ಅರಣ್ಯ ಇಲಾಖೆ ದೌರ್ಜನ್ಯದ ವಿರುದ್ಧ ಹೋರಾಟಕ್ಕಿಳಿದ ಆರ್ ಎಂ ಎಂ;’ನೊಂದವರ ವಿರುದ್ಧ ಅರಣ್ಯ ಇಲಾಖೆಯ ಅತ್ಯಾಚಾರ’

ಅರಣ್ಯ ಇಲಾಖೆ ದೌರ್ಜನ್ಯದ ವಿರುದ್ಧ ಹೋರಾಟಕ್ಕಿಳಿದ ಆರ್ ಎಂ ಎಂ;

‘ನೊಂದವರ ವಿರುದ್ಧ ಅರಣ್ಯ ಇಲಾಖೆಯ ಅತ್ಯಾಚಾರ’

ವಯನಾಡು ಮತ್ತು ಶಿರೂರು ಗುಡ್ಡು ಕುಸಿತ ಪ್ರಕರಣಗಳನ್ನು ಮುಂದಿಟ್ಟುಕೊಂಡು ಅರಣ್ಯ ಒತ್ತುವರಿ ನೆಪದಲ್ಲಿ ಬಡ ಮತ್ತು ಸಣ್ಣ ಹಿಡುವಳಿದಾರರನ್ನು ಒಕ್ಕೆಲೆಬ್ಬಿಸಲು ಮುಂದಾಗಿರುವ ಅರಣ್ಯ ಇಲಾಖಾಧಿಕಾರಿಗಳು ರಾಜ್ಯ ಅರಣ್ಯ ಸಚಿವರ ನೇತೃತ್ವದಲ್ಲಿ ಕೈಗೊಂಡ ನಿರ್ಣಯವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷರಾದ ಆರ್. ಎಂ ಮಂಜುನಾಥಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ.
ಸುದ್ಧಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಇತ್ತಿಚೆಗಷ್ಟೆ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾ ಉಸ್ತುವಾರಿಸಚಿವರಾದ ಮಧುಬಂಗಾರಪ್ಪ ಅವರ ಉಪಸ್ಥಿತಿಯಲ್ಲಿ ನಡೆದ ಅರಣ್ಯಾಧಿಕಾರಿಗಳ ಸಭೆಯಲ್ಲಿ ೨೦೧೫ರ ನಂತರದಲ್ಲಿ ಒತ್ತುವರಿಯಾದ ಅರಣ್ಯ ಭೂಮಿ ತೆರವು ಗೊಳಿಸಲು ಮಾತ್ರ ನಡವಳಿಗಳನ್ನು ಕೈಗೊಳ್ಳಲಾಗಿತ್ತು. ೨೦೧೫ ಕ್ಕಿಂತ ಹಿಂದಿನ ಅರಣ್ಯ ಭೂಮಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟೀ ಸರ್ವೇ ನಡೆಸಬೇಕಾಗಿದೆ. ಸರ್ವೇ ನಡೆಯುವ ಮುಂಚೆಯೇ ಅರಣ್ಯ ಇಲಾಖೆ  ಬಡ ಸಾಗುವಳಿ ದಾರರನ್ನು ಒಕ್ಕೆಲೆಬ್ಬಿಸಲು ಮುಂದಾಗಿದ್ದು ಅಮಾನವೀಯವಾಗಿ ವರ್ತಿಸುತ್ತಿದ್ದಾರೆ  ಸಭೆಯ ನಿರ್ಣಯವನ್ನು ಉಲ್ಲಂಘಿಸಿದ್ದು ಇಂದು ಖಂಡನೀಯ ಎಂದರು.
ಕೇಂದ್ರ ಸರ್ಕಾರ  ವಯನಾಡು, ಶಿರೂರು ಗುಡ್ಡಕುಸಿತ ಪ್ರಕರಣಗಳನ್ನು ನೆಪವಾಗಿರಿಸಿಕೊಂಡು ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಮುಂದಾಗಿದೆ. ಈಗಾಗಲೆ ವರದಿ ಜಾರಿ ಬಗ್ಗೆ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದು, ಆಕ್ಷೇಪಣೆ ಸಲ್ಲಿಸುವ ಅವಧಿ ಇನ್ನೂ ಇರುವಾಗಲೆ ಒತ್ತುವರಿ ತೆರವಿಗೆ ಅರಣ್ಯ ಇಲಾಖೆ ಮುಂದಾಗಿದೆ.  ಒತ್ತುವರಿ ಸಮಸ್ಯೆಯನ್ನು ಮುಂದಿಟ್ಟುಕೊಂಡೆ ಚುನಾವಣೆಗಳಲ್ಲಿ ಗೆದ್ದ ಬಿಜೆಪಿ ಸಂಸದರು, ರೈತ ನಾಯಕು, ಹುಟ್ಟು ಹೋರಾಟಗಾರರೆನಿಸಿಕೊಂಡವರು ಈಗ ಮೌನವಾಗಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಯಾಕೆ ಪರಿಹಾರ ಕೊಡಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಸಂಸದ ಬಿ.ವೈ ರಾಘವೆಂದ್ರ ಅವರ ವಿರುದ್ದ  ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ವಾಣಿಜ್ಯ ಉದ್ದೇಶಗಳಿಗಾಗಿ, ರೆಸಾರ್ಟ್, ಶಿಕ್ಷಣ ಸಂಸ್ಥೆಗಳಿಗಾಗಿ ವನ್ಯಜೀವಿಅರಣ್ಯ ವ್ಯಾಪ್ತಿಯ ಭೂಮಿಯನ್ನು ಕಬಳಿಸಿರುವವರ ಬಗ್ಗೆ ಅರಣ್ಯ ಇಲಾಖೆ ಮೌನ ವಹಿಸಿರುವುದಾದರೂ ಏಕೆ? ಬಡವರು ಒಂದೋ ಎರಡೋ ಎಕರೆ ಸಾಗುವಳಿ ಮಾಡಿಕೊಂಡಿರುವವರ ಮೇಲೆ ಅಮಾನವೀಯವಾಗಿ ವರ್ತಿಸಲಾಗುತ್ತಿದೆ. ಫಸಲಿಗೆ ಬಂದ ಬೆಳೆಯನ್ನು ನಾಶ ಮಾಡಲಾಗುತ್ತಿದೆ ಇದನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ. ಅರಣ್ಯ ಇಲಾಖೆ ವರ್ತನೆ ಮತ್ತು ಕೇಂದ್ರ ಸರ್ಕಾರದ ವಿರುದ್ದ ಹೋರಾಟ ನಡೆಸಲಾಗುವುದು ಎಂದು ಮಂಜುನಾಥ ಗೌಡರು ಕಸ್ತೂರಿ ರಂಗನ್ ವರದಿ ವಾಸ್ತವಿಕ ಅಂಶಗಳನ್ನು ಒಳಗೊಂಡಿಲ್ಲ. ಇಂತಹ ವರದಿ ಜಾರಿಗೆ ನಮ್ಮ ವಿರೋಧವಿದೆ ಎಂದರು.
ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ೨೦೧೫ ರ ಆಚೆಗೆ ಅರಣ್ಯ ಭೂಮಿ ಒತ್ತುವರಿ ಮಾಡಿರುವಂತಹ ರೈತರನ್ನು ಯಾವುದೇ ಕಾರಣಕ್ಕೂ ಒಕ್ಕೆಲೆಬ್ಬಿಸಬಾರದು ಎಂದು ಹೇಳಲಾಗಿದೆ. ಜತೆಗೆ ಇವರೆಲ್ಲಬಡವರೇ ಆಗಿದ್ದಾರೆ. ಆದರೆ ಅರಣ್ಯ ಇಲಾಖೆಯವರು ಪ್ರತಿಷ್ಟಿತರ ಒತ್ತುವರಿ ತೆರೆವು ಮಾಡುವ ಬದಲಿಗೆ ಬಡವರನ್ನು ಟಾರ್ಗೆಟ್ ಮಾಡಿದ್ದಾರೆ. ಅವರು ಮಾನವೀಯತೆ ತೋರುವ ಬದಲಿಗೆ ದರ್ಪ ತೋರುತ್ತಿರುವುದು ವಿಚಿತ್ರವಾಗಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್. ಕೆ ಮರಿಯಪ್ಪ, ಕೆಪಿಸಿಸಿ ಸದಸ್ಯ ವೈ.ಹೆಚ್.ನಾಗರಾಜ್,  ಜಿಲ್ಲಾ ಕಾಂಗ್ರೇಸ್ ಪದಾಧಿಕಾರಿಗಳಾದ ಧೀರರಾಜ್ ಹೊನ್ನವಿಲೆ. ಶಿ.,ಜು ಪಾಶ, ಕೃಷ್ಣ, ರಾಘವೇಂದ್ರ ಮತ್ತಿತರರು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.