ್ಷೆ ಪ್ರಭಾವತಿ, ಅಕ್ಕ ಪಡೆ ಎಎಸ್ ಐ ಹೇಮಾ, ಇತರರು ಪಾಲ್ಗೊಂಡಿದ್ದರು.