ಪತ್ರಿಕಾಗೋಷ್ಠಿಯಲ್ಲಿ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು-ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ- ಎಸ್.ರುದ್ರೇಗೌಡರಿಂದ ವಿವರ*

*ಪತ್ರಿಕಾಗೋಷ್ಠಿಯಲ್ಲಿ ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು-ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ- ಎಸ್.ರುದ್ರೇಗೌಡರಿಂದ ವಿವರ*

*ಬಸವ ಜಯಂತಿ ಆಚರಣಾ ಸಮಿತಿಯಿಂದ ಮೇ.9 ರಂದು ಸಂಜೆ ಸಾವಿರದ ವಚನ ವಿಶೇಷ ಕಾರ್ಯಕ್ರಮ*

ಬಸವ ಜಯಂತಿ ಆಚರಣಾ ಸಮಿತಿ ಈ ವರ್ಷ “ಸಾವಿರದ ವಚನ” ಪ್ರಸ್ತುತ ಪಡಿಸುತ್ತಿದ್ದು, ಮೇ 9 ರ ಶುಕ್ರವಾರ ಸಂಜೆ 5:30 ಕ್ಕೆ ಅಲ್ಲಮಪ್ರಭು ಬಯಲಿನಲ್ಲಿ ಒಂದು ಸಾವಿರ ಗಾಯಕರು ಹಾಡುವ ಬೃಹತ್ ಕಾರ್ಯಕ್ರಮ ಆಯೋಜನೆಗೊಂಡಿದೆ ಎಂದು ಬೆಕ್ಕಿನ ಕಲ್ಮಠದ ಶ್ರೀ ಮ ನಿ ಪ್ರ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಮಹಾಸ್ವಾಮಿಗಳು, ಶ್ರೀ ಡಾ.ಬಸವ ಮರುಳಸಿದ್ದ ಸ್ವಾಮೀಜು ಹಾಗೂ ಬಸವ ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷ ಎಸ್.ರುದ್ರೇಗೌಡರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಶಿವಮೊಗ್ಗ ಅಲ್ಲಮಪ್ರಭುಗಳು, ಅಕ್ಕ ಮಹಾದೇವಿ, ಗೊಗ್ಗಯ್ಯ, ಸತ್ಯಕ್ಕ ಮೊದಲಾದ 40 ಕ್ಕೂ ಹೆಚ್ಚಿನ ಶರಣರ ತವರಾಗಿದೆ. ಶಿವಮೊಗ್ಗ ನಗರವನ್ನು “ಬಸವ ಜಯಂತಿ ಆಚರಣೆಯ ಜಾಗತಿಕ ಕೇಂದ್ರ”ವನ್ನಾಗಿ ರೂಪಿಸುವ ಮಹತ್ವಾಕಾಂಕ್ಷಿ ಚಿಂತನೆಯನ್ನು ಬಸವ ಜಯಂತಿ ಆಚರಣಾ ಸಮಿತಿ ಹೊಂದಿದೆ ಹಾಗೂ ಅದರ ಫಲವಾಗಿ ಬಸವೋತ್ಸವ ರೂಪುಗೊಳ್ಳುತ್ತಿದೆ ಎಂದರು.

ಇದೊಂದು ಜಾತಿಗೆ ಸೀಮಿತವಾದ ಉತ್ಸವವಲ್ಲ: ಬದಲಿಗೆ ಬಸವ ತತ್ವ ಆರಾಧಕರ, ಒಪ್ಪುವವರ ಮತ್ತು ಬಯಸುವವಲ್ಲರ ಉತ್ಸವ. ಅಣ್ಣ ಬಸವಣ್ಣನವರ ಹಾಗೂ ಇತರ ಶರಣರ ತತ್ವಗಳು ಹಿಂದೆಂದಿಗಿಂತಲೂ ಇಂದು ಮನುಕುಲಕ್ಕೆ ಅತ್ಯಗತ್ಯವಾಗಿ ಬೇಕಾಗಿದೆ. ಆ ನಿಟ್ಟಿನಲ್ಲಿ ಈ ತರಹದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಭಕ್ತಿ ಭಂಡಾರಿ, ಜಗತ್ತಿನ ಮೊದಲ ಸಂಸತ್ತು ಅನುಭವ ಮಂಟಪದ ಕರ್ತೃ, ಕರ್ನಾಟಕದ ಸಾಂಸ್ಕೃತಿಕ ನಾಯಕ ಅಣ್ಣ ಬಸವಣ್ಣನವರ 38 ವಚನಗಳನ್ನು ಸಿ. ಅಶ್ವತ್ ಅವರು 8 ಹಾಡುಗಳ ರೂಪದಲ್ಲಿ ವ್ಯಕ್ತಿಯೊಬ್ಬ ಭಕ್ತಿಯ ಶಿಖರ ಏರುವ ರೂಪಕದಲ್ಲಿ “ಕೂಡಲ ಸಂಗಮ” ಎನ್ನುವ ಧ್ವನಿ ಸುರುಳಿಯ ಮೂಲಕ ಜನಜನಿತ ಗೊಳಿಸಿದ್ದರು. ಆ ಎಲ್ಲ ವಚನಗಳೂ ಸಾಂಸ್ಕೃತಿಕವಾಗಿ ಮಹತ್ವ ಉಳ್ಳವೂ ಮತ್ತು ಸದಾ ಗುನುಗುತ್ತಾ ಇರುವ ಗುಣವುಳ್ಳವೂ ಆಗಿರುವಂತವು. ಇಂತಹ ವಿಶಿಷ್ಟ ವಚನಗಳನ್ನು ಒಂದೇ ವೇದಿಕೆಯಲ್ಲಿ ಸಾವಿರ ಕಂಠಗಳು ಹಾಡುವ ರೋಮಾಂಚನವೇ ಬೇರೆ.

*ಕಾರ್ಯಕ್ರಮದ ವೈಶಿಷ್ಟ್ಯಗಳು:*

ವಚನಗಳ ಸಾಂಸ್ಕೃತಿಕ, ತಾತ್ವಿಕ ಮತ್ತು ಸಾಮಾಜಿಕ ಅರ್ಥವನ್ನು ಹೊಸ ತಲೆಮಾರಿಗೆ ಪರಿಚಯಿಸುವ ಮಹತ್ವದ ಪ್ರಯತ್ನ.

ಸಾಮೂಹಿಕ ಗಾಯನದ ಮೂಲಕ ಸಾಮರಸ್ಯ, ಸೌಹಾರ್ದತೆ ಹಾಗೂ ಶರಣ ಪರಂಪರೆಯ ಮೌಲ್ಯಗಳ ಪ್ರಭಾವಶಾಲಿ ಪ್ರಚಾರ.

ಸ್ಥಳೀಯ ಕಲಾವಿದರು, ವಿದ್ಯಾರ್ಥಿಗಳು ಹಾಗೂ ವಚನಾಸಕ್ತರು ಭಾಗವಹಿಸುವ ಬೃಹತ್ ಸಂಘಟಿತ ಕಾರ್ಯಕ್ರಮ.

ಬಸವ ತತ್ವದೊಂದಿಗೆ ಸಂಗೀತದ ಸಮನ್ವಯ – ಮನಸ್ಸಿಗೆ ಸ್ಪರ್ಶಿಸುವ ಅನನ್ಯ ಅನುಭವ.ಎಲ್ಲ ಜಾತಿ ವರ್ಗ, ವರ್ಣ, ಧರ್ಮ, ಲಿಂಗ, ಕಾಯಕದ ಸಮಾನತೆ ಇರುವ ವೇದಿಕೆ ಎಂದರು.

ಈ ಕಾರ್ಯಕ್ರಮದಲ್ಲಿ ವಚನಗಳನ್ನು ಹಾಡುವವರಿಗಾಗಿ ಆನ್ ಲೈನ್ ಮೂಲಕ ನೋಂದಣಿ ಮಾಡಲು ಕೋರಿಕೊಳ್ಳಲಾಗಿತ್ತು. ಸಾವಿರದ ಇನ್ನೂರಕ್ಕೂ ಹೆಚ್ಚು ಗಾಯಕರು ಈಗಾಗಲೇ ನೋಂದಣಿ ಮಾಡಿಸಿಕೊಂಡಿದ್ದಾರೆ.

ದೂರದ ಊರುಗಳಾದ ಚೆನ್ನೈ, ಬೆಂಗಳೂರು, ಕೊಪ್ಪಳ, ಹುಬ್ಬಳ್ಳಿ, ವಿಜಯಪುರ, ರಾಯಚೂರು, ಬೀರೂರು, ದಾವಣಗೆರೆ, ಶಿರಾಳಕೊಪ್ಪ, ಶಿಕಾರಿಪುರ, ತರೀಕೆರೆ, ಭದ್ರಾವತಿ ಹಾಗೂ ಇನ್ನೂ ಹಲವು ಊರುಗಳಿಂದ ಗಾಯಕರು ಬರುತ್ತಿದ್ದಾರೆ. ಸಿ ಅಶ್ವಥ್ ಅವರ ರಾಗಸಂಯೋಜನೆಯಲ್ಲಿ ಗಾಯಕರಾಗಿ ಹಾಡಿದ್ದ ಮೈಸೂರಿನ ಜನಾರ್ದನ್ (ಜನ್ನಿ), ಶಿವಮೊಗ್ಗದವರೇ ಆದ ಕೆ ಯುವರಾಜ್ , ಸಿ ಅಶ್ವಥ್ ರವರ ಸಹಾಯಕರಾಗಿದ್ದ ಬೆಂಗಳೂರಿನ ಸುದರ್ಶನ್ , ಚಿಕ್ಕಮಗಳೂರಿನ ಮಲ್ಲಿಗೆ ಸುಧೀರ್ ಇದರ ಬೆನ್ನಿಗೆ ನಿಂತಿದ್ದಾರೆ. ಶಿವಮೊಗ್ಗದ ಪ್ರಖ್ಯಾತ ಸಂಗೀತ ವಿದ್ವಾಂಸರು ಒಟ್ಟಾಗಿ ಇದರ ಸಾರಥ್ಯ ವಹಿಸಿದ್ದಾರೆ. ವಿದ್ವಾನ್ ನಾಗರಾಜ್ ಗುರುಗುಹ, ಪಂಡಿತ್ ಹುಮಾಯೂನ್ ಹರ್ಲಾಪುರ, ಜಯಶ್ರೀ ಶ್ರೀಧರ್, ನಾಗರತ್ನ ಟಿ ಜೆ. ಪ್ರಹ್ಲಾದ್ ದೀಕ್ಷಿತ್ ಸುರೇಖಾ ಹೆಗ್ಡೆ, ಮಹೇದ್ರ ಗೋರೆ. ವಿನಯ್ ಯಜ್ಞನಾರಾಯಣ, ಉಮಾ ದಿಲೀವ್ ಹಾಗೂ ಇನ್ನು ಹಲವು ಸಂಗೀತ ವಿದ್ವಾಂಸರು ಸಾವಿರಾರು ಜನರಿಗೆ ಕಳೆದ ಹತ್ತಾರು ದಿನಗಳಿಂದ ತರಬೇತಿ ನೀಡುತ್ತಿದ್ದಾರೆ.

ಶಿವಮೊಗ್ಗದ ಎಲ್ಲ ಜಾತಿ, ವರ್ಗದ ಜನರು. ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ, ಹತ್ತಾರು ವಿವಿಧ ಕಾಯಕ ನಿರತ ವರ್ಗಗಳಿಂದ ಗಾಯಕರು ಹಾಡಲಿದ್ದಾರೆ. ಸಮಾಜದ ಅನೇಕರು ಈ ಕಾರ್ಯಕ್ರಮ ದಾಸೋಹಿಗಳಾಗಿ ಸಹಕರಿಸುತ್ತಿದ್ದಾರೆ.

ಅಲ್ಲಮಪ್ರಭು ಬಯಲಿನಲ್ಲಿ 260 ಅಡಿ ಅಗಲ ಹಾಗೂ 7 ಮೆಟ್ಟಿಲುಗಳ ಬೃಹತ್ ವೇದಿಕೆ ಸಿದ್ಧವಾಗುತ್ತಿದೆ. ಕಾರ್ಯಕ್ರಮಕ್ಕೆ 7-8 ಸಾವಿರಕ್ಕೂ ಹೆಚ್ಚು ಜನ ಬರುವ ನಿರೀಕ್ಷೆಯಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಅಂದು ಕಾರ್ಯಕ್ರಮಕ್ಕೆ ಬರುವವರಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ.

ಶಿವಮೊಗ್ಗ ಮತ್ತು ಸುತ್ತುಮುತ್ತಲಿನ ಜನರಿಗೆ ಒಂದು ಸಾವಿರ ಗಾಯಕರು ಹಾಡುವ ವಚನಗಳ 8 ಹಾಡುಗಳ ರೋಮಾಂಚನಕಾರಿ ಕಾರ್ಯಕ್ರಮ ವೀಕ್ಷಿಸುವ ಅವಕಾಶ ಇದ್ದು, ಅಸಕ್ತರು ಬನ್ನಿ ಎಂದು ಸಮಿತಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ
ಶ್ರೀ ಮ ನಿ ಪ್ರ ಡಾ.ಬಸವ ಮರುಳಸಿದ್ದ ಸ್ವಾಮೀಜಿ,
ಎಸ್.ಎಸ್‌ ಜ್ಯೋತಿ ಪ್ರಕಾಶ್, (ಪ್ರಧಾನ ಕಾರ್ಯದರ್ಶಿಗಳು, ಬಸವ ಜಯಂತಿ ಆಚರಣಾ ಸಮಿತಿ), ಹೆಚ್ ಸಿ ಯೋಗೀಶ್, (ಖಜಾಂಚಿ, ಬಸವ ಜಯಂತಿ ಆಚರಣಾ ಸಮಿತಿ), ಡಾ. ಧನಂಜಯ ಸರ್ಜಿ, (ಖಜಾಂಚಿ, ಬಸವ ಜಯಂತಿ ಆಚರಣಾ ಸಮಿತಿ) ಉಪಸ್ಥಿತರಿದ್ದರು.