ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ- ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್.ಪಿ.ದಿನೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?   ಹಣಬಲ- ಜನಬಲದ ಚುನಾವಣೆ   ಕ್ಲಬ್- ತೋಟಗಳಲ್ಲಿ ಮತದಾರರಿಗೆ ಆಮಿಷ   ಎನ್ ಎಸ್ ಯು ಐ- ಎಬಿವಿಪಿ ಯುವ ಸಮೂಹ ನಾಯಕರಾಗುವ ಕನಸು ಬಿಟ್ಟು ಬಿಡಿ

ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆ- ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್.ಪಿ.ದಿನೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?
ಹಣಬಲ- ಜನಬಲದ ಚುನಾವಣೆ
ಕ್ಲಬ್- ತೋಟಗಳಲ್ಲಿ ಮತದಾರರಿಗೆ ಆಮಿಷ
ಎನ್ ಎಸ್ ಯು ಐ- ಎಬಿವಿಪಿ ಯುವ ಸಮೂಹ ನಾಯಕರಾಗುವ ಕನಸು ಬಿಟ್ಟು ಬಿಡಿ
ನೈರುತ್ಯ ಪದವೀಧರರ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ಅಲ್ಪಮತಗಳ ಅಂತರದಿಂದ ಪ್ರಭಾವಗೊಂಡಿರುವ ನಾನು ಮೂರನೇ ಬಾರಿ ಸ್ಪರ್ಧಿಸಿದ್ದು, ಮತದಾರರು ಭಾರೀ ಬಹುಮತದಿಂದ ನನ್ನನ್ನು ಗೆಲ್ಲಿಸುವಂತೆ ಅಭ್ಯರ್ಥಿ ಎಸ್.ಪಿ.ದಿನೇಶ್ ಮನವಿ ಮಾಡಿಕೊಂಡರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎರಡು ಭಾರಿ ಸ್ಪರ್ಧಿಸಿರುವ ನಾನು ಮತದಾರರ ವಿಶ್ವಾಸಗಳಿಸಿದ್ದು, ಇದರಿಂದಾಗಿ ದೃಢ ಸಂಕಲ್ಪ ಮಾಡಿ ಸ್ಪರ್ಧಿಸುತ್ತಿದ್ದೇನೆ ಎಂದರು.
ಕಳೆದ ೧೦ ತಿಂಗಳಿಂದ ಚುನಾವಣೆಗಾಗಿ ಎಲ್ಲಾ ತಯಾರಿ ನಡೆಸಿ ಮತದಾರರ ನೊಂದಣಿಯನ್ನು ಮಾಡಿಸಿದ್ದೇನೆ. ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಕಳೆದ ೧೦ ತಿಂಗಳ ಹಿಂದೆಯೇ ಟಿಕೇಟ್ ನೀಡುವುದಾಗಿ ಭರವಸೆ ನೀಡಿ ತಯಾರಿ ನಡೆಸಲು ಸೂಚಿಸಿದ್ದರು. ಆದರೆ ವರಿಷ್ಠರು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೂ ಬರದೆ ಇತ್ತೀಚೆಗೆ ಕಾಂಗ್ರೆಸ್‌ಗೆ ಬಂದ ವ್ಯಕ್ತಿಗೆ ಟಿಕೇಟ್ ನೀಡಿದ್ದಾರೆ ಎಂದು ದೂರಿದರು.
ನಾನು ಈಗಾಗಲೇ ೧೬ ಸಾವಿರ ಮತದಾರರಿಗೆ ಪತ್ರ ಮುಖೇನ ಸ್ಪರ್ಧೆ ಮಾಡುವ ಬಗ್ಗೆ ಮನವಿ ಮಾಡಿಕೊಂಡಿದ್ದು ಅಲ್ಲದೇ ರಿಫ್ಲೇ ಕಾರ್ಡ್ ಕಳುಹಿಸಿದ್ದೆ ಅವರು ಸ್ಪರ್ಧೆ ಮಾಡುವಂತೆ ಸೂಚಿಸಿದ್ದರಿಂದ ಹುಮ್ಮಸ್ ಬಂದು ಸ್ಪರ್ಧೆ ಮಾಡಿದ್ದೇನೆ ಎಂದರು.
ನಾನು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರು ಜೈರಾಮ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹಾಗೂ ಇನ್ನಿತರರು ನನಗೆ ಮನವೋಲಿಸಿದರು. ಆದರೂ ನಾನು ಸ್ಪರ್ಧೆ ಮಾಡಿದ್ದೇನೆ. ಮನವೋಲಿಸಿದ ಎಲ್ಲರಿಗೂ ನಾನು ಕ್ಷಮೆ ಕೇಳುತ್ತೇನೆ ಎಂದರು.
ನಾನು ಆಯ್ಕೆಯಾದಲ್ಲಿ ನನಗೆ ಸಿಗುವ ಅನುದಾನವನ್ನು ಪ್ರತಿ ಜಿಲ್ಲಾ ಕೇಂದ್ರದಲ್ಲಿ ಪದವೀಧರರ ಭವನವನ್ನು ನಿರ್ಮಿಸಿ ಪದವೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ತರಬೇತಿ ನೀಡಲಾಗುವುದು. ಹಾಗೂ ಅಲ್ಲಿ ಎಲ್ಲಾ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು, ಇದು ನನ್ನ ಕನಸು ಎಂದರು.
ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಇತ್ತೀಚೆಗೆ ಕಾರ್ಯಕರ್ತರನ್ನು ಮರೆಯಲಾಗುತ್ತಿದೆ. ಹಣವಿದ್ದವರಿಗೆ ಮಣೆಹಾಕುವ ಕಾಲ ಬಂದಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕೂ ಅನ್ವಯವಾಗುತ್ತದೆ ಆದ್ದರಿಂದ ಯುವಕರು ಈ ಬಗ್ಗೆ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಎಬಿವಿಪಿಯಾಗಲಿ, ಎನ್‌ಎಸ್‌ಯುಐಯಾಗಲಿ ಹಾಗೂ ಇತರೆ ವಿದ್ಯಾರ್ಥಿ ಸಂಘಟನೆಯಾಗಲಿ ಯಾವುದೇ ಉದ್ದೇಶ ಇಟ್ಟುಕೊಂಡು ಬರಬಾರದು. ಹಾಗೆ ಬಂದರೆ ಖಂಡಿತ ನಿರಾಶರಾಗುತ್ತೀರಿ. ಆದ್ದರಿಂದ ಎಚ್ಚರಿಕೆಯಿಂದಯಿರಿ ಎಂದು ಹೇಳಿದರು.
ಇತ್ತೀಚಿನ ಚುನಾವಣೆಗಳು ಕಲುಷಿತಗೊಳ್ಳುತ್ತಿವೆ. ಹಿರಿಯರಾದ ಡಿ.ಎಚ್.ಶಂಕರಮೂರ್ತಿಯವರಂತಹ ಚುನಾವಣೆಗಳು ಇದಲ್ಲ. ಇದೇನಿದ್ದರು ಹಣಬಲವೋ, ಜನಬಲವೋ ಎಂಬುವುದರ ಮೇಲೆ ನಿಂತಿದೆ. ಈಗಾಗಲೇ ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಹಣವನ್ನು ಕೆಲವರು ಖರ್ಚು ಮಾಡುತ್ತಿದ್ದಾರೆ. ತೋಟಗಳು, ಕ್ಲಬ್‌ಗಳು ಭರ್ತಿಯಾಗ ತೊಡಗಿವೆ. ಹಣದ ಮೇಲೆ ಚುನಾವಣೆ ನಿಂತಿರುವುದು ಬೇಸರ ತಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಭಾಸ್ಕರ್, ಪ್ರೊ. ಕಲ್ಲಣ್ಣ, ಪ್ರೊ. ನಾರಾಯಣ್, ಈಶ್ವರ್, ವಿಜಯ್, ವೆಂಕಟಚಲ ಉಪಸ್ಥಿತರಿದ್ದರು.