ನಗರದ ಆಸ್ತಿ ಮಾಲೀಕರ ಸ್ವತ್ತಿನ ದಾಖಲೆಗಳನ್ನು ಸೃಜಿಸಲು ನಕ್ಷಾ ಯೋಜನೆ ಸಹಕಾರಿ : ಸಚಿವ ಎಸ್. ಮಧು ಬಂಗಾರಪ್ಪ

ನಗರದ ಆಸ್ತಿ ಮಾಲೀಕರ ಸ್ವತ್ತಿನ ದಾಖಲೆಗಳನ್ನು ಸೃಜಿಸಲು ನಕ್ಷಾ ಯೋಜನೆ ಸಹಕಾರಿ : ಸಚಿವ ಎಸ್. ಮಧು ಬಂಗಾರಪ್ಪ

ನಗರ ಮತ್ತು ಪಟ್ಟಣ ಪ್ರದೇಶದಲ್ಲಿನ ಸಾರ್ವಜನಿಕರ ಅಸ್ತಿಗಳ ಭೂ ಮಾಲೀಕತ್ವದ ಕುರಿತು ಪ್ರತಿಯೊಬ್ಬ ನಾಗರಿಕರಿಗೆ ಸರ್ಕಾರದಿಂದಲೇ ಅಸ್ತಿಯ ಮಾಲೀಕತ್ವ ಪ್ರಮಾಣ ಪತ್ರವನ್ನು ಒದಗಿಸಿ ಕಾನೂನಾತ್ಮಕ ಸ್ಪಷ್ಟತೆ ಒದಗಿಸುವುದರ ಜೊತೆಗೆ ವಿವಾದಗಳನ್ನು ಪರಿಹರಿಸಿ ಅತಿಕ್ರಮಣಗಳನ್ನು ತಡೆಯಲು ನಕ್ಷಾ ಯೋಜನೆ ಸಹಕಾರಿಯಾಗಲಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು.

ಅವರು ಇಂದು ಸೊರಬ ತಾಲ್ಲೂಕು ಆನವಟ್ಟಿಯ ಪಟ್ಟಣ ಪಂಚಾಯಿತಿ ಆವರಣದಲ್ಲಿ ಕಂದಾಯ ಇಲಾಖೆ, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ, ಹಾಗೂ ಪೌರಾಡಳಿತ ಇಲಾಖೆಯ ಸಹಯೋಗದಲ್ಲಿ ನಗರದ ಆಸ್ತಿ ಮಾಲೀಕರಿಗೆ ಸರ್ಕಾರದ ವತಿಯಿಂದಲೇ ಸರ್ವೇ ನಡೆಸಿ, ದಾಖಲೆಗಳನ್ನು ಸೃಜಿಸಿ, ಉಚಿತವಾಗಿ ನೀಡುವ ನಕ್ಷಾ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ರಾಜ್ಯ ಸರ್ಕಾರವು ಇದೆ ಮೊದಲ ಬಾರಿಗೆ ರಾಜ್ಯದ ಹತ್ತು ಜಿಲ್ಲೆಗಳ ಆಯ್ದ ಹತ್ತು ಪ್ರದೇಶಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಿದ್ದು, ಶಿವಮೊಗ್ಗ ಜಿಲ್ಲೆಯ ಅನವಟ್ಟಿಯನ್ನು ಆಯ್ಕೆ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗುವುದು ಎಂದರು.

ಅಸ್ತಿಗಳ ಮಾಲೀಕರು ತಮ್ಮ ಅಸ್ತಿ ಹಕ್ಕುಗಳಿಗೆ ಮೂಲ ದಾಖಲೆಯಾಗಿ ಈ ದಾಖಲೆಯನ್ನು ಪರಿಗಣಿಸಬಹುದಾಗಿದೆ ಅಲ್ಲದೆ ಮಾಲೀಕತ್ವವನ್ನು ಕಾನೂನಾತ್ಮಕರಾಗಿ ಹಾಗೂ ದಾಖಲೆಗಳ ಮೂಲಕ ಖಚಿತಪಡಿಸಿಕೊಳ್ಳಬಹುದಾಗಿದೆ ಎಂದರು.

ಭೂದಾಖಲೆಗಳ ಕಾಲೋಚಿತಗೊಳಿಸುವಿಕೆಯಿಂದ ಪರಿಣಾಮಕಾರಿಯಾಗಿ ನಗರ ಯೋಜನೆಯನ್ನು ಸುಗಮಗೊಳಿಸಳು ಸಾಧ್ಯವಾಗಲಿದೆ. ಸ್ಥಳೀಯ ಪ್ರಾಧಿಕಾರಿಗಳು ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಮತ್ತು ವಲಯ ನಿಯಮಾವಳಿಗಳನ್ನು ಜಾರಿಗೆ ತರಲು ಅನುವು ಮಾಡಿಕೊಡುವಲ್ಲಿ ಅನುಕೂಲವಾಗಲಿದೆ ಎಂದರು.

ಭೂಮಿಯ ಬಳಕೆಯ ವಿವರಗಳನ್ನು ನಿರ್ಣಯಿಸಿ, ವಸತಿ, ಸಾರಿಗೆ ಮತ್ತು ಇತರೆ ಸೇವೆಗಳನ್ನು ಒದಗಿಸುವಲ್ಲಿ ನಕ್ಷಾ ಸಹಾಯಕವಾಗಲಿದೆ ಅಲ್ಲದೆ ಆಸ್ತಿ ಮೌಲ್ಯಗಳನ್ನು ನಿರ್ಣಯಿಸಲು, ತೆರಿಗೆಗಳನ್ನು ನ್ಯಾಯಯುತವಾಗಿ ವಿಧಿಸಲು ಮತ್ತು ಪರಿಣಾಮಕಾರಿಯಾಗಿ ಸಂಗ್ರಹಿಸಲು ಸಹಕಾರಿಯಾಗುವ ನಿರೀಕ್ಷೆ ಇದೆ ಎಂದರು.

ಹೂಡಿಕೆದಾರರಿಗೆ ಭೂಮಿಯ ಮಾಲೀಕತ್ವದ ನಿಖರತೆಯಿಂದ ಭೂಮಿಯ ಬಳಕೆಯನ್ನು ಹೆಚ್ಚಿನ ರೀತಿಯಲ್ಲಿ ಉತ್ತಮವಾಗಿ ಬಳಸಲು ಸಹಾಯಕವಾಗಲಿದೆ ಎಂದರು.

ವಿಶೇಷವಾಗಿ ಸರ್ಕಾರಿ ಶಾಲೆ ಸೇರಿದಂತೆ ವಿವಿಧ ಇಲಾಖೆಗಳ ಅಸ್ತಿಯನ್ನು ಗುರುತಿಸಿ, ಸಂರಕ್ಷಣೆ ಮಾಡಲು ಅನುಕೂಲವಾಗಲಿದೆ. ಅಲ್ಲದೆ ಜನರು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿದಂತಾಗಲಿದೆ, ಎಂದ ಅವರು ಸೊರಬ ತಾಲೂಕಿನಲ್ಲಿ ಸುಮಾರು 75ಲಕ್ಷ ಅಸ್ತಿಗಳಿದ್ದು, ಮುಂದಿನ ಆರು ತಿಂಗಳೊಳಗಾಗಿ ದಾಖಲೆಗಳನ್ನು ಸೃಜಿಸುವ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.

ಇದೆ ಸಂದರ್ಭದಲ್ಲಿ ಉಪಹಾರದೊಂದಿಗೆ ಪೌರಕಾರ್ಮಿಕರ ಅಹವಾಲುಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ಸಾಗರ ಉಪವಿಭಾಗಾಧಿಕಾರಿ ಯತೀಶ್, ಭೂ ಮಾಪನ ಇಲಾಖೆಯ ಉಪನಿರ್ದೇಶಕ ಪಿ. ಶ್ರೀನಿವಾಸ್, ಸರ್ವೇ ಆಫ್ ಇಂಡಿಯಾದ ಪ್ರತಿನಿಧಿ ರಮೇಶ್, ಶ್ರೀಮತಿ ಮಂಜುಳಾ ಹೆಗಡಾಳ್, ಸಂತೋಷಕುಮಾರ್ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಪೌರಸೇವಾ ಕಾರ್ಮಿಕರು, ಸಾರ್ವಜನಿಕರು ಉಪಸ್ಥಿತರಿದ್ದರು.