ಅಪರಾಧ ವಿಮರ್ಶನಾ ಸಭೆಯಲ್ಲಿ ಎಸ್ ಪಿ ಮಿಥುನ್ ಕುಮಾರ್ ಹೇಳಿದ ಆ 10 ಮಹತ್ವದ ಸೂಚನೆಗಳೇನು?**ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ದಾಟಿಸಿದ ಸಂದೇಶವೇನು?*

*ಅಪರಾಧ ವಿಮರ್ಶನಾ ಸಭೆಯಲ್ಲಿ
ಎಸ್ ಪಿ ಮಿಥುನ್ ಕುಮಾರ್ ಹೇಳಿದ ಆ 10 ಮಹತ್ವದ ಸೂಚನೆಗಳೇನು?*

*ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ದಾಟಿಸಿದ ಸಂದೇಶವೇನು?*

ಇಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ. ಕೆ. ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳಿಗೆ ಅಪರಾಧ ವಿಮರ್ಶನಾ ಸಭೆ ನಡೆಸಿ, ಸಭೆಯಲ್ಲಿ ಹಾಜರಿದ್ದ ಪೊಲೀಸ್ ಅಧಿಕಾರಿಗಳಿಗೆ ಹಲವು ಮಹತ್ವದ ಸೂಚನೆಗಳನ್ನು ನೀಡಿದರು.

ತನಿಖೆಯಲ್ಲಿರುವ ಪ್ರಕರಣಗಳ ವಿಮರ್ಶೆ ನಡೆಸಿ ಕಾಲ ಮಿತಿಯೊಳಗೆ ಸದರಿ ಪ್ರಕರಣಗಳ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸುವಂತೆ, ಸಂಬಂಧಪಟ್ಟ ತನಿಖಾಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ಗಾಂಜಾ ಮಾರಾಟ, ಸಾಗಾಣಿಕೆ, ಸಂಗ್ರಹಣೆ, ಬೆಳೆಯುವ ಮತ್ತು ಸೇವನೆಯ ಬಗ್ಗೆ ತಳ ಮಟ್ಟದ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿ NDPS ಕಾಯ್ದೆಯಡಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳುವುದು.

ಮಾದಕ ದ್ರವ್ಯ ವ್ಯಸನದ ಬಗ್ಗೆ ಯುವ ಜನತೆ ಮತ್ತು ವಿಧ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಂಬಂಧ ಠಾಣಾ ವ್ಯಾಪ್ತಿಯ ಶಾಲಾ ಕಾಲೇಜು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಹೆಚ್ಚು ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ವಿಧ್ಯಾರ್ಥಿಗಳಲ್ಲಿ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು.
ಸಮುದಾಯದತ್ತ ಪೊಲೀಸ್ ನ ಭಾಗವಾಗಿ ಠಾಣಾ ವ್ಯಾಪ್ತಿಯಲ್ಲಿ ಬೀಟ್ ಸಮಿತಿ ಸಭೆ, ಮೊಹಲ್ಲಾ ಸಭೆ, ನೊಂದವರ ಸಭೆ, ಯುವಜನ ಸಭೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳವರ ಸಭೆ ಮತ್ತು ಜನಸಂಪರ್ಕ ಸಭೆಗಳನ್ನು ನಿರಂತರವಾಗಿ ಮತ್ತು ಕಡ್ಡಾಯವಾಗಿ ನಡೆಸುವುದು.

ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಹಗಲು ಗಸ್ತು ಮತ್ತು ರಾತ್ರಿ ಗಸ್ತನ್ನು ಜಾರಿ ಮಾಡತಕ್ಕದ್ದು ಹಾಗೂ ಸಿಬ್ಬಂಧಿಗಳನ್ನು ಗಸ್ತಿಗೆ ನೇಮಕ ಮಾಡುವ ಸಂದರ್ಭದಲ್ಲಿ ಆಯಾ ಬೀಟ್ ವ್ಯಾಪ್ತಿಯಲ್ಲಿನ ಎಂಓಬಿ, ರೌಡಿ ಹಾಗೂ ಪೂರ್ವ ಸಜಾ ಆಸಾಮಿಗಳ ಚಟುವಟಿಕೆಗಳ ಬಗ್ಗೆ ಪರಿಶೀಲಿಸುವಂತೆ ಸೂಕ್ತ ನಿರ್ದೇಶನಗಳನ್ನು ನೀಡುವುದು ಮತ್ತು ಗಸ್ತು ಮಾಡುವಾಗ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು ಸ್ಮಾರ್ಟ್ ಇ-ಬೀಟ್, ಎಂಸಿಸಿಟಿಎನ್.ಎಸ್ ತಂತ್ರಾಂಶಗಳನ್ನು ಕಡ್ಡಾಯವಾಗಿ ಬಳಕೆ ಮಾಡುವುದು.

ಪೊಲೀಸ್ ಠಾಣೆಗೆ ಬರುವ ದೂರುದಾರರ ದೂರುಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಕಾನೂನಿನ ಚೌಕಟ್ಟಿನ ಒಳಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಮತ್ತು ಠಾಣೆಗೆ ಭೇಟಿ ನೀಡುವ ದೂರುದಾರರ ಮಾಹಿತಿಯನ್ನು ಸಂದರ್ಶಕರ ನೋಂದಣಿ ಪುಸ್ತಕದಲ್ಲಿ ಮತ್ತು ವಿಸಿಟರ್ಸ್ ಹೆಲ್ಪ್ ಡೆಸ್ಕ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ನಮೂದು ಮಾಡಿ, ಲೋಕಸ್ಪಂದನ ಕ್ಯೂಆರ್ ಕೋಡ್ ಅನ್ನು ಸಮರ್ಪಕವಾಗಿ ಬಳಕೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವುದು.

ಈಗಾಗಲೇ ಕಾಲ್ನಡಿಗೆ ಮತ್ತು ಏರಿಯಾ ಡಾಮಿನೇಷನ್ ವಿಶೇಷ ಗಸ್ತನ್ನು ನಡೆಸಲಾಗುತ್ತಿದ್ದು, ಇದೇ ರೀತಿ ಠಾಣಾ ವ್ಯಾಪ್ತಿಯಲ್ಲಿನ ಸೂಕ್ಷ್ಮ ಪ್ರದೇಶ ಹಾಗೂ ಹೊರ ವಲಯಗಳಲ್ಲಿ ಕಾಲ್ನಡಿಗೆ ಮತ್ತು ಏರಿಯಾ ಡಾಮಿನೇಷನ್ ವಿಶೇಷ ಗಸ್ತನ್ನು ನಿರಂತರವಾಗಿ ನಡೆಸಿ, ಸಾರ್ವಜನಿಕವಾಗಿ ಉಪಟಳ ನೀಡುವುದು ಕಂಡು ಬಂದಲ್ಲಿ, ಅಂತವರ ವಿರುದ್ಧ ಲಘು ಪ್ರಕಣಗಳನ್ನು ದಾಖಲಿಸುವುದು ಹಾಗೂ ಮಾದಕ ವಸ್ತು ಗಾಂಜಾ ಸೇವನೆಯ ಬಗ್ಗೆ ಅನುಮಾನ ಬಂದವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಮಾದಕ ದ್ರವ್ಯ ಸೇವನೆ ದೃಢ ಪಟ್ಟವರ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದು.

ಚೆನ್ನಮ್ಮ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ* ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಶಾಲಾ ಕಾಲೇಜುಗಳ ಪ್ರಾರಂಭ ಮತ್ತು ಮುಕ್ತಾಯದ ಸಂದರ್ಭದಲ್ಲಿ ಶಾಲಾ ಕಾಲೇಜುಗಳ ಹತ್ತಿರ, ಪಾರ್ಕ್, ಬಸ್ ನಿಲ್ದಾಣ ಹಾಗೂ ಇತರೆ ಜನ ನಿಭಿಡ ಪ್ರದೇಶಗಳಲ್ಲಿ ಗಸ್ತು ಮಾಡುವುದು. ಈ ಸಂದರ್ಭದಲ್ಲಿ ಸಾರ್ವಜನಿಕ ಉಪಟಳ ನೀಡುವುದು, ಚುಡಾಯಿಸುವುದು / ತೊಂದರೆ ನೀಡುವುದು* ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದು.

ಸಂಘಟಿತ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಠಾಣಾ ವ್ಯಾಪ್ತಿಯಲ್ಲಿ ತಳ ಮಟ್ಟದ ಮಾಹಿತಿಯನ್ನು ಕಲೆ ಹಾಕಿ ದಾಳಿ ನಡೆಸಿ, ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳುವುದು.

ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಅಪಘಾತ ಸ್ಥಳಗಳಿಗೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿ, ಸಂಚಾರ ಸೂಚನಾ ಫಲಕಗಳು, ರಂಬಲ್ ಸ್ಟ್ರಿಪ್ಸ್, ಕ್ಯಾಟ್ ಐಸ್, ರೋಡ್ ಹಂಪ್ಸ್ ಗಳನ್ನು ಅಳವಡಿಸುವ ಮೂಲಕ ಅಪಘಾತ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ ಪಿ ಅನಿಲ್ ಕುಮಾರ್ ಭೂಮರಡ್ಡಿ ಡಿವೈಎಸ್ ಪಿಗಳಾದ ಬಾಭು ಆಂಜನಪ್ಪ, ಸುರೇಶ್ ಎಂ., ಗೋಪಾಲಕೃಷ್ಣ ಟಿ ನಾಯಕ್, ಗಜಾನನ ವಾಮನ ಸುತಾರ ಮತ್ತು ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ನಿರೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಪೊಲೀಸ್ ಉಪ ನಿರೀಕ್ಷಕರು ಉಪಸ್ಥಿತರಿದ್ದರು.