ಮಹಾನಗರ ಪಾಲಿಕೆ ಆಯುಕ್ತೆ ಕವಿತಾ, ಕುವೆಂಪು ವಿವಿಯ ಶರತ್ ಅನಂತಮೂರ್ತಿ, ಜಿಪಂ ಸಿಇಓ ಹೇಮಂತ್, ಎಪಿಎಂಸಿ ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ ಸಾರ್ವಜನಿಕರು… *ಸಾರ್ವಜನಿಕರಿಂದ 350 ಕ್ಕೂ ಹೆಚ್ಚು ದೂರು : ಉಪ ಲೋಕಾಯುಕ್ತರಿಂದ 70ಕ್ಕೂ ಹೆಚ್ಚು ದೂರುಗಳ ಪರಿಹಾರ-ವಿಲೇವಾರಿ* ನಾಳೆಯೂ ಬಂದ ದೂರುಗಳ ಪರಿಶೀಲನೆ ನಡೆಯಲಿದೆ ಕುವೆಂಪು ರಂಗಮಂದಿರದಲ್ಲಿ…

ಮಹಾನಗರ ಪಾಲಿಕೆ ಆಯುಕ್ತೆ ಕವಿತಾ, ಕುವೆಂಪು ವಿವಿಯ ಶರತ್ ಅನಂತಮೂರ್ತಿ, ಜಿಪಂ ಸಿಇಓ ಹೇಮಂತ್, ಎಪಿಎಂಸಿ ಕಾರ್ಯದರ್ಶಿ ನಾಗರಾಜ್ ಸೇರಿದಂತೆ ಲೋಕಾಯುಕ್ತಕ್ಕೆ ದೂರು ನೀಡಿದ ಸಾರ್ವಜನಿಕರು…

*ಸಾರ್ವಜನಿಕರಿಂದ 350 ಕ್ಕೂ ಹೆಚ್ಚು ದೂರು : ಉಪ ಲೋಕಾಯುಕ್ತರಿಂದ 70ಕ್ಕೂ ಹೆಚ್ಚು ದೂರುಗಳ ಪರಿಹಾರ-ವಿಲೇವಾರಿ*

ನಾಳೆಯೂ ಬಂದ ದೂರುಗಳ ಪರಿಶೀಲನೆ ನಡೆಯಲಿದೆ ಕುವೆಂಪು ರಂಗಮಂದಿರದಲ್ಲಿ…

ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಜನರು ಸರ್ಕಾರಿ ಅಧಿಕಾರಿಗಳ ವಿರುದ್ದ, ಸರ್ಕಾರಿ ಕೆಲಸ ಪಡೆಯುವಲ್ಲಿ ಆಗುತ್ತಿರುವ ವಿಳಂಬ ಇತರೆ ಕುರಿತು ಮಾನ್ಯ ನ್ಯಾಯಮೂರ್ತಿಗಳು ಹಾಗೂ ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಇವರಿಗೆ ನೇರವಾಗಿ ದೂರು ಸಲ್ಲಿಸಿದರು.
“ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ದೂರು ಸ್ವೀಕಾರ, ವಿಚಾರಣೆ ಹಾಗೂ ವಿಲೇವಾರಿ ಸಭಾ ಕಾರ್ಯಕ್ರಮದಲ್ಲಿ ಬುಧವಾರ ಬೆಳಿಗ್ಗೆ 10 ರಿಂದ ಸಂಜೆ  5 ರವೆಗೆ ವಿವಿಧ ಸರ್ಕಾರಿ ಇಲಾಖೆಗಳು, ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸುಮಾರು 350ಕ್ಕೂ ಹೆಚ್ಚಿನ ದೂರುಗಳು ಸ್ವೀಕೃತಗೊಂಡಿದ್ದು, ವಿಚಾರಣೆ ಕೈಗೊಂಡು, 70ಕ್ಕಿಂತ ಹೆಚ್ಚು  ಅರ್ಜಿಗಳನ್ನು ಮಾನ್ಯ ಉಪ ಲೋಕಾಯುಕ್ತರು ವಿಲೇವಾರಿ ಮಾಡಿದರು.

ಮಹಾನಗರಪಾಲಿಕೆ, ಕಂದಾಯ ಇಲಾಖೆ, ಗ್ರಾ.ಪಂ ಗಳು, ಕುವೆಂಪು ವಿಶ್ವವಿದ್ಯಾಲಯ, ಅರಣ್ಯ ಇಲಾಖೆ, ಪಿಡಬ್ಲುö್ಯಡಿ, ಸಹಕಾರ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವಿರುದ್ದ ಅರ್ಜಿದಾರರು ದೂರನ್ನು ಸಲ್ಲಿಸಿದರು.

ಉಪ ಲೋಕಾಯುಕ್ತರು ಸದರಿ ದೂರುಗಳ ವಿಚಾರಣೆ ನಡೆಸಿ, ಸಂಜೆ ಹೊತ್ತಿಗೆ ಸ್ಥಳದಲ್ಲೇ 70 ಅರ್ಜಿಗಳನ್ನು ವಿಲೇವಾರಿ ಮಾಡಿದರು. ತಮ್ಮ ವ್ಯಾಪ್ತಿಗೆ ಒಳಪಡದ ಪ್ರಕರಣಗಳಿಗೆ ಎಲ್ಲಿ ಹೋಗಬೇಕೆಂದು ಮಾರ್ಗದರ್ಶನ ಮಾಡಿದರು. ರೂ.3 ಲಕ್ಷದೊಳಗಿನ ಆದಾಯ ಇರುವ ದೂರುದಾರರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ಪಡೆಯಲು ಸಲಹೆ ನೀಡಿದರು.
ಶಿವಮೊಗ್ಗ ತಾಲ್ಲೂಕಿನ ಭಾಗೀರಥಮ್ಮ ನವರು ಪೌತಿಯಾದ ಪತಿಯ ಮೂರನೇ ಪತ್ನಿಯಾಗಿದ್ದು ತಮ್ಮ ಪತಿಯ ಪಿಂಚಣಿ ಪಡೆಯುವ ಸಂಬಂಧ ಮರಣ ಪ್ರಮಾಣ ಪತ್ರ ಇತರೆ ದಾಖಲೆ ಕೋರಿ ಅರ್ಜಿ ಸಲ್ಲಿಸಿದ ಸಂಬಂಧ ದೂರು ನೀಡಿದ್ದು, ಈ ಕುರಿತು ವಿಚಾರಣೆ ನಡೆಸಿದ ಉಪ ಲೋಕಾಯುಕ್ತರು ಈ ಅರ್ಜಿಯು ತಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ, ಎಸಿ ಯವರಿಗೆ ಮೇಲ್ಮನವಿ ಸಲ್ಲಿಸುವಂತೆ ತಿಳಿಸಿದರು.

ಭದ್ರಾವತಿ ತಾಲ್ಲೂಕಿನ ಸಿದ್ಲೀಪುರ ಗ್ರಾಮದ ರವಿ ಆರ್ ಎಂಬುವವರು ಭದ್ರಾವತಿ ತಹಶೀಲ್ದಾರರು, ಎಡಿಎಲ್‌ಆರ್ ವಿರುದ್ದ ದೂರು ಸಲ್ಲಿಸಿ, ಪೋಡಿ ಮಾಡಿಕೊಡುವಂತೆ ಕೋರಿದರು. ಉಪ ಲೋಕಾಯುಕ್ತರು, ದೂರುದಾರರಿಗೆ ನಿಯಮಾನುಸಾರ ಪೋಡಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು.

ಕುವೆಂಪು ವಿವಿ ಯ ಪ್ರೊ. ರವೀಂದ್ರ ಅವರು ಹಳೆ ಪಿಂಚಣಿಯನ್ನು ಮುಂದುವರೆಸುವಂತೆ ಕುವೆಂಪು ವಿವಿಯ ಕುಲಪತಿಗಳಾದ ಪ್ರೊ.ಶರತ್ ಅನಂತಮೂರ್ತಿ ವಿರುದ್ದ ದೂರು ಸಲ್ಲಿಸಿದ್ದು, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ವಿಶ್ವವಿದ್ಯಾಲಯದಲ್ಲೇ ಈ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ತಿಳಿಸಿದರು.

ವಿನೋಬನಗರದ ಎಸ್.ಸಿ.ಪ್ರಕಾಶ್‌ರವರು ಕಟ್ಟಡದಲ್ಲಿ ಬಹು ಮಹಡಿಗಳನ್ನು ಕಟ್ಟುತ್ತಲೇ ಹೋಗುತ್ತಿರುವ ಬಗ್ಗೆ ಪಾಲಿಕೆಯ ಆಯುಕ್ತರ ವಿರುದ್ಧ ದೂರು ನೀಡಿದಾಗ, ಲೋಕಾಯುಕ್ತರು ಈ ಕುರಿತಂತೆ ಸಂಬಂಧಿಸಿದ ಪಾಲಿಕೆ ಆಯುಕ್ತರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ವಿದ್ಯಾನಗರದ ಜಿ.ಪಿ.ಚಂದ್ರಶೇಖರಪ್ಪ ಸರ್ವೇ ನಂ 8 ರಲ್ಲಿ ನಿರ್ಮಾಣವಾಗಿರುವ ಕಾಲುವೆ ತರೆವುಗೊಳಿಸುವಂತೆ ಪಾಲಿಕೆಯ ಆಯುಕ್ತರ ವಿರುದ್ಧ ದೂರ ಸಲ್ಲಿಸಿದ್ದು, ಲೋಕಾಯುಕ್ತರು ಈ ಕಾಲವೆಯ ಸ್ಥಳ ಪರಿಶೀಲನೆ ಮಾಡಲು ಸೂಚಿಸಿ, ಒಂದು ವೇಳೆ ಕಾಲುವೆ ಅವರ ಜಾಗದಲ್ಲಿ ಹೋಗಿದ್ದರೆ ಅದಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ತಿಳಿಸಿದರು.

ಕಾರ್ಗಲ್‌ನ ಸೀತಾಕಟ್ಟೆ ಜೋಗದ ಶಂಕರ್ ರವರು ಕಾರ್ಗಲ್‌ನ ವಲಯ ಅರಣ್ಯಾಧಿಕಾರಿಗಳು ತಮ್ಮ ಅರ್ಜಿ ಬಾಕಿ ಇರುವಾಗಲೆ ಕಾನೂನು ಬಾಹಿರವಾಗಿ ಜಮೀನಿನಿಂದ ನಮ್ಮನ್ನು ಒಕ್ಕಲೆಬ್ಬಿಸಿದ್ದಾರೆ ಎಂದು ದೂರು ನೀಡಿದ್ದು, ಲೋಕಾಯುಕ್ತರು ಇದನ್ನು ಪರಿಶೀಲಿಸಿ ಕಾನೂನುಬಾಹಿರವಾಗಿ ಒಕ್ಕಲೆಬ್ಬಿಸಿದ್ದರೆ ಸೂಕ್ತ ಪರಿಹಾರ ನೀಡಬೇಕೆಂದು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರಿನ ಗಣೇಶ್ ರವರು ಗ್ರಾ. ಪಂ ಒಂದರ ಸದಸ್ಯರು ಪಿಡಿಓ ಸಹಿಯನ್ನು ನಕಲಿ ಮಾಡಿದ್ದು ಈ ಸಂಬಂಧ ಜಿ.ಪಂ ಸಿಇಓ ಹೇಮಂತ್ ಅವರ ವಿರುದ್ಧ ದೂರು ನೀಡಿದ್ದು, ಲೋಕಾಯುಕ್ತರು ಇದು ರೆಗ್ಯುಲರ್ ದೂರು ಆಗಿರುವುದರಿಂದ ನೀವು ಪೊಲೀಸರಿಗೆ ದೂರು ನೀಡಿ ಎಂದ ಅವರು ಜಿ.ಪಂ. ಸಿಇಓ ಗೆ ಪೂರ್ವಭಾವಿ ವರದಿ ನೀಡಿ ಎಂದು ತಿಳಿಸಿದರು.

ಶಿವಮೊಗ್ಗ ಅಶೋಕನಗರದ ಎ.ಸುಮತಿ ಮತ್ತು ಎ.ಸರೋಜರವರು ಪ್ರತ್ಯೇಕವಾಗಿ ವಾರ್ಡ್ ನಂ 31 ರ ವಿಷಯ ನಿರ್ವಾಹಕ ಗುರುಮೂರ್ತಿಯವರ ಕುರಿತು ಮನೆ ಖಾತೆ ವಿಚಾರವಾಗಿ ಪಾಲಿಕೆ ಆಯುಕ್ತರ ವಿರುದ್ಧ ದೂರು ನೀಡಿದರು. ಈ ದೂರಿನ ವಿಚಾರಣೆ ನಡೆಸಿ ಸ್ಥಳದಲ್ಲೇ ವಿಲೇವಾರಿ ಮಾಡಿ ದೂರುದಾರರಿಗೆ ಖಾತೆಗಳನ್ನು ನೀಡಲಾಯಿತು.

ಆದರ್ಶ ಪ್ರಾವಿಜನ್ ಸ್ಟೋರ್ ಮಾಲೀಕರು ಎಪಿಎಂಸಿಯ ಕಾರ್ಯದರ್ಶಿ ನಾಗರಾಜ ವಿರುದ್ಧ ದೂರು ನೀಡಿದ್ದು, ವಿಚಾರಣೆ ಕೈಗೊಂಡ ಉಪ ಲೋಕಾಯುಕ್ತರು ಇದು ಸಿವಿಲ್ ನ್ಯಾಯಾಲಯ ವ್ಯಾಪ್ತಿಗೆ ಬರುವುದರಿಂದ ಅಲ್ಲಿ ಪ್ರಕರಣ ದಾಖಲಿಸಲು ತಿಳಿಸಿದರು.

ಶಿವಮೊಗ್ಗ ಗೋಪಿ ಸರ್ಕಲ್‌ನ ಎಂ.ಎಸ್. ಅರುಂಧತಿ, ನಮ್ಮ ಕೈಗಾರಿಕಾ ಜಾಗದಲ್ಲಿ ಇತರೆ ವ್ಯಕ್ತಿ ಕಟ್ಟಡ ಕಟ್ಟಿಕೊಂಡಿದ್ದಾರೆ. ಅದನ್ನು ಬಿಡಿಸಿಕೊಡಬೇಕೆಂದು ಪಾಲಿಕೆ ಆಯುಕ್ತ ವಿರುದ್ಧ ದೂರು ನೀಡಿದ್ದು, ಇದು ಖಾಸಗಿ ವ್ಯಕ್ತಿಗಳ ನಡುವಿನ ವಿವಾದವಾದ್ದರಿಂದ ಇದನ್ನು ಕೋರ್ಟ್ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಲೋಕಾಯುಕ್ತರು ಸೂಚನೆ ನೀಡಿದರು.

ಶಿವಮೊಗ್ಗದ ಬಿ.ಮಂಜುನಾಥ್ ತಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣವಾಗಿದ್ದು ಅದನ್ನು ತೆರವುಗೊಳಿಸುವಂತೆ ಕೋರಿದರು. ಉಪ ಲೋಕಾಯುಕ್ತರು ಸದರಿ ರಸ್ತೆ ಸರ್ಕಾರಿ ಅಥವಾ ಖಾಸಗಿ ಜಮೀನಿನಲ್ಲಿ ಇದೆಯಾ ಎಂದು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು.

ಗೀತ ಮತ್ತು ಗ್ರಾಮಸ್ಥರು ಮೋಜಪ್ಪನ ಹೊಸೂರು ಅಬ್ಬಲಗೆರೆ ಇವರು ಗ್ರಾಮ ಆಡಳಿತ ಅಧಿಕಾರಿ ಯೋಗೇಶ್ ನಾಯಕ್ ವಿರುದ್ದ ಸಲ್ಲಿಸಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದ್ದು, ಇತ್ಯರ್ಥವಾದ ನಂತರ ಅರ್ಜಿ ಸಲ್ಲಿಸುವಂತೆ ತಿಳಿಸಿದರು.

ಬೆಳಿಗ್ಗೆಯಿಂದಲೇ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತದ ವತಿಯಿಂದ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದು ಸಾರ್ವಜನಿಕರಿಂದ ಕುಂದು ಕೊರತೆಗಳ ದೂರು ಅರ್ಜಿಗಳನ್ನು ಸ್ವೀಕರಿಸಿ ಅವರಿಗೆ ಟೋಕನ್ ನಂ. ನೀಡಿ ಸಭೆ ಸರಾಗವಾಗಿ ಜರುಗುವಂತೆ ವ್ಯವಸ್ಥೆ ಮಾಡಲಾಗಿತ್ತು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಜಿ.ಪಂ. ಸಿಇಓ ಎನ್. ಹೇಮಂತ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ನ್ಯಾಯಾಧೀಶರು ಮತ್ತು ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರು ಹಾಗೂ ವಿಚಾರಣೆಗಳು-14 ರ ಎನ್.ಆರ್. ಲೋಕಪ್ಪ, ಜಿಲ್ಲಾ ನ್ಯಾಯಾಧೀಶರು ಮತ್ತು ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರು ಹಾಗೂ ವಿಚಾರಣೆಗಳು-05 ರ ಜಿ.ವಿ. ವಿಜಯನಂದ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಎಂ.ಎಸ್ ಸಂತೋಷ್, ಸಿವಿಲ್ ನ್ಯಾಯಾಧೀಶರು ಮತ್ತು ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿಯಾದ ಕಿರಣ್ ಪಿ.ಎಂ. ಪಾಟೀಲ್, ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಂಜುನಾಥ್ ಚೌದರಿ, ಜಿಲ್ಲಾ ಅರಣ್ಯಾಧಿಕಾರಿ ಶಿವಶಂಕರ್, ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.