ಪೊಲೀಸ್ ಇಲಾಖೆಗೆ ಹ್ಯಾಟ್ಸಪ್*ಶಿವಮೊಗ್ಗದ ರಾಗಿಗುಡ್ಡದಲ್ಲಿ ಸೌಹಾರ್ದತೆ ಮೆರೆದ ಸರ್ವಧರ್ಮೀಯರು!ಪೆಂಡಾಲ್ ಗೆ ಹೋಗಿ ಗಣೇಶ ಪೂಜೆ ಮಾಡಿದರು!ಈದ್ ಮಿಲಾದ್ ಆಚರಣೆಯೂ ಜೊತೆ ಜೊತೆಗೇ ನಿಂತು ಆಚರಿಸಲಿದ್ದಾರೆ…

*ಪೊಲೀಸ್ ಇಲಾಖೆಗೆ ಹ್ಯಾಟ್ಸಪ್*

ಶಿವಮೊಗ್ಗದ ರಾಗಿಗುಡ್ಡದಲ್ಲಿ
ಸೌಹಾರ್ದತೆ ಮೆರೆದ ಸರ್ವಧರ್ಮೀಯರು!

ಪೆಂಡಾಲ್ ಗೆ ಹೋಗಿ ಗಣೇಶ ಪೂಜೆ ಮಾಡಿದರು!

ಈದ್ ಮಿಲಾದ್ ಆಚರಣೆಯೂ ಜೊತೆ ಜೊತೆಗೇ ನಿಂತು ಆಚರಿಸಲಿದ್ದಾರೆ…

ಕಳೆದ ಬಾರಿ ಶಿವಮೊಗ್ಗವನ್ನು ಸೂಕ್ಷ್ಮ ಪರಿಸ್ಥಿತಿಗೆ ತಳ್ಳಿದ್ದ ರಾಗಿಗುಡ್ಡದ ಕ್ಷುಲ್ಲಕ ಘಟನೆ ತಲೆ ತಗ್ಗಿಸುವಂತೆ ಮಾಡಿತ್ತು. ಇದೀಗ ಅದೇ ರಾಗಿಗುಡ್ಡದಲ್ಲಿ ತಲೆ ಎತ್ತಿ ಗೌರವಿಸುವ ಕೆಲಸ ನಡೆದಿದೆ. ಅಲ್ಲೀಗ ಸರ್ವಧರ್ಮದವರೂ ಒಂದಾಗಿ ನಿಂತು ಪರಸ್ಪರ ಹಬ್ಬಗಳನ್ನು ಆಚರಿಸುತ್ತಿದ್ದಾರೆ!

ಸೆ.10ರ ಸಂಜೆ ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ರಾಗಿಗುಡ್ಡದಲ್ಲಿ ಶಾಂತಿ ಪಡೆ ಸಮಿತಿಯ ಸದಸ್ಯರು, ರಾಗಿಗುಡ್ಡದ ಹಿಂದೂ ಮುಸ್ಲಿಂ ಬಾಂಧವರು, ಪೊಲೀಸರು ಗಣೇಶ ಮೂರ್ತಿಗಳು ಪ್ರತಿಷ್ಠಾಪನೆ ಆದ ಪೆಂಡಾಲ್ ಗಳಿಗೆ ಭೇಟಿ ನೀಡಿದರು. ಪ್ರತಿಷ್ಠಾಪಿಸಲ್ಪಟ್ಟಿದ್ದ ಗಣೇಶ ಮೂರ್ತಿಗಳಿಗೆ ಸೌಹಾರ್ದತಾ ಪೂಜೆ ಸಲ್ಲಿಸಿ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ.

ನಮ್ಮದು ಸರ್ವ ಧರ್ಮೀಯರ ದೇಶ. ವಿವಿಧತೆಯಲ್ಲಿ ಏಕತೆ ಸಾರುವ ಜನ ನಾವು. ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಮೂಲಕ ನಾವು ಭಾವೈಕ್ಯತೆ, ಸೌಹಾರ್ದತೆ ಮತ್ತು ಒಗ್ಗಟ್ಟನ್ನು ತೋರಿಸಬೇಕಿದೆ.ಪೊಲೀಸ್ ಇಲಾಖೆಯ ಎಲ್ಲಾ ರೀತಿಯ ಸಹಕಾರ ಇದಕ್ಕೆ ಸಿಗುತ್ತಿದೆ. ಈ ಸೌಹಾರ್ದತಾ ವಾತಾವರಣಕ್ಕೆ ಪೊಲೀಸರು ನಿರಂತರವಾಗಿ ಶ್ರಮಿಸುತ್ತಾ ಯಶಸ್ವಿಯಾಗಿದ್ದಾರೆ. ಇದು ಪೊಲೀಸರ ಶ್ಲಾಘನೀಯ ಕೆಲಸಕ್ಕೆ ಸಾಕ್ಷಿ. ಕಳೆದ ಬಾರಿ ಕೆಲ ಕೆಟ್ಟ ಮನಸುಗಳಿಂದ ಕಹಿ ಘಟನೆಗಳಾದವು. ಈ ಬಾರಿ ಹಾಗಾಗಲು ನಾವೇ ಬಿಡುವುದಿಲ್ಲ. ಎಲ್ಲಾ ಹಬ್ಬಗಳನ್ನು ಎಲ್ಲರೂ ಆಚರಿಸುವ ಮೂಲಕ ಸೌಹಾರ್ದತೆ ಕಾಪಾಡುತ್ತೇವೆ ಎಂದು ಹಿರಿಯರು ಅಭಿಪ್ರಾಯ ಪಟ್ಟರು.

ರಾಗಿಗುಡ್ಡದ ನೂರ್ ಮಸೀದಿಯ ಅಧ್ಯಕ್ಷ ಬಾಷಾಸಾಬ್, ಉಪಾಧ್ಯಕ್ಷ ಸಾದಿಖ್, ವಕೀಲ ರಾಮಚಂದ್ರ, ದೇವಸ್ಥಾನ ಸಮಿತಿ ಸದಸ್ಯ ಗಾರೆ ನಾಗಣ್ಣ, ಪ್ರಮುಖರಾದ ಬಸವರಾಜ್, ನಾಗರತ್ನಮ್ಮ, ರುದ್ರೋಜಿರಾವ್ ಮಾರುತಿ, ಬಾಷಾಸಾಬ್, ಸೈಯದ್ ಅಕ್ರಮ್, ಶಿವಮೊಗ್ಗ ಗ್ರಾಮಾಂತರ ಸಿಪಿಐ ಸತ್ಯನಾರಾಯಣ, ಉಪ ನಿರೀಕ್ಷಕಿ ಸ್ವಪ್ನ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.