ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ಪ್ರತಿಭಟನೆ* *ಅವ್ಯವಸ್ಥೆಯ ಆಗರ ಕುವೆಂಪು ವಿವಿ;15 ದಿನಗಳಲ್ಲಿ ಸರಿಪಡಿಸದಿದ್ದರೆ ಮತ್ತೆ ಹೋರಾಟ*

*ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ಪ್ರತಿಭಟನೆ*

ಇತ್ತೀಚಿನ ದಿನಗಳಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಉತ್ತಮ ರೀತಿಯ ಶಿಕ್ಷಣ ಕೊಡುವಲ್ಲಿ ವಿಫಲವಾಗುತ್ತಿದೆ. ಪದೇ ಪದೇ ವಿವಿಯಲ್ಲಿ ಅವ್ಯವಹಾರ,ಭ್ರಷ್ಟಾಚಾರ, ವಿದ್ಯಾರ್ಥಿಗಳ ಬಳಿ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ ಪ್ರತಿಭಟನೆ ನಡೆಸಿತು.

ಕುವೆಂಪು ವಿಶ್ವವಿದ್ಯಾಲಯದ ರಂಭಾಪುರಿ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳು ಸರಿ ಇಲ್ಲ. ಕೊಠಡಿ ಸಮಸ್ಯೆ ಇದೆ. ಮಳೆಗಾಲದಿಂದಾಗಿ ಚಾವಡಿ ಸೋರುತ್ತಿದೆ. ಈ ವಿಚಾರವಾಗಿ ಕಳೆದ ಎರಡು ವರ್ಷಗಳಿಂದಲೂ ಶಿವಮೊಗ್ಗ ಜಿಲ್ಲಾ NSUI ಪ್ರತಿಭಟಿಸಿ ಎಷ್ಟು ಬಾರಿ ಮನವಿ ಸಲ್ಲಿಸಿದರೂ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಯಾಗಲೀ ಕುಲ ಸಚಿವರಾಗಲೀ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ರಂಭಾಪುರಿ ಕಾಲೇಜಿನಲ್ಲಿ ಬಿಸಿಎ ಓದುವ ಕನಸು ಹೊತ್ತ ವಿದ್ಯಾರ್ಥಿಗಳಿಗೆ ತಮ್ಮ ಕನಸುಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಕುವೆಂಪು ವಿವಿ ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳಲ್ಲೂ ಬಿಸಿಎ ಪದವಿಗೆ ನಿಗದಿತ ಸರ್ಕಾರಿ ಸೀಟುಗಳಿದ್ದು, ಅದಕ್ಕೆ ತಕ್ಕಂತೆ ಸರ್ಕಾರಿ ಪ್ರವೇಶ ಶುಲ್ಕ ಕೂಡ ಇದೆ. ಆದರೆ, ಕುವೆಂಪು ವಿವಿಯ ಕ್ಯಾಂಪಸ್ ನಲ್ಲಿರುವ ರಂಭಾಪುರಿ ಕಾಲೇಜಿನಲ್ಲಿ ಸರ್ಕಾರಿ ಸೀಟುಗಳಿದ್ದರೂ ಮನಬಂದಂತೆ ಪ್ರವೇಶ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಅವರ ಕನಸಿಗೆ ಧಕ್ಕೆ ಆಗುತ್ತಿದೆ.

ರಂಭಾಪುರಿ ಕಾಲೇಜಿನಲ್ಲಿ ಯಾವುದೇ ರಾಷ್ಟ್ರೀಯ ಹಬ್ಬಗಳನ್ನು ಮತ್ತು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ವಿದ್ಯಾರ್ಥಿಗಳು ಇದರ ವಿಚಾರವಾಗಿ ಪ್ರಶ್ನಿಸಿದರೆ ವಿವಿಯಿಂದ ನಮಗೆ ಯಾವುದೇ ಸಹಕಾರ ದೊರೆಯುತ್ತಿಲ್ಲ ಎಂದು ಪ್ರಾಂಶುಪಾಲರು ಹೇಳುತ್ತಿದ್ದಾರೆ.

ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳಿಂದಲೇ ಹಣ ಸುಲಿಗೆ ಮಾಡಿ ಕಾರ್ಯಕ್ರಮ ಮಾಡುವ ಸ್ಥಿತಿಗೆ ಕುವೆಂಪು ವಿವಿ ಬಂದಿದೆ. ಇದನ್ನು ತೀವ್ರವಾಗಿ ಖಂಡಿಸಿದ್ದಲ್ಲದೇ, ಕುವೆಂಪು ವಿವಿ ಅಡಿಯಲ್ಲಿ ಬರುವ ಎಲ್ಲಾ ಕಾಲೇಜುಗಳಲ್ಲೂ ಫಲಿತಾಂಶ ನಿಗದಿತ ಸಮಯಕ್ಕೆ ಪ್ರಕಟವಾಗುತ್ತಿಲ್ಲ. ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳು ಬ್ಯಾಕ್ ಆಗಿರುವ ವಿಷಯಗಳನ್ನು 6ನೇ ಸೆಮಿಸ್ಟರ್ ನಲ್ಲಿ ಬರೆದಿದ್ದು ಅದರ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಎಂಸಿಎ ಹಾಗೂ ಎಂಕಾಂ ಪ್ರವೇಶಕ್ಕೆ ಬಹಳ ತೊಂದರೆಯಾಗುತ್ತಿದೆ. ಫಲಿತಾಂಶ ಪ್ರಕಟವಾಗುವ ಸಂದರ್ಭದಲ್ಲಿ ಒಮ್ಮೆ ಎಲ್ಲಾ ಪಾಸ್ ಎಂದು ಪ್ರಕಟವಾಗಿ ನಂತರ ಕೊನೆಯಲ್ಲಿ ಫೇಲ್ ಎಂದು ತೋರಿಸುತ್ತಿದೆ ಇದನ್ನು ಪ್ರಶ್ನಿಸಿದಾಗ ಕುವೆಂಪು ವಿವಿಗೆ ಹೋಗಿ ಸರಿಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದಾರೆ ಎಂದು ಎನ್ ಎಸ್ ಯು ಐ ಪ್ರತಿಭಟನಾಕಾರರು ಆರೋಪಿಸಿದರು.

ಪದೇಪದೇ ವಿದ್ಯಾರ್ಥಿಗಳು ಯಾರದ್ದೋ ತಪ್ಪಿನಿಂದಾಗಿ ತಮ್ಮ ಸ್ವಂತ ಖರ್ಚಿನಲ್ಲಿ ವಿವಿಗೆ ಬಂದು ಸರಿಪಡಿಸಿಕೊಳ್ಳಬೇಕಾಗಿದೆ. ಕುವೆಂಪು ವಿವಿಯ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ ಸರಿಯಾಗಿಲ್ಲ. ಇವೆಲ್ಲವನ್ನೂ ಶಿವಮೊಗ್ಗ ಜಿಲ್ಲಾ NSUI ತೀವ್ರವಾಗಿ ಖಂಡಿಸಿತು.

ಇವೆಲ್ಲಾ ಸಮಸ್ಯೆಗಳನ್ನು 15 ದಿನಗಳ ಕಾಲಾವಕಾಶದೊಳಗೆ ಬಗೆಹರಿಸದೆ ಇದ್ದಲ್ಲಿ ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಕುವೆಂಪು ವಿವಿ ಬಂದ್ ಗೆ ಕರೆ ಕೊಡಲಾಗುವುದು ಎಂದು ಈ ಮೂಲಕ ಎಚ್ಚರಿಸಿದರು.

ಮನವಿಯನ್ನು ಉಪ-ಕುಲಪತಿಗಳಾದ ಶರತ್ ಅನಂತಮೂರ್ತಿ, ರಿಜಿಸ್ಟರ್ ಮಂಜುನಾಥ್ ರವರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯ ಘಟಕದ NSUI ಅಧ್ಯಕ್ಷರಾದ ಮುರುಗೇಶ್, ಜಿಲ್ಲಾ ಕಾರ್ಯಧ್ಯಕ್ಷರಾದ ರವಿಕಟಿಕೆರೆ, ನಗರ ಅಧ್ಯಕ್ಷರಾದ ರವಿ, ಚಂದ್ರೋಜಿರಾವ್, ವರುಣ್ ವಿ ಪಂಡಿತ್, ಸುಭಾನ್, ಫರಾದ್, ಆದಿತ್ಯ, ಶ್ರೀಕಾಂತ್, ಕೀರ್ತಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು.