ಶಿವಮೊಗ್ಗದಲ್ಲಿ ಪೊಲೀಸ್ ಹುತಾತ್ಮ  ದಿನಾಚರಣೆ- ಪೊಲೀಸ್‌ಸೇವೆ ಅನುಪಮವಾದುದು : ನ್ಯಾ. ಮಂಜುನಾಥನಾಯಕ್

ಶಿವಮೊಗ್ಗದಲ್ಲಿ ಪೊಲೀಸ್ ಹುತಾತ್ಮ  ದಿನಾಚರಣೆ-

ಪೊಲೀಸ್‌ಸೇವೆ ಅನುಪಮವಾದುದು : ನ್ಯಾ. ಮಂಜುನಾಥನಾಯಕ್

ಶಿವಮೊಗ್ಗ

ಸ್ವಾತಂತ್ರ್ಯಾನಂತರ ಈವರೆಗೆ ಮೃತರಾದ ಪೊಲೀಸ್‌ಸಿಬ್ಬಂಧಿಗಳು ಒಟ್ಟು 36000, ಸೇನೆಯ ಹೋರಾಟದಲ್ಲಿ ಮೃತರಾದ ಸೈನಿಕರ ಸಂಖ್ಯೆ 23000. ದೇಶದ ಗಡಿಕಾಯುವ ಸೈನಿಕರ ಸ್ಮರಣೀಯ ಸೇವೆಯನ್ನು ಮೀರಿ, ಅತೀ ಒತ್ತಡದಲ್ಲಿ, ಯಾವುದೇ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಸೇವೆ ಅತ್ಯಂತ ಮೌಲಿಕವಾದುದು ಮತ್ತು ಸ್ಮರಣೀಯವಾದುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ಪ್ರಧಾನ ನ್ಯಾಯಾಧೀಶ ಮಂಜುನಾಥನಾಯಕ್‌ಅವರು ಹೇಳಿದರು.

ಅವರು ಇಂದು ಪೊಲೀಸ್‌ ಇಲಾಖೆಯು ಪೊಲೀಸ್‌ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್‌ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಹುತಾತ್ಮರ ಆರಕ್ಷಕರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು. ಯಾವುದೇ ಸಂದರ್ಭದಲ್ಲಿ ಸದಾ ಸನ್ನದ್ಧರಾಗಿದ್ದು ಕಾರ್ಯನಿರ್ವಹಿಸುವ ಪೊಲೀಸರ ಸೇವೆ ಅಭಿನಂದನೀಯವಾದುದ್ದು ಹಾಗೂ ಸೈನಿಕರ ಸೇವೆಗಿಂತ ಮಹತ್ವದ್ದಾಗಿದೆ ಎಂದರು.

ಪೊಲೀಸ್‌ಸಿಬ್ಬಂಧಿಗಳಿಗೆ ದೊರೆಯುವ ಗೌರವ ಅವರ ಕುಟುಂಬದ ಎಲ್ಲಾ ಸದಸ್ಯರಿಗೂ ದೊರೆಯುವಂತಾಗಬೇಕು. ಕೇವಲ ವೇತನ-ಭತ್ಯೆಗಳಿಂದ ಅವರನ್ನು ಸಮಾಧಾನಿಸುವುದು ಸಾಧ್ಯವಾಗದು ಎಂದ ಅವರು, ಕಾನೂನು ಸುವ್ಯವಸ್ಥೆಯ ದೃಷ್ಠಿಯಿಂದ ಶಿವಮೊಗ್ಗ ಅತಿಸೂಕ್ಷ್ಮ ಪ್ರದೇಶ. ಆದಾಗ್ಯೂ ಶಿವಮೊಗ್ಗ ಜಿಲ್ಲೆಯ ಶಾಂತಿಯುತ ವಾತಾವರಣಕ್ಕೆ ಪೊಲೀಸ್‌ಇಲಾಖೆಯ ಸೇವೆ ಅನುಪಮವಾದುದು ಎಂದವರು ನುಡಿದರು.

ಕಾಯಕನಿಷ್ಟೆ ಮೆರೆಯುವ, ಕೇವಲ ಆರೋಪಗಳಿಂದಷ್ಟೇ ಗುರುತಿಸಲಾಗುವ ಪೊಲೀಸರು ಪ್ರಶಂಸೆ -ಪುರಸ್ಕಾರಗಳನ್ನು ನಿರೀಕ್ಷಿಸದೇ ಎದುರಾಗಬಹುದಾದ ಎಲ್ಲಾ ಸಂದರ್ಭ-ಸವಾಲುಗಳಿಗೆ ಒಗ್ಗಿಕೊಳ್ಳುವ ಅನಿವಾರ್ಯವಿದೆ. ಅದಕ್ಕಾಗಿ ಚಿಂತಿಸುವ, ಚರ್ಚಿಸುವ ದೃತಿಗೆಡುವ ಅಗತ್ಯವಿಲ್ಲ ಎಂದ ಅವರು, ನೀಡುವ ಸೇವೆಯನ್ನು ಪ್ರಾಮಾಣಿಕವಾಗಿ, ಆತ್ಮಸಂತೃಪ್ತಿಗಾಗಿ ಮಾಡಬೇಕು. ಅದು ಮನಸಿಗೆ ಹೆಚ್ಚಿನ ಸಮಾಧಾನ ನೀಡಲಿದೆ ಎಂದರು.

ಜಿಲ್ಲೆಯಲ್ಲಿ ಅತ್ಯುತ್ತಮ ಪೊಲೀಸ್‌ಸೇವೆ ಒದಗಿಸುತ್ತಿರುವುದನ್ನು ಗಮನಿಸಲಾಗಿದೆ. ಪೊಲೀಸ್‌ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಹಳೆಯ ವ್ಯವಸ್ಥೆಯ ಜೊತೆಗೆ ಹೊಸವಿಧಾನ ಕಾರ್ಯತಂತ್ರಗಳ ಅಳವಡಿಕೆ ಅಗತ್ಯವಾಗಿದೆ. ಹೆಚ್ಚಳವಾಗುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಸಿಕೊಳ್ಳುವ ತುರ್ತು ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌ಅವರು ಮಾತನಾಡಿ, ಪೊಲೀಸರು ತಮ್ಮ ದಿನನಿತ್ಯದ ಕರ್ತವ್ಯದ ಜೊತೆಗೆ ವೈಯಕ್ತಿಕ ಬದುಕಿನ ಉನ್ನತಿಗೂ ಚಿಂತಿಸಬೇಕಾದ ಅಗತ್ಯವಿದೆ. ಅಂಚೆ ಸೇರಿದಂತೆ ವಿವಿಧ ವಿಮಾ ಕಂಪನಿಗಳಲ್ಲಿ ಅಲ್ಪಪ್ರಮಾಣದಲ್ಲಿ ವಾರ್ಷಿಕ ಶುಲ್ಕ ಪಾವತಿಸಿ, ಹೆಚ್ಚಿನ ಲಾಭ ಪಡೆಯುವ ವಿಮಾ ಸೌಲಭ್ಯವನ್ನು ಹೊಂದುವಂತೆ ಸಲಹೆ ನೀಡಿದರು.

ಮುಂದುವರೆದ ತಂತ್ರಜ್ಞಾನ ವ್ಯವಸ್ಥೆ ಇರುವ ಇಂದಿನ ದಿನಗಳಲ್ಲೂ ಪೊಲೀಸ್‌ರಕ್ಷಣಾ ವ್ಯವಸ್ಥೆಯಲ್ಲಿ ಅನೇಕ ಸಮಸ್ಯೆ-ಸವಾಲುಗಳು ಎದುರಾಗುತ್ತಿವೆ. ದಿನದ 24ಗಂಟೆಗಳೂ ಸೇವೆ ಸಲ್ಲಿಸಬೇಕಾದ ಸಂದರ್ಭ ಎದುರಾಗುತ್ತಿವೆ. ಆಗಾಗ್ಗೆ ಆರೋಗ್ಯ ಸಮಸ್ಯೆಯೂ ತಲೇದೋರುತ್ತಿದೆ. ಆದ್ದರಿಂದ ವೈಯಕ್ತಿಕ ಜೀವನದಲ್ಲಿ ಸದೃಢರಾಗಿರಬೇಕು. ಅಲ್ಲದೇ ಕೌಟುಂಬಿಕ ಜೀವನ ಸುಂದರವಾಗಿಸುವಂತೆ ನೋಡಿಕೊಳ್ಳಲು ಶ್ರಮಿಸಬೇಕಾದ ಅಗತ್ಯವಿದೆ ಎಂದವರು ನುಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ವರಿಷ್ಟಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ಅವರು ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಕರ್ತವ್ಯನಿರತರಾದಾಗಲೇ ಮರಣಹೊಂದಿದ 191ಮಂದಿ ಹುತಾತ್ಮ ಆರಕ್ಷಕರ ನಾಮವಾಚನ ಮಾಡಿದರು. ಡಿ.ವೈ.ಎಸ್.ಪಿ. ಎ.ಜಿ.ಕಾರಿಯಪ್ಪ, ರಮೇಶ್‌, ಕೆ.ಎಸ್‌.ಆರ್.ಪಿ. ಕಮಾಂಡೆಂಟ್‌ಯುವಕುಮಾರ್‌ಸೇರಿದಂತೆ ಪೊಲೀಸ್‌ಇಲಾಖೆಯ ವಿವಿಧ ಶ್ರೇಣಿಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.