ಫಲಾನುಭವಿಗಳಿಗೆ ಆಶ್ರಯ ಮನೆ ಹಂಚುವವರೆಗೆ ಹೋರಾಟ ನಿಲ್ಲಿಸೋದಿಲ್ಲ- ನನ್ನ ಮಗನ ಮೇಲಾಣೆ; ಕೆ.ಎಸ್.ಈಶ್ವರಪ್ಪ

ಫಲಾನುಭವಿಗಳಿಗೆ ಆಶ್ರಯ ಮನೆ ಹಂಚುವವರೆಗೆ ಹೋರಾಟ ನಿಲ್ಲಿಸೋದಿಲ್ಲ- ನನ್ನ ಮಗನ ಮೇಲಾಣೆ; ಕೆ.ಎಸ್.ಈಶ್ವರಪ್ಪ

ನನ್ನ ಮಗನ ಮೇಲಾಣೆ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಮನೆಗಳು ಹಂಚಿಕೆಯಾಗುವ ತನಕ ಹೋರಾಟವನ್ನು ನಿಲ್ಲಿಸುವುದಿಲ್ಲವೆಂದು ರಾಷ್ಟ್ರಭಕ್ತಿ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಇಂದು ಶಪಥ ಮಾಡಿದರು.
ಅವರು ಅಪೂರ್ಣಗೊಂಡ ಆಶ್ರಯ ವಸತಿಯೋಜನೆಯ ಮನೆಗಳನ್ನು ಫಲಾನುಭವಿಗಳಿಗೆ ಶೀಘ್ರವೇ ಹಂಚಿಕೆಯಾಗುವಂತೆ ಸರ್ಕಾರವನ್ನು ಒತ್ತಾಯಿಸಿ ಹೋರಾಟದ ಜಾಥಾಕ್ಕೆ ಚಾಲನೆ ನೀಡಿದರು.
ರಾಮಣ್ಣಶ್ರೇಷ್ಟಿ ಪಾರ್ಕ್‌ನಿಂದ ಜಾಥಾ ಆರಂಭವಾಗಿ ನೆಹರು ರಸ್ತೆಯ ಮೂಲಕ ಜಾಥವು ಸೀನಪ್ಪಶೆಟ್ಟಿ ವೃತ್ತವನ್ನು ತಲುಪಿತು. ಅಲ್ಲಿ ನಡೆದ ಸಭೆಯಲ್ಲಿ ಈಶ್ವರಪ್ಪ ಮಾತನಾಡಿದರು.
ಗೋಪಿ ಶೆಟ್ಟಿ ಮತ್ತು ಗೋವಿಂದಾಪುರದಲ್ಲಿ ಸುಮಾರು ೯ ವರ್ಷಗಳ ಹಿಂದೆಯೇ ಈ ಆಶ್ರಯ ಯೋಜನೆಯನ್ನು ರೂಪುಗೊಳಿಸಲಾಗಿತ್ತು. ಮೂರು ವರ್ಷಗಳಲ್ಲಿ ಮನೆಯನ್ನು ಹಂಚಿಕೆ ಮಾಡುವುದಾಗಿ ಹೇಳಿದ್ದರು ಕೂಡ ಇದುವರೆಗೂ ಫಲಾನುಭವಿಗಳಿಗೆ ಹಂಚಿಕೆಯಾಗಿಲ್ಲ ಎಂದರು.
ಮನೆಗಾಗಿ ಮುಗಂಡ ಹಣ ಕೊಟ್ಟು ಜಾತಕ ಪಕ್ಷಿಯಂತೆ ಫಲಾನುಭವಿಗಳು ಕಾಯುತ್ತಿದ್ದಾರೆ. ಮುಗಂಡ ಹಣ ಕಟ್ಟಲು ಕೆಲವು ಮಹಿಳೆಯರು ತಾಳಿಯನ್ನೇ ಮಾರಿದ್ದಾರೆ, ಸಾಲಸೋಲ ಮಾಡಿದ್ದಾರೆ, ಇತ್ತ ಬಡ್ಡಿಯನ್ನು ಕಟ್ಟಲಾಗದೆ, ಮನೆಯೂ ಸಿಗದೇ, ಸಂಕಷ್ಟದಲ್ಲಿದ್ದಾರೆ. ಎಷ್ಟೋ ಜನರು ನಿಮ್ಮ ಮನೆಯ ಸಹವಾಸವೇ ಬೇಡ. ನಮ್ಮ ಕಟ್ಟಿದ ಮನೆಯನ್ನಾದರೂ ವಾಪಾಸ್ಸು ಕೊಡಿ ಎಂದು ಬೇಡುವ ಸ್ಥಿತಿಗೆ ಬಂದಿದ್ದಾರೆ. ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ದೂರಿದರು.
ಕೂಡಲೇ ಮನೆಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಬೇಕು. ಈಗಾಗಲೇ ಮುಗಂಡ ಹಣ ಕೊಟ್ಟಿರುವವರಿಗೆ ಉಳಿದ ಹಣ ಪಾವತಿಸಲು ಬ್ಯಾಂಕ್ ಸೌಲಭ್ಯ ಒದಗಿಸಬೇಕು. ಅಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಬಸ್ ಸೌಲಭ್ಯ ಒದಗಿಸಬೇಕು. ಮತ್ತು ಮಹಾನಗರ ಪಾಲಿಕೆಗೆ ಶೀಘ್ರವೇ ಚುನಾವಣೆಯಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೆಲವರು ಹಣ ವಾಪಾಸ್ಸು ಕೇಳುತ್ತಿದ್ದಾರೆ. ದಯವಿಟ್ಟು ಹಣ ವಾಪಾಸ್ಸು ಕೇಳಬೇಡಿ, ನಿಮ್ಮ ಪರವಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ನಿಮಗೆ ಮನೆ ಸಿಗುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಕೆ.ಎಸ್.ಈಶ್ವರಪ್ಪನವರು ಫಲಾನುಭವಿಗಳಿಗೆ ಅಭಯ ನೀಡಿದರು.
ಪ್ರತಿಭಟನೆಯಲ್ಲಿ ಈ.ವಿಶ್ವಾಸ್, ಎಂ. ಶಂಕರ್, ಸುವರ್ಣ ಶಂಕರ್, ಶಂಕರ್, ಬಾಲು, ಗನ್ನಿ ಶಂಕರ್, ಕಾಚಿನಕಟ್ಟೆ ಸತ್ಯನಾರಾಯಣ, ಮಹಾಲಿಂಗಶಾಸ್ತ್ರಿ, ಮೋಹನ್, ನಾಗರಾಜ್, ವಾಗೀಶ್, ಶ್ರೀಕಾಂತ್, ಜಾಧವ್ ಸೇರಿದಂತೆ ಫಲಾನುಭವಿಗಳು ಇದ್ದರು.