*ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ; ಆ 4 ಜನ ಪತ್ರಕರ್ತರು ಯಾರು?*
*ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ; ಆ 4 ಜನ ಪತ್ರಕರ್ತರು ಯಾರು?*
ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಶಿವಮೊಗ್ಗ ಜಿಲ್ಲೆಯ 25 ಕಡೆ ಅಕ್ರಮ ಮರಳು ಮಾಫಿಯಾದ ಜಾಗಗಳಲ್ಲಿ ಗುಂಪು ದಾಳಿ ಮಾಡಿ ಶಿವಮೊಗ್ಗ ಜಿಲ್ಲೆಯ 4 ಜನ ಪತ್ರಕರ್ತರಿಗೂ ನೋಟಿಸ್ ನೀಡುವುದರ ಬಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ವರದಿ ಇದೆ.
17,000 ಮೆಟ್ರಿಕ್ ಟನ್ ಮರಳು, 52 ವಾಹನಗಳು ಈ ಸಂದರ್ಭದಲ್ಲಿ ಜಪ್ತಿ ಆಗಿವೆ. ಜೆಸಿಬಿ, ಹಿಟಾಚಿ, ಟಿಪ್ಪರ್ ಲಾರಿಗಳು, ಟ್ರ್ಯಾಕ್ಟರ್ ಗಳು, ಬೋಟ್ ಗಳು, ಮರಳು ಫಿಲ್ಟರ್ ಯಂತ್ರಗಳು ಜಪ್ತಿಯಾದ 52 ವಾಹನಗಳಲ್ಲಿ ಸೇರಿವೆ. ಈ ಜಪ್ತಿ ವಾಹನಗಳಲ್ಲಿ ಪತ್ರಕರ್ತರದ್ದೆಷ್ಟು? ಪೊಲೀಸರದ್ದೆಷ್ಟು? ಸಂಬಂಧ ಪಟ್ಟ ಇಲಾಖೆಗಳ ಸಿಬ್ಬಂದಿಗಳದ್ದೆಷ್ಟು? ಅಂತ ಒಂದು ಸೂಕ್ಷ್ಮ ತನಿಖೆಯನ್ನೂ ಲೋಕಾಯುಕ್ತ ಮಾಡಬೇಕಿದೆ.
ಪತ್ರಕರ್ತರೇನು ಲೋಕಾತೀತರಲ್ಲ… ಪ್ರಶ್ನಾತೀತರಲ್ಲ… ಡಿ.ಸಿ, ಎಸ್ ಪಿ, ಎಸಿ, ತಹಶೀಲ್ದಾರರುಗಳು ಕೂಡ ಈ ಆಟದಲ್ಲಿದ್ದಾರಾ?
ಅಕ್ರಮ ಮರಳು ಮಾಫಿಯಾ, ಅದರ ಸಾಗಾಟದ ಹಿಂದೆ ಸರ್ಕಾರಿ ವ್ಯವಸ್ಥೆಯ ಬಹುದೊಡ್ಡ ಲೋಪವಿದೆ. ಇಡೀ ರಾತ್ರಿ ನದಿಯ ಮರಳು ಬಗೆಯುವಾಗ ಸದ್ದು ಮಾಡುವ ಯಂತ್ರಗಳಿಂದಲೇ ಮರಳು ತೆಗೆಯಲಾಗುತ್ತೆ, ಸದ್ದು ಮಾಡುವ ಜೆಸಿಬಿಗಳಿಂದಲೇ ವಾಹನಗಳಿಂದಲೇ ತುಂಬಲಾಗುತ್ತೆ, ಸದ್ದು ಮಾಡುತ್ತಲೇ ಅಕ್ರಮ ಮರಳು ಹೊತ್ತ ವಾಹನಗಳು ಹೆದ್ದಾರಿಗಳಲ್ಲಿ ಓಡಾಡುತ್ತವೆ, ಹೆದ್ದಾರಿಗಳಲ್ಲಿ ಚೆಕ್ ಪೋಸ್ಟ್ ಗಳು ಸೈಲೆಂಟಾಗಿ ರೆಡ್ ಕಾರ್ಪೆಟ್ ಹಾಸಿ ಚೆಕ್ ಮಾಡದೇ ಬಿಟ್ಟು ರವಾನಿಸುತ್ತವೆ, ದೂರು ಕೊಟ್ಟರೂ ಕೊಡದಿದ್ದರೂ ಇಂಥ ಅಕ್ರಮಗಳ ವಿರುದ್ಧ ಕಣ್ಣಿಡಬೇಕಾದ 112 ಎಂಬ ERSS, ಆನಂತರ ವಿಚಕ್ಷಣಾ ದಳಗಳು, ಎಸ್ ಪಿ ಸ್ಕ್ವಾಡ್, ಐಜಿ ಸ್ಕ್ವಾಡ್…ಹೀಗೆ, ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯ ಹಿಂದೆ ಇಷ್ಟೆಲ್ಲ ವ್ಯವಸ್ಥೆ ಇದೆ!
ಹಿಂದೊಬ್ಬರು ಪೊಲೀಸ್ ವರಿಷ್ಠಾಧಿಕಾರಿಗಳಿದ್ದರು. ಅವರಂತೂ ಅಕ್ರಮ ಮರಳ ಹಣ ಸಂಗ್ರಹಿಸಲೆಂದೇ ತಮ್ಮ ಆಪ್ತರನ್ನು ಮೈಸೂರಿನಿಂದ ಕರೆಸಿಟ್ಟುಕೊಂಡು ವಸೂಲಿ ಮಾಡುತ್ತಿದ್ದರೆಂಬ ಗುಮಾನಿ ಇದೆ. ಈಗಲೂ ಅದು ಅಕ್ರಮ ಮರಳು ಮಾಫಿಯಾದವರ ಸುವರ್ಣಯುಗ!
*ಇನ್ನೊಂದು ಮಾತು;*
ಅಕ್ರಮ ಮರಳಿನ ಡಿಎನ್ ಎ ಹೋಲಿಸಲು ಸಾಧ್ಯವಾದರೆ ಕಳೆದ 30 ವರ್ಷಗಳಿಂದ ಮನೆಕಟ್ಟಿಕೊಂಡು ಬೀದಿ ಪತ್ರಕರ್ತರೆಲ್ಲ ಕೋಟಿ ಕೋಟಿಗಿದ್ದಾರಲ್ಲ ಅವರ ಮನೆಯ ಗೋಡೆಗಳ ಡಿ ಎನ್ ಎ ಪರೀಕ್ಷೆ ಮಾಡಿದರೆ ಮಾಫಿಯಾ ನಿಜವಾಗಲೂ ಬೆತ್ತಲಾಗುವುದು!
ಸಾಧ್ಯವೇ? ಅಥವಾ ದಾಖಲೆಗಳೇ ಬೇಕಾ?


