ಭೋಗ್ಯದ ಹಣ 8 ಲಕ್ಷ ರೂ., ನೀಡದೇ ವಂಚನೆ; ದಂಪತಿಗಳ ವಿರುದ್ಧ FIR*

*

ಸಿಂಗಲ್ ಬೆಡ್ ರೂಂ ಮನೆಯನ್ನು ಭೋಗ್ಯಕ್ಕೆ ನೀಡುವುದಾಗಿ 8 ಲಕ್ಷ ರೂ.,ಗಳನ್ನು ಪಡೆದಿದ್ದ ದಂಪತಿ ಮೋಸ ಮಾಡಿರುವುದಾಗಿ ಗೋಲ್ಡ್ ಸ್ಮಿತ್, ಸಿದ್ದೇಶ್ವರ ನಗರದ ವಾಸಿ ಎಂ.ವಿನಾಯಕ್ ನೀಡಿರುವ ದೂರಿನ ಆಧಾರದ ಮೇಲೆ ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆಚ್.ಡಿ.ಸುರೇಶ್ ಮತ್ತು ಅವರ ಪತ್ನಿ ಶ್ರೀಮತಿ ಸುಧಾ 8 ಲಕ್ಷ ರೂ., ಪಡೆದು ಮೋಸ ಮಾಡಿದ್ದಾರೆಂದು ವಿನಾಯಕ್ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ದಂಪತಿ ಮೇಲೆ IPC 420, 506, 34 ಕಾಯ್ದೆ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮನೆ ಭೋಗ್ಯಕ್ಕೆ ನೀಡುವುದಾಗಿ ಸುರೇಶ್ ದಂಪತಿ ಮತ್ತು ವಿನಾಯಕ್ ನಡುವೆ 8 ಲಕ್ಷ ರೂ., ಗಳ ಮಾತುಕತೆ ನಡೆದಿತ್ತು. ಮೋಹನ್, ನಿಂಗರಾಜು, ಅರುಣ್, ರಾಜೇಂದ್ರರ ಸಮ್ಮುಖದಲ್ಲಿ 2022ರ ಮೇ 4 ರಂದು ನಗದು ಹಣ ನೀಡಲಾಗಿತ್ತು. ವಾಸವಿದ್ದ ನಂತರವೂ ನೀಡಿದ ಹಣಕ್ಕೆ ಕರಾರು ಪತ್ರ ಮಾಡಿಕೊಡದೇ ಸತಾಯಿಸುತ್ತಿದ್ದರು. ಆನಂತರ ವಿನಾಯಕ್ ಹೊಸ ಮನೆಯೊಂದನ್ನು ಖರೀದಿಸಿ ಸ್ಥಳಾಂತರವಾಗಿದ್ದರು. ಹಣ ಮರಳಿಸುವ ಮಾತಾಡಿದ್ದ ದಂಪತಿ ವಾಪಸ್ ಕೊಡದೇ ಈಗ ಮೋಸ ಮಾಡುತ್ತಿದ್ದಾರೆಂದು ವಿನಾಯಕ್ ದೂರಿನಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಪೊಲೀಸರಲ್ಲಿ ವಿನಂತಿಸಿದ್ದಾರೆ.