ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ;   ಮಾ.18ರ ಮಧ್ಯಾಹ್ನ 2ಕ್ಕೆ ಬರ್ತಾರೆ ಪ್ರಧಾನಿ ಮೋದಿ ಮೊದಲ ಚುನಾವಣಾ ಭಾಷಣ ಇಲ್ಲಿಂದಲೇ

ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ;
ಮಾ.18ರ ಮಧ್ಯಾಹ್ನ 2ಕ್ಕೆ ಬರ್ತಾರೆ ಪ್ರಧಾನಿ ಮೋದಿ
ಮೊದಲ ಚುನಾವಣಾ ಭಾಷಣ ಇಲ್ಲಿಂದಲೇ
ಶಿವಮೊಗ್ಗ;
ಪ್ರಧಾನಿ ನರೇಂದ್ರ ಮೋದಿ ಅವರು ಮಾ.೧೮ರಂದು ಮಧ್ಯಾಹ್ನ ೨ಗಂಟೆಗೆ ಶಿವಮೊಗ್ಗಕ್ಕೆ ಆಗಮಿಸಲಿದ್ದು, ಅಲ್ಲಮ ಪ್ರಭು ಬಯಲು ರಂಗಮಂದಿರದಲ್ಲಿ (ಹಳೆಯ ಜೈಲು ಆವರಣ) ಮೊದಲ ಚುನಾವಣಾ ಪ್ರಚಾರದ ಭಾಷಣವನ್ನು ಸಾರ್ವಜನಿಕ ಸಭೆಯ ಮೂಲಕ ಮಾಡಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಅವರು ಇಂದು ಫ್ರೀಡಂಪಾರ್ಕ್‌ನಲ್ಲಿ ನರೇಂದ್ರ ಮೋದಿ ಅವರು ಆಗಮಿಸುವ ಹಿನ್ನಲೆಯಲ್ಲಿ ವೇದಿಕೆಯ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನರೇಂದ್ರ ಮೋದಿ ಅವರು ಜಗಮೆಚ್ಚಿದ ಪ್ರಧಾನಿ ಆಗಿದ್ದಾರೆ. ಭ್ರಷ್ಟಚಾರ ಮುಕ್ತ ಆಡಳಿತ ನೀಡಿದ್ದಾರೆ. ೩ನೇ ಬಾರಿಗೆ ಎನ್‌ಡಿಎ ನೇತೃತ್ವ ವಹಿಸಿಕೊಂಡು ಈ ಬಾರಿಯ ಚುನಾವಣೆಯನ್ನು ಎದುರಿಸಲು ಸಿದ್ದರಾಗಿದ್ದಾರೆ. ಅವರ ಚುನಾವಣಾ ಪ್ರಚಾರ ಶಿವಮೊಗ್ಗದಿಂದಲೇ ಆರಂಭವಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮದ್ಯ ಕರ್ನಾಟಕದ ಶಿವಮೊಗ್ಗ, ಚಿತ್ರದುರ್ಗ, ದಾವಣೆಗೆರೆ, ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಚುನಾವಣಾ ಸಾರ್ವಜನಿಕ ಸಭೆ ಶಿವಮೊಗ್ಗದಲ್ಲಿ ನಡೆಯಲಿದೆ. ೪ ಲೋಕಸಭಾ ಕ್ಷೇತ್ರದಿಂದಲೂ ಮುಖಂಡರು, ಜನಪ್ರತಿನಿಧಿಗಳು ಆಗಮಿಸುತ್ತಾರೆ. ಸುಮಾರು ೩ರಿಂದ ೪ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.
ಈ ಪ್ರೀಡಂಪಾರ್ಕ್‌ನಲ್ಲಿ ಸುಮಾರು ೨.೫ ಲಕ್ಷ ಕುರ್ಚಿಗಳನ್ನು ಹಾಕಬಹುದಾಗಿದೆ. ಉಳಿದಂತೆ ಪ್ರೀಡಂ ಪಾರ್ಕ್‌ನ ಅಕ್ಕಪಕ್ಕ ದೊಡ್ಡ ಎಲ್‌ಇಡಿ ಟಿವಿಗಳನ್ನು ಅಳವಡಿಸಿ ಮೋದಿ ಭಾಷಣವನ್ನು ನೋಡಲು ಅವಕಾಶ ಕಲ್ಪಿಸಲಾಗುವುದು. ಈಗಾಗಲೇ ವೇದಿಕೆ ಸೇರಿದಂತೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸಾರ್ವಜನಿಕ ಸಭೆಗೆ ಯಾವ ಗಣ್ಯರು ಆಗಮಿಸುತ್ತಾರೆ ಎಂದು ಇನ್ನೊಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗುವುದು ಎಂದರು.
ಮೋದಿ ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ಟೀಕೆ ಮಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ಮೋದಿಯೇ ನಮ್ಮ ದೊಡ್ಡ ಗ್ಯಾರಂಟಿ ಅವರು ಹಲವು ಗ್ಯಾರಂಟಿಗಳನ್ನು ಈಗಾಗಲೇ ನೀಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಸ್ಥಾಪನೆ ೩೭೦ರ ವಿಧಿಯನ್ನು ತೆಗೆದು ಹಾಕಿರುವುದು ಇಡಿ ದೇಶದಲ್ಲಿ ಅಭಿವೃದ್ಧಿಪಡಿಸಿರುವುದು ಇದೀಗ ಪೌರತ್ವ ಕಾಯ್ದೆಯನ್ನು ಜಾರಿ ಮಾಡಿ ಅಲ್ಪಸಂಖ್ಯಾತ ಹಿಂದುಗಳಿಗೆ ಭಾರತದಲ್ಲಿ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಆಮೂಲಕ ಬಾಂಗ್ಲಾದೇಶ, ಪಾಕಿಸ್ಥಾನ, ಅಫ್‌ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ೨೦೧೪ರ ಡಿ.೩೧ಕ್ಕೂ ಮೊದಲು ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಸಿಕ್, ಬೌದ್ಧ, ಜೈನ, ಪಾರ್ಸಿ ಹಾಗೂ ಕೈಸ್ತರಿಗೆ ಭಾರತ ಪೌರತ್ವ ನೀಡಬಹುದಾಗಿದೆ ಇದೊಂದು ಮಹತ್ವದ ಹಾದಿಯಾಗಿದೆ ಎಂದರು.
ಅಡಿಕೆ ಅಮದು ಬಗ್ಗೆ ಪ್ರತಿಕ್ರಯಿಸಿದ ಅವರು ಅಂತರಾಷ್ಟ್ರೀಯ ವ್ಯಾಪಾರ ಒಪ್ಪಂದದ ಹೊರತಾಗಿಯೂ ಕಳ್ಳ ಸಾಗಾಣಿಗೆ ತಡೆಯಲು ಈಗಾಗಲೇ ನಾವು ನಮ್ಮ ರಾಜ್ಯಾಧ್ಯಕ್ಷರ ಗಮನಕ್ಕೆ ತಂದು ಅವರ ಮೂಲಕ ಅಮಿತ್ ಶಾ ಅವರ ಗಮನಕ್ಕೂ ತಂದಿದ್ದೇವೆ. ಕಳ್ಳ ಸಾಗಾಣಿಗೆ ತಡೆಯಲು ಎಲ್ಲಾ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತದೆ. ಅಡಿಕೆ ಬೆಳೆಗಾರರ ರಕ್ಷಣೆಯೆ ನಮ್ಮ ಗುರಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ನವೀನ್, ಶಾಸಕರಾದ ಚೆನ್ನಬಸಪ್ಪ, ಚಂದ್ರಪ್ಪ, ಪ್ರಮುಖರಾದ ಆರ್.ಕೆ.ಸಿದ್ರಾಮಣ್ಣ, ತಿಪ್ಪಾರೆಡ್ಡಿ, ಭಾನುಪ್ರಕಾಶ್, ಮಂಜುಳ, ಭಾರತಿಶೆಟ್ಟಿ, ದತ್ತಾತ್ರಿ, ಟಿ.ಡಿ.ಮೇಘರಾಜ್, ಮೋಹನ್‌ರೆಡ್ಡಿ, ಬಸವರಾಜ್ ನಾಯಕ್, ಶಿವಯೋಗಿ ಸ್ವಾಮಿ, ಕೆ.ವಿ. ಅಣ್ಣಪ್ಪ ಮುಂತಾದವರು ಇದ್ದರು.

ಪರೀಕ್ಷೆಗೆ ಭಾದೆಯಿಲ್ಲ:ಸಂಸದ

ಮಾ.೧೮ರಂದು ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವುದರಿಂದ ಪಿ.ಯು.ಸಿ.ಪರೀಕ್ಷೆ ಬರೆಯುವ ವಿದ್ಯಾಥಿಗಳಿಗೆ ಯಾವುದೇ ತೊಂದರೆ ಆಗದಂದಂತೆ ನೋಡಿಕೊಳ್ಳುವುದಾಗಿ ಸಂಸದ ಬಿ.ವೈ.ರಾಘವೇಂದ್ರ ಅವರು  ತಿಳಿಸಿದರು.
ಈಗಾಗಲೇ ಪಿ.ಯು.ಸಿ.ಪರೀಕ್ಷೆಗಳು ಆರಂಭವಾಗಿವೆ. ದಿ.೧೮ರಂದೂ ಪರೀಕ್ಷೆ ಇದೆ. ಪ್ರಧಾನಿಯವರ ಆಗಮನದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುತ್ತದೆ. ಸಂಚಾರ ವ್ಯತ್ಯಯವೂ ಆಗುವ ಸಂಭವವಿರುತ್ತದೆ. ಇದು ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ಆಗಬಹುದು ಎಂಬ ಅಂಶವನ್ನು ನಮ್ಮ ಪ್ರತಿನಿಧಿ ಸಂಸದರ ಗಮನಕ್ಕೆ ತಂದಾಗ ಸಂಸದರು ಈ ಮೇಲಿನಂತೆ ಉತ್ತರಿಸಿ, ನೀವು ಈ ವಿಷಯ ಗಮನಕ್ಕೆ ತಂದಿದ್ದು ಒಳ್ಳೆಯದಾಯಿತು. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಅವರು ಭರವಸೆ ನೀಡಿದರು.