ಹೊಸನಗರ ಕೆನರಾ ಬ್ಯಾಂಕ್ನಿಂದ ಸೇವಾನ್ಯೂನತೆ; ಒ ಡಿ ಹಣ ಲಪಟಾಯಿಸಿದ್ದ ಬ್ಯಾಂಕ್* *ಪರಿಹಾರ ನೀಡಲು ಆಯೋಗದಿಂದ ಆದೇಶ*
*ಕೆನರಾ ಬ್ಯಾಂಕ್ನಿಂದ ಸೇವಾನ್ಯೂನತೆ; ಒ ಡಿ ಹಣ ಲಪಟಾಯಿಸಿದ್ದ ಬ್ಯಾಂಕ್*
*ಪರಿಹಾರ ನೀಡಲು ಆಯೋಗದಿಂದ ಆದೇಶ*
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಎಂ. ಗುಡ್ಡೆಕೊಪ್ಪ ವಾಸಿ ಧನಂಜಯ ಎಂ.ವಿ. ಎಂಬುವವರು ಹೊಸನಗರ ಕೆನರಾ ಬ್ಯಾಂಕ್ ಶಾಖೆಯ ಮೇಲೆ ತಮ್ಮ ಒಡಿ ಖಾತೆ ಹಣ ಕಡಿತಗೊಳಿಸಿ, ಹಣವನ್ನು ಹಿಂದುರುಗಿಸದೇ ಸೇವಾನ್ಯೂನತೆಯನ್ನು ಎಸಗಿದ ಬಗ್ಗೆ ನೀಡಿದ ದೂರಿನ ಕುರಿತು ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಹಣವನ್ನು ಹಿಂದುರುಗಿಸುವಂತೆ ಆದೇಶಿಸಿ ತೀರ್ಪು ನೀಡಿದೆ.
ದೂರುದಾರರು ಎದುರುದಾರ ಬ್ಯಾಂಕಿನಲ್ಲಿ ಒಡಿ ಖಾತೆ ಹೊಂದಿದ್ದು, ರೂ. 2.80 ಲಕ್ಷದ ಸೌಲಭ್ಯ ಪಡೆದಿರುತ್ತಾರೆ. ಜೂನ್ 2024 ರಲ್ಲಿ ಯಾವುದೇ ಮುನ್ಸೂಚನೆಯಿಲ್ಲದೆ ಈ ಖಾತೆಯಿಂದ ರೂ. 3,89,544/- ಹಣ ಕಡಿತವಾಗಿ ಉಳಿಕೆ ಮೊತ್ತ ಸೊನ್ನೆ ತೋರಿಸುತ್ತಿದ್ದು, ಈ ವಿಷಯವಾಗಿ ಬ್ಯಾಂಕ್ನ್ನು ಸಂಪರ್ಕಿಸಿದಾಗ ವ್ಯವಸ್ಥಾಪಕರು 2 ದಿನಗಳೊಳಗಾಗಿ ಹಣವನ್ನು ಹಿಂದುರುಗಿಸುವುದಾಗಿ ತಿಳಿಸಿರುತ್ತಾರೆ.
ಆದರೆ ಹಣವನ್ನು ಹಿಂದಿರುಗಿಸದಿರುವುದರಿಂದ 2025ರಲ್ಲಿ ಲೀಗಲ್ ನೋಟೀಸ್ ನೀಡಿದ್ದು, ಅದಕ್ಕೂ ಎದುರುದಾರರು ಯಾವುದೇ ಪ್ರತ್ಯುತ್ತರ ನೀಡದೆ ಸೇವಾನ್ಯೂನತೆ ಎಸಗಿರುತ್ತಾರೆ ಎಂದು ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.
ಆಯೋಗವು ದೂರನ್ನು ದಾಖಲಿಸಿಕೊಂಡು ಎದುರುದಾರರಿಗೆ ನೋಟೀಸ್ ನೀಡಿದ್ದು, ಎದುರುದಾರರು ಆಯೋಗಕ್ಕೆ ತಮ್ಮ ವಕೀಲರ ಮೂಲಕ ಹಾಜರಾಗಿದ್ದು, ಎರಡೂ ಪಕ್ಷಗಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ವಾದ ವಿವಾದವನ್ನು ಆಲಿಸಿ, ಎದುರುದಾರರು ದೂರದಾರರ ಒಡಿ ಖಾತೆಯಿಂದ ಹಣವನ್ನು ಕಡಿಗೊಳಿಸಿ ಹಿಂತಿರುಗಿಸದೆ ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ, ದೂರನ್ನು ಭಾಗಶಃ ಪುರಸ್ಕರಿಸಿ, ಎದುರುದಾರರು ದೂರುದಾರರ ಖಾತೆಯಲ್ಲಿದ್ದ ರೂ.3,89,554 /- ಗಳಿಗೆ ದಿ: 18/02/2025 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ. 9ರ ಬಡ್ಡಿಯನ್ನು ಸೇರಿಸಿ, ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದ್ದು, ಹಾಗೂ ರೂ. 1,00,000/- ಗಳನ್ನು ಮಾನಸಿಕ ವೇದನೆಗೆ ಪರಿಹಾರವಾಗಿ ಮತ್ತು ರೂ. 10,000/- ಗಳನ್ನು ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ತಪ್ಪಿದ್ದಲ್ಲಿ ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಮಾ. 31 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಗಂಗಾಧರ ನಾಯ್ಕ್ ಎಂ.ಟಿ. ತಿಳಿಸಿದ್ದಾರೆ.


