ಕೃಷಿ ಅರಣ್ಯದ ಲಾಭಗಳು – ಡಾ. ಮಹೇಶ್ವರಪ್ಪ
ಕೃಷಿ ಅರಣ್ಯದ ಲಾಭಗಳು – ಡಾ. ಮಹೇಶ್ವರಪ್ಪ

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ 2024 ಹಳೇಮುಗಳಗೆರೆ ಗ್ರಾಮದಲ್ಲಿ
ಅರಣ್ಯ ಕೃಷಿ ವಿಷಯದ ಕುರಿತು ಗುಂಪು ಚರ್ಚೆ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಮಹಾವಿದ್ಯಾಲಯದ ಕೃಷಿ ಅರಣ್ಯ ಪ್ರಾಧ್ಯಾಪಕರಾದ ಡಾ. ಮಹೇಶ್ವರಪ್ಪ ಮಾತನಾಡಿ ಪ್ರಸ್ತುತ ದಿನಗಳಲ್ಲಿ ರೈತರು ಕೃಷಿಗಾಗಿ ಸಾಕಷ್ಟು ವೆಚ್ಚ ಮಾಡುತ್ತಿದ್ದು, ಇದನ್ನು ಕಡಿಮೆ ಮಾಡಬೇಕಾಗಿದೆ. ನಾವುಗಳು ಅರಣ್ಯ ಅಪ್ಪಿಕೊಳ್ಳುವ ಮೂಲಕ ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು. ಕೃಷಿಯಲ್ಲಿ ಮಾಡುವಿಕೆ ಹೋಗಿ ಕೊಂಡುಕೊಳ್ಳುವಿಕೆ ಬಂದಿದೆ. ಬೆಳೆ ಉತ್ಪಾದನೆಗೆ ಬೀಜ, ಗೊಬ್ಬರ, ಔಷಧ ಹೀಗೆ ಎಲ್ಲವನ್ನು ಕೊಂಡು ಬೆಳೆಯಬೇಕಾಗಿದೆ. ಆದರೆ ಈ ಹಿಂದೆ ಕೃಷಿಯಲ್ಲಿ ಹೆಚ್ಚು ಖರೀದಿ ಮಾಡುತ್ತಿರಲಿಲ್ಲ. ಹಿಂದೆ ಪೂರ್ವಜರು ಮಾಡಿದಂತೆ ಇಂದು ಕೃಷಿ ಅರಣ್ಯ ಅಳವಡಿಸಿಕೊಂಡರೆ ಕೃಷಿಯಲ್ಲಿ ಹಾನಿಯಾಗುವುದಿಲ್ಲ.
ಅರಣ್ಯ ಕೃಷಿಯೆಂದರೆ ಕೇವಲ ಮರಗಳು ಬೆಳೆಸುವುದಲ್ಲ, ಶ್ರೀಗಂಧ, ರಕ್ತಚಂದನ, ನುಗ್ಗೆ, ಲಿಂಬೆ, ನೆಲ್ಲಿಕಾಯಿ, ನೇರಳೆ, ಹೆಬ್ಬೇವು, ಪೇರಲ ಹೀಗೆ ಬಗೆಬಗೆಯ ಗಿಡಗಳನ್ನು ನೆಡುವುದರಿಂದ ಉತ್ತಮ ಆದಾಯ ಬರುತ್ತದೆ. ಈ ಗಿಡಗಳ ಮಧ್ಯೆದಲ್ಲಿಯೇ ಮಿಶ್ರಬೆಳೆ ಹಾಕಬಹುದು.ರೈತರು ತಮ್ಮ ಭೂಮಿ ಫಲವತ್ತು ಇಲ್ಲ ಮತ್ತು ಕೃಷಿಯಲ್ಲಿ ಆದಾಯವಿಲ್ಲವೆಂದು ಕೊರಗಬಾರದು. ಇಂದು ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು ಸಿಗುತ್ತಿವೆ. ಸರ್ಕಾರದ ಸೌಲಭ್ಯ ಪಡೆದು ಕೃಷಿ ಅರಣ್ಯ(Agro forestry) ಮಾಡಿ ಕೈತುಂಬಾ ಸಂಪಾದನೆ ಮಾಡಬಹುದು. ಕೈಗಾರಿಕಾ ಕೃಷಿ ಅರಣ್ಯ ವಿಷಯದ ಕುರಿತು ಮಾಹಿತಿ ನೀಡಿದರು. ಮತ್ತೊಬ್ಬ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಸಂಖ್ಯಾಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ.ಸತೀಶ್ ರವರು ಆನ್ಲೈನ್ ವಂಚನೆ ವಿಷಯದ ಕುರಿತು ಮಾತನಾಡಿದರು.
ವಿದ್ಯಾರ್ಥಿಗಳು ಆನ್ಲೈನ್ ವಂಚನೆ ವಿಷಯದ ಕುರಿತು ಕಿರು ನಾಟಕ ಮಾಡಿ ಜನರಲ್ಲಿ ಅರಿವು ಮೂಡಿಸಿದರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.