ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ಟರಿಗೆ ಬೆಂಬಲ ಘೋಷಿಸಿದ ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ 

ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ಟರಿಗೆ ಬೆಂಬಲ ಘೋಷಿಸಿದ ರಾಷ್ಟ್ರಭಕ್ತರ ಬಳಗದ ಕೆ.ಎಸ್.ಈಶ್ವರಪ್ಪ
 ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ರಘುಪತಿ ಭಟ್ ಅವರಿಗೆ ರಾಷ್ಟ್ರಭಕ್ತರ ಬಳಗದಿಂದ ಸಂಪೂರ್ಣ ಬೆಂಬಲವಿದೆ. ಹಾಗೂ ಅವರನ್ನು ಗೆಲ್ಲಿಸುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದ ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪನವರ ಮನೆಯಲ್ಲಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಘುಪತಿಭಟ್ ಅವರು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಅಭಿವೃದ್ಧಿಶೀಲ ಮತ್ತು ಕ್ರಿಯಾಶೀಲ ರಾಜಕಾರಣಿ ಜಾತಿ ಇಲ್ಲದ ವ್ಯಕ್ತಿ ಅವರನ್ನು ಕೂಡ ಕೆಲವು ವ್ಯಕ್ತಿಗಳು ಮೋಸ ಮಾಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ಸಾವಿರಾರು ಕಾರ್ಯಕರ್ತರ ಆಸೆ ಬಿಜೆಪಿ ಶುದ್ಧೀಕರಣಯಾಗಬೇಕು. ನನಗೆ ಮಾಡಿದ ಹಾಗೆ ಅವರಿಗೂ ಬಿಜೆಪಿ ನಾಯಕರು ಮೋಸ ಮಾಡಿದ್ದಾರೆ ಎಂದರು.
ಬ್ರಹ್ಮ ಅಡ್ಡಬಂದರು ರಘುಪತಿ ಭಟ್‌ರ ಗೆಲುವು ತಪ್ಪಿಸಲು ಸಾಧ್ಯವಿಲ್ಲ. ಇನ್ನೊಬ್ಬ ಅಭ್ಯರ್ಥಿ ಆಯನೂರು ಮಂಜುನಾಥ್‌ರವರ ಪಕ್ಷ ನಿಷ್ಠೆ ಎಲ್ಲರಿಗೂ ಗೊತ್ತಿದೆ. ರಾಷ್ಟ್ರಭಕ್ತರ ಬಳಗ ನೈರುತ್ಯ ಪದವೀಧರ ಕ್ಷೇತ್ರದ ಎಲ್ಲಾ ಮತದಾರರನ್ನು ವೈಯುಕ್ತಿಕವಾಗಿ ಸಂಪರ್ಕಿಸಿ ಮತಹಾಕುವ ಹಾಗೆ ಶ್ರಮವಹಿಸಿ ಅವರ ಗೆಲುವಿಗೆ ಕಾರಣರಾಗಬೇಕು ಎಂದರು.
ಎಂ.ಶಂಕರ್ ಮಾತನಾಡಿ, ನನ್ನ ತಂದೆ ಆನಂದರಾವ್ ಗೆಲ್ಲಲು ನಾನು ಎರಡು ಬಾರಿ ನಗರಸಭಾ ಸದಸ್ಯನಾಗಿ ಅಧ್ಯಕ್ಷರಾಗಲು ಈಶ್ವರಪ್ಪನವರೇ ಕಾರಣ. ಈ ಚುನಾವಣೆಯಲ್ಲಿ ರಘುಪತಿಭಟ್ ಮೊದಲ ಸ್ಥಾನದಲ್ಲಿದ್ದಾರೆ. ಎಲ್ಲೆಡೆ ಒಳ್ಳೆಯ ವಾತಾವರಣ ಇದೆ. ಅವರದ್ದು ಬಂಡಾಯ ಸ್ಪರ್ಧೆಯಲ್ಲ. ನಮ್ಮ ಸರ್ವೋಚ್ಛ ನಾಯಕ ನರೇಂದ್ರ ಮೋದಿ ಈ ಚುನಾವಣೆಯಲ್ಲಿ ಯಾವುದೇ ಚಿಹ್ನೆ ಇರುವುದರಿಲ್ಲ. ಗೆಲ್ಲುವ ಅಭ್ಯರ್ಥಿಯಾದ ರಘುಪತಿಭಟ್ ಅವರಿಗೆ ಒಂದು ಗೆರೆ ಹಾಕಿ ಎಂದರು.
ಅಭ್ಯರ್ಥಿ ರಘುಪತಿಭಟ್ ಮಾತನಾಡಿ, ಈಶ್ವರಪ್ಪನವರ ಬೆಂಬಲ ನನಗೆ ಶಕ್ತಿ ತುಂಬಿದೆ. ಉಡುಪಿಯ ಕನಕ ಗೋಪುರ ವಿವಾದವಾದಗ ಈಶ್ವರಪ್ಪನವರು ಜಾತಿ ಮೀರಿ ಸಮಸ್ಯೆ ಬಗೆಹರಿಸಿದ್ದರು. ನನ್ನ ಸ್ಪರ್ಧೆ ಒಂದು ದಿನದ ನಿರ್ಧಾರವಲ್ಲ. ನನ್ನ ಗೆಲುವು ಬಿಜೆಪಿ ಕೇಂದ್ರ ನಾಯಕರಿಗೆ ಸ್ಪಷ್ಟ ಸಂದೇಶ ನೀಡಲಿದೆ. ವ್ಯವಸ್ಥೆ ಸರಿಮಾಡಬೇಕು ಎಂದಾಗ ಕೆಲವೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಾನು ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ಎಂದರು.
ಡಾ. ಧನಂಜಯಸರ್ಜಿ ಬಿಜೆಪಿ ನಾಯಕರ ಬೆಂಬಲಿತ ಅಭ್ಯರ್ಥಿ,ಇನ್ನೋರ್ವ ಅಭ್ಯರ್ಥಿ ಆಯನೂರು ಮಂಜುನಾಥ್ ನಮ್ಮ ಪಕ್ಷದಿಂದಲೇ ನಾಲ್ಕು ಸ್ಥಾನ ಪಡೆದವರು. ಉಡುಪಿಯ ಶ್ರೀಕೃಷ್ಣ ಹಾಗೂ ಆಯೋಧ್ಯೆಯ ಬಾಲರಾಮನ ಸಂಪೂರ್ಣ ಅನುಗ್ರಹ ನನಗಿದೆ. ಡಾ. ಸರ್ಜಿ ಇದುವರೆಗೆ ನನ್ನನ್ನು ಒಂದು ಬಾರಿಯೂ ಸಂಪರ್ಕಿಸಲಿಲ್ಲ. ಯಾರೂ ನಿಂತರೂ ಬಿಜೆಪಿಯಲ್ಲಿ ಗೆಲ್ಲುತ್ತಾರೆ ಎಂಬ ಭಾವನೆಯಿದೆ ಎಂದರು.
ಶಿವಮೊಗ್ಗದ ಪದವೀಧರರ ಬೆಂಬಲ ನನಗೆ ಬೇಕು. ನಾನು ಸದಾ ಕಾರ್ಯಕರ್ತರ ಜೊತೆಯಲ್ಲಿಯೇ ಇದ್ದವನು ನಿಮ್ಮ ಮತಕ್ಕೆ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ. ಈ ಚುನಾವಣೆಯಲ್ಲಿ ಮತಹಾಕಲು ಬೆಳಿಗ್ಗೆ ೮ರಿಂದ ಸಂಜೆ ೪ರ ವರೆಗೆ ಅವಕಾಶ ವಿರುತ್ತದೆ. ಅಭ್ಯರ್ಥಿ ಆಯ್ಕೆಯಲ್ಲಿ ಕೆಲವು ನಾಯಕರ ತಪ್ಪು ನಿರ್ಧಾರ ಮತ್ತು ಕಾರ್ಯಕರ್ತರಿಗೆ ಆದ ನೋವನ್ನು ಕೇಂದ್ರ ನಾಯಕರಿಗೆ ಸಂದೇಶ ಕಳುಹಿಸಬೇಕು ಎಂಬುವುದು ನನ್ನ ಇಚ್ಛೆ. ನಾನು ನಿಂತಿರುವುದು ಗೆಲ್ಲುವುದಕ್ಕೆ ಮತ್ತು ಗೆದ್ದು ಪದವೀಧರರ ಪರ ಕೆಲಸ ಮಾಡುವುದಕ್ಕೆ ಯಾರ ಮೇಲೂ ದ್ವೇಷದಿಂದಲ್ಲ ಎಂದರು.
ಬಳಿಕ ರಾಷ್ಟ್ರಭಕ್ತರ ಬಳಗದ ವತಿಯಿಂದ ಸುದ್ಧಿಗೋಷ್ಠಿ ನಡೆಸಿ ಕರಪತ್ರ ಬಿಡುಗಡೆ ಮಾಡಿ, ರಘುಪತಿಭಟ್‌ರ ಗೆಲುವಿಗೆ ಶ್ರಮಿಸುವ ನಿರ್ಧಾರ ಕೈಗೊಳ್ಳಲಾಯಿತು. ಶಿಕ್ಷಕರ ಕ್ಷೇತ್ರದಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂದು ಮುಂದೆ ತಿಳಿಸಲಾಗುವುದು ಎಂದು ಈಶ್ವರಪ್ಪನವರು ಹೇಳಿದರು.
ತೀರ್ಥಹಳ್ಳಿಯ ಬಿಜೆಪಿ ಪ್ರಮುಖರಾದ ಮದನ್, ಸಾಗರದ ವಾಟ್‌ಗೋಡು ಸುರೇಶ್, ಭದ್ರಾವತಿಯ ಮಂಜುನಾಥ್ ಮೊದಲಾದವರು ರಘುಪತಿ ಭಟ್‌ರ ಗೆಲುವಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕೆ.ಇ.ಕಾಂತೇಶ್, ಕಾಚಿನಕಟ್ಟೆ ಸತ್ಯನಾರಾಯಣ್, ರಾಜಾರಾಮ್ ಭಟ್, ಸತ್ಯನಾರಾಯಣ್, ಗಂಗಾಧರ್, ಶ್ರೀಕಾಂತ್, ಜಾಧವ್, ರಾಜು, ಮೋಹನ್, ಲಿಂಗರಾಜ್ ಮತ್ತಿತರರು ಇದ್ದರು.