ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ;* *ಎಪಿಎಂಸಿ ವಾಣಿಜ್ಯ ಸಂಕೀರ್ಣದಲ್ಲಿ ಜೂನ್ 9 ರಿಂದ ಕಾರ್ಯಾರಂಭ?* *ಅಧಿಕೃತ ದಸ್ತಾವೇಜುದಾರರ ಕಥೆ ಏನು?*
*ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ;*
*ಎಪಿಎಂಸಿ ವಾಣಿಜ್ಯ ಸಂಕೀರ್ಣದಲ್ಲಿ ಜೂನ್ 9 ರಿಂದ ಕಾರ್ಯಾರಂಭ?*
*ಅಧಿಕೃತ ದಸ್ತಾವೇಜುದಾರರ ಕಥೆ ಏನು?*
ಶಿವಮೊಗ್ಗ ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆವರಣದಿಂದ ಸಾಗರ ರಸ್ತೆಯಲ್ಲಿರುವ ಎಪಿಎಂಸಿ ವಾಣಿಜ್ಯ ಸಂಕೀರ್ಣಕ್ಕೆ ಎತ್ತಂಗಡಿಯಾಗುತ್ತಿದ್ದು, ಈಗಾಗಲೇ ಸಾಮಾನು ಸರಂಜಾಮುಗಳನ್ನು ಹೊಸ ಕಚೇರಿಯತ್ತ ಒಯ್ಯಲಾಗುತ್ತಿದೆ.
ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಗಳಾದ ಧನರಾಜ್ ಮತ್ತು ಸುಬ್ರಹ್ಮಣ್ಯರವರಿಬ್ಬರೂ ಸೋಮವಾರದವರೆಗೆ ನೋಂದಣಿ ಮಾಡದಿರುವಂತೆ ತಮ್ಮ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆಂದು ಹೇಳಲಾಗುತ್ತಿದೆ.
ಸಬ್ ರಿಜಿಸ್ಟ್ರಾರ್ ಕಚೇರಿಯನ್ನು ಸ್ಥಳಾಂತರಿಸುವ ವಿಚಾರ ಆರಂಭದಿಂದಲೂ ವಿವಾದಕ್ಕೆ ಕಾರಣವಾಗಿದೆ. ಕೆಲವರು ವಾಣಿಜ್ಯ ಸಂಕೀರ್ಣದ ಹರಾಜು ಪದರಕ್ರಿಯೆ ಮಾಡಿದ ಎಪಿಎಂಸಿ ವಿರುದ್ಧ ಕೋರ್ಟಿಗೂ ಹೋಗಿದ್ದು, ಅಂತಿಮ ತೀರ್ಪು ಹೊರಬಿದ್ದಿಲ್ಲ.
ಅಷ್ಟರಲ್ಲಾಗಲೇ, ಇಬ್ಬರೂ ಸಬ್ ರಿಜಿಸ್ಟ್ರಾರ್ ಗಳು ತಮ್ಮ ಕಚೇರಿಯನ್ನೇ ನಂಬಿಕೊಂಡು ಬದುಕುತ್ತಿರುವ ಸುಮಾರು 50ಕ್ಕೂ ಹೆಚ್ಚಿನ ಅಧಿಕೃತ ದಸ್ತಾವೇಜು ಬರಹಗಾರರಿಗೂ ತಿಳಿಸದೇ ಕಚೇರಿ ಸ್ಥಳಾಂತರಕ್ಕೆ ಸಿದ್ಧವಾಗಿದೆ.
ಹಳೆ ಕಚೇರಿಯಲ್ಲಿರುವ ಎಲ್ಲಾ ವಸ್ತುಗಳನ್ನು ಭಾನುವಾರದೊಳಗೆ ಎಪಿಎಂಸಿ ವಾಣಿಜ್ಯ ಸಂಕೀರ್ಣದ ಹೊಸ ಕಚೇರಿಗೆ ವರ್ಗಾಯಿಸಿ, ಸೋಮವಾರದಿಂದಲೇ ಕೆಲಸ ಶುರು ಮಾಡಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ.
ಎಪಿಎಂಸಿ ನೂತನ ವಾಣಿಜ್ಯ ಮಳಿಗೆಗೆ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರವಾದರೆ, ಅಕ್ಷರಶಃ ಬೀದಿಗೆ ಬೀಳುತ್ತಿದ್ದಾರೆ ದಸ್ತಾವೇಜುದಾರರು. ಹರಾಜಾದ ಮಳಿಗೆಗಳ ಬಾಡಿಗೆಯಂತೂ ಪ್ರತಿ ತಿಂಗಳು ಕನಿಷ್ಠ ಅರ್ಧ ಲಕ್ಷಕ್ಕಿಂತ ಹೆಚ್ಚು! ಅಷ್ಟು ಹಣ ನೀಡಿ ಈ ದಸ್ತಾವೇಜುದಾರರು ಏನು ದುಡಿದಾರು? ಅಂದಹಾಗೆ, ದಸ್ತಾವೇಜುದಾರರು ಯಾರೂ ಈ ನೂತನ ವಾಣಿಜ್ಯ ಸಂಕೀರ್ಣದಲ್ಲಿ ಮಳಿಗೆ ತೆಗೆದುಕೊಂಡೇ ಇಲ್ಲ!