ಪ್ರಾಮಾಣಿಕ ಅಧಿಕಾರಿ ಮೃತ ಚಂದ್ರಶೇಖರನ್ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡದಿದ್ದರೆ ಜೈಲ್ ಭರೋ- ಕೆ.ಎಸ್.ಈಶ್ವರಪ್ಪ

 ಪ್ರಾಮಾಣಿಕ ಅಧಿಕಾರಿ ಮೃತ ಚಂದ್ರಶೇಖರನ್ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡದಿದ್ದರೆ ಜೈಲ್ ಭರೋ- ಕೆ.ಎಸ್.ಈಶ್ವರಪ್ಪ

 ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಕುಟುಂಬಕ್ಕೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡದಿದ್ದರೆ ಜೈಲ್‌ಬರೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತರ ಬಳಗದ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ತಳ ಸಮುದಾಯದ ಅಭಿವೃದ್ಧಿಗೆ ನಿಗದಿಪಡಿಸಿದ್ದ ಹಣದ ದುರುಪಯೋಗವನ್ನು ಬಯಲಿಗೆಳೆದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಕುಟುಂಬ ತೀವ್ರ ಸಂಕಷ್ಟದಲ್ಲಿದ್ದು ರಾಜ್ಯ ಸರ್ಕಾರ ತಾನು ಘೋಷಿಸಿದಂತೆ ೨೫ ಲಕ್ಷ ರೂ. ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸಮಾಜ ಕಲ್ಯಾಣ ಸಚಿವ ಮಹದೇವಪ್ಪನವರಿಗೆ ಈ ಹಿಂದೆ ನಾನು ಮಾತುಕತೆ ನಡೆಸಿದ್ದೆ, ಅವರು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ೧೦ ದಿನದೊಳಗೆ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ನಾವು ಇನ್ನೂ ಮೂರ್ನಾಲ್ಕು ದಿನ ಕಾಯುತ್ತೇವೆ ನಂತರ ಅವರು ಹಣ ಬಿಡುಗಡೆ ಮಾಡದಿದ್ದರೆ ೫ಲಕ್ಷ ಹಣವನ್ನು  ಕೂಡಿಸಿಕೊಂಡು ಚಂದ್ರಶೇಖರನ ಕುಟುಂಬಕ್ಕೆ ನೀಡುತ್ತೇವೆ. ೨೦ನೇ ತಾರೀಖಿನ ನಂತರ ಸರ್ಕಾರ ಹಣ ಬಿಡುಗಡೆ ಮಾಡದಿದ್ದರೆ ಜೈಲ್ ಬರೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.
ರಾಷ್ಟ್ರಭಕ್ತರ ಬಳಗದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ನಮ್ಮನ್ನ ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿ ನಂತರ ಬಿಡುಗಡೆ ಮಾಡಿದರೆ ನಾವು ಅದನ್ನು ಒಪ್ಪುವುದಿಲ್ಲ ಜೈಲಿಗೆ ಹಾಕಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದರು. ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ  ರಾಜ್ಯಪಾಲರು ಅನುಮತಿ ನೀಡಿರುವುದನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಲಯದ ಮೊರೆ ಹೋಗಿದ್ದು ಇಂದು ಅದರ ತೀರ್ಪು ಹೊರಬರುವ ಸಾಧ್ಯತೆ ಇದೆ. ಅವರ ವಿರುದ್ಧ ತೀರ್ಪು ಬಂದರೆ ನೈತಿಕವಾಗಿ ರಾಜೀನಾಮೆ ಕೊಟ್ಟು ಈ ನೆಲದ ಕಾನೂನನ್ನ ಗೌರವಿಸಬೇಕಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಅವರು ರಾಜೀನಾಮೆ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಇದು ಸರಿಯಲ್ಲ ನ್ಯಾಯವನ್ನ ಗೌರವಿಸದಂತಾಗುವುದಿಲ್ಲ ಎಂದು ಹೇಳಿದರು.
ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರ ಸಂಪುಟದ ಸಚಿವ ಜಾರ್ಜ್ ವಿರುದ್ಧ ಆರೋಪ ಕೇಳಿ ಬಂದಾಗ ಅವರ ರಾಜೀನಾಮೆಯನ್ನು ಪಡೆಯಲಾಗಿತ್ತು. ನಾನು ಸಚಿವನಾಗಿದ್ದಾಗ ನನ್ನ ಮೇಲೆ ಆರೋಪ ಬಂದಾಗಲೂ ಸಹ ನಾನು ರಾಜೀನಾಮೆ ನೀಡಿದ್ದೆ ನಮ್ಮಿಬ್ಬರಿಗೆ ಒಂದು ಕಾನೂನು ಸಿದ್ದರಾಮಯ್ಯನವರಿಗೆ ಒಂದು ಕಾನೂನೇ ಎಂದು ಪ್ರಶ್ನಿಸಿದ ಅವರು, ಈ ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು.  ಆದ್ದರಿಂದ ಅವರು ರಾಜೀನಾಮೆ ನೀಡಬೇಕಾಗುತ್ತದೆ ಆರೋಪದಿಂದ ಮುಕ್ತರಾಗಿ ಹೊರ ಬರಲಿ ಎಂಬುದು ನನ್ನ ಆಶಯ ತಾಯಿ ಚಾಮುಂಡೇಶ್ವರಿ ಆ ಬಗ್ಗೆ ಅವರಿಗೆ ಆಶೀರ್ವದಿಸಲಿ ಎಂಬುದು ಕೂಡ ನನ್ನ ಬಯಕೆಯಾಗಿದೆ ಆದರೆ ನ್ಯಾಯಾಲಯದ ತೀರ್ಪಿಗೆ ಗೌರವ ಕೊಡಲೇಬೇಕಾಗುತ್ತದೆ ಎಂದು ಹೇಳಿದರು.
ಮೂಡ ಹಗರಣ ಬೆಳಕಿಗೆ ಬಂದ ನಂತರ  ೨೫೨ . ೧೦ ಎಕರೆ ಜಮೀನಿಗೆ ೮೪೮ ನಿವೇಶನಗಳನ್ನ ಒಂದೇ ದಿನ ಅಂದಿನ ಆಯುಕ್ತರು ಮಂಜೂರು ಮಾಡಿದ್ದಾರೆ ಎಂಬ ಮಾಹಿತಿ ಇದೀಗ ಹೊರ ಬರುತ್ತಿದೆ. ಅಭಿವೃದ್ಧಿ ಪ್ರಾಧಿಕಾರಗಳ ಮುಖಾಂತರ ಹಣ ಲೂಟಿ ಹೊಡೆಯಲು ರಾಜ್ಯ ಸರ್ಕಾರ ನಿಶ್ಚಯಿಸಿದೆಯೇ ಎಂದು ಖಾರವಾಗಿ ಪ್ರಶ್ನಿಸಿದರು. ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ಕುರಿತು ತನಿಖೆಯನ್ನು ನಡೆಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ದೇವಾಲಯಕ್ಕೆ ಮೈಲಾರ ದೇವಸ್ಥಾನಕ್ಕೆ ಭೇಟಿ ನೀಡುವುದು ಅತ್ಯಂತ ಒಳ್ಳೆಯ ಬೆಳವಣಿಗೆ ಆದರೆ ಇದೇ ಮುಖ್ಯಮಂತ್ರಿಗಳು ಕುಂಕುಮ ಹಚ್ಚಲು ಬಂದರೆ ಕೇಸರಿ ಪೇಟ ಕಟ್ಟಲು ಬಂದರೆ ಮೈಮೇಲೆ ದೇವರು ಬಂದಂತೆ ಆಡುತ್ತಿದ್ದರು ಎಂದು ವ್ಯಂಗ್ಯವಾಡಿದ ಅವರು,  ಮುಸ್ಲಿಂ ಮತಗಳನ್ನು ಓಲೈಸುವುದಕ್ಕಾಗಿ ಅವರ ಪರವಾಗಿ ನಿಯಮಗಳನ್ನು ರೂಪಿಸುವುದು ಆ ಸಮುದಾಯದ ಪರವಾದ ಹೇಳಿಕೆಗಳನ್ನು ಕೊಡುವುದು, ಅವರಂತೆ ಟೋಪಿ ಹಾಕುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿದ್ದಾರೆ ಎಲ್ಲವೂ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಎಂದು ಟೀಕಿಸಿದರು.
ಕುಂದಾಪುರದ ಶಿಕ್ಷಕರಿಗೆ ರಾಜ್ಯಮಟ್ಟದ ಪ್ರಶಸ್ತಿಯನ್ನು ರಾಜ್ಯ ಸರ್ಕಾರವೇ ಘೋಷಿಸಿದೆ ದುರಂತವೆಂದರೆ ಯಾವುದೋ ಒಂದು ಸಂಘಟನೆಯ ವ್ಯಕ್ತಿ  ಹಿಜಾಬ್ ವಿಚಾರವನ್ನು ನೆನಪು ಮಾಡಿದ ಎಂಬ ಕಾರಣಕ್ಕಾಗಿ ಶಿಕ್ಷಣ ಸಚಿವರು ಆ ಪ್ರಶಸ್ತಿಯನ್ನು ತಡೆಹಿಡಿದಿದ್ದಾರೆ. ಇದು ಅತ್ಯಂತ ಖಂಡನೀಯ ಇದೇ ರೀತಿ ಮುಸ್ಲಿಂ ಶಿಕ್ಷಕನಿಗೆ ಮಾಡಿದ್ದರೆ ಸುಮ್ಮನಿರುತ್ತಿದ್ದರೆ ಎಂದು ಪ್ರಶ್ನಿಸಿದರು.  ಕೂಡಲೇ ಅವರಿಗೆ ಗೌರವಯುತವಾಗಿ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕ ಗಣಪತಿ ಕಾರ್ಯಕ್ರಮಗಳಲ್ಲಿ ನಡೆಯುತ್ತಿರುವ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ವಿತರಿಸುವ ಆಹಾರವನ್ನು ಆಹಾರ ಇಲಾಖೆಯಿಂದ ಪರೀಕ್ಷಿಸಿ ವಿತರಿಸಬೇಕು ಎಂಬ ರಾಜ್ಯ ಸರ್ಕಾರದ ಆದೇಶ ಸಂಪೂರ್ಣ ಅವೈಜ್ಞಾನಿಕ ಭಕ್ತರು ಪ್ರಸಾದವನ್ನು ಪ್ರಸಾದವಾಗಿಯೇ ಸ್ವೀಕರಿಸುತ್ತಾರೆ. ಆದ್ದರಿಂದ ಅವರುಗಳಿಗೆ ಏನೂ ಆಗುವುದಿಲ್ಲ ಇಂತಹ ನಿಯಮಗಳನ್ನ ಮಾಡುವುದನ್ನು ರಾಜ್ಯ ಸರ್ಕಾರ ಕೈಬಿಡಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಸುವರ್ಣ ಶಂಕರ್, ಕಾರ್ಪೊರೇಟರ್ ಇ.ವಿಶ್ವಾಸ್, ನಗರಸಭೆ ಮಾಜಿ ಅಧ್ಯಕ್ಷ ಎಂ ಶಂಕರ್, ಮೋಹನ್, ಬಾಲು, ಶಿವು, ಶಂಕರ್‌ನಾಯಕ್,  ಚನ್ನಬಸಪ್ಪ, ನಾಗರಾಜ್ ಜಾದವ್ ಇತರರು ಉಪಸ್ಥಿತರಿದ್ದರು