ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ  13 ನೇ ಸಂಸ್ಥಾಪನಾ ದಿನಾಚರಣೆ *ಎಲೆಚುಕ್ಕಿ, ಅಡಿಕೆ ಕೊಳೆ ರೋಗ ರೈತರ ಬದುಕನ್ನು ಕಸಿಯುತ್ತಿದೆ: ಗೋಪಾಲಕೃಷ್ಣ ಬೇಳೂರು*

ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ  13 ನೇ ಸಂಸ್ಥಾಪನಾ ದಿನಾಚರಣೆ

*ಎಲೆಚುಕ್ಕಿ, ಅಡಿಕೆ ಕೊಳೆ ರೋಗ ರೈತರ ಬದುಕನ್ನು ಕಸಿಯುತ್ತಿದೆ: ಗೋಪಾಲಕೃಷ್ಣ ಬೇಳೂರು*

ಎಲೆಚುಕ್ಕಿ ರೋಗ ಹಾಗೂ ಅಡಿಕೆ ಕೊಳೆ ರೋಗವು ಮಲೆನಾಡಿನ ರೈತರ ಜೀವನದ ಆರ್ಥಿಕತೆಯನ್ನು ಕಸಿಯುತ್ತಿದ್ದು, ಕೃಷಿ ವಿಜ್ಞಾನಿಗಳು ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಗುಣಪಡಿಸುವ ಕಾರ್ಯ ಮಾಡಬೇಕು ಎಂದು ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಅವರು ಇಂದು ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ವಿಶ್ವವಿದ್ಯಾಲಯದ 13 ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಲೆನಾಡಿನ ಭಾಗದಲ್ಲಿ ಅಡಿಕೆ ಮರಕ್ಕೆ ಎಲೆಚುಕ್ಕಿ ರೋಗ ಹಾಗೂ ಹೆಚ್ಚಿನ ಮಳೆಯಿಂದಾಗಿ ಅಡಿಕೆ ಕೊಳೆ ರೋಗ ಉಂಟಾಗಿದ್ದು, ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಎತ್ತರಕ್ಕೆ ಬೆಳೆಯಬೇಕಾದ ಮರಗಳು ಈ ರೋಗದಿಂದ ನೆಲಕಚ್ಚುತ್ತಿವೆ. ಹಾಗಾಗಿ ಕೃಷಿ ವಿಜ್ಞಾನಿಗಳು ಸ್ಥಳೀಯ ಹಾಗೂ ಅಂತರಾಷ್ಟ್ರೀಯ ವಿಜ್ಞಾನಿಗಳೊಂದಿಗೆ ಚರ್ಚಿಸಿ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿ ಔಷಧಿಯನ್ನು ಕಂಡುಹಿಡಿಯಬೇಕು. ಇದರಿಂದ ರೈತರ ಬದುಕಿಗೆ ಅನುಕೂಲಕವಾಗುತ್ತದೆ ಎಂದು ಹೇಳಿದರು.

ರೈತರು ಪ್ರಗತಿಯಾದಾಗ ಮಾತ್ರ ಈ ದೇಶ ಪ್ರಗತಿಯಾಗುವುದು. ಆದ್ದರಿಂದ ರೈತರ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಬೇಕು. ಅದರಿಂದ ಅವರ ಆದಾಯವೂ ಕೂಡ ಹೆಚ್ಚಾಗುತ್ತದೆ. ಆದರೆ ಇತ್ತೀಚಿಗೆ ಕೃಷಿ ವಲಯವು ಸಾಕಷ್ಟು ನಷ್ಟಕ್ಕೀಡಾಗಿದ್ದು, ಉತ್ಪಾದನೆಯಲ್ಲಿ ಹಿನ್ನೆಡೆ ಅನುಭವಿಸುತ್ತಿದೆ. ಹಾಗಾಗಿ ರೈತರು ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅವಳಡಿಸಿಕೊಳ್ಳಬೇಕು.
ಕೃಷಿ, ತೋಟಗಾರಿಕೆ ಇಲಾಖೆಗಳು ವಿಶ್ವವಿದ್ಯಾಲಯದ ಮೂಲಕ ಹಲವಾರು ಯೋಜನೆಗಳನ್ನು ರೈತರಿಗೆ ತಲುಪಿಸುವಂತಹ ಕಾರ್ಯ ಮಾಡುತ್ತಿದೆ. ರೈತರು ಇದರ ಸದುಪಯೋಗ ಪಡೆದು, ಯಾವುದೇ ನಷ್ಟ ಅನುಭವಿಸದೆ ಕೃಷಿ ಉತ್ಪನ್ನಗಳನ್ನು ಬೆಳೆಯಬೇಕು. ಆ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ರೈತರು ಇಂತಹ ಕಾರ್ಯಸಾಧನೆ ಮಾಡಲು ವಿಶ್ವವಿದ್ಯಾಲಯಗಳು, ಇಲ್ಲಿನ ವಿಜ್ಞಾನಿಗಳು ಕೂಡ ಸಹಕಾರ ನೀಡಬೇಕು ಎಂದರು.

ಸಂಸ್ಥಾಪನಾ ದಿನದ ಉಪನ್ಯಾಸ ನೀಡಿದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಟಿ.ಎಸ್.ಹೂವಯ್ಯ ಗೌಡ ಮಾತನಾಡಿ, ಒಂದು ಸಂಸ್ಥೆಯ ಪ್ರಾರಂಭ, ಅದರ ಬೆಳವಣಿಗೆ, ಅದು ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ತಿಳಿಸಲು ಇಂತಹ ಸಂಸ್ಥಾಪನಾ ದಿನ ಆಚರಣೆ ಮಾಡಲಾಗುತ್ತದೆ. ಅದರಂತೆ ಕೆಳದಿ ಶಿವಪ್ಪನಾಯಕರ ಹೆಸರು ಪಡೆದಿರುವ ವಿಶ್ವವಿದ್ಯಾಲಯವು ತನ್ನದೇ ಆದ ಅನೇಕ ಸಾಧನೆಗಳನ್ನು ಜನರಿಗೆ ತಿಳಿಸುವ ದಿಸೆಯಲ್ಲಿ ಈ ಆಚರಣೆ ಮಾಡಿಕೊಳ್ಳುತ್ತಿದೆ.
ಶಿಸ್ತಿಗೆ ಇನ್ನೊಂದು ಹೆಸರೇ ಶಿವಪ್ಪನಾಯಕ. ಅವರ ಆಡಳಿತ ಅವಧಿಯಲ್ಲಿ ಅವರು ವಿಧಿಸಿದ ಕಂದಾಯ ತೆರಿಗೆ ವೈಜ್ಞಾನಿಕತೆಯಿಂದ ಕೂಡಿತ್ತು. ಹಾಗಾಗಿ ಈಗಲೂ ಶಿವಪ್ಪನಾಯಕರ ತೆರಿಗೆ ನೀತಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಗಳನ್ನು ರಾಜ್ಯದಲ್ಲಿ ಸ್ಥಾಪಿಸುವ ಮೂಲಕ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದು, ವಿಜ್ಞಾನದ ವಿದ್ಯಾರ್ಥಿಗಳು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಸ್ವಾಮಿನಾಥನ್, ವರ್ಗೀಸ್‌ರಂತಹ ವಿಜ್ಞಾನಿಗಳ ಆಹಾರ ಕ್ರಾಂತಿ, ಹಸಿರು ಕ್ರಾಂತಿಗಳ ಮೂಲಕ ರೈತರಿಗೆ ಸಹಕಾರಿಯಾಗಿದ್ದಾರೆ. ನೀವುಗಳು ಇಂತಹ ಮಾರ್ಗದಲ್ಲಿ ಸಾಗಬೇಕು. ವಿಜ್ಞಾನದಲ್ಲಿ ಮಿತಿಯಿಲ್ಲದಷ್ಟು ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳಬೇಕು. ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ತರಬೇಕು ಎಂದರು.

ಕಾರ್ಯಕ್ರಮದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಆರ್.ಸಿ.ಜಗದೀಶ್ ಅಧ್ಯಕ್ಷ ನುಡಿಗಳನ್ನಾಡಿದರು.
ಈ ವೇಳೆ ವಿಶ್ವವಿದ್ಯಾಲಯದ ಅತ್ಯುತ್ತಮ ಶಿಕ್ಷಕ, ಸಂಶೋಧಕ, ವಿಸ್ತರಣಾ ವಿಜ್ಞಾನಿ ಹಾಗೂ ಬಾಹ್ಯ ಅನುದಾನಿ ಯೋಜನೆಗಳನ್ನು ಪಡೆದ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರದಲ್ಲಿ ಕುಲಸಚಿವ ಡಾ.ಜಿ.ಕೆ.ಗಿರಿಜೇಶ್, ಪ್ರಗತಿಪರ ರೈತರುಗಳು, ಕೃಷಿ ಉದ್ದಿಮೆದಾರರು, ವಿವಿಧ ಕೃಷಿ ಕಾಲೇಜಿನ ಅಧಿಕಾರಿಗಳ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.