ಶಿವಮೊಗ್ಗದಲ್ಲಿ ಮೊದಲ ಕ್ರೇನಿಯೊಸಿನೋಸ್ಟೋಸಿಸ್ ಶಸ್ತ್ರಚಿಕಿತ್ಸೆ* *ವಿರೂಪಗೊಂಡಿದ್ದ 9 ತಿಂಗಳ ಮಗುವಿನ ತಲೆಬುರುಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಿದ ಸರ್ಜಿ ಆಸ್ಪತ್ರೆ ವೈದ್ಯರು!*
*ಶಿವಮೊಗ್ಗದಲ್ಲಿ ಮೊದಲ ಕ್ರೇನಿಯೊಸಿನೋಸ್ಟೋಸಿಸ್ ಶಸ್ತ್ರಚಿಕಿತ್ಸೆ*
*ವಿರೂಪಗೊಂಡಿದ್ದ 9 ತಿಂಗಳ ಮಗುವಿನ ತಲೆಬುರುಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಿದ ಸರ್ಜಿ ಆಸ್ಪತ್ರೆ ವೈದ್ಯರು!*
ಶಿವಮೊಗ್ಗ : ಕ್ರೇನಿಯೊಸಿನೋಸ್ಟೋಸಿಸ್ ಎಂಬ ಅಪರೂಪದ ಖಾಯಿಲೆಯಿಂದ ತಲೆಬುರುಡೆ ವಿರೂಪಗೊಂಡು ಬಳಲುತ್ತಿದ್ದ 9 ತಿಂಗಳ ಮಗುವಿನ ತಲೆ ಬುರುಡೆ ಚಿಪ್ಪನ್ನು ಶಸ್ತ್ರಚಿಕಿತ್ಸೆಯ ಮುಖಾಂತರ ಶಿವಮೊಗ್ಗದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸರಿಪಡಿಸಿ ಯಶಸ್ವಿಯಾಗಿದೆ ಎಂದು ನ್ಯೂರೋ ಸರ್ಜನ್ ಡಾ.ಹರೀಶ್, ಪ್ಲಾಸ್ಟಿಕ್ ಸರ್ಜನ್ ಡಾ.ಚೇತನ್ ಕುಮಾರ್ ನವಿಲೆಹಾಳ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಲೆಬುರುಡೆಯ ಮೂಳೆಗಳ ಮಧ್ಯೆ ಸೂಚರ್ಸ್ (ಬಿರುಕುಗಳು) ಇರುತ್ತದೆ. ಈ ಬಿರುಕುಗಳು ಅವಧಿಗಿಂತ ಮುಂಚೆ ಕೂಡಿಕೊಂಡರೆ ಆ ಸಂದರ್ಭದಲ್ಲಿ ಬುರುಡೆಯ ಒಂದು ಭಾಗ ಸರಿಯಾಗಿ ಬೆಳವಣಿಗೆ ಆಗುವುದಿಲ್ಲ. ಇದನ್ನೇ ಕ್ರೀನಿಯೊಸಿನೋಸ್ಟೋಸಿಸ್ ಎಂದು ಕರೆಯಲಾಗುತ್ತದೆ. ಕ್ರೀನಿಯೊಸಿನೋಸ್ಟೋಸಿಸ್ ನಿಂದ ಮಗುವಿನ ತಲೆಬುರುಡೆ ವಿರೂಪವಾಗಿರುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿದರೆ ಕಣ್ಣಿನ ದೃಷ್ಟಿ ಹೋಗಬಹುದು, ಮೆದುಳಿನ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ ಅಥವಾ ಜೀವಕ್ಕೂ ಅಪಾಯವಾಗಬಹುದು ಎಂದು ವಿವರಿಸಿದರು.
ಶಿವಮೊಗ್ಗದಲ್ಲಿ ಇದೇ ಮೊದಲ ಕ್ರೇನಿಯೊಸಿನೋಸ್ಟೋಸಿಸ್ ಶಸ್ತ್ರಚಿಕಿತ್ಸೆಯಾಗಿದ್ದು, ಯಶಸ್ವಿಯಾಗಿದೆ. ಇದು ಅತ್ಯಂತ ಕಠಿಣ ಮತ್ತು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ, ಈ ಸರ್ಜರಿ ಗೆ ನರಶಸ್ತ್ರಚಿಕಿತ್ಸಾ ತಜ್ಞವೈದ್ಯರಿರಬೇಕು. ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞವೈದ್ಯರಿರಬೇಕು, ಮಕ್ಕಳ ಅರವಳಿಕೆ ತಜ್ಞ ವೈದ್ಯರಿರಬೇಕು, ಮಕ್ಕಳ ಐ.ಸಿ.ಯು ವ್ಯವಸ್ಥೆ ಇರಬೇಕು. ಹಾಗಾಗಿ, ಈ ಶಸ್ತ್ರಚಿಕಿತ್ಸೆಗೆ ಒಂದು ತಜ್ಞ ವೈದ್ಯರ ತಂಡ ಬೇಕಾಗುತ್ತದೆ. ಇಂತಹ ಶಸ್ತ್ರಚಿಕಿತ್ಸೆಯನ್ನು ಮಾಡುವಂತಹ ಕೇಂದ್ರಗಳು ತುಂಬಾ ಕಡಿಮೆ ಎಂದರು.
ಈ ಶಸ್ತ್ರಚಿಕಿತ್ಸೆಯಲ್ಲಿ ನರಶಸ್ತ್ರಚಿಕಿತ್ಸಾ ತಜ್ಞವೈದ್ಯರಾದ ಡಾ.ಹರೀಶ್ ಮೆದುಳಿಗೆ ಯಾವುದೇ ರೀತಿ ಹಾನಿಯಾಗದಂತೆ ಮೆದುಳಿನ ಚಿಪ್ಪನ್ನು ಬೇರ್ಪಡಿಸಿ ಕೊಟ್ಟಿದ್ದಾರೆ. ನಂತರ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ತಜ್ಞವೈದ್ಯರಾದ ಡಾ. ಚೇತನ್ ಕುಮಾರ್ ನವಿಲೆಹಾಳ್ ಅವರು ಆ ತಲೆ ಬುರುಡೆಯ ಚಿಪ್ಪಿನ ಆಕಾರವನ್ನು ಬದಲಾಯಿಸಿ ಸರಿಯಾದ ಆಕಾರಕ್ಕೆ ಬರುವಂತೆ ಸರಿಪಡಿಸಿ ಅಳವಡಿಸಿದ್ದಾರೆ. ಮಕ್ಕಳ ಅರವಳಿಕೆ ತಜ್ಞ ವೈದ್ಯರಾದ ಡಾ.ಅರ್ಜುನ್ ಭಾಗವತ್ ಮಗುವಿಗೆ ಅನೆಸ್ತೇಶಿಯಾ ನೀಡಿ ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲು ಸಹಕರಿಸಿದ್ದಾರೆ.
ಮಗುವಿಗೆ 8 ತಿಂಗಳು ಇರಬೇಕಾದರೆ ಪೋಷಕರು ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದು ಮಕ್ಕಳ ತಜ್ಞ ವೈದ್ಯರಾದ ಡಾ.ಕಾವ್ಯ ಅವರ ಬಳಿ ತೋರಿಸಿದ್ದಾರೆ. ಈ ಸಂದರ್ಭದಲ್ಲಿ ಸಿಟಿ ಸ್ಕ್ಯಾನ್ ಮಾಡಿಸಲಾಯ್ತು. ಈ ಸಿಟಿ ಸ್ಕ್ಯಾನ್ ನಲ್ಲಿ ಮಗುವಿಗೆ ಕ್ರೇನಿಯೊಸಿನೋಸ್ಟೋಸಿಸ್ ಇರುವುದು ದೃಢಪಟ್ಟಿರುತ್ತದೆ. ಈ ಶಸ್ತ್ರ ಚಿಕಿತ್ಸೆಯ ಬಗ್ಗೆ ಮಗುವಿನ ಪೋಷಕರಿಗೆ ವಿವರಿಸಿದಾಗ ಅವರು ಕೂಡ ದೃಢ ಮನಸ್ಸಿನಿಂದ ಈ ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡ ನಂತರ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದೇವೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ, ಮಗು ಕೂಡಾ ಆರೋಗ್ಯವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸರ್ಜಿ ನೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಕ್ಕಳ ಅರವಳಿಕೆ ತಜ್ಞ ವೈದ್ಯರಾದ ಡಾ.ಅರ್ಜುನ್ ಭಾಗವತ್, ಸರ್ಜಿ ಸಮೂಹ ಸಂಸ್ಥೆಯ ನಿರ್ದೇಶಕರಾದ ನಮಿತಾ ಧನಂಜಯ ಸರ್ಜಿ, ಸರ್ಜಿ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಮುರುಳೀಧರ್ ರಾವ್ ಕುಲಕರ್ಣಿ, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನರರೋಗ ತಜ್ಞವೈದ್ಯರಾದ ಡಾ.ಪ್ರಶಾಂತ್ ಶ್ರೀಪುರಂ, ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ವಿಜಯ ಕುಮಾರ ಮಾಯೆರಾ ಉಪಸ್ಥಿತರಿದ್ದರು.