ಕಾನೂನಿನ ಸಂಘರ್ಷಕ್ಕೊಳಗಾದ ಮಕ್ಕಳಿಗೆ ಉತ್ತಮ ಪ್ರಜೆಯಾಗುವ ಅವಕಾಶವಿದೆ : ನ್ಯಾ.ಅಮೃತ ಎಸ್ ರಾವ್*

*ಕಾನೂನಿನ ಸಂಘರ್ಷಕ್ಕೊಳಗಾದ ಮಕ್ಕಳಿಗೆ ಉತ್ತಮ ಪ್ರಜೆಯಾಗುವ ಅವಕಾಶವಿದೆ :
ನ್ಯಾ.ಅಮೃತ ಎಸ್ ರಾವ್*

ಶಿವಮೊಗ್ಗ;
ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳು ಮುಂದೆ ಉತ್ತಮ ಪ್ರಜೆಯಾಗುವ ಅವಕಾಶವಿದ್ದು, ಬಾಲನ್ಯಾಯ ಕಾಯ್ದೆ ಉದ್ದೇಶ ಸಹ ಅವರನ್ನು ಉತ್ತಮ ಪ್ರಜೆಯಾಗಲು ಅವಕಾಶ ನೀಡುವುದಾಗಿದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಅಮೃತ ಎಸ್.ರಾವ್ ನುಡಿದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯ, ಬೆಂಗಳೂರು, ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಡಿ.ಎ.ಆರ್. ಸಭಾಂಗಣದಲ್ಲಿ ಬಾಲನ್ಯಾಯ ಕಾಯ್ದೆ-2015, ತಿದ್ದುಪಡಿ-2021, ಬಾಲ್ಯವಿವಾಹ ನಿಷೇಧ ಕಾಯ್ದೆ-2006, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ-2012. ದತ್ತು ಮಾರ್ಗಸೂಚಿ-2022 ಹಾಗೂ ಮಕ್ಕಳಿಗೆ ನಂಬಂಧಿಸಿದ ಇತರೆ ಕಾಯ್ದೆಗಳ ಕುರಿತು ಜಿಲ್ಲೆಯಲ್ಲಿನ ಟ್ರಾಫಿಕ್ ಪೊಲೀಸ್ ಮತ್ತು ಮಕ್ಕಳ ವಿಶೇಷ ಪೊಲೀಸ್ ಘಟಕದ ಅಧಿಕಾರಿ/ಸಿಬ್ಬಂದಿಗಳಿಗೆ ಇಂದು ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತರೆ ಆರೋಪಿಗಳು ಮತ್ತು ಕಾನೂನಿನ ಸಂಕರ್ಷಕ್ಕೆ ಒಳಗಾದ ಮಕ್ಕಳನ್ನು ಪೋಲಿಸರು ಸೇರಿದಂತೆ ಇತರೆ ಪಾಲುದಾರ ಇಲಾಖೆಗಳು ಒಂದೇ ರೀತಿ ಉಪಚರಿಸಬಾರದೆಂದು ಬಾಲನ್ಯಾಯ ಕಾಯ್ದೆ ಹೇಳುತ್ತದೆ. ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಅವರನ್ನು ಕಾಯ್ದೆಯಲ್ಲಿ ತಿಳಿಸಿರುವಂತೆ ಸೂಕ್ಷ್ಮತೆಯಿಂದ ಉಪಚರಿಸಬೇಕು. ಇಲ್ಲವಾದಲ್ಲಿ ಅವರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಭವಿಷ್ಯ ಹಾಳಾಗಬಹುದು. ಆದ್ದರಿಂದ ವಿಚಾರಣೆ ವೇಳೆ ಮನೆಯ ವಾತಾವರಣ ನೀಡಬೇಕು. ಹಾಗೂ ಉತ್ತಮ ಪ್ರಜೆಯಾಗುವ ಅವಕಾಶದ ಬಗ್ಗೆ, ಇತರೆ ಕ್ರಮಗಳ ಕುರಿತು ಅವರಿಗೆ ಮನವರಿಕೆ ಮಾಡಬೇಕು. ಎಲ್ಲ ಪೋಲೀಸ್ ಅಧಿಕಾರಿ/ಸಿಬ್ಬಂದಿಗಳು ಇಂತಹ ಕಾರ್ಯಾಗಾರಗಳ ಸದ್ಬಳಕೆ ಮಾಡಿಕೊಂಡು ಅನುಷ್ಟಾನಕ್ಕೆ ತರಬೇಕೆಂದರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ 1ನೇ ಹೆಚ್ಚುವರಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗೂ ಬಾಲನ್ಯಾಯ ಮಂಡಳಿಯ ಅಧ್ಯಕ್ಷರಾದ ರಾಜಣ್ಣ ಸಂಕಣ್ಣನವರ್ ಮಾತನಾಡಿ, ಪೋಲಿಸರ ಕಾರ್ಯವ್ಯಾಪ್ತಿಯಲ್ಲಿ ಪ್ರತಿನಿತ್ಯ ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಕಾನೂನುಗಳು
ನಿರಂತರವಾಗಿ ಬದಲಾವಣೆಗೆ ಒಳಗಾಗುತ್ತಿರುತ್ತವೆ. ಕಾಲಕಾಲಕ್ಕೆ ಹೊಸ ಅಧಿಸೂಚನೆ, ಸುತ್ತೋಲೆ, ತಿದ್ದುಪಡಿಗಳು ಆಗುತ್ತವೆ. ಇವೆಲ್ಲವನ್ನು ತಿಳಿದು ಕಾನೂನುಗಳನ್ನು ಅನುಷ್ಟಾನಗೊಳಿಸಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಉಪಯುಕ್ತವಾಗಿದೆ.
ಸಂಘರ್ಷಕ್ಕೆ ಒಳಗಾದ ಮಕ್ಕಳ ಪ್ರಕರಣಗಳಲ್ಲಿ ಮಕ್ಕಳು ಮತ್ತು ಪೋಷಕರಲ್ಲಿ ಶಿಕ್ಷಣದ ಕೊರತೆ ಕಾಣುತ್ತೇವೆ. ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಶಿಕ್ಷಣದ ಕೊರತೆ, ಅತಿ ಕಾಳಜಿ ಇತರೆ
ಕಾರಣಗಳಿಂದ ಸಂಘರ್ಷಕ್ಕೊಳಗಾದ ಮಕ್ಕಳನ್ನು ದುರುಪಯೋಗ ಪಡಿಸಿಕೊಳ್ಳುವವರು ಇರುತ್ತಾರೆ. ತಳಮಟ್ಟದಲ್ಲಿ ಕೆಲಸ ಮಾಡುವ ಪೋಲೀಸರಿಗೆ ಇದೆಲ್ಲ ತಿಳಿದಿರುತ್ತದೆ. ಆದ್ದರಿಂದ ನೀವುಗಳು ಶಿಕ್ಷಣದ ಮಹತ್ವ, ಅರಿವು ಜೊತೆಗೆ ಅವರಿಗೆ ಆಪ್ತಸಮಾಲೋಚನೆ ನೀಡುವ ಮೂಲಕ ಬಾಲಾಪರಾಧವನ್ನು
ತಡೆಯುವಲ್ಲಿ ಪ್ರಯತ್ನ ಮಾಡಬೇಕೆಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್‌ಕುಮಾರ್ ಭೂಮರೆಡ್ಡಿ ಮಾತನಾಡಿ, ಕಾಯ್ದೆ ಕಾನೂನುಗಳು ಕಾಲಕಾಲಕ್ಕೆ ಮಾರ್ಪಾಡು, ತಿದ್ದುಪಡಿ, ಸೇರ್ಪಡೆಯಾಗುತ್ತಿರುತ್ತವೆ. ಈ ಕುರಿತು ಕಾನೂನುಗಳನ್ನು ಅನುಷ್ಟಾನಗೊಳಿಸುವ ಅಧಿಕಾರಿ/ಸಿಬ್ಬಂದಿಗಳು ಈ ಬಗ್ಗೆ ತಿಳಿದು ಅಪ್‌ಡೇಟ್ ಆಗುತ್ತಾ
ಹೋದಲ್ಲಿ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸಾಧ್ಯ.
18 ರೊಳಗಿನ ಮಕ್ಕಳು ಸೂಕ್ಷ್ಮತೆಯಿಂದ ಕೂಡಿದ್ದು ಬಾಲನ್ಯಾಯ ಕಾಯ್ದೆಯನ್ವಯ ಅವರನ್ನು ಸಂವೇದನಾಶೀಲತೆಯಿಂದ ಉಪಚರಿಸಬೇಕು. ವಿವಿಧ ಪಾಲುದಾರ ಇಲಾಖೆಗಳು ತಮ್ಮದೇ ಆದ ಜವಾಬ್ದಾರಿಯಿಂದ ಸ್ಪಂದಿಸಬೇಕು. ಎಲ್ಲ ಪಾಲುದಾರ ಇಲಾಖೆಗಳು ಸಮನ್ವಯದೊಂದಿಗೆ ಕೆಲಸ ಮಾಡಬೇಕು. ಪೊಲೀಸ್ ಇಲಾಖೆಯ ಮೇಲೆ ಗುರುತರ ಜವಾಬ್ದಾರಿ ಇದ್ದು ಜಿಲ್ಲೆಯ ಎಲ್ಲ 33 ಠಾಣೆಗಳ ಪೋಲಿಸರು ಮಕ್ಕಳು ಸೇರಿದಂತೆ ಅಗತ್ಯವಾದ ಎಲ್ಲ ಕಾಯ್ದೆ ಕಾನೂನುಗಳ ಬಗ್ಗೆ ಅಪ್‌ಡೇಟ್ ಆಗಿ ಅದರಂತೆ ನಡೆದುಕೊಳ್ಳಬೇಕು. ಇಂತಹ ತರಬೇತಿ ಕಾರ್ಯಕ್ರಮಗಳು ತಮ್ಮ ವೃತ್ತಿಪರತೆ, ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಕಾರಿಯಾಗಿದ್ದು. ಇದರ ಸದುಪಯೋಗ ಪಡೆದು ಕಾರ್ಯರೂಪಕ್ಕೆ ತರಬೇಕೆಂದು ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಬಿ.ಕೆ. ಮಾತನಾಡಿ, ಮಕ್ಕಳಿಗೆ ಸಂಬಂಧಿಸಿದ ಕಾಯ್ದೆ ಕಾನೂನುಗಳನ್ನು ತಾವು ಮಾತ್ರವಲ್ಲ ಇಡೀ ಠಾಣೆಯಲ್ಲಿರುವ ಎಲ್ಲ ಸಿಬ್ಬಂದಿಗಳಿಗೆ ತಿಳಿಸಿ ಉತ್ತಮ ತಂಡವಾಗಿ ಕೆಲಸ ಮಾಡಿದಲ್ಲಿ ಬಾಲಾಪರಾಧ ಕಡಿಮೆಯಾಗುತ್ತದೆ. ಮಕ್ಕಳು ಇತ್ತೀಚೆಗೆ ಮೊಬೈಲ್, ಸಮೂಹ ಸಂವಹನಗಳ ಗೀಳಿಗೆ ಒಳಗಾಗಿದ್ದು ಅವರು ಮಾನಸಿಕ, ಬೌದ್ಧಿಕ ಆರೋಗ್ಯದ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಇದನ್ನು ತಗ್ಗಿಸಲು ಎಲ್ಲ ಪಾಲುದಾರ ಇಲಾಖೆಗಳು ಸಮನ್ವಯದೊಂದಿಗೆ ಕೆಲಸ ಮಾಡುವ ಮೂಲಕ ಪೋಕ್ಸೊ, ಬಾಲ್ಯ ವಿವಾಹ ಸೇರಿದಂತೆ ಇತರೆ ಅಪರಾಧಗಳನ್ನು ತಡೆಯಬಹುದು ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ ಜಿ.ಎಂ ಮಾತನಾಡಿ, ಬಾಲಾಪರಾಧ ತಡೆಯುವಲ್ಲಿ ಜೆಜೆ ಆಕ್ಟ್, ಸ್ಪೆಷಲ್ ಜುವೆನೈಲ್ ಪೊಲೀಸ್ ಘಟಕ, ಮಕ್ಕಳ ಕಲ್ಯಾಣ ಸಮಿತಿ ಮತ್ತು ಡಿಸಿಪಿಓ ಘಟಕಗಳು ನಾಲ್ಕು ಆಧಾರ ಸ್ತಂಭಗಳಂತಿದ್ದು, ಎಲ್ಲರೂ ಒಗ್ಗೂಡಿ ಕೆಲಸ ಮಾಡಿದರೆ ಬಾಲಾಪರಾಧ ತಗ್ಗಿಸಲು ಸಾಧ್ಯ ಎಂದ ಅವರು ಬಾಲಾಪರಾಧಿಗಳನ್ನು ಉಪಚರಿಸುವ, ಕಾಳಜಿ, ಸಂರಕ್ಷಣೆ ಮತ್ತು ಕೋರ್ಟ್ ಮುಂದೆ ಹಾಜರುಪಡಿಸುವ ವಿಧಾನವನ್ನು ತಿಳಿಸಿದರು.
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಹೆಡ್ ಕಾನ್ಸ್‌ಟೇಬಲ್ ಸೋಮಶೇಖರಪ್ಪ ಜಿ.ಎಸ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ (ಸಾಂಸ್ಥಿಕ) ಗಾಯಿತ್ರಿ ಡಿ.ಎಸ್. ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಕಾಯ್ದೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ ಆರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಬಾಬು ಅಂಜನಪ್ಪ, ಸುರೇಶ್, ಇತರೆ ಪೋಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.