ಪ್ರಿಯಕರನ ಜೊತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪತ್ನಿ;* *ತಲೆಕಡಿದು ರುಂಡ ಸಮೇತ ಠಾಣೆಗೆ ಬಂದ ಪತಿ*

*ಪ್ರಿಯಕರನ ಜೊತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪತ್ನಿ;*

*ತಲೆಕಡಿದು ರುಂಡ ಸಮೇತ ಠಾಣೆಗೆ ಬಂದ ಪತಿ*

ಪತ್ನಿಯ ತಲೆ ಕತ್ತರಿಸಿ ರುಂಡ ಸಮೇತ ಪತಿ ಸೂರ್ಯನಗರ ಪೊಲೀಸ್​ ಠಾಣೆಗೆ ಬಂದಿರುವ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆ ಆನೇಕಲ್ (Anekal) ತಾಲೂಕಿನ ಹೀಲಲಿಗೆ ಗ್ರಾಮದಲ್ಲಿ ನಡೆದಿದೆ. ಹೆನ್ನಾಗರ ನಿವಾಸಿಯಾಗಿರುವ ಶಂಕರ್ (28) ಕೊಲೆ ಮಾಡಿರುವ ಆರೋಪಿ. ಹೆಬ್ಬಗೋಡಿ ನಿವಾಸಿ ಮಾನಸ (26) ಮೃತ ದುರ್ದೈವಿ. ಸೂರ್ಯನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಮಾನಸ ಮತ್ತು ಆರೋಪಿ ಶಂಕರ್ ಪ್ರೀತಿಸಿ ಮದುವೆ ಆಗಿದ್ದರು. ದಂಪತಿ ಒಂದು ತಿಂಗಳ ಹಿಂದೆ ಹೀಲಲಿಗೆ ಗ್ರಾಮದ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು. ಜೂನ್​ 3ರ ರಾತ್ರಿ ಶಂಕರ್ ಕೆಲಸದ ನಿಮಿತ್ತ ಹೊರಗೆ ಹೋಗಿದ್ದನು. ನಾಳೆ (ಜೂ.04) ಬೆಳಗ್ಗೆ ಬರುವುದಾಗಿ ಶಂಕರ್ ಪತ್ನಿ ಮಾನಸಗೆ ಹೇಳಿ ಹೋಗಿದ್ದನು. ಆದರೆ, ರಾತ್ರಿ ಬೇಗ ಕೆಲಸ ಮುಗಿತ್ತು. ಜೊತೆಗೆ ಮನೆಯಲ್ಲಿ ಪತ್ನಿ ಒಬ್ಬಳೇ ಇದ್ದಾಳೆಂದು ತಡರಾತ್ರಿಯೇ ಶಂಕರ ಮನೆಗೆ ಬಂದಿದ್ದನು.

ಮನೆಗೆ ಬಂದಾಗ ಶಂಕರಗೆ ಆಘಾತ ಕಾದಿತ್ತು. ಪತ್ನಿಯು ಪ್ರಿಯಕರನ ಜೊತೆ ಏಕಾಂತದಲ್ಲಿರುವುದನ್ನು ಪತಿ ಶಂಕರ್ ನೋಡಿದ್ದಾನೆ. ಇದರಿಂದ ಆಕ್ರೋಶಗೊಂಡ ಶಂಕರ್​​ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ. ನಂತರ, ನೀನು ನನಗೆ ಬೇಡ, ನಿನ್ನ ಪ್ರಿಯಕರ ಜೊತೆ ಹೋಗು ಅಂತ ಪತ್ನಿ ಮಾನಸಳನ್ನು ಪತಿ ಶಂಕರ್ ಮನೆಯಿಂದ ಆಚೆ ಹಾಕಿದ್ದಾನೆ.​ ಆದರೆ, ಪತ್ನಿ ಮಾನಸ ಪದೇ ಪದೇ ಮನೆಗೆ ಬಂದು ಪತಿ ಶಂಕರ್​ಗೆ ಟಾರ್ಚರ್ ಕೊಡುತ್ತಿದ್ದಳು. ಶುಕ್ರವಾರ (ಜೂ.06) ರಾತ್ರಿ ಸಹ ಮನೆಗೆ ಬಂದು ಪತಿ ಶಂಕರ ಜೊತೆ ಪತ್ನಿ ಮಾನಸ ಗಲಾಟೆ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಶಂಕರ ಪತ್ನಿ ಮಾನಸಳ ತಲೆ ಕಡಿದು ರುಂಡ ಸಮೇತ ಠಾಣೆಗೆ ಬಂದಿದ್ದಾನೆ. ಸೂರ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

*ಮಾನಸ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಮುಗಿಲನ್*

ಮಾನಸಳ ಪ್ರಿಯಕರನ ಹೆಸರು ಮುಗಿಲನ್. ಮುಗಿಲನ್ ಮತ್ತು ಮಾನಸ ಒಂದೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಸ್ನೇಹ ಬಳೆದು, ಸ್ನೇಹ ಅಕ್ರಮ ಸಂಬಂಧಕ್ಕೆ ತಿರುಗಿದೆ. ಪತಿ ಶಂಕರ್ ಮನೆಯಲ್ಲಿ ಇಲ್ಲದಿದ್ದಾಗ ಮುಗಿಲನ್ ಆಗಾಗ ಮನೆಗೆ ಬಂದು ಹೋಗುತ್ತಿದ್ದನು. ಜೂನ್​ 3ರ ತಾರೀಖು ರಾತ್ರಿ ಸಹ ಮುಗಿಲನ್ ಪ್ರೇಯಸಿ ಮಾನಸ ಮನೆಗೆ ಬಂದಿದ್ದನು. ಇಬ್ಬರನ್ನು ಶಂಕರ ರೆಡ್​ ಹ್ಯಾಂಡ್​ ಆಗಿ ಹಿಡಿದು ಹಲ್ಲೆ ಮಾಡಿದ್ದಾನೆ. ಮುಗಿಲನ್ ಪರಾರಿಯಾಗಿದ್ದಾನೆ.

*ಅಕ್ರಮ ಸಂಬಂಧದ ಬಗ್ಗೆ ಹೇಳುತ್ತಿರುವಾಗಲೇ ಪತ್ನಿಯ ಕೊಲೆ*

ಜೂ. 3 ರಂದು ಗಲಾಟೆಯಾದ ನಂತರ ಪತಿ ಶಂಕರ್ ಪತ್ನಿ ಮಾನಸಳನ್ನು ಮನೆಯಿಂದ ಹೊರ ಹಾಕಿದ್ದನು. ನಂತರ ಮಾನಸ ಪ್ರತ್ಯೇಕವಾಗಿ ಪಿಜಿಯಲ್ಲಿ ನೆಲೆಸಿದ್ದಳು. ಶುಕ್ರವಾರ (ಜೂ.06) ರಾತ್ರಿ ಗಂಡನ ಮನೆಗೆ ಬಂದು ಸೇರಿಸಿಕೊಳ್ಳುವಂತೆ ಪ್ರಾರ್ಥಿಸಿದ್ದಾಳೆ. ಆದರೆ, ಇದಕ್ಕೆ ಶಂಕರ್ ಒಪ್ಪದೆ ಅಕ್ರಮ ಸಂಬಂಧದ ಬಗ್ಗೆ ತಿಳಿಸುವಂತೆ ಹೇಳಿದ್ದಾನೆ. ಅಕ್ರಮ ಸಂಬಂಧದ ಬಗ್ಗೆ ವಿವರವಾಗಿ ಹೇಳುತ್ತಿದ್ದಂತೆ, ರೋಚ್ಚಿಗೆದ್ದ ಶಂಕರ ಮಚ್ಚಿನಿಂದ ಪತ್ನಿ ಮಾನಸಳ ತಲೆ ಕಡಿದು ಠಾಣೆಗೆ ತಂದು, ಪೊಲೀಸರಿಗೆ ಶರಣಾಗಿದ್ದಾನೆ.

ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಮಾತನಾಡಿ, ಗಂಡ ಹೆಂಡತಿ ನಡುವೆ ಗಲಾಟೆಯಾಗಿದೆ. ಗಲಾಟೆ ಆದಾಗ ಹೆಂಡತಿಯನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಹೆಂಡತಿಯ ರುಂಡ ಕತ್ತರಿಸಿದ್ದಾನೆ. ಪೋಲೀಸ್ ಠಾಣೆಯಲ್ಲಿ ತಾನೇ ಕೊಲೆ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ. ದಂಪತಿಗೆ ಒಂದು ಹೆಣ್ಣು ಮಗುವಿದೆ. ಪತಿ ಕೆಲಸಕ್ಕೆ ಹೋಗಿದ್ದಾಗ ಪತ್ನಿ ಇನ್ನೊಬ್ಬನ‌ ಜೊತೆ ಸಂಬಂಧ ಇರುವುದು ಗೊತ್ತಾಗಿದೆ‌. ಇದೇ ವಿಚಾರಕ್ಕೆ ಹತ್ತು ದಿನಗಳಿಂದ ಮನೆಯಲ್ಲಿ ಗಲಾಟೆ ನಡೆದಿದೆ. ಗಲಾಟೆ ಅತಿರೇಕಕ್ಕೆ ಹೋಗಿ ರಾತ್ರಿ ಕೊಲೆಯಾಗಿದೆ. ಗಂಡ-ಹೆಂಡತಿ ನಡುವೆ ಮದುವೆ ಆದ್ದಾಗಲಿಂದಲೂ ಭಿನ್ನಾಭಿಪ್ರಾಯವಿತ್ತು. ಪ್ರಿಯಕರನ್ನು ಕರೆಸಿ ವಿಚಾರಣೆ ಮಾಡಲಾಗುತ್ತದೆ‌. ಆತನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದರು.

ಯುವಕನೊರ್ವ ಮನೆ ಮೇಲೆ ಅವಿತುಕೊಂಡಿದ್ದ
ಬಾಡಿಗೆ ಮನೆ ಮಾಲೀಕ ರವಿ ಮಾತನಾಡಿ, ಬಾಡಿಗೆ ಮನೆಗೆ ಬಂದು ಎರಡು ತಿಂಗಳಾಗಿತ್ತು. ಇದೇ ತಿಂಗಳು 3ನೇ ತಾರೀಖು ಜೋರು ಗಲಾಟೆ ನಡೆದಿದೆ. ಗಲಾಟೆ ಬಳಿಕ ಪತಿ ಶಂಕರ್ ಪತ್ನಿಯನ್ನು ಮನೆಯಿಂದ ಹೊರಗೆ ಹಾಕಿದ್ದಾನೆ. ಯುವಕನೊರ್ವ ಮನೆ ಮೇಲೆ ಅವಿತುಕೊಂಡಿದ್ದನು. ಯುವಕನ ಜೊತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದರು. ಪ್ರೀತಿಸಿ ಮದುವೆ ಆಗಿ ಪತ್ನಿ ನನಗೆ ದ್ರೋಹ ಮಾಡಿದ್ದಾಳೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಪೊಲೀಸರ ಸಮ್ಮುಖದಲ್ಲಿ ಮಾತುಕತೆ ಆಗಿದ್ದು, ಇಬ್ಬರು ಪ್ರತ್ಯೇಕವಾಗಿ ವಾಸ ಮಾಡುವಂತೆ ರಾಜಿ ಸಂಧಾನ ಮಾಡಲಾಗಿತ್ತು ಎಂದು ಹೇಳಿದರು.