ಬಿ.ವೈ.ರಾಘವೇಂದ್ರ- ಹರತಾಳು ಮುಖ ನೋಡಿ ಜನ ಬಿಜೆಪಿಗೆ ಮತ ಹಾಕಿಲ್ಲ; ಶಾಸಕ ಬೇಳೂರು ಅಭಿಮತ

ಬಿ.ವೈ.ರಾಘವೇಂದ್ರ- ಹರತಾಳು ಮುಖ ನೋಡಿ ಜನ ಬಿಜೆಪಿಗೆ ಮತ ಹಾಕಿಲ್ಲ; ಶಾಸಕ ಬೇಳೂರು ಅಭಿಮತ

ಸಾಗರ : ಲೋಕಸಭಾ ಚುನಾವಣೆಯಲ್ಲಿ 26ಸಾವಿರ ಮತ ಬಿಜೆಪಿಗೆ ಲೀಡ್ ಬಂದಿದೆ ಎಂದು ಕಾರ್ಯಕರ್ತರು ಹೆದರಬೇಡಿ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಜನರು ಬಿಜೆಪಿಗೆ ಮತ ನೀಡಿದ್ದಾರೆಯೆ ವಿನಃ ಬಿ.ವೈ.ರಾಘವೇಂದ್ರ, ಹರತಾಳು ಹಾಲಪ್ಪ ಮುಖ ನೋಡಿ ಮತ ಹಾಕಿಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಲ್ಲಿನ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೇಸ್ ವತಿಯಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಾ, ಪಕ್ಷದ ಜೊತೆ ಸದಾ ಇರುವ, ಕಾರ್ಯಕರ್ತರು ಆಯ್ಕೆ ಮಾಡುವ ಅಭ್ಯರ್ಥಿಗೆ ಟಿಕೇಟ್ ನೀಡಬೇಕಿತ್ತು ಎಂದು ಹಲವರು ಅಭಿಪ್ರಾಯಿಸಿದ್ದಾರೆ. ಆದರೆ ಹೈಕಮಾಂಡ್ ಟಿಕೇಟ್ ನೀಡಿದ ಅಭ್ಯರ್ಥಿ ಪರವಾಗಿ ನಾವೆಲ್ಲಾ ಕೆಲಸ ಮಾಡಿದ್ದೇವೆ. ಆದರೂ ಸೋಲಾಗಿದೆ. ಸೋಲಿನ ಬಗ್ಗೆ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ ತಿಳಿಸಲಾಗಿದೆ ಎಂದರು.
ಕಾಂಗ್ರೇಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿರಬಹುದು. ಆದರೆ ಮುಂದಿನ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಹಾಗೂ ನಗರಸಭೆ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬರುವ ತಾಕತ್ತು ಗೋಪಾಲಕೃಷ್ಣ ಬೇಳೂರಿಗೆ ಇದೆ. ಅದನ್ನು ತಡೆಯುವ ತಾಕತ್ತು ಹಾಲಪ್ಪನಿಗೆ ಇದ್ದರೆ ತಡೆಯಲಿ ಎಂದು ಸವಾಲು ಹಾಕಿದ ಬೇಳೂರು, ಕ್ಷೇತ್ರವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹರತಾಳು ಹಾಲಪ್ಪ ಹೇಳುತ್ತಿದ್ದಾರೆ. ಕೆಲವು ವೈಯಕ್ತಿಕ ವಿಷಯಗಳ ಗಲಾಟೆ ಹೊರತುಪಡಿಸಿ ಎಲ್ಲ ಸಂದರ್ಭದಲ್ಲೂ ತಪ್ಪಿತಸ್ತರ ವಿರುದ್ದ ಸೂಕ್ತ ಕಾನೂನುಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹಾಲಪ್ಪ ರೀತಿ ಮಲೆನಾಡು ಅಭಿವೃದ್ದಿ ಪ್ರತಿಷ್ಟಾನದ ಸಭೆಗೆ ನುಗ್ಗಿ ಅಮಾಯಕರ ಮೇಲೆ ಹಲ್ಲೆ ಮಾಡಿಸುವಷ್ಟು ಕಾನೂನು ಹದಗೆಟ್ಟಿಲ್ಲ ಎಂದು ಟಾಂಗ್ ನೀಡಿದರು.
ಲೋಕಸಭಾ ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಿದ್ದುಹೋಗುತ್ತದೆ ಎಂದು ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದರು. ಇದೀಗ ಕೇಂದ್ರದಲ್ಲಿ ಅವರದ್ದೆ ಸರ್ಕಾರ ಸ್ಥಿರವಿಲ್ಲ. ಸ್ವತಃ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ ಶಿಕಾರಿಪುರ ಕ್ಷೇತ್ರದಲ್ಲಿ ಮತಕ್ಕೆ 2ಸಾವಿರ ರೂ. ಕೊಟ್ಟರೂ ಬಿ.ವೈ.ರಾಘವೇಂದ್ರ ಕಡಿಮೆ ಅಂತರದಲ್ಲಿ ಗೆಲ್ಲಲು ಕಾರಣ ಏನು ಎಂದು ಅವರು ಸ್ಪಷ್ಟಪಡಿಸಬೇಕು. ಒಂದು ವರ್ಷದ ಮೊದಲು ಇಂಡಿಯಾ ಒಕ್ಕೂಟ ರಚನೆಯಾಗಿದ್ದರೆ ದೇಶದಲ್ಲಿ ನಮ್ಮದೇ ಸರ್ಕಾರ ಅಸ್ತಿತ್ವಕ್ಕೆ ಬರುತಿತ್ತು. ಇದೀಗ ದೇಶದಲ್ಲಿ ಮೋದಿಯವರ ಜನಪ್ರಿಯತೆ ಕಡಿಮೆಯಾಗಿದೆ. ಕೇವಲ 240 ಸ್ಥಾನ ಮಾತ್ರ ಬಿಜೆಪಿಗೆ ಬಂದಿದ್ದು, ವಾಸ್ತವವಾಗಿ ನರೇಂದ್ರ ಮೋದಿಯವರು ಪ್ರಧಾನಿಪಟ್ಟ ಸ್ವೀಕರಿಸಬಾರದಿತ್ತು ಎಂದು ಹೇಳಿದರು.
ಗ್ಯಾರಂಟಿ ಅನುಷ್ಟಾನ ಸಮಿತಿ ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಎಷ್ಟೆ ಕಷ್ಟಪಟ್ಟರೂ ಅಭ್ಯರ್ಥಿ ಪರವಾಗಿ ಹೆಚ್ಚುಮತ ಪಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಕಾರ್ಯಕರ್ತರು ಅಭ್ಯರ್ಥಿಯಾಗಿದ್ದರೇ ಹೆಚ್ಚು ಸೂಕ್ತವಿತ್ತು. ಕಾರ್ಯಕರ್ತರು ಬಯಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದರೆ ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ಆದರೆ ಲೋಕಸಭಾ ಅಭ್ಯರ್ಥಿ ಆಯ್ಕೆ ಸಂದರ್ಭದಲ್ಲಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಟಿಕೆಟ್ ನೀಡಿದ್ದು ಸೋಲಿಗೆ ಕಾರಣವಾಗಿದೆ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇರಬೇಕು. ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದೆ ಹೋದಲ್ಲಿ ಪಕ್ಷ ಜೀವಂತವಾಗಿ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಕಾರ್ಯಕರ್ತರ ಮಾತಿಗೆ ಮನ್ನಣೆ ಕೊಡುವಂತೆ ಆಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಗರಸಭಾ ಸದಸ್ಯ ಸೈಯದ್ ಜಾಕೀರ್ ಜೆಡಿಎಸ್ ತೊರೆದು ಕಾಂಗ್ರೇಸ್ ಪಕ್ಷ ಸೇರ್ಪಡೆಗೊಂಡರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಐ.ಎನ್.ಸುರೇಶಬಾಬು, ಮಹಮ್ಮದ್ ಖಾಸಿಂ,ತಸ್ರಿಫ್ ಇಬ್ರಾಹಿಂ,ಅಶೋಕ್ ಬೇಳೂರು,ಸಯ್ಯದ್ ತಾಹಿರ್, ಪ್ರಭಾವತಿ ಚಂದ್ರಕಾಂತ್, ಮಕ್ಬೂಲ್ ಅಹ್ಮದ್, ಉಷಾ ಎನ್. ಇನ್ನಿತರರು ಹಾಜರಿದ್ದರು. ಚೇತನರಾಜ್ ಕಣ್ಣೂರು ಸ್ವಾಗತಿಸಿದರು. ಮೈಕಲ್ ಡಿಸೋಜ ನಿರೂಪಿಸಿದರು.