ಕುವೆಂಪು ವಿವಿ: ಅಂಬೇಡ್ಕರ್ ಚಿಂತನೆ ಕುರಿತ ಎರಡು ದಿನಗಳ ಕಾರ್ಯಾಗಾರ* *ಸಂವಿಧಾನವನ್ನು ಅಂತರ್ಗತಮಾಡಿಕೊಳ್ಳುವುದೇ ನಿಜವಾದ ಅಂಬೇಡ್ಕಾರವಾದ: ನ್ಯಾಯಮೂರ್ತಿ ನಾಗಮೋಹನ್ ದಾಸ್*
*ಕುವೆಂಪು ವಿವಿ: ಅಂಬೇಡ್ಕರ್ ಚಿಂತನೆ ಕುರಿತ ಎರಡು ದಿನಗಳ ಕಾರ್ಯಾಗಾರ*
*ಸಂವಿಧಾನವನ್ನು ಅಂತರ್ಗತಮಾಡಿಕೊಳ್ಳುವುದೇ ನಿಜವಾದ ಅಂಬೇಡ್ಕಾರವಾದ: ನ್ಯಾಯಮೂರ್ತಿ ನಾಗಮೋಹನ್ ದಾಸ್*
ಶಂಕರಘಟ್ಟ
ಬಹುತೇಕ ಅಂಬೇಡ್ಕರ್ ವಾದಿಗಳು ಅಂಬೇಡ್ಕರ್ ಅವರ ಅಮಲನ್ನೇರಿಸಿಕೊಂಡಿಸಿದ್ದಾರೆ. ಆದರೆ ಭಾರತದ ಸಮಕಾಲೀನ ಸಂದರ್ಭಕ್ಕೆ ಅಗತ್ಯವಾಗಿರುವುದು ಅಂಬೇಡ್ಕರ್ ಅರಿವು. ಭಾರತೀಯ ಸಂವಿಧಾನವನ್ನು ಅಂತರ್ಗತ ಮಾಡಿಕೊಳ್ಳುವುದೇ ಬಾಬಾ ಸಾಹೇಬರಿಗೆ ಸಲ್ಲಿಸಲಾಗುವ ನಿಜವಾದ ಗೌರವ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಕರ್ನಾಟಕ ರಾಜ್ಯ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ ಸೋಮವಾರ ಪ್ರಾರಂಭವಾದ “ಕನ್ನಡ ಸಂಸ್ಕೃತಿ ಮತ್ತು ಅಂಬೇಡ್ಕರ್ ಚಿಂತನೆಗಳು” ಕುರಿತ ಎರಡು ದಿನಹಾಲ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಭಾರತ ದೇಶವನ್ನು ತಿಳಿಯುವುದೆಂದರೆ, ದೇಶದ ಇತಿಹಾಸ, ಧರ್ಮ, ಜಾತಿಗಳು, ಆರ್ಥಿಕ- ಸಾಮಾಜಿಕ ಸಂಬಂಧಗಳು, ಮೌಲ್ಯಗಳು, ಸಂಸ್ಕೃತಿ, ಭಾಷೆಗಳನ್ನು ಅರ್ಥೈಸಿಕೊಳ್ಳುವುದು. ಇವೆಲ್ಲವುಗಳನ್ನು ಒಳಗೊಂಡ ಸಂವಿಧಾನದ ಅರಿವು ದೇಶದ ಪ್ರತಿಯೊಬ್ಬ ಪ್ರಜೆಗೂ ಅತ್ಯವಶ್ಯಕ.
ಭಾರತದಲ್ಲಿ ಸುಮಾರು 4635 ಜಾತಿಗಳಿವೆ. ವಿವಿಧ ಜಾತಿ ಧರ್ಮಗಳಿವೆ. ಬುಡಕಟ್ಟು ಸಮುದಾಯಗಳಿವೆ. ಎಲ್ಲವೂ ಒಂದರೊಳಗೊಂದು ಸಮ್ಮಿಳಿತವಾಗಿವೆ. ದೇಶದಲ್ಲಿರುವ ಸುಮಾರು 6500ಕ್ಕೂ ಹೆಚ್ಚು ಹಳ್ಳಿಗಳು ಪ್ರತ್ಯೇಕ ಗಣರಾಜ್ಯಗಳಾಗಿವೆ. ಇಂಥಹಾ ಸಂಕೀರ್ಣ ಸಾಮಾಜಿಕ ಸಂದರ್ಭದಲ್ಲಿ ಜಾಗತೀಕರಣ ಮತ್ತು ಉದಾರೀಕರಣ ಅನುಷ್ಠಾನಗೊಂಡಿದ್ದು, ಕಲ್ಯಾಣ ರಾಷ್ಟ್ರದ ಪರಿಕಲ್ಪನೆಯನ್ನು ನಿರ್ಲಕ್ಷಿಸಲಾಗಿದೆ.
ದೇಶದ ವಿವಿಧ ಸಮುದಾಯಗಳ ನಡುವೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಸಮಾನತೆ ಈಗಲೂ ಮುಂದುವರೆದಿದೆ. ಬುದ್ದನ ದಮ್ಮಮಾರ್ಗ, ಬಸವಣ್ಣನ ಸಮಾನತೆಯ ಮಾರ್ಗ, ಗಾಂಧೀಜಿ ಅವರ ಅಹಿಂಸಾ ಮಾರ್ಗ ಮತ್ತು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಮಾರ್ಗ ಸಂವಿಧಾನದ ಮೂಲ ಪ್ರೇರಣೆಯಾಗಿವೆ ಎಂದು ಅಭಿಪ್ರಾಯಪಟ್ಟರು.
ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಕುಲಸಚಿವ ಎ. ಎಲ್. ಮಂಜುನಾಥ್, ಹಣಕಾಸು ಅಧಿಕಾರಿ ಪ್ರೊ. ಎಚ್. ಎನ್. ರಮೇಶ್, ಡಾ. ಬಿ. ಆರ್. ಅಂಬೇಡ್ಕರ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಾಬೀರ್ ಅಹ್ಮದ್ ಮುಲ್ಲಾ, ಡಾ. ಸಿ. ಜಿ. ಲಕ್ಷ್ಮೀಪತಿ,ಡಾ. ಸಬಿತಾ ಬನ್ನಾಡಿ, ಡಾ. ನೆಲ್ಲಿಕಟ್ಟೆ ಸಿದ್ದೇಶ್, ಡಾ. ಎಸ್. ಎಂ. ಮುತ್ತಯ್ಯ ಮತ್ತಿತರರು ಉಪಸ್ಥಿತರಿದ್ದರು.
ಎರಡು ದಿನಗಳ ಕಾರ್ಯಾಗಾರದಲ್ಲಿ, ಡಾ. ಆರ್. ವಿ. ಚಂದ್ರಶೇಖರ್. ಅಕ್ಕೈ ಪದ್ಮಶಾಲಿ, ಡಾ. ರಾಜಪ್ಪ ದಳವಾಯಿ, ಡಾ. ಬಾಲಗುರುಮೂರ್ತಿ, ಅನಸೂಯ ಕಾಂಬಳೆ ಅಂಬೇಡ್ಕರ್ ಕುರಿತ ವಿವಿಧ ವಿಷಯಗಳ ಬಗ್ಗೆ ವಿಚಾರ ಮಂಡಿಸಲಿದ್ದಾರೆ.