ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ! ಧನ್ಯವಾದ ತಿಳಿಸಿದ ಸಚಿವ ಮಧು ಬಂಗಾರಪ್ಪ

ಸರ್ಕಾರಿ ಶಾಲಾ-ಪಿಯುಸಿ ಕಾಲೇಜುಗಳ ಭೂಮಿ ರಕ್ಷಣೆಯ ಐತಿಹಾಸಿಕ ಮಸೂದೆಗೆ ವಿಧಾನ ಪರಿಷತ್ತಿನಲ್ಲೂ ಒಮ್ಮತದ ಅಂಗೀಕಾರ!

ಧನ್ಯವಾದ ತಿಳಿಸಿದ ಸಚಿವ ಮಧು ಬಂಗಾರಪ್ಪ

ವಿಧಾನಸಭೆಯ ಬೆನ್ನಲ್ಲೇ, ಇಂದು ವಿಧಾನ ಪರಿಷತ್ತಿನಲ್ಲಿಯೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅತ್ಯಂತ ಮಹತ್ವದ ‘ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳ ಭೂಮಿಗಳ (ರಕ್ಷಣೆ ಮತ್ತು ಸಕ್ರಮಾತಿ) ವಿಧೇಯಕ-2026’ ಅನ್ನು ಮಂಡಿಸಲಾಯಿತು. ಈ ಮಸೂದೆಗೆ ಮೇಲ್ಮನೆಯ ಎಲ್ಲಾ ಹಿರಿಯ ಸದಸ್ಯರು ಪಕ್ಷಭೇದ ಮರೆತು, ಸುದೀರ್ಘ ಚರ್ಚಿಸಿ ಒಮ್ಮತದ ಬೆಂಬಲ ಸೂಚಿಸಿ ಅಂಗೀಕರಿಸಲಾಯಿತು.

ದಶಕಗಳ ಹಿಂದೆ ಸರ್ಕಾರಿ ಶಾಲೆಗಳ ಉಳಿವಿಗಾಗಿ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಸ್ವಂತ ಜಮೀನುಗಳನ್ನು ನಿಸ್ವಾರ್ಥವಾಗಿ ನೀಡಿದ ದಾನಿಗಳ ಆಶಯವನ್ನು ಈ ಮಸೂದೆ ಎತ್ತಿಹಿಡಿಯಲಿದೆ. ದಾಖಲೆಗಳ ಕೊರತೆಯಿಂದ ಆಗಿದ್ದ ಸಮಸ್ಯೆಗಳನ್ನು ಸರಿಪಡಿಸಿ, ಜಮೀನುಗಳನ್ನು ಅಧಿಕೃತವಾಗಿ ಇಲಾಖೆಯ ಸುಪರ್ದಿಗೆ ತರುವ ಜೊತೆಗೆ ದಾನಿಗಳ ಹೆಸರನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ.

ಕಳೆದ 12 ವರ್ಷಗಳಿಗೂ ಹೆಚ್ಚು ಕಾಲದಿಂದ ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿರುವ, ಆದರೆ ಇಲಾಖೆಯ ಹೆಸರಿಗೆ ನೋಂದಣಿಯಾಗದ ಖಾಸಗಿ ಅಥವಾ ಇತರ ಜಮೀನುಗಳನ್ನು ಕಾನೂನುಬದ್ಧವಾಗಿ ಸಕ್ರಮಗೊಳಿಸಿ ಇಲಾಖೆಯ ಸುಪರ್ದಿಗೆ ಪಡೆಯಲು ಈ ವಿಧೇಯಕ ಹಾದಿ ಸುಗಮಗೊಳಿಸಿದೆ.

ಶಾಲೆಗಳ ಜಮೀನುಗಳು ಯಾವುದೇ ಕಾರಣಕ್ಕೂ ಒತ್ತುವರಿಯಾಗದಂತೆ ತಡೆಯಲು ಮತ್ತು ಅನ್ಯ ಕಾರ್ಯಗಳಿಗೆ ಬಳಕೆಯಾಗದಂತೆ ಕಟ್ಟುನಿಟ್ಟಿನ ರಕ್ಷಣೆ ಒದಗಿಸಲು ಈ ಕಾನೂನು ಬಲ ತುಂಬಲಿದೆ.

ಮಕ್ಕಳ ಭವಿಷ್ಯ ಹಾಗೂ ಸರ್ಕಾರಿ ಶಾಲೆಗಳ ಸಬಲೀಕರಣವೇ ನಮ್ಮ ಸರ್ಕಾರದ ಮೂಲ ಮಂತ್ರ. ಈ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ, ತಮ್ಮ ಅತ್ಯಮೂಲ್ಯವಾದ ಸಲಹೆ-ಸೂಚನೆಗಳನ್ನು ನೀಡಿ ಒಮ್ಮತದ ಅಂಗೀಕಾರಕ್ಕೆ ಕಾರಣರಾದ  ಸಭಾಪತಿಗಳಿಗೆ ಹಾಗೂ ವಿಧಾನ ಪರಿಷತ್ತಿನ ಎಲ್ಲಾ ಸದಸ್ಯರಿಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಇಂದು ಧನ್ಯವಾದ ತಿಳಿಸಿದರು.