*ತೀರ್ಥಹಳ್ಳಿ ಭಾರತೀಪುರ ಕ್ರಾಸ್ ಬಳಿ ಭೀಕರ ಅಪಘಾತ* *ಓರ್ವ ವೃದ್ಧೆ, ಮೂವರು ಮಕ್ಕಳು ಸೇರಿ ಕಾರಿನಲ್ಲಿದ್ದ 4 ಜನರ ಸಾವು*

*ತೀರ್ಥಹಳ್ಳಿ ಭಾರತೀಪುರ ಕ್ರಾಸ್ ಬಳಿ ಭೀಕರ ಅಪಘಾತ*

*ಓರ್ವ ವೃದ್ಧೆ, ಮೂವರು ಮಕ್ಕಳು ಸೇರಿ ಕಾರಿನಲ್ಲಿದ್ದ 4 ಜನರ ಸಾವು*

ಮಂಗಳವಾರದಂದು ರಾತ್ರಿ 9:30ರ ಸುಮಾರಿಗೆ ಗ ತೀರ್ಥಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಭಾರತೀಪುರ ಕ್ರಾಸ್‌ ಬಳಿ ನಡೆದ ಸ್ವಿಪ್ಟ್ ಡಿಝೈರ್ ಕಾರ್‌ ಮತ್ತು ಬಸ್‌ ನಡುವಿನ ಭೀಕರ ಅಪಘಾತದಲ್ಲಿ ನಾಲ್ವರು ಸಾವು ಕಂಡಿದ್ದಾರೆ.

ಕಾರಿನಲ್ಲಿದ್ದ ಶ್ರೀಮತಿ ಫಾತಿಮಾ ಬೀ(70), ರಿಹಾನ್(14) ಸ್ಥಳದಲ್ಲೇ ಸಾವು ಕಂಡಿದ್ದಾರೆ. ಆ ನಂತರ ರಾಹಿಲ್(9), ಝಯಾನ್(12) ಇಬ್ಬರೂ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ.

ಕಾರಿನೊಳಗಿದ್ದ ಶ್ರೀಮತಿ ಝರೀನಾ(35), ರಿಹಾ(12) ಮತ್ತು ಜಿಯಾನ್ ರವರಿಗೂ ಗಾಯಗಳಾಗಿವೆ.

ಶೃಂಗೇರಿ ಸಮೀಪದ ಮೆಣಸೇ ಗ್ರಾಮದ ಕಾರು ಚಾಲಕ ರಿಯಾಝ್(35) ವಿರುದ್ಧ ಬಸ್ ಡ್ರೈವರ್ ಶಶಿಕಾಂತ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ರಸ್ತೆಯಲ್ಲಿ ಹೋಗುತ್ತಿದ್ದ ಕಾರು ಮಹೀಂದ್ರ ಟೆಂಪೋವನ್ನು ಹಿಂದಕ್ಕೆ ಹಾಕಿ ಮುಂದೆ ಹೋಗುವ ಪ್ರಯತ್ನದಲ್ಲಿದ್ದಾಗ ಕೆ ಎಸ್ ಆರ್ ಟಿ ಸಿ ಬಸ್ ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಕಾರಿನವನ ಅತಿವೇಗ ಮತ್ತು ಅಜಾಗರೂಕತೆಯೇ ಅಪಘಾತಕ್ಕೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ.

ತೀರ್ಥಹಳ್ಳಿ ಕಡೆಯಿಂದ ರಾಯಚೂರಿಗೆ ಹೊರಟಿದ್ದ ಕೆಎಸ್ಆರ್​ಟಿಸಿ ಬಸ್ ಹಾಗೂ ಶಿವಮೊಗ್ಗದ ಕಡೆಯಿಂದ ಶೃಂಗೇರಿ ಕಡೆಗೆ ಹೊರಟಿದ್ದ ಕಾರಿನ ನಡುವೆ ಡಿಕ್ಕಿಯಾಗಿದೆ.

ಈ ಅಪಘಾತ ನಡೆದ ಸ್ಥಳಕ್ಕೆ ಇಂದು ಕಾರ್ಯಪ್ಪ ಎ. ಜಿ. (ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ) ರವರು ಭೇಟಿ ನೀಡಿ, ಪರಿಶೀಲಿಸಿ, ತನಿಖಾಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದರು.