ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರ 78ನೇ ವಿಶೇಷ ಹುಟ್ಟುಹಬ್ಬ ಆಚರಣೆಗೆ ಶ್ರೀಗಂಧ ಸಂಸ್ಥೆ ಸಿದ್ಧತೆ*

*ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರ 78ನೇ ವಿಶೇಷ ಹುಟ್ಟುಹಬ್ಬ ಆಚರಣೆಗೆ ಶ್ರೀಗಂಧ ಸಂಸ್ಥೆ ಸಿದ್ಧತೆ*

ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ಕಳೆದ 30 ವರ್ಷಗಳಿಂದ ಹಲವಾರು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಂಡು ನಾಡಿನಲ್ಲಿ ಜನಸೇವೆ ಮಾಡುತ್ತಾ ಬಂದಿದೆ. ಸಂಸ್ಥೆಯ ಅಧ್ಯಕ್ಷರೂ, ಮಾಜಿ ಉಪಮುಖ್ಯಮಂತ್ರಿಗಳೂ ಆದ ಕೆ.ಎಸ್.ಈಶ್ವರಪ್ಪನವರಿಗೆ 77ನೇ ವಸಂತ ಪೂರೈಸಿದ ಈ ಸಂದರ್ಭದಲ್ಲಿ ಜೂ. 10 ಮತ್ತು 11 ರಂದು ನಗರದ ಶುಭಮಂಗಳ ಕಲ್ಯಾಣ ಮಂಟಪದ ಆವರಣದಲ್ಲಿ ಹಲವು ಧಾರ್ಮಿಕ ಮತ್ತು ಸಾಮಾಜಿಕ ಸತ್ಕಾರ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಸಂದೇಶ್ ಉಪಾಧ್ಯ ಹೇಳಿದರು

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 10ರ ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಶ್ರೀ ಲಲಿತ ಸಹಸ್ರನಾಮ ಪಾರಾಯಣ, ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಸಹಸ್ರ ಚಂಡಿಕಾ ಯಾಗ ಹಾಗೂ ಮಹಾರುದ್ರ ಹೋಮಗಳು ನಡೆಯಲಿವೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಡೆದು ಮಧ್ಯಾಹ್ನ 11 ಗಂಟೆಗೆ ಪೂರ್ಣಾಹುತಿಯ ನಂತರ ಸಮಾಜದ ವಿವಿಧ ಮಠಾಧೀಶರು ಭಾಗವಹಿಸುವ ಧರ್ಮ ಸಭೆ ಪ್ರಾರಂಭವಾಗಲಿದೆ. ಈ ಧರ್ಮ
ಸಭೆಯಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು, (ಪೇಜಾವರ ಮಠ),
ಶ್ರೀ ಮಲ್ಲಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, (ಬೆಕ್ಕಿನಕಲ್ಮಠ),
ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮಿಗಳು, (ಕೂಡ್ಲಿ ಶ್ರೀ ಶೃಂಗೇರಿ ಶಂಕರ ಮಠ),ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಮಹಾಸ್ವಾಮಿಗಳು, (ಚಿತ್ರದುರ್ಗ),ಶ್ರೀ ಈಶ್ವರಾನಂದಪುರಿ ಸ್ವಾಮಿಗಳು, (ಕಾಗಿನೆಲೆ ಗುರುಪೀಠ, ಹೊಸದುರ್ಗ),ಶ್ರೀ ಸಾಯಿನಾಥ ಸ್ವಾಮಿಗಳು, (ಶ್ರೀ ಆದಿಚುಂಚನಗಿರಿ ಮಠ, ಶಿವಮೊಗ್ಗ)ರವರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ.

ಧರ್ಮ ಸಭೆಯ ನಂತರ 12:30 ಕ್ಕೆ ಮಂಗಳ ನಿಧಿ ಸಮರ್ಪಣೆ ಕಾರ್ಯಕ್ರಮವಿದ್ದು, ಇದರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಸು. ರಾಮಣ್ಣನವರು ಉಪಸ್ಥಿತರಿರುತ್ತಾರೆ.

ಅದೇ ದಿನ ಸಂಜೆ 6:00 ಗಂಟೆಗೆ “ಸ್ವಾಭಿಮಾನಿ ಭಾರತ” ಎಂಬ ವಿಶೇಷ ಕಾರ್ಯಕ್ರಮವಿದ್ದು, ದಿಕ್ಸೂಚಿ ಭಾಷಣಕಾರರಾಗಿ ಚಕ್ರವರ್ತಿ ಸೂಲಿಬೆಲೆ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಸ್ವತಂತ್ರಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಮರಿಮಗ ಶೈಲೇಶ್ ತಿಲಕ್ ಅವರು ಆಗಮಿಸಲಿದ್ದಾರೆ. ನಂತರ ದೇಶಭಕ್ತಿ ಗೀತೆಗಳ ಗಾಯನವಿರುತ್ತದೆ.

ಜೂ. 11 ರ ಬುಧವಾರ ಸಂಜೆ 6 ಗಂಟೆಗೆ ಶಿವಮೊಗ್ಗ ನಗರದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವಿದ್ದು, 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ 85% ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಕೊಲ್ಲಾಪುರ ಸಿದ್ದಗಿರಿ ಮರದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಗಳು, ಕವಲಗುಡ್ಡ ಗುರುಪೀಠದ ಶ್ರೀ ಅಮರೇಶ್ವರ ಸ್ವಾಮಿಗಳು ಹಾಗೂ ಆಳ್ವಾಸ ಸಮೂಹ ಶಿಕ್ಷಣ ಸಂಸ್ಥೆ ಮೂಡಬಿದರೆಯ ಡಾ. ಮೋಹನ್ ಆಳ್ವ ಅವರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕೆ.ಇ.ಕಾಂತೇಶ್, ಕೆ.ಸಿ.ನಟರಾಜ ಭಾಗವತ್, ಎ.ಜೆ.ರಾಮಚಂದ್ರ, ಉಮೇಶ್ ಆರಾಧ್ಯ, ಸುವರ್ಣ ಶಂಕರ್, ಕೃಷ್ಣಾನಂದ, ಅಶ್ವತ್ಥ ನಾರಾಯಣ ಶೆಟ್ಟಿ, ರಾಜು, ಶ್ರೀಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.