ಏನಿದು ಹಕ್ಕಿ ಹಬ್ಬ? ಈ ಬಾರಿಯ ರಾಯಭಾರಿ ಹಕ್ಕಿ ಕಪ್ಪು ತಲೆಯ ಹೊನ್ನಕ್ಕಿ!  ಕುವೆಂಪು ವಿವಿಯಲ್ಲಿ ಕರ್ನಾಟಕ ಹಕ್ಕಿ ಹಬ್ಬದ 11ನೇ ಆವೃತ್ತಿ ಆಚರಣೆ- ಕುತೂಹಲಭರಿತವಾಗಿದೆ ವಿವಿಯ ಈ ಹೆಜ್ಕೆ! ಪರಿಸರ ಪ್ರವಾಸೋದ್ಯಮಕ್ಕೆ ಆದ್ಯತೆ: ಪುಷ್ಕರ್

ಏನಿದು ಹಕ್ಕಿ ಹಬ್ಬ? ಈ ಬಾರಿಯ ರಾಯಭಾರಿ ಹಕ್ಕಿ ಕಪ್ಪು ತಲೆಯ ಹೊನ್ನಕ್ಕಿ!

ಕುವೆಂಪು ವಿವಿಯಲ್ಲಿ ಕರ್ನಾಟಕ ಹಕ್ಕಿ ಹಬ್ಬದ 11ನೇ ಆವೃತ್ತಿ ಆಚರಣೆ- ಕುತೂಹಲಭರಿತವಾಗಿದೆ ವಿವಿಯ ಈ ಹೆಜ್ಕೆ!

ಪರಿಸರ ಪ್ರವಾಸೋದ್ಯಮಕ್ಕೆ ಆದ್ಯತೆ: ಪುಷ್ಕರ್

ವನ್ಯಜೀವಿಗಳು ಮತ್ತು ಪ್ರಾಣಿಸಂಕುಲದ ಬಗ್ಗೆ ಅರಿವು ಮೂಡಿಸಲು ಪರಿಸರ ಪ್ರವಾಸೋದ್ಯಮವು ಅತ್ಯವಶ್ಯವಾಗಿದೆ. ಇದನ್ನು ಉತ್ತೇಜಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಹೆಚ್ಚುವರಿ ಮುಖ್ಯ ಸಂರಕ್ಷಣಾಧಿಕಾರಿ ಹಾಗು ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ್ ಪುಷ್ಕರ್ ಅಭಿಪ್ರಾಯಪಟ್ಟರು.

ಭದ್ರಾ ಹುಲಿ ಸಂರಕ್ಷಿತ ಅರಣ್ಯ 25ನೇ ವರ್ಷದ ವಿಶೇಷ ಸಂದರ್ಭದಲ್ಲಿ ಕರ್ನಾಟಕ ಅರಣ್ಯ ಇಲಾಖೆ, ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ, ಭದ್ರಾ ಹುಲಿ ಸಂರಕ್ಷಿತ ಅರಣ್ಯ ಮಂಡಳಿ ಹಾಗು ಕುವೆಂಪು ವಿ ವಿ ಸಂಸ್ಥೆಗಳು ಜಂಟಿಯಾಗಿ 11ನೇ ಹಕ್ಕಿ ಹಬ್ಬವನ್ನು ಭದ್ರಾ ಹುಲಿ ಸಂರಕ್ಷಿತ ಅರಣ್ಯ ಚಿಕ್ಕಮಗಳೂರಿನಲ್ಲಿ  ಜೂ. 14-16 ರ ವರೆಗೆ 3 ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿವಿಯ ಬಸವ ಸಭಾ ಭವನದಲ್ಲಿ ಶುಕ್ರವಾರ ಹಕ್ಕಿ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಪ್ರವಾಸೋದ್ಯಮ ನೀತಿಯನ್ನು ರೂಪಿಸಿದ್ದು ಸದ್ಯದಲ್ಲೇ ಅನುಮೋದನೆ ಪಡೆಯಲಾಗುವುದು ಜೊತೆಗೆ ಪರಿಸರ ಪ್ರವಾಸೋದ್ಯಮದ ಕುರಿತು ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಪ್ರಕೃತಿ ಪ್ರಿಯರಿಗೆ ಟ್ರಕಿಂಗ್ ಸೇರಿದಂತೆ ವಿವಿಧ ಪರಿಸರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುಮಾರ್ ಪುಷ್ಕರ್ ತಿಳಿಸಿದರು.

ರಾಜ್ಯವು ಅತಿಹೆಚ್ಚು ಪಕ್ಷಿಪ್ರಭೇದಗಳಿಗೆ ತವರಾಗಿದೆ. ಬೇರೆಲ್ಲ ರೀತಿಯ ಪ್ರಾಣಿಗಳಿಗಿಂತಲ್ಲೂ ಹೆಚ್ಚಿನ ಪಕ್ಷಿಗಳ ಪ್ರಭೇದಗಳು ಇಲ್ಲಿ ಹೆಚ್ಚಿವೆ.
ಕರ್ನಾಟಕವು 1359 ಪಕ್ಷಿಪಭೇದಗಳ ಬೀಡಾಗಿದೆ. ಜಾಗತಿಕವಾಗಿ ಇರುವ ಪಕ್ಷಿಗಳ ಸಂಕುಲದ ಶೇ. 10 ರಷ್ಟು ಭಾರತದಲ್ಲಿವೆ. ಅನೇಕ ಅಳಿವಿನಂಚಿನಲ್ಲಿರುವ ಪಕ್ಷಿಗಳು ಕರ್ನಾಟಕದಲ್ಲಿ ಸಂರಕ್ಷಣೆಗೆ ಒಳಪಟ್ಟಿವೆ ಎಂದು ಅವರು ತಿಳಿಸಿದರು.

ಕುಲಪತಿ ಪ್ರೊಫೆಸರ್ ಶರತ್ ಅನಂತಮೂರ್ತಿ ಮಾತನಾಡಿ, ಸಫಾರಿ ಇಂದು ಜನಪ್ರಿಯ ಚಟುವಟಿಕೆ ಆಗಿದೆ. ಸಫಾರಿ ಹೋದಾಗ ಪ್ರಾಣಿ ಪಕ್ಷಿಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ, ಕೆಲವೇ ಘಂಟೆಯಲ್ಲಿ ಎಲ್ಲವನ್ನೂ ನೋಡುವ ಹಂಬಲ ಜನರಿಗಿರುತ್ತದೆ. ಆದರೆ ಇದೊಂದು ಧ್ಯಾನ. ಮಾನವ-ಪ್ರಕೃತಿ-ಪ್ರಾಣಿ ಸಂಕುಲದ ನಂಟು-ಸೂಕ್ಷ್ಮತೆಗಳನ್ನು ಅರಿತು ನಂತರ ನೋಡಲು ತೆರಳಬೇಕು. ಸಾಕಷ್ಟು ತಾಳ್ಮೆ ಬೇಕು, ನಿರಂತರ ಅಲೋಚನೆಗೆ ಅಲ್ಲಿಂದ ಪ್ರಕ್ರಿಯೆ ಆರಂಭ ಆಗಬೇಕು. ಕೇವಲ ಮನರಂಜನೆ ಅಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ   ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ   ಹನುಮಂತಪ್ಪ,   ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ಯಶ್ಪಾಲ್  ಕ್ಷೀರಸಾಗರ್, ಕಾರ್ಯಯೋಜನೆ ಅಧಿಕಾರಿಯಾದ ಸೋನಾಲ್ ವ್ರುಷ್ಟಿ, ಶಿವಮೊಗ್ಗ ವಲಯದ ಉಪ ಅರಣ್ಯಾಧಿಕಾರಿ ಪ್ರಸನ್ನ ಕೃಷ್ಣ ಪಟಗಾರ್, ನಂದೀಶ್ ಎಲ್, ಆನಂದ್ ಕೆಸಿ, ರಮೇಶ್ ಬಾಬು, ಕುಲಸಚಿವರಾದ ಮಂಜುನಾಥ್ ಎ ಎಲ್,  ಪರೀಕ್ಷಾಂಗ ಕುಲಸಚಿವ ಪ್ರೊ. ಗೋಪಿನಾಥ್ ಎಸ್ ಎಂ,ವನ್ಯಜೀವಿ ವಿಭಾಗದ ಅಧ್ಯಕ್ಷ ಪ್ರೊ ವಿಜಯ್ ಕುಮಾರ್ ಉಪಸ್ಥಿತರಿದ್ದರು. ಹಕ್ಕಿ ಹಬ್ಬದ ಕಾರ್ಯಕ್ರಮದಲ್ಲಿ ವಿವಿಯ ವಿವಿಧ ವಿಭಾಗಗಳ ನೂರಕ್ಕೂ ಅಧಿಕ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿವಿಧ ವಿಭಾಗಗಳ ವಿದ್ಯಾರ್ಥಿಗಳು ತೆಗೆದಿದ್ದ
ಹಕ್ಕಿಗಳ ವಿಶೇಷ ಛಾಯಾಚಿತ್ರಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಷಿಸಲಾಗಿತ್ತು ಮತ್ತು ಅವುಗಳ ಮಾಹಿತಿಯನ್ನು ಆಗಮಿಸಿದವರಿಗೆ ನೀಡಲಾಯಿತು.

ಬಾಕ್ಸ್ ಐಟಂ
ಕರ್ನಾಟಕದ ಪಕ್ಷಿ ಪ್ರಭೇದಗಳನ್ನು ನೆನೆಯಲು, ಸಂರಕ್ಷಿಸಲು 2015ರಿಂದ ಪ್ರತಿವರ್ಷ ಪಕ್ಷಿ ಹಬ್ಬ ಆಚರಿಸಲಾಗುತ್ತಿದೆ. ಹಕ್ಕಿಗಳ ಕಾಡುಗಳ ವೃದ್ಧಿಗೆ, ಅಧಿಕವಾಗುವ ಕೀಟಗಳ ನಾಶಕ್ಕೆ ಕಾರಣವಾಗುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಸಮತೋಲನ ಮಾಡುತ್ತವೆ.
ಭದ್ರಾ ಹುಲಿ ಸಂರಕ್ಷಿತ ಅರಣ್ಯದ 25ನೇ ವರ್ಷದ ಸಲುವಾಗಿ ಇಲ್ಲಿ ಪಕ್ಷಿ ಹಬ್ಬ ಏರ್ಪಡಿಸಲಾಗಿದೆ. ಆಗ ಇದ್ದ 5 ಹುಲಿಗಳ ಸಂಖ್ಯೆ ಈಗ 35ಕ್ಕೆ ಏರಿದೆ ಎಂದು ಪುಷ್ಕರ್ ತಿಳಿಸಿದರು.

ಈ ಬಾರಿ ‘ಕಪ್ಪು ತಲೆಯ ಹೊನ್ನಕ್ಕಿ’ 11ನೇ ಹಕ್ಕಿ ಹಬ್ಬದ ರಾಯಭಾರಿ ಹಕ್ಕಿ ಎಂದು ಕರ್ನಾಟಕ ಅರಣ್ಯ ಇಲಾಖೆ ಘೋಷಿಸಿದೆ. ಈ ಹಕ್ಕಿಯ ಕುರಿತು ಅರಿವು ಮೂಡಿಸಲು ಪುಸ್ತಕವೊಂದನ್ನು ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಪ್ರಕಟಿಸಿದ್ದು ಇಲ್ಲಿ ಬಿಡುಗಡೆಗೊಳಿಸಿತು.
ಪ್ರತಿ ವರ್ಷ ಒಂದೊಂದು ಹಕ್ಕಿಯನ್ನು ರಾಯಭಾರಿ ಹಕ್ಕಿಯಾಗಿ ಘೋಷಿಸಲಾಗಿತ್ತು.