ಸಾಹಿತ್ಯದ ಸಮಕಾಲೀನತೆ ಕುರಿತ ವಿಚಾರ ಸಂಕಿರಣ ಕುವೆಂಪುಗೆ ತೃಣ ಮತ್ತು ಘನ, ಎರಡೂ ಮುಖ್ಯವಾಗಿತ್ತು: ಡಾ. ಬಸವರಾಜ ಕಲ್ಗುಡಿ

ಸಾಹಿತ್ಯದ ಸಮಕಾಲೀನತೆ ಕುರಿತ ವಿಚಾರ ಸಂಕಿರಣ

ಕುವೆಂಪುಗೆ ತೃಣ ಮತ್ತು ಘನ, ಎರಡೂ ಮುಖ್ಯವಾಗಿತ್ತು: ಡಾ. ಬಸವರಾಜ ಕಲ್ಗುಡಿ

ಶಂಕರಘಟ್ಟ,; ಭಾರತೀಯ ಸಂದರ್ಭದ ಬಹುದೊಡ್ಡ ಬರಹಗಾರ ಕುವೆಂಪು. ‌ ತಮ್ಮ ಕಾಲಘಟ್ಟದ ಎಲ್ಲ ಸಂಗತಿಗಳ ಸಂಕೀರ್ಣತೆಯನ್ನು ಅರಿತುಕೊಂಡು ಸಾಮಾಜಿಕ ಚರಿತ್ರೆಯನ್ನು ತಿದ್ದಲು ಪ್ರಯತ್ನಿಸಿದ ಅವರಿಗೆ ಅಸಾಮಾನ್ಯವಾದ ಘನವು, ಸಾಮಾನ್ಯವಾದ ತೃಣವು, ಎರಡೂ ಮುಖ್ಯವಾಗಿತ್ತು ಎಂದು ವಿಮರ್ಶಕ ಡಾ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗ ಕುವೆಂಪು ಸಾಹಿತ್ಯದ ಸಮಕಾಲೀನತೆ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು ಅವರಿಗೆ ಅವರ ಸಮಕಾಲೀನತೆಯ ಜೊತೆಗೆ ಭವಿಷ್ಯದ ದೃಷ್ಟಿಕೋನವು ಇತ್ತು.‌ ಅವರ ಸಾಹಿತ್ಯದ ಬಹುಮುಖ್ಯ ಕಾಳಜಿ ಯುವ ಜನರನ್ನು ಕುರಿತದ್ದಾಗಿದೆ. ಹೀಗಾಗಿ ಕುವೆಂಪು ಸಾಹಿತ್ಯಿಕವಾಗಿ ಕಾಣಿಸುವುದೆ ಬೇರೆ. ಆದರೆ ಅವರ ಸಾಮಾಜಿಕ ದೃಷ್ಟಿಕೋನ ಸರ್ವರ ಏಳ್ಗೆ ಮತ್ತು ಪೂರ್ಣದೃಷ್ಟಿಯನ್ನು ಒಳಗೊಂಡಿತ್ತು.

ಕುವೆಂಪು ಅವರ ವೈಚಾರಿಕತೆಯು ಈ ಕಾಲಘಟ್ಟದ ಮಹತ್ವದ ಪ್ರೇರಣೆಯಾಗಬೇಕಿದೆ. ಪ್ರಜ್ಞಾವಂತ ಯುವ ಮನಸ್ಸುಗಳಿಗೆ ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ತತ್ವ ಹಿಂದೆಂದಿಗಿಂತಲೂ ಅತ್ಯಗತ್ಯವಾಗಿದೆ ಎಂದರು.

ಕನ್ನಡ ಭಾರತಿ ವಿಭಾಗದ ಅಧ್ಯಕ್ಷ ಡಾ. ಶಿವಾನಂದ ಕೆಳಗಿನಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪ್ರಾಧ್ಯಾಪಕ ಡಾ. ಜಿ. ಪ್ರಶಾಂತ್ ನಾಯಕ ಉಪಸ್ಥಿತರಿದ್ದರು.‌
ಡಾ. ನವೀನ್ ಮಂಡಗದ್ದೆ, ವಂದಿಸಿದರು. ಡಾ.ರವಿನಾಯಕ್ ನಿರ್ವಹಿಸಿದರು.

ನಂತರ ನಡೆದ ಗೋಷ್ಠಿಗಳಲ್ಲಿ ಡಾ‌. ಗುರುಪಾದ ಮರಿಗುದ್ದಿ ಕುವೆಂಪು ಕಾದಂಬರಿ ಸಮಕಾಲೀನತೆ, ಡಾ. ಮೋಹನ್ ಚಂದ್ರಗುತ್ತಿ ಕುವೆಂಪು ನಾಟಕ ಮತ್ತು ಸಮಕಾಲೀನತೆ, ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರು ಕುವೆಂಪು ಕಾವ್ಯ ಸಮಕಾಲೀನತೆ ವಿಷಯ‌ ಕುರಿತು ವಿಚಾರ ಮಂಡಿಸಿದರು.