ಶಿವಮೊಗ್ಗ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ; ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್

ಶಿವಮೊಗ್ಗ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ;
ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್
ಶಿವಮೊಗ್ಗ ನಗರದಲ್ಲಿ ಆಗಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು ಕಳಪೆಯಾಗಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ನಗರವು ಸ್ಮಾರ್ಟ್‌ಸಿಟಿಗೆ ಒಳಪಟ್ಟಾಗ ಶಿವಮೊಗ್ಗದ ಜನತೆ ಸಂತೋಷ ವ್ಯಕ್ತಪಡಿಸಿ ದೇಶದ ದೊಡ್ಡ ದೊಡ್ಡ ನಗರದಲ್ಲಿ ಆಗಿರುವ ಸ್ಮಾರ್ಟ್‌ಸಿಟಿಯಂತೆ ಶಿವಮೊಗ್ಗ ನಗರವು ಆಗುತ್ತದೆಯೆಂದು ಆಶಾ ಭಾವನೆ ಇಟ್ಟುಕೊಂಡಿದ್ದರು. ಅದು ಈಗ ಹುಸಿಯಾಗಿದೆ ಎಂದರು. ಸುಮಾರು ೯೬೦ ಕೋಟಿ ರೂ. ಅನುದಾನದಲ್ಲಿ ಸ್ಮಾಟ್‌ಸಿಟಿ ನಿರ್ಮಾಣವಾಗಿದ್ದು, ರಸ್ತೆ, ಚರಂಡಿ, ಪಾರ್ಕ್ ಹಾಗೂ ಮೂಲಭೂತ ಸೌಲಭ್ಯಕ್ಕಾಗಿ ಈ ಹಣವನ್ನು ಬಳಸಲಾಗಿದೆ ಎಂದರು.
ನೆನ್ನೆ ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು, ಹಲವು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು, ಹಾನಿಯಾಗಿರುವುದಕ್ಕೆ ಜಿಲ್ಲಾಡಳಿತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕಳಪೆ ಚರಂಡಿ ನಿರ್ಮಾಣದಿಂದಾಗಿ ಮಳೆಯ ನೀರು ಸರಾಗವಾಗಿ ಹರಿಯದೇ ರಸ್ತೆಯಲ್ಲಿ ನೀರು ನಿಂತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಮಳೆಯಿಂದಾಗಿ ಎಲ್ಲಿ ನೋಡಿದರೂ ರಸ್ತೆಯಲ್ಲಿ ನೀರು ನಿಂತಿದೆ. ಕಳಪೆ ಕಾಮಗಾರಿಗಳ ಬಗ್ಗೆ ನಾಗರಿಕ ಸಮಿತಿ ಹಾಗೂ ಇನ್ನಿತರ ಸಂಘಟನೆಗಳು ಹೋರಾಟ ನಡೆಸಿದ್ದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಮಗಾರಿ ಕಳಪೆ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರಿಂದ ಗುತ್ತಿಗೆದಾರ ಪೊಲೀಸ್ ಠಾಣೆಗೆ ದೂರು ನೀಡಿರುವುದರಿಂದ ಆ ವ್ಯಕ್ತಿ ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ.ಮನೆ ಹಾಗೂ ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದರು.
ಸ್ಮಾರ್ಟ್ ಸಿಟಿಯ ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿಗಳು ಕಡತಗಳನ್ನು ಪರಿಶೀಲಿಸಿ ಎಲ್ಲಿ ಕಳಪೆಯಾಗಿದೆಯೂ ಆ ಕಾಮಗಾರಿಯನ್ನು ಹೊಸದಾಗಿ ಮಾಡಲು ಆದೇಶಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಗರಾಧ್ಯಕ್ಷ ದೀಪಕ್‌ಸಿಂಗ್, ಪ್ರಮುಖರಾದ ಕೆ.ಎನ್.ರಾಮಕೃಷ್ಣ, ತ್ಯಾಗರಾಜ್, ಎಚ್.ಎಂ.ಸಂಗಯ್ಯ, ನರಸಿಂಹಗಂಧದಮನೆ, ಕೃಷ್ಣ, ಸಂಜಯ್ ಕಶ್ಯಪ್, ವಿನಯ್ ಇನ್ನಿತರರು ಉಪಸ್ಥಿತರಿದ್ದರು.