ಬಿ – ಖಾತಾ ಆಸ್ತಿ ಮಾಲೀಕರಿಗೆ ಎದುರಾಯ್ತು ಹೊಸ ಸಂಕಷ್ಟ!*

*ಬಿ – ಖಾತಾ ಆಸ್ತಿ ಮಾಲೀಕರಿಗೆ ಎದುರಾಯ್ತು ಹೊಸ ಸಂಕಷ್ಟ!*

B-Khata: ಕರ್ನಾಟಕ ಸರ್ಕಾರವು ಬಿ ಖಾತಾ ಅವಧಿಯನ್ನು ವಿಸ್ತರಿಸಿದೆಯಾದರೂ, ಬಿ ಖಾತಾಗೆ ಸಂಬಂಧಿಸಿದ ಗೊಂದಲಗಳು ಮುಂದುವರಿದಿವೆ. ರಾಜ್ಯದಲ್ಲಿ 30ರಿಂದ 40 ಲಕ್ಷಕ್ಕೂ ಹೆಚ್ಚು ಬಿ ಖಾತಾ ಆಸ್ತಿಗಳಿವೆ. ಬಿ ಖಾತಾಗೆ ಸಂಬಂಧಿಸಿದಂತೆ ಎಲ್ಲಾ ಸೌಕರ್ಯಗಳನ್ನು ನೀಡುವುದಾಗಿ ಸರ್ಕಾರ ಈ ಹಿಂದೆ ಹೇಳಿತ್ತು. ಆದರೆ, ಬಿ ಖಾತಾ ಹೊಂದಿರುವವರಿಗೆ ಬೆಸ್ಕಾಂನ ತಾತ್ಕಾಲಿಕ ಸಂಪರ್ಕ ಸಿಗುತ್ತಿಲ್ಲ. ಅಲ್ಲದೇ ಜಲಮಂಡಳಿಯ ಕನೆಕ್ಷನ್‌ ತೆಗೆದುಕೊಳ್ಳುವುದಕ್ಕೂ ಸಮಸ್ಯೆ ಆಗುತ್ತಿದೆ ಎಂದು ಬಿ ಖಾತಾ ಹೊಂದಿರುವವರು ಹೇಳುತ್ತಿದ್ದಾರೆ. ಇನ್ಮುಂದೆ ಬಿ ಖಾತಾ ಇರುವವರಿಗೆ ಬೆಸ್ಕಾಂ/ಮೆಸ್ಕಾಂ ಸಂಪರ್ಕ ಸಿಗುವುದಿಲ್ಲವೇ ಎನ್ನುವ ವಿವರ ಇಲ್ಲಿದೆ.

ಕರ್ನಾಟಕ ಸರ್ಕಾರವು ಅಕ್ರಮ, ಅನಧಿಕೃತ ಹಾಗೂ ರೆವಿನ್ಯೂ ಸೈಟ್‌ಗಳಿಗೆ ಒಂದು ಬಾರಿ ಬಿ ಖಾತಾ ಹಾಗೂ ಇ ಖಾತಾ ನೀಡುವುದನ್ನು ಪರಿಚಯಿಸಿದೆ. ಆದರೆ, ಮೊದಲ ಹಂತದಲ್ಲಿ ಕೇವಲ 3 ತಿಂಗಳು ಸಮಯವನ್ನು ನೀಡಿದ್ದ ರಾಜ್ಯ ಸರ್ಕಾರವು ಇದೀಗ ಇನ್ನೂ ಮೂರು ತಿಂಗಳು ಅವಧಿಯನ್ನು ವಿಸ್ತರಿಸಿದೆ. ಆದರೆ, ಅವಧಿ ವಿಸ್ತರಿಸಿದರೂ ತಾಂತ್ರಿಕ ಸಮಸ್ಯೆ ಹಾಗೂ ವಿವಿಧ ಸಂಸ್ಥೆಗಳಿಂದ ಸಹಕಾರ ಸಿಗುತ್ತಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಕರ್ನಾಟಕ ಸರ್ಕಾರವು ಎಲ್ಲಾ ಅಕ್ರಮ ಆಸ್ತಿಗಳಿಗೂ ಒಂದು ಬಾರಿ ತೆರಿಗೆ ಪಾವತಿ ಮಾಡುವ ಮೂಲಕ ಬಿ ಖಾತಾ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ, ಬೆಸ್ಕಾಂ/ ಮೆಸ್ಕಾಂ ಹಾಗೂ ಜಲಮಂಡಳಿಯಿಂದ ಸಂಪರ್ಕ ಸಮಸ್ಯೆ ಆಗುತ್ತಿದೆ ಎಂದು ಬಿ ಖಾತಾ ಹೊಂದಿರುವ ಆಸ್ತಿದಾರರು ಹೇಳುತ್ತಿದ್ದಾರೆ.

ಸರ್ಕಾರ ಒಂದು ಬಾರಿ ತೆರಿಗೆ ಪಾವತಿ ಮಾಡಿಕೊಳ್ಳುವುದಾಗಿ ಹೇಳಿದ್ದರೂ ಅದು ನಡೆಯುತ್ತಿಲ್ಲ. ಬಿ ಖಾತಾ ನಿವೇಶನ ಹೊಂದಿರುವ ಆಸ್ತಿ ಮಾಲೀಕರು ನಕ್ಷೆ ಮಂಜೂರಾತಿ ಹಾಗೂ ಬಾಕಿ ಆಸ್ತಿ ತೆರಿಗೆಯನ್ನು ಪಾವತಿಸುತ್ತೇವೆ ಎಂದರೂ ಕೆಲವು ಕಡೆ ಶುಲ್ಕವನ್ನು ಬಿ ಖಾತಾ ಆಸ್ತಿದಾರರಿಂದ ಕಟ್ಟಿಸಿಕೊಳ್ಳುತ್ತಿಲ್ಲ ಎಂದು ಹೇಳಲಾಗಿದೆ. ಇದು ಬಿ ಖಾತಾ ಹೊಂದಿರುವವರಿಗೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.

ಬಿ ಖಾತಾ ಇರುವ ಆಸ್ತಿಗಳಿಗೆ ಬೆಸ್ಕಾಂನಿಂದ ತಾತ್ಕಾಲಿಕ ಸಂಪರ್ಕ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಬಿಬಿಎಂಪಿಯಿಂದ ಒಸಿ ಹಾಗೂ ಸಿಸಿ ತೆಗೆದುಕೊಂಡು ಬರುವಂತೆ ಹೇಳಲಾಗುತ್ತಿದೆ. ಅಲ್ಲದೇ ನಂಬಿಕೆ ನಕ್ಷೆ ಇರಬೇಕು ಎಂಜಿನಿಯರ್ ಮಾಡಿರುವ ಪ್ಲಾನ್ ಅಪ್ ಲೋಡ್ ಮಾಡಿಕೊಂಡು ಬಿಬಿಎಂಪಿ ಎಂಜಿನಿಯರ್ ಈ ಪ್ಲ್ಯಾನ್ ಪರಿಶೀಲನೆ ಮಾಡಿರಬೇಕು. ಮನೆಯ ನಿರ್ಮಾಣ ಮಾಡುವಾಗ ಯಾವಾಗಾದರೂ ಬಿಬಿಎಂಪಿ ಎಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿರಬೇಕು ಎಂದೆಲ್ಲಾ ಬೆಸ್ಕಾಂ ಅಧಿಕಾರಿಗಳು ಕೇಳುತ್ತಿದ್ದಾರೆ ಎನ್ನುವುದು ಬಿ ಖಾತಾ ಆಸ್ತಿಯನ್ನು ಹೊಂದಿರುವ ಆಸ್ತಿದಾರರು ಸಂಕಷ್ಟವಾಗಿದೆ.

ಇನ್ನು ಬಿ ಖಾತಾ ಸಂಕಷ್ಟ ಮುಗಿಯುತ್ತಿಲ್ಲ ಎಂದು ಬಿ ಖಾತಾ ಹೊಂದಿರುವ ಆಸ್ತಿದಾರರು ಹೇಳುತ್ತಿದ್ದಾರೆ. ಸರ್ಕಾರ ಇನ್ನೂ ಮೂರು ತಿಂಗಳು ಅವಧಿ ವಿಸ್ತರಿಸಿದೆ. ಯಾವುದೇ ಖಾತಾ ಇಲ್ಲದೆ ಇರುವವರು ಬಿ ಖಾತಾ ಮಾಡಿಸಿಕೊಳ್ಳುತ್ತಿದ್ದರೂ. ಸರ್ಕಾರದ ವಿವಿಧ ಸಂಸ್ಥೆಗಳಿಂದ ಸೌಲಭ್ಯ ಸಿಗದೆ ಸಮಸ್ಯೆ ಆಗಿದೆ ಎನ್ನಲಾಗಿದೆ.