14 ಸಾವಿರಕ್ಕಿಂತ ಹೆಚ್ಚು ಮಕ್ಕಳ ಅಪಹರಣ* *1336 ಮಕ್ಕಳ ನಿಗೂಢ ಕಣ್ಮರೆ*

*14 ಸಾವಿರಕ್ಕಿಂತ ಹೆಚ್ಚು ಮಕ್ಕಳ ಅಪಹರಣ*

*1336 ಮಕ್ಕಳ ನಿಗೂಢ ಕಣ್ಮರೆ*

ಕಳೆದ ಐದು ವರ್ಷದ ಅವಧಿಯಲ್ಲಿ ಕರ್ನಾಟಕ (Karnataka) ರಾಜ್ಯಾದ್ಯಂತ 14 ಸಾವಿರಕ್ಕಿಂತ ಹೆಚ್ಚು ಮಕ್ಕಳ ಅಪಹರಣವಾಗಿದ್ದು, ಈ ಪೈಕಿ 1,336 ಮಕ್ಕಳು ಇನ್ನೂ ನಿಗೂಢವಾಗಿದ್ದಾರೆ. ಈ ವಿಚಾರವನ್ನು ಖುದ್ದು ಗೃಹಸಚಿವ ಜಿ.ಪರಮೇಶ್ವರ್ ಮಂಗಳವಾರ ವಿಧಾನಪರಿಷತ್‌ನಲ್ಲಿ ತಿಳಿಸಿದ್ದಾರೆ. ಕಿಡ್ನಾಪ್ ಹಾಗೂ ನಿಗೂಢ ಆದವರ ಪೈಕಿ ಹೆಣ್ಣು ಮಕ್ಕಳೇ ಹೆಚ್ಚು. ಮಕ್ಕಳು ಕಾಣೆಯಾದ ಲೆಕ್ಕಾಚಾರದ ಪೈಕಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಮಕ್ಕಳ ಅಪಹರಣವು ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಈ ವರ್ಷ ಜುಲೈ ಅಂತ್ಯಕ್ಕೆ 2,170 ಮಕ್ಕಳು ನಾಪತ್ತೆಯಾಗಿದ್ದಾರೆ. ಅದರಲ್ಲೂ ಕಿಡ್ನಾಪ್ ಹಾಗೂ ನಿಗೂಢ ಆದವರ ಪೈಕಿ ಹೆಣ್ಣು ಮಕ್ಕಳೇ ಹೆಚ್ಚಿರುವುದು ಕಳವಳಕಾರಿಯಾಗಿದೆ.

ಮಕ್ಕಳು ನಾಪತ್ತೆ ಅಂಕಿ ಅಂಶ
2020ರಿಂದ ಈವರೆಗೂ ರಾಜ್ಯದಲ್ಲಿ 14,878 ಮಕ್ಕಳು ನಾಪತ್ತೆ ಪ್ರಕರಣ ದಾಖಲಾಗಿದ್ದು, ಈ ಪೈಕಿ 13,542 ಪ್ರಕರಣಗಳಲ್ಲಿ ಮಕ್ಕಳು ಪೋಷಕರ ಮಡಿಲಿಗೆ ಸೇರಿದ್ಧಾರೆ. ಬಾಕಿ 1,336 ಮಕ್ಕಳು ನಿಗೂಢವಾಗಿದ್ದಾರೆ. ಅಪಹರಣಕ್ಕೆ ಒಳಗಾದ 10,792 ಹೆಣ್ಣು ಮಕ್ಕಳ ಪೈಕಿ 1,003 ಮಂದಿ ಕಾಣೆಯಾಗಿದ್ದಾರೆ. 4,086 ಗಂಡು ಮಕ್ಕಳ ಪೈಕಿ 333 ಮಕ್ಕಳು ನಿಗೂಢವಾಗಿದ್ದಾರೆ. ಅಪಹರಣ ಪ್ರಕರಣದಲ್ಲಿ ಐದು ವರ್ಷದಲ್ಲಿ 634 ಅಪಹರಣಕಾರರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಮಕ್ಕಳು ನಾಪತ್ತೆಯಾಗಲು, ಅಪಹರಣಕ್ಕೆ ಕಾರಣವೇನು?
ಬಾಲ ಕಾರ್ಮಿಕರಾಗಿ ದುಡಿಸಲು ಮಕ್ಕಳ ಅಪಹರಣ ಮಾಡಲಾಗುತ್ತಿದೆ. ಹಣದಾಸೆ ತೋರಿಸಿ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳುವುದು. ಸೋಷಿಯಲ್ ಮೀಡಿಯಾ ಪ್ರಭಾವದಿಂದ ಪ್ರೀತಿ-ಪ್ರೇಮ ಸೆಳೆತಕ್ಕೆ ಒಳಗಾಗಿ ನಾಪತ್ತೆಯಾಗುವುದು. ಇನ್ನು ಅಂಗಾಂಗ ಮಾರಾಟ ದಂಧೆ, ಭಿಕ್ಷಾಟನೆಯಲ್ಲಿ ತೊಡಗಿಸಲು ಮಕ್ಕಳ ಅಪಹರಣ ಮಾಡಲಾಗುತ್ತಿದೆ ಎಂಬ ವಿಚಾರ ಬಯಲಾಗಿದೆ.