ವಿಶೇಷ ವರದಿ; *ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ;* *ಸೌಗಂಧಿಕಾ ರಘುನಾಥ್ ವಿರುದ್ಧ ಅಪಪ್ರಚಾರದ ಬಾಣ…* *ವಿಜಯಲಕ್ಷ್ಮೀ ಪಾಟೀಲ್ ವಿರುದ್ಧ ಜಾತಿ ಚಾಣ…*

ವಿಶೇಷ ವರದಿ;

*ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ;*

*ಸೌಗಂಧಿಕಾ ರಘುನಾಥ್ ವಿರುದ್ಧ ಅಪಪ್ರಚಾರದ ಬಾಣ…*

*ವಿಜಯಲಕ್ಷ್ಮೀ ಪಾಟೀಲ್ ವಿರುದ್ಧ ಜಾತಿ ಚಾಣ…*

ಶಿವಮೊಗ್ಗಕ್ಕೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಮಾಜಿ ಶಾಸಕರಾದ ಶ್ರೀಮತಿ ಸೌಮ್ಯಾರೆಡ್ಡಿ ಬಂದು ಹೋದ ನಂತರ ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲ ಆರಂಭವಾಗಿದೆ.

ಹಾಲಿ ಅಧ್ಯಕ್ಷರಾಗಿರುವ ಲಂಬಾಣಿ ಸಮುದಾಯದ ಶ್ರೀಮತಿ ಅನಿತಾ ಕುಮಾರಿಯವರ ಅಧ್ಯಕ್ಷಾವಧಿ 6 ವರ್ಷ ಆಗಿರುವ ಹಿನ್ನೆಲೆಯಲ್ಲಿ ಹೊಸ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದ್ದೇ ತಡ ಶಿವಮೊಗ್ಗದ ಮಹಿಳಾ ಕಾಂಗ್ರೆಸ್ಸಿಗರಲ್ಲಿಯೂ ಲಾಬಿ ಶುರುವಾಗಿದೆ.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ, ಸಂಘಟಕಿ ಶ್ರೀಮತಿ ಅನಿತಾ ಕುಮಾರಿಯವರು ಆರು ವರ್ಷಗಳ ಕಾಲ ಶಿವಮೊಗ್ಗ ಜಿಲ್ಲಾ ಮಹಿಳಾ ಅಧ್ಯಕ್ಷ ಸ್ಥಾನದಲ್ಲಿದ್ದರು. ಇವರಿಗಿಂತ ಹಿಂದೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ, ಸಂಘಟಕಿ ಶ್ರೀಮತಿ ವಿಜಯಲಕ್ಷ್ಮೀ ಪಾಟೀಲರು ಅಧ್ಯಕ್ಷರಾಗಿದ್ದರು. ಸುಮಾರು 14 ವರ್ಷಗಳಷ್ಟು ದೀರ್ಘ ಕಾಲ ಮಹಿಳಾ ಅಧ್ಯಕ್ಷೆ ಆಗಿದ್ದವರು ಶ್ರೀಮತಿ ವಿಜಯಲಕ್ಷ್ಮೀ ಪಾಟೀಲ್.

ಈಗ ಮತ್ತೆ ಶ್ರೀಮತಿ ವಿಜಯಲಕ್ಷ್ಮೀ ಪಾಟೀಲರು ಅಧ್ಯಕ್ಷರಾಗಲು ಲಾಬಿ ನಡೆಸುತ್ತಿದ್ದಾರೆ. ಇವರ ಜೊತೆ ತೀವ್ರ ಲಾಬಿಯಲ್ಲಿ ತೊಡಗಿರುವವರು ಸೋಷಿಯಲ್ ಮೀಡಿಯಾದ ರಾಜ್ಯ ಸಂಘಟಕಿ ಶ್ರೀಮತಿ ಸೌಗಂಧಿಕಾ ರಘುನಾಥ್.

ಒಂದು ಕಡೆ ಸೌಗಂಧಿಕಾ ರಘುನಾಥ್ ತಮ್ಮದೇ ದಾರಿಯಲ್ಲಿ ಲಾಬಿ ನಡೆಸುತ್ತಾ, ತಾವು ಪಕ್ಷಕ್ಕೆ ದುಡಿದ ಅಂಶಗಳನ್ನು ಮುಂದಿಟ್ಟುಕೊಂಡು ಅಧ್ಯಕ್ಷೆ ಆಗಲೇಬೇಕೆಂದು, ತನಗೆ ಆ ಅರ್ಹತೆ ಇದೆ ಎಂದು ಸಂಬಂಧಿಸಿದ ಕಾಂಗ್ರೆಸ್ ನಾಯಕರ ಬಳಿ ಸಾಧನೆ ಬಗ್ಗೆ ಹೇಳಿಕೊಳ್ಳುತ್ತಾ ಸಾಗಿರುವುದೇನೋ ಸರಿ. ಆದರೆ, ಇವರ ಈ ನಡೆಗೆ ದೊಡ್ಡ ಪೆಟ್ಟು ನೀಡುತ್ತಿರುವುದು ಸೌಗಂಧಿಕಾರವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರ!

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಮಧು ಬಂಗಾರಪ್ಪ ಸೇರಿದಂತೆ ಬಹಳಷ್ಟು ಕಾಂಗ್ರೆಸ್ ನಾಯಕರ ಮನವೊಲಿಕೆಗೆ ಪ್ರಯತ್ನಿಸುತ್ತಿರುವ ಸೌಗಂಧಿಕಾ ರಘುನಾಥ್ ವಿರುದ್ಧ ಅಪ ಪ್ರಚಾರ ನಡೆದಿದೆ ಎಂದು ಹೇಳಲಾಗುತ್ತಿದೆ.

ಅಪಪ್ರಚಾರದ ಮೂಲಕ ಶಕ್ತಿ ಇಳಿಸಿ ಸೌಗಂಧಿಕಾ ರಘುನಾಥ್ ರವರ ವಿರುದ್ಧ ಬಾಣಗಳನ್ನು ಹೂಡಿ, ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತಪ್ಪಿಸುವ ಎಲ್ಲಾ ಪ್ರಯತ್ನಗಳನ್ನೂ ಕೆಲವರು ಮಾಡುತ್ತಿದ್ದಾರೆಂದು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗಳು ನಡೆಯುತ್ತಿವೆ.

ಮೊದ ಮೊದಲು ಶ್ರೀಮತಿ ವಿಜಯಲಕ್ಷ್ಮೀ ಪಾಟೀಲರೇ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಈ ನಡುವೆ ಕೆಪಿಸಿಸಿ ಮಹಿಳಾ ಘಟಕ ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಮಹಿಳಾ ವಿಭಾಗಕ್ಕೆ ಶಿವಮೊಗ್ಗದ ಶ್ರೀಮತಿ ಪುಷ್ಪಾ ಶಿವಕುಮಾರ್ ರವರನ್ನು ರಾಜ್ಯ ಜನರಲ್ ಸೆಕ್ರೆಟರಿ ಹುದ್ದೆಗೆ ನೇಮಕ ಮಾಡಿ ಆದೇಶಿಸಿದ್ದೇ ತಡ ಆ ಪ್ರಭಾವ ಶ್ರೀಮತಿ ವಿಜಯಲಕ್ಷ್ಮೀ ಪಾಟೀಲರ ಆಯ್ಕೆಯ ಮೇಲೆ ಪ್ರಭಾವ ಬೀರತೊಡಗಿತೆಂದು ಹೇಳಲಾಗಿದೆ. ಪುಷ್ಪ ಶಿವಕುಮಾರ್ ಲಿಂಗಾಯತರಾಗಿರುವುದರಿಂದ ಜಿಲ್ಲಾ ಮಹಿಳಾ ಅಧ್ಯಕ್ಷ ಸ್ಥಾನ ಲಿಂಗಾಯತರಿಗೆ ಹೊರತುಪಡಿಸಿ ನೀಡಬೇಕೆಂಬ ಚರ್ಚೆಗಳು ವಿಜಯಲಕ್ಷ್ಮೀ ಪಾಟೀಲರ ಆಯ್ಕೆ ಮೇಲೆ ಎಫೆಕ್ಟ್ ಮಾಡುತ್ತಿವೆ ಎಂದು ಕಾಂಗ್ರೆಸ್ ಪ್ರಮುಖರೊಬ್ಬರು ಹೇಳುತ್ತಿದ್ದಾರೆ.

ಈ ಮಹಿಳಾ ಅಧ್ಯಕ್ಷ ಸ್ಥಾನ ಪಡೆದುಕೊಳ್ಳುವ ರೇಸಿನಲ್ಲಿರುವ ಶ್ರೀಮತಿ ಸೌಗಂಧಿಕಾ ರಘುನಾಥ್ ಅಪ ಪ್ರಚಾರದ ಬೆಂಕಿ ದಾರಿಯಲ್ಲಿ ಯಾವ ರೀತಿ ಸಾಗಿ ಹೊರಕ್ಕೆ ಬರಲಿದ್ದಾರೆ? ಜಾತಿ ಜಂಜಡದಲ್ಲಿ ಸಿಲುಕಿರುವ ಶ್ರೀಮತಿ ವಿಜಯಲಕ್ಷ್ಮೀ ಪಾಟೀಲರು ಆ ಜಾತಿ ಬಲೆಯನ್ನು ಹೇಗೆ ಬಿಡಿಸಿಕೊಳ್ಳಲಿದ್ದಾರೆ?

ಮಹಿಳೆಯನ್ನು ಮಣಿಸುವ ಕೊನೆಯ ಅಸ್ತ್ರ ಆಕೆಯ ವಿರುದ್ಧ ಅಪ ಪ್ರಚಾರ ಮಾಡುವುದು! ಅಂಥ ಅವಮಾನವನ್ನು ಕಾಂಗ್ರೆಸ್ಸಿನ ಶ್ರೀಮತಿ ಇಂದಿರಾ ಗಾಂಧಿ ಸೇರಿದಂತೆ ಬಹಳಷ್ಟು ಮಹಿಳೆಯರು ಅನುಭವಿಸಿ ಎದ್ದು ನಿಂತಿದ್ದಾರೆ.

ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಲಾಬಿ ಕೀಳು ಮಟ್ಟಕ್ಕಿಳಿಯದಿರಲಿ…ಆರೋಗ್ಯಕರ ಸ್ಪರ್ಧೆಯಿಂದಷ್ಟೇ ಕಾಂಗ್ರೆಸ್ ನಲ್ಲಿ ಉತ್ತಮ ಸಂಘಟನೆ ಕಟ್ಟಲು ಸಾಧ್ಯ!