ಬಿಜೆಪಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ; ಗುಡುಗಿದ ಬಲ್ಕೀಶ್ ಬಾನು, ಆರ್.ಪ್ರಸನ್ನ ಕುಮಾರ್, ಕಿಮ್ಮನೆ ರತ್ನಾಕರ್

ಬಿಜೆಪಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ;

ಗುಡುಗಿದ ಬಲ್ಕೀಶ್ ಬಾನು, ಆರ್.ಪ್ರಸನ್ನ ಕುಮಾರ್, ಕಿಮ್ಮನೆ ರತ್ನಾಕರ್

ಶಿವಮೊಗ್ಗ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು   ರಾಹುಲ್ ಗಾಂಧಿ ವಿರುದ್ಧ  ನಿರ್ದೇಶನಾಲಯ (ಇಡಿ) ದಾಖಲಿಸಿದ ಪ್ರಕರಣವನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಎಂ ಎಲ್ ಸಿ ಶ್ರೀಮತಿ ಬಲ್ಕೀಶ್ ಬಾನು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ ಆಗ್ರಹಿಸಿದರು.
ಅವರು ಇಂದು ನಗರದ ಶೀನಪ್ಪ ಶೆಟ್ಟಿ ವೃತ್ತದಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಡೀಸೆಲ್ ಮತ್ತು ಅಡುಗೆ ಸಿಲಿಂಡ್ ಹೆಚ್ಚಳ ಮಾಡಿದವರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ತಮ್ಮ ವಿರುದ್ಧ ಕೇಂದ್ರ 25ಕೇಸ್ ಹಾಕಲಿ. ಹೆದರುವುದಿಲ್ಲ ಎಂದು ಈಗಾಗಲೇ ರಾಹುಲ್ ಗಾಂಧಿ ಉತ್ತರ ಕೊಟ್ಟಿದ್ದಾರೆ. ಅವರಿಗೆ ಅಧಿಕಾರ ಬೇಕಿಲ್ಲ. ಪ್ರಧಾನಿ ಆಗುವುದಿದ್ದರೆ ಯಾವಾಗಲೋ ಆಗಬಹುದಿತ್ತು. ಅವರಿಗೆ ಕೇವಲ ಕಾಂಗ್ರೆಸ್ ಕಟ್ಟುವ ಕೆಲಸ ಬೇಕು. ದೇಶದಲ್ಲಿ ಶಾಂತಿ, ಸೌಲಭ್ಯ ಸಿಗಬೇಕಾದರೆ ಕಾಂಗ್ರೆಸ್ ಬೇಕು ಎಂದರು.
ಬಜೆಪಿಯ ಜನಾಕ್ರೋಶದ ಯಾತ್ರೆಯ ದಿನದಂದೇ ಕೇಂದ್ರ ಸರ್ಕಾರ ಅಡುಗೆ ಸಿಲಿಂಡರ್ ಬೆಲೆ ಏರಿಸಿ ಬಡವರ ಹೊಟ್ಟೆ ಮೇಲೆ ಬರೆ ಎಳೆದಿದೆ.
ಮೋದಿ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ. ಆರ್.ಎಸ್.ಎಸ್.ಬಿಜೆಪಿ ಎರಡೂ ಒಂದೇ. ಧರ್ಮದ ಹೆಸರಲ್ಲಿ ವಿಷ ಬೀಜ ಬಿತ್ತುತ್ತಿವೆ. ಆರ್.ಅಶೋಕ್, ಬಿ.ವೈ.ವಿಜಯೇಂದ್ರ ಇಬ್ಬರೂ ಭ್ರಷ್ಟರು. ಬಿವೈವಿ ಅಪ್ಪನ ನಕಲಿ ಸಹಿ ಮಾಡಿ ಇಡೀ ಶಿಕಾರಿಪುರವನ್ನು ತಮ್ಮ ಆಸ್ತಿಯನ್ನಾಗಿಸಿಕೊಳ್ಳುತ್ತಿದ್ದಾರೆ. ಇವರ ಬಗ್ಗೆ ಜನ ಎಚ್ಚರದಿಂದ ಇರಬೇಕು ಎಂದು ಕಿವಿ ಮಾತು ಹೇಳಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ನ್ಯಾಷನಲ್ ಹೆರಾಲ್ಡ್ 1930ಕ್ಕೂ ಮೊದಲೇ ಆರಂಭಗೊಂಡ ಪತ್ರಿಕೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಸಿದ್ಧ ಪತ್ರಿಕೆ. ಸೋನಿಯಾ ಹಾಗೂ ರಾಹುಲ್ ಗಾಂಧಿಯವರು ಈ ಪತ್ರಿಕೆಯಲ್ಲಿ ಯಾವುದೇ ಹಣಕಾಸಿನ ಅವ್ಯವಹಾರ ಮಾಡದಿದ್ದರೂ ಪ್ರಧಾನಿ ಮೋದಿ ಹಾಗೂ ಅಮಿತ್ _ಷಾ ಅವರ ಕುಮ್ಮಕ್ಕಿನಿಂದ ಇಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕಿಡಿ ಕಾರಿದರು.
ರಾಹುಲ್ ಮುತ್ತಜ್ಜ ಮೋತಿಲಾಲ್ ನೆಹರು ಅವರು 20 ಸಾವಿರ ಕೋಟಿ ರೂ.ಬೆಲೆ ಬಾಳುವ ತಮ್ಮ ವಾಸದ ಮನೆ ಆನಂದ ಭವನವನ್ನು ದೇಶಕ್ಕೇ ಬರೆದುಕೊಟ್ಟಿದ್ದಾರೆ. ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ದೇಶಕ್ಕಾಗಿ ಜೈಲಿಗೆ ಹೋದವರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಮಡಿದಿದ್ದಾರೆ. ದೇಶದ ಏಕತೆ ಸಮಗ್ರತೆಗೆ ಹೋರಾಡಿದ್ದಾರೆ. ಆರ್.ಎಸ್.ಎಸ್. ಬಿಜೆಪಿಯವರು ದೇಶಕ್ಕಾಗಿ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರಿಗೆ ತಲೆ ಕೆಟ್ಟಿದೆ. ಅವರು ದೇಶದ ಇತಿಹಾಸವನ್ನೇ ಓದಿಕೊಂಡಿಲ್ಲ. ರಾತ್ರಿ ಪಾರ್ಟಿ ಮಾಡುತ್ತಾರೆ. ಬೆಳಿಗ್ಗೆ ಮಾಧ್ಯಮದವರ ಎದುರು ಬಂದು ಬಾಯಿಗೆ ಬಂದ ಹಾಗೆ ಮಾತಾಡ್ತಾರೆ ಎಂದು ಟೀಕಿಸಿದರು.
ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್,  ಎಸ್.ಕೆ.ಮರಿಯಪ್ಪ, ಇಸ್ಮಾಯಿಲ್ ಖಾನ್, ಕಲಗೋಡು ರತ್ನಾಕರ, ಕಲೀಂ ಪಾಷ,   ಎಸ್.ಪಿ.ಶೇಷಾದ್ರಿ, ಯು.ಶಿವಾನಂದ, ಶಮೀಮ್ ಬಾನು, ಅನಿತಾಕುಮಾರಿ, ವಿಜಯಲಕ್ಷ್ಮೀ ಪಾಟೀಲ್, ರೇಖಾ ರಂಗನಾಥ, ಎಸ್.ಟಿ.ಹಾಲಪ್ಪ, ಜಿ.ಪದ್ಮನಾಭ, ಶಿ.ಜು.ಪಾಶ, ಎನ್.ಕೆ.ಶಾಮಸುಂದರ್, ನಾಜಿಮಾ, ಟಿ.ಎಸ್.ಗಿರೀಶ್ ರಾವ್,ಎಸ್.ಟಿ.ಚಂದ್ರಶೇಖರ್, ಯಮುನಾ ರಂಗೇಗೌಡ,ಪಾಲಾಕ್ಷಿ, ಮಧುಸೂಧನ್, ಸಮೀನಾ ಕೌಸರ್, ಚೇತನ್, ಸ್ಟೆಲ್ಲಾ ಮಾರ್ಟಿನ್, ಪ್ರವೀಣ್ ಕುಮಾರ್ ಮೊದಲಾದವರಿದ್ದರು.